‘ಕಮಲ’ ಹಿಡಿದ ಮಾಜಿ ಸಚಿವ ಕುಮಾರ್ ಬಂಗಾರಪ್ಪ, ಜೆ.ಡಿ. ನಾಯ್ಕ್
ಬೆಂಗಳೂರು, ಮಾರ್ಚ್. 09 : ಬಂಗಾರಪ್ಪ ಅವರ ಪುತ್ರ ಮಾಜಿ ಸಚಿವ ಕುಮಾರ್ ಬಂಗಾರಪ್ಪ ತಮ್ಮ ಬೆಂಬಲಿಗರ ಜತೆ ಗುರುವಾರ ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಗೊಂಡರು.
ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಮಾಜಿ ಸಚಿವ ಕುಮಾರ್ ಬಂಗಾರಪ್ಪ ಅವರಿಗೆ ಪಕ್ಷದ ಧ್ವಜ ನೀಡುವ ಮೂಲಕ ಬಿಜೆಪಿಗೆ ಬರಮಾಡಿಕೊಂಡರು. ಕುಮಾರ್ ಬಂಗಾರಪ್ಪ ಜತೆಗೆ ಮಾಜಿ ಶಾಸಕ ಜೆ.ಡಿ. ನಾಯ್ಕ್ ಹಾಗೂ ಡಾ.ಜಿ.ಡಿ. ನಾರಾಯಣಪ್ಪ ಕೂಡ ಕಮಲ ಪಾಳಯಕ್ಕೆ ಕಾಲಿರಿಸಿದರು.[ಕುಮಾರ್ ಬಂಗಾರಪ್ಪ ತಂದೆ ತಾಯಿಯನ್ನೇ ಹೊರ ಹಾಕಿದ್ದ -ಕಾಗೋಡು]
ಬಿಜೆಪಿ ಸೇರ್ಪಡೆ ನಂತರ ಮಾತನಾಡಿದ ಮಾಜಿ ಶಾಸಕ ಜೆ.ಡಿ. ನಾಯ್ಕ್, ದೇಶದ ಪ್ರಧಾನಮಂತ್ರಿ ಮೋದಿ ಹಾಗೂ ಯಡಿಯೂರಪ್ಪ ನಾಯಕತ್ವದ ಮೇಲೆ ನಂಬಿಕೆ ಇಟ್ಟು ಬಿಜೆಪಿ ಸೇರಿದ್ದೇನೆ.
ಬಿಜೆಪಿಯ ತತ್ವ ಸಿದ್ಧಾಂತ, ಬಡವರಪರ ಕಾಳಜಿ ತಿಳಿದು ಬಿಜೆಪಿ ಸೇರಿದ್ದೇನೆ ಯಡಿಯೂರಪ್ಪ ನಾಯಕತ್ವದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲಿದೆ ಯಡಿಯೂರಪ್ಪ ಸಿಎಂ ಆಗಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.[ಕಾಂಗ್ರೆಸ್ ತೊರೆದ ಮಾಜಿ ಸಚಿವ ಕುಮಾರ ಬಂಗಾರಪ್ಪ]
ಬಳಿಕ ಬಿಎಸ್ ಯಡಿಯೂರಪ್ಪ ಮಾತನಾಡಿ, ಜನಪ್ರಿಯ ಮುಖ್ಯಮ೦ತ್ರಿಗಳಾಗಿದ್ದ ದಿವ೦ಗತ ಬ೦ಗಾರಪ್ಪನವರ ಪುತ್ರ, ಮಾಜಿ ಸಚಿವ ಕುಮಾರ್ ಬ೦ಗಾರಪ್ಪ ಮತ್ತು ಮಾಜಿ ಶಾಸಕ ಶ್ರೀ ಜೆ.ಡಿ. ನಾಯಕ್ ಅವರನ್ನು ಮತ್ತು ಅವರ ಅಪಾರ ಬೆ೦ಬಲಿಗರನ್ನು ಬಿಜೆಪಿ ಇ೦ದು ಭಾರತೀಯ ಜನತಾ ಪಕ್ಷಕ್ಕೆ ತು೦ಬಾ ಆತ್ಮೀಯತೆಯಿ೦ದ ಬರಮಾಡಿಕೊ೦ಡಿದ್ದೇವೆ.
ಇತ್ತೀಚಿನ ದಿನಗಳಲ್ಲಿ ಹಲವಾರು ಪ್ರಮುಖ ನಾಯಕರು ಬಿಜೆಪಿ ಸೇರುತ್ತಿರುವುದು, ಕರ್ನಾಟಕದಲ್ಲಿ ಬಿಜೆಪಿ ಮಾತ್ರ ಜನರ ಆಶೋತ್ತರಗಳನ್ನು ಪ್ರತಿನಿಧಿಸುತ್ತಿರುವುದಕ್ಕೆ ಸ್ಪಷ್ಟ ಪುರಾವೆಯಾಗಿದೆ ಎ೦ದು ಹೇಳಿದರು.