ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ರಾಜಕೀಯ ಭಾಷಣ ಮಾಡಿದ್ರಾ?
ಬೆಂಗಳೂರು, ಏ. 14: ಕೊರೊನಾ ವೈರಸ್ ವಿರುದ್ಧದ ಹೋರಾಟ ಮುಂದುವರೆಸಲು ಪ್ರಧಾನಿ ನರೇಂದ್ರ ಮೋದಿ ಲಾಕ್ಡೌನ್ ಮುಂದುವರೆಸುವ ಘೋಷಣೆ ಮಾಡಿದ್ದಾರೆ. ಏಪ್ರಿಲ್ 14 ರಿಂದ ಮೇ 3ರ ವರೆಗೆ ಲಾಕ್ಡೌನ್ ವಿಸ್ತರಣೆ ಆಗಿದೆ ಎಂದು ಪ್ರಧಾನಿ ಮೋದಿ ಭಾಷಣ ಮಾಡಿದ್ದಾರೆ.
ಜೊತೆಗೆ ಏಪ್ರಿಲ್ 20ರ ವರೆಗೆ ಪರಿಸ್ಥಿತಿ ಅವಲೋಕನ ಮಾಡುವುದಾಗಿ ಮೋದಿ ಅವರು ಹೇಳಿದ್ದಾರೆ. ಕೊರೊನಾ ವೈರಸ್ ಸೋಂಕು ಹರಡುವುದು ನಿಯಂತ್ರಣಕ್ಕೆ ಸಿಗದೇ ಇದ್ದರೆ ಮತ್ತಷ್ಟು ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವ ಮುನ್ಸೂಚನೆಯನ್ನು ಕೊಟ್ಟಿದ್ದಾರೆ.
ಪ್ರಧಾನಿ ಮೋದಿ ಅವರ ಭಾಷಣವನ್ನು ಇಡೀ ದೇಶ ಕಾತರದಿಂದ ಕಾಯುವಂತೆ ಮಾಡಿತ್ತು. ಕೆಲವು ಕ್ಷೇತ್ರಗಳಿಗೆ ರಿಯಾಯತಿಯನ್ನು ಪ್ರಧಾನಿ ಮೋದಿ ಅವರು ಘೊಷಣೆ ಮಾಡುತ್ತಾರೆ ಎಂಬ ನಿರೀಕ್ಷೆಯಲ್ಲಿ ಜನರಿದ್ದರು. ಆದರೆ ಕೊರೊನಾ ವೈರಸ್ ನಿಯಂತ್ರಿಸುವುದಷ್ಟೇ ಸಧ್ಯ ನಮ್ಮ ಮುಂದಿರುವ ಗುರಿ ಎಂದು ಪ್ರಧಾನಿ ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಭಾಷಣಕ್ಕೆ ಮಾಜಿ ಸಿಎಂ ಹಾಗೂ ವಿರೋಧ ಪಕ್ಷ ನಾಯಕ ಸಿದ್ದರಾಮಯ್ಯ ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಲಾಕ್ಡೌನ್ ವಿಸ್ತರಣೆಗೆ ನಮ್ಮ ವಿರೋಧ ಇಲ್ಲ
ಮೇ 3ನೇ ತಾರಿಖಿನ ವರೆಗೆ ಲಾಕ್ ಡೌನ್ ವಿಸ್ತರಣೆಗೆ ನಾವು ವಿರೋಧ ಮಾಡುವುದಿಲ್ಲ. ಕೊರೊನಾ ಸೋಂಕು ಭಯಾನಕವಾಗಿದೆ. ಅದರ ಪ್ರಮಾಣ ಇನ್ನೂ ಕಡಿಮೆಯಾಗುತ್ತಿಲ್ಲ. ಆದ್ದರಿಂದ ವಿಸ್ತರಣೆಗೆ ನಮ್ಮ ಸಹಮತವೂ ಇದೆ. ಜನರೂ ಬೆಂಬಲ ನೀಡಬೇಕಾಗುತ್ತದೆ. ವಿಚಾರದಲ್ಲಿ ಸರ್ಕಾರಕ್ಕೆ ನಮ್ಮ ಪಕ್ಷವೂ ಸಹಕಾರ ನೀಡುತ್ತದೆ ಎಂದು ಲಾಕ್ಡೌನ್ ಕುರಿತಂತೆ ಪ್ರಧಾನಿ ಮೋದಿ ನಿರ್ಧಾರವನ್ನು ಅವರು ಸ್ವಾಗತಿಸಿದ್ದಾರೆ. ಆದರೆ ಜನರ ನಿರೀಕ್ಷೆಯನ್ನು ಪ್ರಧಾನಿ ಹುಸಿಗೊಳಿಸಿದ್ದಾರೆ ಎಂದೂ ಸಿದ್ದರಾಮಯ್ಯ ಹೇಳಿರುವುದು ಯಾಕೆ?
ದೇಶಾದ್ಯಂತ ಮೇ 3ರವರೆಗೆ ಕೊರೊನಾ ಲಾಕ್ಡೌನ್ ವಿಸ್ತರಣೆ: ಮೋದಿ
ಏಳು ಸೂತ್ರಗಳನ್ನು ಹೇಳಿ ಕೈತೊಳೆದುಕೊಂಡ ಪ್ರಧಾನಿ ಮೋದಿ
ಲಾಕ್ಡೌನ್ನಿಂದ ಸಂಕಷ್ಟಕ್ಕೆ ಒಳವಾಗಿರುವ ರೈತರು, ಕೂಲಿ ಕಾರ್ಮಿಕರು ಹಾಗೂ ಬಡವರಿಗೆ ಪ್ರಧಾನಿ ನರೇಂದ್ರ ಮೋದಿಯವರು ಪರಿಹಾರ ಒದಗಿಸುತ್ತಾರೆ ಎಂಬ ಜನರ ನಿರೀಕ್ಷೆ ಹುಸಿಯಾಗಿದೆ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಹೇಳಿದ್ದಾರೆ. ಇತ್ತ ರಾಜ್ಯ ಸರ್ಕಾರವೂ ಅನಗತ್ಯ ವೆಚ್ಚಗಳಿಗೆ ಕಡಿವಾಣ ಹಾಕುವಲ್ಲಿ ವಿಫಲವಾಗಿರುವುದರಿಂದ ಆರ್ಥಿಕವಾಗಿ ದಿವಾಳಿಯಾಗಿದೆ ಎಂದು ಅವರು ಹೇಳಿದ್ದಾರೆ.
ಪ್ರಧಾನಿ ಮೋದಿ ಅವರು ದೇಶವನ್ನು ಉದ್ದೇಶಿಸಿ ಭಾಷಣ ಮಾಡಿದ್ದಾರೆ. ದೇಶದ ಆರ್ಥಿಕ ಪರಿಸ್ಥಿತಿ ತೀರಾ ಕೆಳ ಮಟ್ಟಕ್ಕೆ ಹೋಗಿದೆ. ಇಂತಹ ಸ್ಥಿತಿಯನ್ನು ಕಳೆದ ಮೂವತ್ತು ವರ್ಷಗಳಲ್ಲಿ ದೇಶ ಎಂದೂ ಕಂಡಿರಲಿಲ್ಲ. ದೇಶದ ಆರ್ಥಿಕ ಬೆಳವಣಿಗೆ (ಜಿಡಿಪಿ) 2.5 ಆಗಬಹುದು ಎಂದು ಅಂದಾಜು ಮಾಡಲಾಗಿದೆ. ಇದು ಮೂವತ್ತು ವರ್ಷಗಳಳ್ಲಿ ಕನಿಷ್ಠ ಬೆಳವಣಿಗೆ. ಹೀಗಾಗಿ ಜನತೆ ಪ್ರಧಾನಿಯವರ ಕಡೆಗೆ ನಿರೀಕ್ಷೆಯ ನೋಟ ನೆಟ್ಟಿದ್ದರು. ಆದರೆ ಜನರ ಭರವಸೆ ಹುಸಿಯಾಗಿದೆ. ಯಾವುದೇ ನೆರವನ್ನು ಘೋಷಿಸದ ಮೋದಿಯವರು ಏಳು ಸೂತ್ರಗಳನ್ನು ಹೇಳಿ ಕೈ ತೊಳೆದುಕೊಂಡಿದ್ದಾರೆ. ಜನರನ್ನು ಕಷ್ಟದ ಕಡಲಲ್ಲಿಯೇ ತೇಲಲು ಬಿಟ್ಟಿದ್ದಾರೆ.
ಲಾಕ್ಡೌನ್: ಪ್ರಧಾನಿ ಮೋದಿ ನೀಡಿದ ಕಟ್ಟುನಿಟ್ಟಿನ ಸಪ್ತಸೂತ್ರಗಳು
ಲಾಕ್ ಡೌನ್ ನಿಂದ ಕೈಗಾರಿಕೆಗಳು ಮುಚ್ಚಿವೆ. ಕೃಷಿ ಕ್ಷೇತ್ರ ಬಡವಾಗಿದೆ. ಕಾರ್ಮಿಕರು ಕಂಗಾಲಾಗಿದ್ದಾರೆ. ಹಳ್ಳಿ ಜನರ ತೊಂದರೆ ಹೇಳತೀರದಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಪ್ರಧಾನಿಯವರು ಆರ್ಥಿಕವಾಗಿ ಚೈತನ್ಯ ತುಂಬುವ, ಕೃಷಿ ಕ್ಷೇತ್ರ ಮೇಲೆತ್ತುವ ಕೆಲಸ ಮಾಡಬೇಕಿತ್ತು. ಬಡವರು, ಕಾರ್ಮಿಕರಿಗೆ ಜೀವನದ ಭದ್ರತೆ ಒದಗಿಸಬೇಕಿತ್ತು ಎಂದು ಸಿದ್ದರಾಮಯ್ಯ ಅವರು ಅಭಿಪ್ರಾಯಪಟ್ಟಿದ್ದಾರೆ.
ಕೋಟ್ಯಂತರ ವಲಸೆ ಕಾರ್ಮಿಕರು ಇಂದಿಗೂ ಬೀದಿಯಲ್ಲಿದ್ದಾರೆ
ಕೋಟ್ಯಂತರ ಮಂದಿ ವಲಸಿಗ ಕಾರ್ಮಿಕರು ಇಂದಿಗೂ ಬೀದಿಯಲ್ಲಿದ್ದಾರೆ. ಸರ್ಕಾರದ ಕಾರ್ಯಕ್ರಮಗಳು ಇದುವರೆಗೂ ಅವರನ್ನು ಮುಟ್ಟಿಲ್ಲ. ಇಂತಹ ಸಂದರ್ಭದಲ್ಲಿ ಜನರು ಪ್ರಧಾನಿಯವರ ಮೇಲೆ ಇಟ್ಟಿದ್ದ ನಿರೀಕ್ಷೆ ಹುಸಿಯಾಗಿದೆ. ರೈತರು ಬೆಳೆದ ಉತ್ಪನ್ನಗಳಿಗೆ ಬೆಲೆ ಹಾಗೂ ಮಾರುಕಟ್ಟೆ ವ್ಯವಸ್ಥೆ ಆಗಿಲ್ಲ. ಕೃಷಿ ಉತ್ಪನ್ನಗಳ ಸಾಗಣೆಗೂ ಸರ್ಕಾರ ಸೂಕ್ತ ಏರ್ಪಾಡು ಮಾಡುತ್ತಿಲ್ಲ. ಹೀಗಾಗಿ ರೈತರು ತಮ್ಮ ಬೆಳೆಗಳನ್ನು ಬೀದಿಗೆ ಸುರಿಯುತ್ತಿದ್ದಾರೆ. ಮಾವು ಹಾಗೂ ಕಲ್ಲಂಗಡಿ ಮಾರುಕಟ್ಟೆಗೆ ಬರಬೇಕಾದ ಕಾಲವಿದು. ಆದರೆ ಅವು ರೈತರ ಜಮೀನುಗಳಲ್ಲಿಯೇ ಕೊಳೆಯುತ್ತಿದೆ. ಅದನ್ನು ನಂಬಿದವರ ಬದುಕು ಮೂರಾಬಟ್ಟೆಯಾಗಿದೆ. ಉಚಿತವಾಗಿ ಕೊಡುತ್ತೇವೆ ಎಂದರೂ ಯಾರೂ ತೆಗೆದುಕೊಳ್ಳಲು ಮುಂದೆ ಬರುತ್ತಿಲ್ಲ.
ಮೋದಿ ದೇಶವನ್ನು ಉದ್ದೇಶಿಸಿ ರಾಜಕೀಯ ಭಾಷಣ ಮಾಡಿದ್ದಾರೆ
ಮೋದಿಯವರು ದೇಶವನ್ನು ಉದ್ದೇಶಿಸಿ ಕೇವಲ ರಾಜಕೀಯ ಭಾಷಣ ಮಾಡಿದ್ದಾರೆ. ಆದರೆ, ರಾಜ್ಯ ಸರ್ಕಾರ ನೊಂದವರ ನೆರವಿಗೆ ನಿಲ್ಲುವ ಕೆಲಸವನ್ನು ಪರಿಣಾಮಕಾರಿಯಾಗಿ ಮಾಡುತ್ತಿಲ್ಲ. ನಿತ್ಯವೂ ನೂರಾರು ಮಂದಿ ದೂರವಾಣಿ ಕರೆ ಮಾಡಿ ತಮ್ಮ ಕಷ್ಟ ಹೇಳಿಕೊಳ್ಳುತ್ತಾರೆ. ಅಸಂಘಟಿತ ವಲಯದ ಕಾರ್ಮಿಕರು, ರೈತರ ತೊಂದರೆ ನಿವಾರಣೆಯಾಗುತ್ತಿಲ್ಲ. ಇಂದಿರಾ ಕ್ಯಾಂಟೀನ್ನಲ್ಲಿ ಉಚಿತ ಊಟ ನಿಲ್ಲಿಸಬೇಡಿ ಎಂದು ಸರ್ಕಾರಕ್ಕೆ ಪದೇ ಪದೇ ಮನವಿ ಮಾಡಿದ್ದೆ. ಆದರೆ, ದರ ನಿಗದಿ ಮಾಡಿದರು. ಇದರಿಂದ ಬೆಂಗಳೂರಿನಲ್ಲಿ ಶೇ. 50ರಷ್ಟು ಕ್ಯಾಂಟೀನ್ಗಳು ಮುಚ್ಚುವ ಹಂತಕ್ಕೆ ಬಂದು ನಿಂತಿವೆ.
ಜನರ ಕಷ್ಟ ನಿವಾರಣೆಯಲ್ಲಿ ರಾಜ್ಯ, ಕೇಂದ್ರ ವಿಫಲ
ನಾವು ಎಲ್ಲ ರೀತಿಯ ಸಹಕಾರ ಕೊಟ್ಟಿದ್ದರೂ ಜನರ ಕಷ್ಟ ನಿವಾರಣೆಯಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ವಿಫಲವಾಗಿವೆ. ಲಾಕ್ಡೌನ್ ಸಹ ನೂರಕ್ಕೆ ನೂರರಷ್ಟು ಪಾಲನೆ ಆಗುತ್ತಿಲ್ಲ. ಇದೀಗ ರಾಜ್ಯ ಸರ್ಕಾರ ಖಾಲಿಯಾಗಿರುವ ತನ್ನ ಖಜಾನೆ ಭರ್ತಿ ಮಾಡಲು ಬಿಡಿಎ ಕಾರ್ನರ್ ಸೈಟ್ ಗಳ ಹರಾಜಿಗೆ ಮುಂದಾಗಿದೆ. ಅನಗತ್ಯ ವೆಚ್ಚಗಳಿಗೆ ಕಡಿವಾಣ ಹಾಕದ ಕೊರತು ರಾಜ್ಯ ಸರ್ಕಾರ ಪಾತಾಳಕ್ಕೆ ಇಳಿದಿರುವ ಆರ್ಥಿಕ ಪರಿಸ್ಥಿತಿ ಮೇಲೆತ್ತಲು ಸಾಧ್ಯವಿಲ್ಲ. ಮೂಲೆ ನಿವೇಶನಗಳನ್ನು ಹರಾಜು ಹಾಕುತ್ತೇವೆ. ಇದರಿಂದ 15 ಸಾವಿರ ಕೋಟಿ ರೂ. ಸಂಗ್ರಹಿಸಿ ಖಜಾನೆಗೆ ತುಂಬುತ್ತೇವೆ ಎಂಬ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಹೇಳಿಕೆಯನ್ನು ಗಮನಿಸಿದರೆ ಸರ್ಕಾರದಲ್ಲಿ ದುಡ್ಡಿಲ್ಲ ಎಂಬುದು ಸ್ಪಷ್ಟವಾಗುತ್ತದೆ.
ಮೋದಿ ಹೇಳಿದ ಸಪ್ತ ಸೂತ್ರ ನಿಯಮ ತಪ್ಪದೇ ಪಾಲಿಸಿ: ಯಡಿಯೂರಪ್ಪ
ಬಿಡಿಎ ಮಾತ್ರವಲ್ಲ, ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದಲ್ಲೂ ಹಣ ಇದೆ. ಅದು ವೈದ್ಯರು ಮತ್ತು ಆಸ್ಪತ್ರೆಗಳಿಂದ ಬಂದಿರುವ ಹಣ. ಅದನ್ನೂ ಸರ್ಕಾರ ಬಳಕೆ ಮಾಡಿಕೊಳ್ಳಬಹುದು ಎಂಬುದು ನನ್ನ ಅಭಿಪ್ರಾಯ.
ಅಧ್ಯಕ್ಷರಿಲ್ಲದ ನಿಗಮ-ಮಂಡಳಿಗಳಲ್ಲಿ ಅಧಿಕಾರಿಗಳ ದರ್ಬಾರು
ನಿಗಮ-ಮಂಡಳಿಗಳಲ್ಲಿ ಅಧ್ಯಕ್ಷರಿಲ್ಲ. ಅಧಿಕಾರಿಗಳೇ ಈಗ ಅಲ್ಲಿ ದರ್ಬಾರು ನಡೆಸುತ್ತಿದ್ದಾರೆ. ಅಧ್ಯಕ್ಷರಿಗೆ ನಿಗಧಿ ಮಾಡಿರುವ ಕಾರುಗಳನ್ನು ಕಚೇರಿ, ಮನೆ ಕೆಸಲಗಳಿಗೆ ಬಳಸುತ್ತಿದ್ದಾರೆ. ಆ ಕಾರುಗಳನ್ನು ವಾಪಸ್ ಪಡೆದುಕೊಂಡು ಅನಗತ್ಯ ವೆಚ್ಚಕ್ಕೆ ಕಡಿಹಾವಣ ಹಾಕಬೇಕು. ಇದು ಒಂದು ಉದಾಹರಣೆ ಅಷ್ಟೆ. ಇಂತಹ ಅನಗತ್ಯ ವೆಚ್ಚಗಳು ಅನೇಕ. ಅದರ ಮೇಲೆ ಸರ್ಕಾರ ನಿಯಂತ್ರಣ ಸಾಧಿಸಬೇಕು. ವಾಣಿಜ್ಯ ತೆರಿಗೆ, ನೋಂದಣಿ ಮತ್ತು ಮುದ್ರಾಂಕ ಶುಲ್ಕ, ಅಬಕಾರಿ, ಮೋಟಾರು ವಾಹನ ತೆರಿಗೆ ಈಗ ಸಂಗ್ರಹವಾಗುತ್ತಿಲ್ಲ. ವಿಶೇಷ ಪ್ಯಾಕೇಜ್ ಘೋಷಣೆ ಮಾಡದ ಹೊರತು ಆರ್ಥಿಕವಾಗಿ ಚೈತನ್ಯ ತುಂಬಲಾಗದು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
"ಕೊರೊನಾ: ಸಂಘ ಪರಿವಾರದ ಪಾಲಾಗಲಿದೆಯಾ 8 ಸಾವಿರ ಕೋಟಿ ರೂ?"
ಆರ್ಥಿಕ ದಿವಾಳಿಗೆ ಕಾರಣಗಳು
ಅನಗತ್ಯ ವೆಚ್ಚದ ಮೇಲೆ ಹಿಡಿತ ಇಲ್ಲದಿರುವುದು, ಕೇಂದ್ರದಿಂದ ಬರಬೇಕಾದ ತೆರಿಗೆ ಹಾಗೂ ಜಿಎಸ್ಟಿ ತೆರಿಗೆ ಬಾರದಿರುವುದು, ಹಣಕಾಸು ಇಲಾಖೆಯನ್ನು ಸಮರ್ಥವಾಗಿ ನಿಭಾಯಿಸದಿರುವುದು ಹಾಗೂ ಭ್ರಷ್ಟಾಚಾರ ನಿಯಂತ್ರಣ ಮಾಡದಿರುವುದು ಆರ್ಥಿಕ ದಿವಾಳಿಗೆ ಕಾರಣ ಎಂದು ಸಿದ್ದರಾಮಯ್ಯ ಅವರು ಅಭಿಪ್ರಾಯಪಟ್ಟರು.