'ರಾಷ್ಟ್ರೀಯ ಪಕ್ಷಗಳನ್ನು ಹೊರ ಹಾಕಲು ಕನ್ನಡಿಗರು ಸುಪಾರಿ ಕೊಟ್ಟಿದ್ದಾರೆ'
ಬೆಂಗಳೂರು, ಏಪ್ರಿಲ್ 8: ಬಿಜೆಪಿ ಸರಕಾರ ಅಧಿಕಾರಕ್ಕೆ ಬರಲು ಬಿಜೆಪಿ ನಾಯಕರು ಎಷ್ಟು ಕಾರಣವೋ, ಕಾಂಗ್ರೆಸ್ ನಾಯಕರು ಅಷ್ಟೇ ಕಾರಣ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ರಾಜ್ಯ ಕಾಂಗ್ರೆಸ್ ನಾಯಕರ ಮೇಲೆ ತೀವ್ರ ವಾಗ್ದಾಳಿ ನಡೆಸಿದರು.
ಬೆಂಗಳೂರಿನಲ್ಲಿಂದು ಬೆಲೆ ಏರಿಕೆ ವಿರುದ್ಧ ಜೆಡಿಎಸ್ ಪಕ್ಷವು ಫ್ರೀಡಂ ಪಾರ್ಕಿನಲ್ಲಿ ಹಮ್ಮಿಕೊಂಡಿದ್ದ ಪ್ರತಿಮೆಯ ನೇತೃತ್ವ ವಹಿಸಿ ಅವರು ಮಾತನಾಡಿದರು. "ಅಪಮಾರ್ಗದ ಮೂಲಕ ನನ್ನ ನೇತೃತ್ವದ ಮೈತ್ರಿ ಸರಕಾರವನ್ನು ತೆಗೆದರು. ಅದೇ ರೀತಿಯ ಅಪಮಾರ್ಗದ ಮೂಲಕ ಬಿಜೆಪಿ ಸರಕಾರ ಬಂತು. ಆದರೆ ಇವತ್ತು ಬಿಜೆಪಿ ಸರಕಾರವನ್ನು ಕಾಂಗ್ರೆಸ್ ನಾಯಕರು ಅನೈತಿಕ ಸರಕಾರ ಎಂದು ಹೇಳುತ್ತಿದ್ದಾರೆ, ಇದನ್ನು ರಾಜ್ಯದ ಜನರು ಗಮನಿಸಬೇಕು".
"ದಾಸರಹಳ್ಳಿಯ ಜನತೆಗೆ ಅಧಿಕಾರಿಗಳು ಕಿರುಕುಳ ಕೊಟ್ಟರೆ ಸರಿ ಇರೋದಿಲ್ಲ. ನಮ್ಮ ಕಾರ್ಯಕರ್ತರು ಕಾನೂನು ಮೀರಿ ಕೆಲಸ ಮಾಡಲ್ಲ. ಇಂದು ಗುಂಡಿಗಳಿಗೆ ಜನ ಬಲಿಯಾಗುತ್ತಿದ್ದಾರೆ, ರಸ್ತೆ ದಾಟಲು ಹೋಗಿ ಹೆಣ್ಣು ಮಗಳು ಸಾವನ್ನಪ್ಪಿದ್ದಾಳೆ ಅಂದರೆ ಏನು ಅರ್ಥ. ಕಳಪೆ ಕಾಮಗಾರಿಗಳಿಂದ ಹೀಗೆ ಆಗುತ್ತಿದೆ. ಕೋರ್ಟ್ ಛೀಮಾರಿ ಹಾಕುತ್ತಿದೆ. ಅಪಘಾತದಲ್ಲಿ ಸಾವನ್ನಪ್ಪಿದರೆ ಅವರ ಬಗ್ಗೆ ಕನಿಕರ ಇಲ್ಲ" ಎಂದು ಕುಮಾರಸ್ವಾಮಿ ಹೇಳಿದರು.

ಸರಕಾರ ಮತ್ತು ಬಿಬಿಎಂಪಿ ವಿರುದ್ಧ ಟೀಕಾ ಪ್ರಹಾರ ನಡೆಸಿದ ಕುಮಾರಸ್ವಾಮಿ, "ಬೆಂಗಳೂರಿಗೆ ಸರಿಯಾದ ಸೌಕರ್ಯ ನೀಡಿ ಎಂದು ಉದ್ಯಮಿ ಟಿ ಎ ಮೋಹನ್ ದಾಸ್ ಪೈ ಅವರು ಪ್ರಧಾನಿಗೆ ಪತ್ರ ಬರೆದಿದ್ದಾರೆ. ರಾಜ್ಯದ ಸ್ಥಿತಿಯನ್ನು ಬಿಜೆಪಿ ಎಲ್ಲಿಗೆ ತಂದಿದೆ? ಯಾವುದೇ ಕೆಲಸ ಆಗಬೇಕಾದರೆ ಸರಕಾರಕ್ಕೆ ನ್ಯಾಯಾಲಯವೇ ಆದೇಶ ಕೊಡಬೇಕು ಅಥವಾ ಮೋದಿ ಅವರೇ ಹೇಳಬೇಕಾ" ಎಂದು ರಾಜ್ಯ ಸರಕಾರದ ಕಾರ್ಯವೈಖರಿ ಕುರಿತು ವ್ಯಂಗ್ಯವಾಡಿದರು.
"ರಾಷ್ಟ್ರೀಯ ಪಕ್ಷಗಳು ಯಾವ ರೀತಿ ಚುನಾವಣೆ ನಡೆಸುತ್ತಿವೆ ಎನ್ನುವುದು ನನಗೆ ಗೊತ್ತಿದೆ. ಕಾಂಗ್ರೆಸ್, ಬಿಜೆಪಿಗೆ ಕನ್ನಡಿಗರು ರಾಜ್ಯವನ್ನು ಗುತ್ತಿಗೆ ಕೊಟ್ಟಿಲ್ಲ. ಇದನ್ನು ಎರಡೂ ಪಕ್ಷಗಳು ನೆನಪಿಟ್ಟುಕೊಳ್ಳಬೇಕು" ಎಂದು ಕುಮಾರಸ್ವಾಮಿ ಹೇಳಿದರು.
"ಕಾಂಗ್ರೆಸ್ ವಿರೋಧಿಸಲು ಬಿಜೆಪಿ ನಾಯಕರು ನನಗೆ ಸುಪಾರಿ ಕೊಟ್ಟಿದ್ದಾರೆ ಎಂದು ಕಾಂಗ್ರೆಸ್ ನಾಯಕರು ಹೇಳುತ್ತಿದ್ದಾರೆ. ನಮಗೆ ಸುಪಾರಿ ಕೊಟ್ಟಿರೋದು ಬಿಜೆಪಿಯವರಲ್ಲ, ಕನ್ನಡಿಗರು. ಎರಡು ರಾಷ್ಟ್ರೀಯ ಪಕ್ಷಗಳನ್ನು ಹೊರ ಹಾಕಲು ಕನ್ನಡಿಗರು ಸುಪಾರಿ ಕೊಟ್ಟಿದ್ದಾರೆ, ನೀರಾವರಿ ಯೋಜನೆಗಳ ಬಗ್ಗೆ ಮಾತಾನಾಡೋದಕ್ಕೆ ಸುಪಾರಿ ಕೊಟ್ಟಿದ್ದಾರೆ" ಎಂದು ಮಾಜಿ ಮುಖ್ಯಮಂತ್ರಿ ಕಿಡಿಕಾರಿದರು.
"ನಾನು ಒಂದು ವರ್ಗದ ಜನರನ್ನು ಓಲೈಸುತ್ತಿಲ್ಲ. ಎಲ್ಲರ ಪರವಾಗಿ ನಾನು ದನಿ ಎತ್ತಿದ್ದೇನೆ. ನಾನು ಸಿಎಂ ಆಗಲು ಈ ಹೋರಾಟ ಅಲ್ಲ. ನಾಡಿನ ಜನರಿಗಾಗಿ ನನ್ನ ಹೋರಾಟ, ಉತ್ತಮ ಬದುಕು ಕಟ್ಟಿಕೊಡೋದಿಕ್ಕೆ ನನ್ನ ಹೋರಾಟ. ನಮ್ಮ ಮತ ಮಾರಾಟಕಿಲ್ಲ ಅನ್ನುವ ವಾತಾವರಣವನ್ನು ರಾಜ್ಯದಲ್ಲಿ ತರುತ್ತೇವೆ. ಅಂಥಹ ವಾತಾವರಣ ಹಳ್ಳಿ ಹಳ್ಳಿಯಲ್ಲಿ ಪ್ರಾರಂಭ ಮಾಡುತ್ತೇವೆ. ಈ ಮೂಲಕ ಬಿಜೆಪಿ ಸರ್ಕಾರ ಕಿತ್ತೊಗೆಯುವ ಕೆಲಸ ಮಾಡುತ್ತೇವೆ" ಎಂದು ಕುಮಾರಸ್ವಾಮಿ ಹೇಳಿದರು.












Click it and Unblock the Notifications