ಅವಕಾಶಕ್ಕಾಗಿ ಜೆಡಿಎಸ್ ನವರು RSS ಜೊತೆ ಬೇಕಾದರೂ ಹೋಗುತ್ತಾರೆ!
ಬೆಂಗಳೂರು, ಸೆ 20: "ಜಾತ್ಯಾತೀತ ಜನತಾದಳದವರಿಗೆ ತತ್ವ, ಸಿದ್ದಾಂತ ಎನ್ನುವುದು ಇಲ್ಲ. ಅವರಿಗೆ ಬೇಕಾಗಿರುವುದು ಅವಕಾಶ ಮಾತ್ರ, ಅದಕ್ಕಾಗಿ ಬೇಕಾದರೆ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್ ಎಸ್ ಎಸ್) ಜೊತೆಗೂ ಹೋಗಲು ಅವರು ಸಿದ್ದರಿರುತ್ತಾರೆ"ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಜೆಡಿಎಸ್ ಮುಖಂಡರಾಗಿದ್ದ ರಮೇಶ್ ಬಾಬು ಕಾಂಗ್ರೆಸ್ ಸೇರ್ಪಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದ ಸಿದ್ದರಾಮಯ್ಯ, "ನಾನೂ ಹಿಂದೆ ಜೆಡಿಎಸ್ ನಲ್ಲಿದ್ದವನು. ದೇವೇಗೌಡ್ರು ಮತ್ತು ಕುಮಾರಸ್ವಾಮಿ ಪಕ್ಕಾ ಸ್ವಾರ್ಥಿಗಳು. ಅಧಿಕಾರಕ್ಕಾಗಿ ಯಾರ ಜೊತೆಗೂ ಕೈಜೋಡಿಸುತ್ತಾರೆ"ಎಂದು ಹೇಳಿದ್ದಾರೆ.
"ಕಾಂಗ್ರೆಸ್ ಪಕ್ಷ ರಾಜಕೀಯಕ್ಕಷ್ಟೇ ಸೀಮಿತವಲ್ಲ, ಇದೊಂದು ಚಳವಳಿ. ದೇಶದ ಸ್ವಾತಂತ್ರ್ಯಕ್ಕಾಗಿ ಆರಂಭಗೊಂಡ ಕಾಂಗ್ರೆಸ್ ಎಂಬ ಚಳವಳಿ ಇಂದು ಸಾಮಾಜಿಕ ನ್ಯಾಯ, ಸಮಾನತೆ, ಜಾತ್ಯಾತೀತತೆಯ ಸ್ಥಾಪನೆಗಾಗಿ ನಿರಂತರವಾಗಿದೆ. ಈ ಸಿದ್ಧಾಂತಗಳನ್ನು ಬೆಂಬಲಿಸುವ ಎಲ್ಲಾ ಮನಸ್ಸುಗಳು ಈ ವೇಳೆ ಒಂದಾಗಬೇಕು"ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
"ದೇಶದ ಇತರ ಎಲ್ಲಾ ರಾಜಕೀಯ ಪಕ್ಷಗಳಿಗೂ ಕಾಂಗ್ರೆಸ್ ಮಾತೃಪಕ್ಷ. ಅದು ರಾಷ್ಟ್ರೀಯ ಪಕ್ಷವೇ ಆಗಿರಲಿ ಅಥವಾ ಪ್ರಾದೇಶಿಕ ಪಕ್ಷಗಳೇ ಆಗಿರಲಿ. ಅವು ಒಂದಲ್ಲಾ ಒಂದು ರೀತಿ ಕಾಂಗ್ರೆಸ್ ಪಕ್ಷದ ಮೂಲದಿಂದಲೇ ಅಸ್ತಿತ್ವಕ್ಕೆ ಬಂದಿವೆ. ಹಾಗಾಗಿಯೇ ದೇಶದ ಉದ್ದಗಲಕ್ಕೂ ಕಾರ್ಯಕರ್ತರನ್ನು ಹೊಂದಿರುವ ಏಕೈಕ ಪಕ್ಷವೆಂಬ ಹೆಗ್ಗಳಿಕೆ ನಮಗಿದೆ"ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

ಯಾರನ್ನು ನಮ್ಮ ಪಕ್ಷಕ್ಕೆ ಬನ್ನಿ ಎಂದು ಕೈಹಿಡಿದು ಎಳೆದುಕೊಂಡು ಬರೋದಿಲ್ಲ
ನಾವಾಗಿಯೇ ಯಾರನ್ನು ನಮ್ಮ ಪಕ್ಷಕ್ಕೆ ಬನ್ನಿ ಎಂದು ಕೈಹಿಡಿದು ಎಳೆದುಕೊಂಡು ಬರೋದಿಲ್ಲ. ನಮ್ಮ ಪಕ್ಷದ ಸಿದ್ಧಾಂತಗಳನ್ನು, ಪಕ್ಷದ ನಾಯಕತ್ವವನ್ನು ಒಪ್ಪಿ ಬರುವವರಿಗೆ ಪಕ್ಷದ ಬಾಗಿಲು ಸದಾ ತೆರೆದಿರುತ್ತದೆ. ಸೈದ್ಧಾಂತಿಕ ಬದ್ಧತೆಯಿಲ್ಲದ ಅಧಿಕಾರದಾಹಿಗಳ ಅಗತ್ಯ ನಮ್ಮ ಪಕ್ಷಕ್ಕಿಲ್ಲ. ಅಂಥವರಿಂದ ಕಾಂಗ್ರೆಸ್ ದೂರವಿರಲಿದೆ - ಸಿದ್ದರಾಮಯ್ಯ ಟ್ವೀಟ್. (ಚಿತ್ರ: ರಮೇಶ್ ಬಾಬು ಕಾಂಗ್ರೆಸ್ ಸೇರ್ಪಡೆ ಕಾರ್ಯಕ್ರಮ)

ಮೋದಿ ಗೌರವಯುತವಾಗಿ ರಾಜೀನಾಮೆ ನೀಡಲಿ
"ಮತ ನೀಡಿ ಗೆಲ್ಲಿಸಿದ ಮತದಾರರೇ ನೊಂದು ಪ್ರಧಾನಿ @narendramodi ಅವರ ಜನ್ಮದಿನವನ್ನು ರಾಷ್ಟ್ರೀಯ ನಿರುದ್ಯೋಗ ದಿನವಾಗಿ ಆಚರಣೆ ಮಾಡಿದ್ದಾರೆ ಎಂದರೆ ರಾಷ್ಟ್ರದಲ್ಲಿ ಬಿಜೆಪಿ ಆಡಳಿತದ ಕೊನೆ ದಿನಗಳು ಸಮೀಪಿಸುತ್ತಿದೆ ಎಂದೇ ಅರ್ಥ. ಇಂಥಾ ಸಂದರ್ಭದಲ್ಲಿ ಗೌರವಯುತವಾಗಿ ಅವರೇ ರಾಜೀನಾಮೆ ನೀಡುವುದು ಉತ್ತಮ" ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

ಜಿಎಸ್ಟಿ ಪರಿಹಾರ ಸೇರಿ ಹೆಚ್ಚಿನ ಅನುದಾನ ಕೇಳಿ ತರುತ್ತಾರೆಂಬ ನಿರೀಕ್ಷೆಯಿತ್ತು
ಮುಖ್ಯಮಂತ್ರಿ @BSYBJP ಅವರು ದೆಹಲಿಗೆ ಹೋಗಿ ನೆರೆಪರಿಹಾರ, ಜಿಎಸ್ಟಿ ಪರಿಹಾರ ಸೇರಿ ಹೆಚ್ಚಿನ ಅನುದಾನ ಕೇಳಿ ತರುತ್ತಾರೆಂಬ ನಿರೀಕ್ಷೆಯಿತ್ತು, ಆದರೆ ಅನುದಾನ ನೀಡುವ ಬಗ್ಗೆ ಕೇಂದ್ರದ ಯಾವೊಬ್ಬ ಮಂತ್ರಿಯೂ ಈ ವರೆಗೆ ಮಾತನಾಡಿಲ್ಲ. ಹೀಗಾಗಿ @BJP4Karnataka ಸರ್ಕಾರ ಸಾಲ ಮಾಡಿ ರಾಜ್ಯವನ್ನು ದಿವಾಳಿ ಮಾಡುವುದು ನಿಶ್ಚಿತ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
Recommended Video
|
ಮಾರ್ಚ್ 9ರಂದು ರಾಜ್ಯದಲ್ಲಿ ಒಂದೇ ಒಂದು ಕೊರೊನಾ ಪ್ರಕರಣವಿತ್ತು
ಮಾರ್ಚ್ 9ರಂದು ರಾಜ್ಯದಲ್ಲಿ ಒಂದೇ ಒಂದು ಕೊರೊನಾ ಪ್ರಕರಣವಿತ್ತು, ಇಂದು 5 ಲಕ್ಷಕ್ಕಿಂತ ಹೆಚ್ಚು ಕೇಸ್ ದಾಖಲಾಗಿವೆ. ಆದರೂ ನಮ್ಮ ರಾಜ್ಯದ ಆರೋಗ್ಯ ಮಂತ್ರಿಗಳು, ವೈದ್ಯಕೀಯ ಶಿಕ್ಷಣ ಸಚಿವರು ಕರ್ನಾಟಕ ಬೇರೆಲ್ಲಾ ರಾಜ್ಯಗಳಿಗಿಂತ ಬೆಟರ್ ಅಂತಿದಾರೆ. ಅಂದ್ರೆ ಅವರು ಇದಕ್ಕಿಂತ ಕೆಟ್ಟ ಪರಿಸ್ಥಿತಿ ನಿರೀಕ್ಷಿಸಿದ್ದರು ಅಂತನಾ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.












Click it and Unblock the Notifications