ಮಾಜಿ ಸಚಿವ ಬಿ.ಜೆ. ಪುಟ್ಟಸ್ವಾಮಿ ಇನ್ನುಮುಂದೆ ಸ್ವರ್ಣಾನಂದ ಪುರಿ ಸ್ವಾಮೀಜಿ
ಬೆಂಗಳೂರು, ಮೇ 4: ಮಾಜಿ ಸಚಿವ ಬಿ.ಜೆ. ಪುಟ್ಟಸ್ವಾಮಿ ರಾಜಕೀಯದಿಂದ ನಿವೃತ್ತಿಯಾಗಿ ಸನ್ಯಾಸ ದೀಕ್ಷೆ ಸ್ವೀಕರಿಸಲು ನಿರ್ಧರಿಸಿದ್ದಾರೆ.
''50 ವರ್ಷಗಳ ರಾಜಕೀಯ ಜೀವನದಿಂದ ನಿವೃತ್ತಿ ಪಡೆದು ಸನ್ಯಾಸ ಸ್ವೀಕರಿಸುತ್ತಿದ್ದೇನೆ. ತೈಲೇಶ್ವರ ಗಾಣಿಗರ ಮಹಾಸಂಸ್ಥಾನ ಮಠದ ಮೊದಲ ಪೀಠಾಧಿಪತಿಯಾಗಿ ಮೇ 6ರಂದು ದೀಕ್ಷೆ ಪಡೆಯುತ್ತಿದ್ದೇನೆ,'' ಎಂದು ಪುಟ್ಟಸ್ವಾಮಿ ಹೇಳಿದ್ದಾರೆ.
ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಅಪ್ತರಾಗಿರುವ ಪುಟ್ಟಸ್ವಾಮಿ ಅವರು ಯಡಿಯೂರಪ್ಪ ಅವರ ರಾಜಕೀಯ ಕಾರ್ಯದರ್ಶಿಯಾಗಿದ್ದರು. ಬಳಿಕ ಸಹಕಾರ ಸಚಿವರಾಗಿ ಅಧಿಕಾರ ನಡೆಸಿದರು. ಬಿಜೆಪಿ ಸರ್ಕಾರದ ಈ ಅವಧಿಯಲ್ಲಿ ಅವರನ್ನು ರಾಜ್ಯ ಯೋಜನಾ ಮಂಡಳಿಯ ಉಪಾಧ್ಯಕ್ಷರನ್ನಾಗಿ ಮಾಡಲಾಗಿತ್ತು. ಏ. 30ರಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ರಾಜಕೀಯದಿಂದ ನಿವೃತ್ತಿಯಾಗಿ ಲೌಕಿಕದಿಂದ ಜೀವನದಿಂದ ಆಧ್ಯಾತ್ಮಕ ಜೀವನದತ್ತ ಹೆಜ್ಜೆ ಇಡುತ್ತಿದ್ದೇನೆ. ರಾಜರಾಜೇಶ್ವರಿ ದೇವಸ್ಥಾನದ ಕೈಲಾಸ ಮಠದ ಶ್ರೀ ಜಯೇಂದ್ರ ತೀರ್ಥ ಪುರಿ ಮಹಾಸ್ವಾಮೀಜಿಯವರಿಂದ ಸನ್ಯಾಸ ದೀಕ್ಷೆ ಸ್ವೀಕರಿಸಲಿದ್ದೇನೆ ಎಂದು ಪುಟ್ಟಸ್ವಾಮಿ ಹೇಳಿದ್ದಾರೆ.
ಗಾಣಿಗ ಸಮುದಾಯಕ್ಕೆ ಶಾಶ್ವತ ಸಂಸ್ಥೆಯೊಂದನ್ನು ಕಟ್ಟಬೇಕು ಎಂದು ಕೇಳಿಕೊಂಡಾಗ ಬಿ.ಎಸ್. ಯಡಿಯೂರಪ್ಪ ಅವರು ಎಂಟು ಎಕರೆ ಜಮೀನು ಮತ್ತು ಐದು ಕೋಟಿ ರೂ. ಅನುದಾನ ಮಂಜೂರು ಮಾಡಿದ್ದರು. ಅದನ್ನು ಬಳಸಿಕೊಂಡು ಮತ್ತು ನನ್ನ ಕೈಲಾದಷ್ಟು ಅನುದಾನ ಹಾಗೂ ಸಮಯದಾಯದ ಸಹಕಾರ ಪಡೆದು ತೈಲೇಶ್ವರ ಗಾಣಿಗರ ಗುರುಪೀಠ, ವಸತಿ ನಿಲಯ, ಸಮುದಾಯ ಭವನ ನಿರ್ಮಿಸಲಾಗಿದೆ ಎಂದು ಪುಟ್ಟಸ್ವಾಮಿ ಹೇಳಿದರು.
"ನಮ್ಮ ಜನಾಂಗಕ್ಕೂ ಗುರುಪೀಠ ಮಾಡಬೇಕು ಎಂದು ಮೂವರು ಯುವಕರನ್ನು ಸಿದ್ದಗಂಗಾಮಠ, ಮುರುಘಾಮಠ ಮತ್ತು ರಾಜರಾಜೇಶ್ವರಿ ಮಠದಲ್ಲಿ ಸೇರಿಸಲಾಗಿತ್ತು. ಆದರೆ, ಅವರು ಕಾರಣಾಂತರಗಳಿಂದ ಹೊರಟು ಹೋದರು. ರಾಜರಾಜೇಶ್ವರಿ ಮಠದಲ್ಲಿ ಯಾಗ ಮಾಡುತ್ತಿದ್ದಾಗ ಜಯೇಂದ್ರ ತೀರ್ಥ ಸ್ವಾಮೀಜಿ ಕರೆದು ಪೀಠಾಧಿಪತಿ ಆಗಬೇಕಾದರೆ ಬದ್ಧತೆ ಇರಬೇಕು. ಹಾಗಾಗಿ ನೀವೇ ಸನ್ಯಾಸ ಸ್ವೀಕರಿಸಿ ಪೀಠಾಧಿಪತಿಯಾಗಿ ಸಮುದಾಯದ ಏಳಿಗೆಗೆ ಶ್ರಮಿಸಿ. ಮುಂದೆ ಆ ರೀತಿಯ ಬದ್ಧತೆ ಇರುವವರು ಬಂದಾಗ ಅವರಿಗೆ ಅಧಿಕಾರ ವಹಿಸಿಕೊಳ್ಳಿ ಎಂದು ಸಲಹೆ ನೀಡಿದರು. ಅದರಂತೆ ನಾನೇ ಪೀಠಾಧಿಪತಿಯಾಗಲು ನಿರ್ಧರಿಸಿದ್ದೇನೆ,'' ಎಂದು ಪುಟ್ಟಸ್ವಾಮಿ ವಿವರಿಸಿದರು.
ಮೇ 15ರಂದು ಪಟ್ಟಾಭಿಷೇಕ:
ತೈಲೇಶ್ವರ ಗಾಣಿಗರ ಮಹಾಸಂಸ್ಥಾನ ಮಠದ ಮೊದಲ ಪೀಠಾಧಿಪತಿಯಾಗಿ ಬಿ.ಜೆ. ಪುಟ್ಟಸ್ವಾಮಿ ಅವರ ಪಟ್ಟಾಭಿಷೇಕ ಕಾರ್ಯಕ್ರಮ ಮೇ 15ರಂದು ನಡೆಯಲಿದೆ. ಕಾರ್ಯಕ್ರಮಕ್ಕಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ, ಸಿದ್ದರಾಮಯ್ಯ, ಎಚ್.ಡಿ. ಕುಮಾರಸ್ವಾಮಿ ಸಹಿತ ಹಲವರು ಭಾಗವಹಿಸಲಿದ್ದಾರೆ.
ಬೆಂಗಳೂರು ಮಾದನಾಯಕನಹಳ್ಳಿಯಲ್ಲಿರುವ ತೈಲೇಶ್ವರ ಗಾಣಿಗರ ಮಹಾಸಂಸ್ಥಾನ ಮಠವನ್ನು ಬಿ.ಜೆ. ಪುಟ್ಟಸ್ವಾಮಿ ಅವರು ಇನ್ನು ಮುಂದೆ ಸ್ವರ್ಣಾನಂದ ಪುರಿ ಸ್ವಾಮೀಜಿ ಹೆಸರಿನಲ್ಲಿ ಮುನ್ನಡೆಸಲಿದ್ದಾರೆ.