ಬಸವರಾಜ ಬೊಮ್ಮಾಯಿ ಬದಲಾವಣೆ ಸುದ್ದಿ: ಎಚ್ಡಿಕೆ ಹೇಳಿದ್ದೇನು?
ಬೆಂಗಳೂರು, ಆಗಸ್ಟ್ 10: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಪದತ್ಯಾಗ ಮಾಡಲಿದ್ದು, ಅವರ ಸ್ಥಾನಕ್ಕೆ ಹೊಸ ಸಿಎಂ ಬರಲಿದ್ದಾರೆ ಎನ್ನುವ ಸುದ್ದಿಯ ಬಗ್ಗೆ ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದರು.
"ಮುಖ್ಯಮಂತ್ರಿಯನ್ನಾಗಿ ಹಿಂದುತ್ವದ ಸಂಪ್ರದಾಯದಲ್ಲಿ ಯಾರನ್ನು ಸಿಎಂ ಮಾಡಬೇಕು ಎನ್ನುವ ಬೆಳವಣಿಗೆ ಬಿಜೆಪಿಯೊಳಗೆ ನಡೆಯುತ್ತಿದೆ. ಯಾರನ್ನು ಸಿಎಂ ಅನ್ನಾಗಿ ಮಾಡಿದರೆ, ಬಿಜೆಪಿಯನ್ನು ಉಳಿಸಿಕೊಳ್ಳಬಹುದು ಎನ್ನುವ ಚರ್ಚೆ ನಡೆಯುತ್ತಿದೆ"ಎಂದು ಕುಮಾರಸ್ವಾಮಿ ಹೇಳಿದರು.
"ಯಾವುದೋ ಒಂದು ಲೆಕ್ಕಾಚಾರ ಬಿಜೆಪಿಯಲ್ಲಿ ನಡೆಯುತ್ತಿದೆ, ಇದೇ ನಮ್ಮ ರಾಜ್ಯಕ್ಕೆ ಬಂದಂತಹ ದುರ್ಗತಿ. ಯಾವುದೇ ವಿಚಾರದಲ್ಲಿ ಬಿಜೆಪಿ ಸರಕಾರದ ಮೇಲೆ ಜನರಿಗೆ ವಿಶ್ವಾಸವಿಲ್ಲ. ರಾಜ್ಯದಲ್ಲಿ ಮುಖ್ಯಮಂತ್ರಿಯೊಬ್ಬರು ಇದ್ದಾರೆ ಎನ್ನುವ ಭಾವನೆಯೂ ಜನರಲ್ಲಿ ಇಲ್ಲ" ಎಂದು ಕುಮಾರಸ್ವಾಮಿ ಅಭಿಪ್ರಾಯಪಟ್ಟರು.

"ಬಿಜೆಪಿಯ ಇಂದಿನ ಪರಿಸ್ಥಿತಿಗೆ ಪಕ್ಷದ ನಾಯಕರ ನಡವಳಿಕೆಯೇ ಕಾರಣ, ಅಲ್ಲಿ ಕಾಣದ ಶಕ್ತಿಗಳ ಹಸ್ತಕ್ಷೇಪದಿಂದ ಹಿನ್ನಡೆಯನ್ನು ಅನುಭವಿಸುತ್ತಿದೆ. ಈ ಸರಕಾರ ಯಾವುದೋ ರಿಮೋಟ್ ನಲ್ಲಿ ನಡೆಯುತ್ತಿರುವ ಸರಕಾರವಿದು"ಎಂದು ಕುಮಾರಸ್ವಾಮಿ ಟೀಕಿಸಿದರು.
"ಪ್ರವಾಹ ಬಂದಾಗಲೇ ಈ ಸರಕಾರಕ್ಕೆ ತಲೆನೋವು ಶುರುವಾಗುವುದು, ಯಡಿಯೂರಪ್ಪನವರು ಸಿಎಂ ಆಗಿದ್ದಾಗ ಪಕ್ಷದ ಮುಖಂಡರು ಹೈದರಾಬಾದ್ ನಲ್ಲಿ ಸಮಯ ಕಳೆಯುತ್ತಿದ್ದರು. ಬಿಜೆಪಿ ಸರಕಾರಕ್ಕೆ ಜನರ ಸೇವೆಗಿಂತ ಸರಕಾರವನ್ನು ಉಳಿಸಿಕೊಳ್ಳುವುದೇ ಆದ್ಯತೆಯ ಕೆಲಸವಾಗಿದೆ"ಎಂದು ಕುಮಾರಸ್ವಾಮಿ ದೂರಿದರು.

"ಜನರ ಬಗ್ಗೆ ಕಿಂಚಿತ್ತೂ ಚಿಂತೆಯಿಲ್ಲದ ಅನಾಗರೀಕ ಸರಕಾರವಿದು. ನನ್ನ ಪಕ್ಷದಲ್ಲಿನ ಬೆಳವಣಿಗೆಯ ಬಗ್ಗೆ ನನಗೆ ಯಾವುದೇ ಆತಂಕವಿಲ್ಲ. ಎಲ್ಲಿಯವರೆಗೆ ಕಾರ್ಯಕರ್ತರು ಪಕ್ಷವನ್ನು ಬೆಳೆಸುತ್ತಾರೋ, ಅಲ್ಲಿಯವರೆಗೆ ಪಕ್ಷವಿರುತ್ತದೆ, ಯಾವುದೇ ವ್ಯಕ್ತಿಗಳ ಬಗ್ಗೆ ನಾನು ತಲೆಕೆಡಿಸಿಕೊಂಡಿಲ್ಲ"ಎಂದು ಪರೋಕ್ಷವಾಗಿ ಕೆ. ಎಂ. ಶಿವಲಿಂಗೇಗೌಡ ಮತ್ತು ಜಿ. ಟಿ. ದೇವೇಗೌಡರ ಬಗ್ಗೆ ಕುಮಾರಸ್ವಾಮಿ ಪ್ರತಿಕ್ರಿಯಿಸಿದರು.












Click it and Unblock the Notifications