ಬಹುಮತ ದೊರೆಯದಿದ್ದರೆ ಬಿಜೆಪಿ ಸಾಮೂಹಿಕ ರಾಜೀನಾಮೆ?
ಬೆಂಗಳೂರು, ಮೇ 19 : ಕಟ್ಟಕಡೆಯ ಪ್ರಯತ್ನವಾಗಿ ಬಹುಮತ ಸಾಬೀತುಪಡಿಸಲು ಕಾಂಗ್ರೆಸ್ಸಿನಿಂದ 13 ಶಾಸಕರನ್ನು 'ಆಪರೇಶನ್ ಕಮಲ'ದ ಮೂಲಕ ಸೆಳೆಯಲು ಭಾರತೀಯ ಜನತಾ ಪಕ್ಷ ಯತ್ನಿಸುತ್ತಿದೆ ಎಂಬ ಸುದ್ದಿ ದಟ್ಟವಾಗಿದೆ.
ಮತದಾನ ಮಾಡುವುದರಿಂದ ಇವರು ಹಿಂತೆಗೆದು ಬಿಜೆಪಿ ಬಹುಮತ ಸಾಬೀತುಪಡಿಸುವಲ್ಲಿ ಯಶಸ್ವಿಯಾದರೆ ಈ ಎಲ್ಲರಿಗೂ ಮಂತ್ರಿ ಸ್ಥಾನದ ಜೊತೆಗೆ ಭಾರೀ ಬಳುವಳಿಯ ಆಮಿಷ ಒಡ್ಡಲಾಗಿದೆ ಎಂಬ ಸುದ್ದಿಯೂ ಹರಿದಾಡುತ್ತಿದೆ.
ಕಾಣದ ಬಹುಮತ : ರಾಜೀನಾಮೆಗೆ ಯಡಿಯೂರಪ್ಪ ಸಿದ್ಧತೆ?
ಇವೇನಿದ್ದರೂ ಊಹಾಪೋಹದ ಸುದ್ದಿಗಳು. ಅಂತೆಕಂತೆಗಳು ವಿಶ್ವಾಸಮತದ ಸಂತೆಯಲ್ಲಿ ಕಿವಿಯನ್ನು ಅಪ್ಪಳಿಸುತ್ತಿವೆ. ಇದಕ್ಕೆಲ್ಲ ಉತ್ತರ ಸುಮಾರು 3.30ರ ಹೊತ್ತಿಗೆ ದೊರೆಯಲಿದೆ. ಕರ್ನಾಟಕ ವಿಧಾನಸೌಧ ಹಿಂದೆಂದೂ ಕಂಡರಿಯದ ಬೆಳವಣಿಗೆಯನ್ನು ಕಾಣುತ್ತಿದೆ.
ಒಂದು ವೇಳೆ, ಈ 13 ಶಾಸಕರು ಬಿಜೆಪಿಗೆ ಕೈಕೊಟ್ಟರೆ ಯಡಿಯೂರಪ್ಪನವರು ಹೇಗಿದ್ದರೂ 13 ಪುಟಗಳ ಭಾಷಣ ಕಾಪಿಯ ಜೊತೆಗೆ ರಾಜೀನಾಮೆ ಪತ್ರವನ್ನೂ ಸಿದ್ಧ ಹಿಡಿದು ನಿಂತಿದ್ದಾರೆ. ಜೊತೆಗೆ ಮತ್ತೊಂದು ಅಚ್ಚರಿಯ ವಿದ್ಯಮಾನ ಜರುಗಿದರೂ ಆಶ್ಚರ್ಯವಿಲ್ಲ.
ಅದೇನೆಂದರೆ, ತಮಗೆ ಅತೀಹೆಚ್ಚು ಸ್ಥಾನಗಳು ಬಂದರೂ ಅಧಿಕಾರ ಚಲಾಯಿಸಲು ಅವಕಾಶ ಸಿಗದಂತೆ ಮಾಡಿದ ಕಾರಣ, ಎಲ್ಲ 104 ಶಾಸಕರು ರಾಜ್ಯಪಾಲರಿಗೆ ರಾಜೀನಾಮೆ ಪತ್ರವನ್ನು ಒಗಾಯಿಸುವುದು. ರಾಜಭವನಕ್ಕೆ ತೆರಳಿ ಇಂಥದೊಂದು ಕ್ರಮಕ್ಕೆ ಚಿಂತನೆ ನಡೆಸುತ್ತಿದೆ ಎಂದು ಬಲ್ಲ ಮೂಲಗಳಿಂದ ತಿಳಿದುಬಂದಿದೆ.
ಕರ್ನಾಟಕ ವಿಶ್ವಾಸಮತ LIVE: ಪ್ರತಾಪ್ ಗೌಡ ಜೇಬಲ್ಲಿ ವಿಪ್ ಪತ್ರ!
222 ಸ್ಥಾನಗಳಿಗೆ ನಡೆದಿದ್ದ ಚುನಾವಣೆಯಲ್ಲಿ 104 ಸ್ಥಾನಗಳನ್ನಷ್ಟೇ ಗೆಲ್ಲಲು ಸಾಧ್ಯವಾದ ಹಿನ್ನೆಲೆಯಲ್ಲಿ ಮತ್ತು ಬಹುಮತ ಕಷ್ಟಸಾಧ್ಯ ಎಂಬ ಅನಿಸಿಕೆ ಬಂದಿದ್ದರಿಂದಲೇ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಯಡಿಯೂರಪ್ಪ ಪ್ರಮಾಣ ವಚನ ಸಮಾರಂಭದಲ್ಲಿ ಭಾಗಿಯಾಗಲಿಲ್ಲವೆ?
ಹೀಗಾದರೆ ಮುಂದೇನಾಗಲಿದೆ? ಕರ್ನಾಟಕದಲ್ಲಿ ಎಂದೂ ಈರೀತಿ ಸಂಭವಿಸದ ಸಾಂವಿಧಾನಿಕ ಬಿಕ್ಕಟ್ಟು ಸೃಷ್ಟಿಯಾಗಲಿದೆ. ಕಾಂಗ್ರೆಸ್-ಜೆಡಿಎಸ್ ಪಕ್ಷಗಳಿಗೆ ಅಧಿಕಾರ ಸಿಗುವುದು ತಪ್ಪುವುದಲ್ಲದೆ, ಮುಂದಿನ ಆರು ತಿಂಗಳಲ್ಲಿ ಮತ್ತೆ ಚುನಾವಣೆ ನಡೆಯಬೇಕಿರುವುದರಿಂದ ಅಧಿಕಾರ ಕೇಂದ್ರದ ಬಳಿಯೇ ಇರಲಿದೆ. ಇದರ ಸತ್ಯಾಸತ್ಯತೆ ಇನ್ನೂ ತಿಳಿಯಬೇಕಿದೆ.
ಸದ್ಯಕ್ಕಂತೂ ಸಾಮಾಜಿಕ ಜಾಲತಾಣದಲ್ಲಿ ಇಂಥದೊಂದು ಸಾಧ್ಯತೆಯ ಬಗ್ಗೆ ಭಾರೀ ಚರ್ಚೆ ನಡೆಯುತ್ತಿದೆ. ಹೀಗಾಗದಿರಲಿ ಎಂಬುದೇ ಕರ್ನಾಟಕದ ಜನತೆಯ ಆಶಯ. ಮತ್ತೆ ಯಾರು ಚುನಾವಣೆಗೆ ಸಿದ್ಧರಿದ್ದಾರೆ? ಮತ್ತೆ ಎಷ್ಟು ಕೋಟಿ ಖರ್ಚು? ಇದೆಲ್ಲ ಯಾರು ದುಡ್ಡು? ಹೀಗಾದರೆ ಮತ್ತೆ ರಾಜ್ಯದ ಜನರು ಬಿಜೆಪಿಯ ಕೈಹಿಡಿಯುತ್ತಾರಾ?