ಪವನ್ ಕಲ್ಯಾಣ್ಗೆ ಮುಂದೆ ಮನವಿ ಇಟ್ಟ ಡಿಸಿಎಂ ಡಿ ಕೆ ಶಿವಕುಮಾರ್
ಬೆಂಗಳೂರು, ಮೇ 21: ತುಂಗಾಭದ್ರ ನದಿಯ ನಮ್ಮ ಪಾಲಿನ ನೀರನ್ನು ಬಳಕೆ ಮಾಡಿಕೊಳ್ಳುವ ಬಗ್ಗೆ ಚರ್ಚಿಸಲು ಆಂಧ್ರ ಪ್ರದೇಶ ಮುಖ್ಯಮಂತ್ರಿಗಳ ಜತೆ ಸಭೆ ನಿಗದಿ ಮಾಡಿಕೊಡಿ ಎಂದು ಆಂಧ್ರ ಪ್ರದೇಶ ಡಿಸಿಎಂ ಪವನ್ ಕಲ್ಯಾಣ್ ಅವರಿಗೆ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಮನವಿ ಮಾಡಿದರು.
ವಿಧಾನಸೌಧದ ಆವರಣದಲ್ಲಿ ನಡೆದ ಆಂಧ್ರಪ್ರದೇಶಕ್ಕೆ ಕರ್ನಾಟಕದ ಕುಮ್ಕಿ ಆನೆಗಳನ್ನು ಹಸ್ತಾಂತರಿಸುವ ಕಾರ್ಯಕ್ರಮದಲ್ಲಿ ಶಿವಕುಮಾರ್ ಅವರು ಮಾತನಾಡಿ, ಆನೆಗಳ ಹಸ್ತಾಂತರ ಕಾರ್ಯಕ್ರಮಕ್ಕೆ ಬಂದಿರುವ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರಿಗೆ ಶುಭವಾಗಲಿ. ಆಂಧ್ರ ಮತ್ತು ನಮ್ಮ ರಾಜ್ಯದ ಸಂಬಂಧ ಇನ್ನೂ ಉತ್ತಮವಾಗಲಿ. ನಮ್ಮ ಪಾಲಿನ 24 ಟಿಎಂಸಿ ನೀರಿನ ಬಳಕೆ ಬಗ್ಗೆ ನಿಮ್ಮ ಮುಖ್ಯಮಂತ್ರಿಗಳೊಂದಿಗೆ ಚರ್ಚೆ ಮಾಡಬೇಕಿದೆ. ನೀವೇ ಮುಂದೆ ನಿಂತು ಸಭೆ ನಿಗದಿ ಮಾಡಿ ಎಂದು ಹೇಳಿದರು.

ಆನೆ ವಿನಾಯಕನ ಸ್ವರೂಪ. ಆಂಧ್ರಪ್ರದೇಶದ ಎಲ್ಲಾ ವಿಘ್ನಗಳನ್ನು ನಿವಾರಣೆ ಮಾಡಲಿ ಎಂದು ತರಬೇತುಗೊಂಡ ಆರು ಆನೆಗಳನ್ನು ಆ ಸರ್ಕಾರದವರಿಗೆ ಹಸ್ತಾಂತರ ಮಾಡುತ್ತಿದ್ದೇವೆ. ಇನ್ನು ಎಷ್ಟು ಬೇಕಾದರೂ ಆನೆಗಳನ್ನು ಕಳುಹಿಸುವ ಶಕ್ತಿ ನಮ್ಮ ರಾಜ್ಯಕ್ಕಿದೆ. ಕರ್ನಾಟಕದಲ್ಲಿ ಪ್ರಾಣಿ ಸಂಪತ್ತು ಹೇರಳವಾಗಿದೆ. ಮುಂದಿನ ಪೀಳಿಗೆ ಈ ಸಂಪತ್ತನ್ನು ಕಣ್ತುಂಬಿಕೊಳ್ಳಬೇಕು. ನನ್ನೂರು ತಮಿಳುನಾಡು ಅಂಚಿಗೆ ಹೊಂದಿಕೊಂಡಿದೆ. ನನ್ನ ಮನೆಯ ಗೋಡೆಗೆ 50 ಕ್ಕೂ ಹೆಚ್ಚು ಆನೆಗಳುಒತ್ತರಿಸಿಕೊಂಡು ಹೋಗಿದ್ದನ್ನು ನಾನು ಬಾಲ್ಯದಲ್ಲಿ ನೋಡಿದ್ದೇನೆ. ಇದರ ವಿಡಿಯೋ ಕೂಡ ನನ್ನ ಬಳಿಯಿದೆ ಎಂದು ತಿಳಿಸಿದರು.
ಆನೆಗಳನ್ನು ತರಬೇತುಗೊಳಿಸುವುದೇ ಕಷ್ಟದ ಕೆಲಸ. ಈ ಹಿಂದೆ ನೀವು ಖೆಡ್ಡಾ ಬಗ್ಗೆ ಸಿನಿಮಾ ನೋಡಿರಬಹುದು. ಆನೆಗಳನ್ನು ಓಡಿಸಿಕೊಂಡು ಬಂದು ಹಿಡಿದು ಪಳಗಿಸುತ್ತಿದ್ದ ಕಾಲವದು. ನಮ್ಮ ವನ್ಯಸಂಪತ್ತನ್ನು ಕಾಪಾಡುವ ಕೆಲಸ ಮಾಡಬೇಕು. ಅರಣ್ಯ ಸಚಿವ ಈಶ್ವರ್ ಖಂಡ್ರೆಯವರ ಬಳಿ ಜಗಳ ಮಾಡಿ, ಮಾಡಿ ನಮ್ಮ ಭಾಗದ ಶೇ. 50 ರಷ್ಟು ಕಾಡಂಚಿಗೆ ರೈಲ್ವೇ ಕಂಬಿ ಅಳವಡಿಸಲಾಗಿದೆ. ನಮ್ಮ ಅನೇಕ ರೈತರು ಆನೆಗಳಿಂದ ಜೀವ ಕಳೆದುಕೊಂಡಿದ್ದಾರೆ ಎಂದು ಡಿ ಕೆ ಶಿವಕುಮಾರ್ ಹೇಳಿದರು.
ನಮ್ಮ ಅರಣ್ಯ ಇಲಾಖೆಯವರು ಜಂಗಲ್ ಲಾಡ್ಜಸ್ ಮತ್ತು ರೆಸಾರ್ಟ್ ಅವರಿಗೆ ಮಾತ್ರ ಕಬಿನಿ ಅರಣ್ಯ ಪ್ರದೇಶದಲ್ಲಿ ಸಫಾರಿ ಮಾಡಲು ನಿಯಂತ್ರಣ ತೆಗೆದುಕೊಂಡಿದ್ದಾರೆ. ಖಾಸಗಿಯವರಿಗೆ ಅವಕಾಶ ನೀಡದೇ ಇರುವುದು ಒಳ್ಳೆಯ ಕೆಲಸ. ನನ್ನ ಹುಟ್ಟುಹಬ್ಬ ಆಚರಣೆ ಮಾಡಲು ಕಬಿನಿಗೆ ಹೋಗಿದ್ದೆ. ನಾನು ಈ ಹಿಂದೆ ಕಬಿನಿಗೆ ಹೋಗಿರಲಿಲ್ಲ. ಅರಣ್ಯ ಇಲಾಖೆಯವರು ಹುಲಿ, ಚಿರತೆ ತೋರಿಸದರು. ನಂತರ ಹಿನ್ನಿರಿನಲ್ಲಿ ಸುಮಾರು 150 ಕ್ಕೂ ಹೆಚ್ಚು ಆನೆಗಳನ್ನು ಕೇವಲ ಅರ್ಧ ಗಂಟೆ ಸಮಯದಲ್ಲಿ ತೋರಿಸಿದರು. ಇಲ್ಲಿ ಎರಡು ಲಕ್ಷಕ್ಕೂ ಹೆಚ್ಚು ಜಿಂಕೆಗಳಿವೆ ಎಂದು ಅಧಿಕಾರಿಗಳು ಹೇಳಿದರು ಎಂದರು. ಇದಕ್ಕೂ ಮೊದಲು ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅವರು ದಸರಾ ಸಮಯದಲ್ಲಿ ರಾಜ್ಯಕ್ಕೆ ಬಂದಾಗ ಆರೆಂಜ್ ಕೌಂಟಿ ಎನ್ನುವ ಜಾಗದಲ್ಲಿ ವಿಹಾರ ನಡೆಸಲು ವ್ಯವಸ್ಥೆ ಮಾಡಿದ್ದೆ. ನಾನು ಕಾರಣಾಂತರಗಳಿಂದ ತೆರಳಲು ಆಗಿರಲಿಲ್ಲ ಎಂದು ತಿಳಿಸಿದರು.












Click it and Unblock the Notifications