ಎಳೆದದ್ದು ಮೈಕ್, ಜಾರಿದ್ದು ದುಪ್ಪಟ್ಟಾ: ಅದು ಸಿದ್ರಾಮಣ್ಣನ ದುರಾದೃಷ್ಟ
Recommended Video

ರಾಜ್ಯದ ರಾಜಕೀಯ ಅಧಃಪತನದತ್ತ ಸಾಗುತ್ತಿದೆಯಾ ಎನ್ನುವ ಜನಸಾಮಾನ್ಯರ ನಿತ್ಯನಿರಂತರದ ಪ್ರಶ್ನೆಗೆ ಎರಡು ನಿದರ್ಶನಗಳು ಸೋಮವಾರ (ಜ 28) ನಡೆದು ಹೋದವು. ಒಂದು ಕೇಂದ್ರ ಸಚಿವ, ಬಿಜೆಪಿ ಸಂಸದ ಅನಂತ್ ಕುಮಾರ್ ಹೆಗ್ಡೆ ಅವರ ಟ್ವೀಟ್, ಇನ್ನೊಂದು ವರುಣಾ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಘಟನೆ.
ವರುಣಾ ಕ್ಷೇತ್ರದಲ್ಲಿ ನಡೆದ ಘಟನೆಯ ನಂತರ ಸಿದ್ದರಾಮಯ್ಯನವರ ಹೆಸರು ರಾಷ್ಟ್ರಮಟ್ಟದಲ್ಲಿ ಬೇಡವಾದ ಕಾರಣಕ್ಕೆ ಟ್ರೆಂಡ್ ಆಗುತ್ತಿದೆ. ಸಿಕ್ಕಿದ್ದೇ ಚಾನ್ಸ್ ಎಂದು ಅವರ ವಿರೋಧಿಗಳು ಮಾಜಿ ಸಿಎಂ ಸುತ್ತಮುತ್ತ ನಡೆದ ಈ ಘಟನೆಯನ್ನು ಎಳೆದು ಎಳೆದು ತಂದು ಹಾಕುತ್ತಿದ್ದಾರೆ. ಕಾಂಗ್ರೆಸ್ ತೀವ್ರ ಮುಜುಗರ ಎದುರಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ತಾಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷೆ ಜಮಾಲ ಇಂದು (ಜ 28) ಬಿಡಿಬಿಡಿಯಾಗಿ ಸಿದ್ದರಾಮಯ್ಯನವರಿಗೆ ಏನು ವಿವರಿಸುತ್ತಿದ್ದರೋ, ಅದು ಇಂದಿನ ನಮ್ಮ ವ್ಯವಸ್ಥೆಯನ್ನು ಬಿಂಬಿಸುತ್ತಿತ್ತು, ನಮ್ಮ ಜನಪ್ರತಿನಿಧಿಗಳ ಕಾರ್ಯವೈಖರಿಯನ್ನು ತೋರಿಸುತ್ತಿತ್ತು. ಅಷ್ಟಕ್ಕೇ ಸುದೀರ್ಘ ರಾಜಕೀಯ ಅನುಭವವಿರುವ ಹಿರಿಯ ರಾಜಕಾರಣಿ ಹೀಗೆ ನಡೆದುಕೊಂಡರೆ ಹೇಗೆ?
ಆಗಬೇಕಾದ ಕೆಲಸ, ಕಾಮಗಾರಿ ತಿಂಗಳು ತಿಂಗಳಾದರೂ ನಡೆಯದೇ ಇದ್ದಾಗ ಆ ಮಹಿಳೆ, ಮೇಜು ಕುಟ್ಟಿ ಆಕ್ರೋಶ ವ್ಯಕ್ತಪಡಿಸಿದರು, ಅದು ಸಹಜ ಕೂಡಾ. ಅದೇ ರೀತಿ, ಆಕೆಯ ಕೈಯಿಂದ ಸಿದ್ದರಾಮಯ್ಯ ಮೈಕ್ ಎಳೆದಾಗ ದುಪ್ಪಟ್ಟಾ ಜಾರಿದ್ದು ಕೂಡಾ ಅಷ್ಟೇ ಆಕಸ್ಮಿಕ..

ಉದ್ದೇಶಪೂರ್ವಕವಾಗಿ ನಡೆದ ಘಟನೆಯಲ್ಲ
ಇದೊಂದು ಉದ್ದೇಶಪೂರ್ವಕವಾಗಿ ನಡೆದ ಘಟನೆಯಲ್ಲ ಎಂದು ಸಿದ್ದರಾಮಯ್ಯನವರು ಸ್ಪಷ್ಟೀಕರಣ ನೀಡಿದರೂ, ಅಷ್ಟೊತ್ತಿಗೆ ಅದು ರಾಷ್ಟ್ರವ್ಯಾಪಿ ಸುದ್ದಿಯಾಗಿ ಹೋಯಿತು. ದುಪ್ಪಟ್ಟಾ ಜಾರಿದ್ದು ಆಕಸ್ಮಿಕ, ಆದರೆ ಸಿದ್ದರಾಮಯ್ಯ ತೋರಿದ ರೀತಿ ಮಾತ್ರ ಸಮರ್ಥನೀಯವಲ್ಲ. ಅದೇ ರೀತಿ ಘಟನೆಯ ವೇಳೆ, ಕ್ಷೇತ್ರದ ಶಾಸಕ ಡಾ. ಯತೀಂದ್ರ ನಗುತ್ತಿದ್ದದ್ದೂ ಜನತೆಗೆ ಕೆಟ್ಟ ಸಂದೇಶ ರವಾನಿಸುತ್ತಿತ್ತು.

ಯತೀಂದ್ರ ನಡೆಸಬೇಕಾದ ಸಭೆಯಲ್ಲಿ ಸಿದ್ದು ಸಿಟ್ಟಾಗಿದ್ದು ಎಷ್ಟು ಸರಿ
ವರುಣಾ ಕ್ಷೇತ್ರದ ನೂತನ ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ ನಡೆಸಬೇಕಾದ ಸಭೆಯಲ್ಲಿ ಸಿದ್ದರಾಮಯ್ಯ ಸಿಟ್ಟಾಗಿದ್ದು ಎಷ್ಟು ಸರಿ ಎನ್ನುವುದು ಕೂಡಾ ಈಗ ಚರ್ಚೆಯ ವಿಷಯ. ಸಿದ್ದರಾಮಯ್ಯ ಇನ್ನೂ ಮುಖ್ಯಮಂತ್ರಿ ಅಂದುಕೊಂಡಿದ್ದಾರಾ, ಮಗ ಉತ್ತರಿಸಬೇಕಾದ ಪ್ರಶ್ನೆಗಳಿಗೆ ತಂದೆ ಸಿಟ್ಟಾದರೆ ಹೇಗೆ ಎನ್ನುವ ಪ್ರಶ್ನೆಯೂ ಎದ್ದೇಳಿದೆ.

ನನ್ನ ಎದುರೇ ಮೇಜಿಗೆ ಕುಟ್ಟುತ್ತಿಯಾ
ಏಳು ಬಾರಿ ಶಾಸಕ, ಮಾಜಿ ಸಿಎಂ ನಾನು, ನನ್ನ ಎದುರೇ ಮೇಜಿಗೆ ಕುಟ್ಟುತ್ತಿಯಾ ಎನ್ನುವುದು ಸಿದ್ದರಾಮಯ್ಯನವರ ಸಿಟ್ಟಿಗೆ ಕಾರಣವಾಗಿದ್ದರೂ, ಮಗನ ಮೇಲೆ ಆರೋಪದ ಸುರಿಮಳೆ ಬರುತ್ತಿದದ್ದೂ, ಸಿದ್ದರಾಮಯ್ಯ ತಾಳ್ಮೆ ಕಳೆದುಕೊಳ್ಳಲು ಕಾರಣವಾಗಿರಬಹುದು. ಮಾಜಿ ತಾಲೂಕು ಪಂಚಾಯತಿ ಸದಸ್ಯೆ, ಸರಕಾರದ ಆಡಳಿತ ಯಂತ್ರ ಹೇಗೆ ನಿದ್ದೆಯಲ್ಲಿದೆ ಎನ್ನುವುದನ್ನು ಸವಿಸ್ತಾರವಾಗಿ ಹೇಳುತ್ತಿದ್ದದ್ದನ್ನು ಮೊದಲು ನೀನು ಕೇಳಪ್ಪಾ ಎಂದು ಯತೀಂದ್ರನವರನ್ನು ಎಚ್ಚರಿಸಿದ್ದರೆ, ಸಿದ್ದರಾಮಯ್ಯ ಸೈ ಎನಿಸಿಕೊಳ್ಳುತ್ತಿದ್ದರು.

ದುಪ್ಪಟ್ಟಾ ಜಾರಿದ ವಿಚಾರ
ದುಪ್ಪಟ್ಟಾ ಜಾರಿದ ವಿಚಾರದಲ್ಲಿ ಸಿದ್ದರಾಮಯ್ಯನವರು ರಾಜ್ಯದ ಜನತೆಗೆ ವಿವರಿಸಬೇಕಾಗಿಲ್ಲ, ಇದೊಂದು ಆಕಸ್ಮಿಕವಾಗಿ ನಡೆದ ಘಟನೆ ಎನ್ನುವುದು ಅರ್ಥವಾಗುವಂತಹ ವಿಚಾರ. ಆದರೆ, ಮಹಿಳೆಯ ಜೊತೆ ಅವರು ಸಿಟ್ಟಿನಿಂದ ಮಾತನಾಡಿದ್ದು, ಮೈಕ್ ಕಸಿದುಕೊಂಡಿದ್ದದ್ದು ಮಾತ್ರ ಒಪ್ಪುವಂತಹ ವಿಚಾರವಲ್ಲ.

ನಿರೀಕ್ಷೆಯಂತೆ ಬಿಜೆಪಿ ಬಳಸಿಕೊಳ್ಳುತ್ತಿದೆ
ಘಟನೆಯನ್ನು ಹೇಗೆ ಬಳಸಿಕೊಳ್ಳಬಹುದು ಹಾಗೆಯೇ ನಿರೀಕ್ಷೆಯಂತೆ ಬಿಜೆಪಿ ಇದನ್ನು ಬಳಸಿಕೊಳ್ಳುತ್ತಿದೆ. ದೇಶಕ್ಕೆ ಸಿದ್ದರಾಮಯ್ಯನವರ ವಿರುದ್ದ ಬೇರೆಯೇ ಸಂದೇಶ ಹೋಗುತ್ತಿದೆ, ಅಂದು ಮುಖ್ಯಮಂತ್ರಿ ಕುಮಾರಸ್ವಾಮಿ ಮಹಿಳೆಯ ಬಗ್ಗೆ ಕೇವಲವಾಗಿ ಮಾತನಾಡಿದರು, ಇದಾದ ನಂತರ ಇನ್ನೊಬ್ಬ ಕ್ಯಾಬಿನೆಟ್ ಸಚಿವರು (ಸಾ.ರಾ. ಮಹೇಶ್) ಮಹಿಳೆಯ ಬಗ್ಗೆ ಕೇವಲವಾಗಿ ಮಾತನಾಡಿದರು, ಈಗ ಸಿದ್ದರಾಮಯ್ಯನವರ ಸರದಿ. ಕಾಂಗ್ರೆಸ್ಸಿಗೆ ಮತ್ತು ಸಮ್ಮಿಶ್ರ ಸರಕಾರಕ್ಕೆ ತೀವ್ರ ಮುಜುಗರವಾಗುವಂತಹ ಘಟನೆಯಿದು ಎಂದರೆ ತಪ್ಪಾಗಲಾರದು.












Click it and Unblock the Notifications