5 ದಿನ ರಜೆ ಪಡೆದ ಲೋಕಾಯುಕ್ತ ನ್ಯಾ.ಭಾಸ್ಕರರಾವ್
ಬೆಂಗಳೂರು, ಜುಲೈ 15 : ಲೋಕಾಯುಕ್ತದಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರದ ಬಗ್ಗೆ ಎಸ್ಐಟಿ ತನಿಖೆ ಆರಂಭಿಸುತ್ತಿದ್ದಂತೆಯೇ ಲೋಕಾಯುಕ್ತ ನ್ಯಾ.ಭಾಸ್ಕರರಾವ್ ಅವರು ರಜೆ ಪಡೆದಿದ್ದಾರೆ. ಬುಧವಾರದಿಂದ 5 ದಿನಗಳ ಕಾಲ ಅವರು ರಜೆಯ ಮೇಲೆ ತೆರಳಿದ್ದಾರೆ.
ಬುಧವಾರ ಬೆಳಗ್ಗೆ ಕಚೇರಿಗೆ ಬಂದಿದ್ದ ಲೋಕಾಯುಕ್ತ ನ್ಯಾ. ಭಾಸ್ಕರರಾವ್ ಅವರು ಐದು ದಿನಗಳ ಕಾಲ ರಜೆ ಹಾಕಿ ವಾಪಸ್ ತೆರಳಿದ್ದಾರೆ. ಬುಧವಾರ, ಗುರುವಾರ, ಶುಕ್ರವಾರ ರಜೆ ಹಾಕಿದ್ದು, ಶನಿವಾರ ಮತ್ತು ಭಾನುವಾರ ಸರ್ಕಾರಿ ರಜೆ ಇದೆ.

ಲೋಕಾಯುಕ್ತದಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರದ ಬಗ್ಗೆ ಎಸ್ಐಟಿ ತನಿಖೆ ಆರಂಭಿಸಿದೆ. ಈ ಸಂದರ್ಭದಲ್ಲಿಯೇ ಲೋಕಾಯುಕ್ತರು ರಜೆ ಪಡೆದಿದ್ದಾರೆ. ಸರ್ಕಾರದ ಸೂಚನೆಯಂತೆ ರಜೆ ಪಡೆದಿರಬಹುದು ಎಂದು ವಿಶ್ಲೇಷಿಸಲಾಗುತ್ತಿದೆ. [ಲೋಕಾಯುಕ್ತದಲ್ಲಿ ಇದೇನಿದು ಹಗರಣ?]
ಭ್ರಷ್ಟಾಚಾರ ಪ್ರಕರಣದಲ್ಲಿ ಲೋಕಾಯುಕ್ತರ ಪುತ್ರ ಅಶ್ವಿನ್ ರಾವ್ ಹೆಸರು ಕೇಳಿಬರುತ್ತಿದೆ. ಆದ್ದರಿಂದ, ನೈತಿಕ ಹೊಣೆ ಹೊತ್ತು ಭಾಸ್ಕರರಾವ್ ರಾಜೀನಾಮೆ ನೀಡಬೇಕು ಎಂದು ಪ್ರತಿದಿನ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ. ಈ ವೇಳೆಯಲ್ಲೇ ಅವರು ರಜೆ ಪಡೆದಿದ್ದಾರೆ. [ಸೋನಿಯಾ ನಾರಂಗ್ ತನಿಖೆ ಕಡತಗಳು ಎಸ್ ಐಟಿಗೆ]
ಲೋಕಾಯುಕ್ತಕ್ಕೆ ಎಸ್ಐಟಿ ಭೇಟಿ : ಸರ್ಕಾರ ಎಡಿಜಿಪಿ ಕಮಲ್ ಪಂತ್ ನೇತೃತ್ವದಲ್ಲಿ ಲೋಕಾಯುಕ್ತದಲ್ಲಿನ ಭ್ರಷ್ಟಾಚಾರದ ತನಿಖೆ ನಡೆಸಲು ವಿಶೇಷ ತನಿಖಾ ತಂಡವನ್ನು ರಚನೆ ಮಾಡಿದೆ. ತನಿಖಾ ದಳದಲ್ಲಿ ಕೆಎಸ್ಆರ್ಟಿಸಿ ಭದ್ರತಾ ಮತ್ತು ಜಾಗೃತ ದಳದ ನಿರ್ದೇಶಕ (ಡಿಐಜಿ ) ಸೌಮೇಂದ್ರ ಮುಖರ್ಜಿ, ಬೆಂಗಳೂರು ಪೂರ್ವ ವಿಭಾಗದ ಡಿಸಿಪಿ ಲಾಬೂರಾಮ್, ಕೇಂದ್ರ ವಿಭಾಗದ ಡಿಸಿಪಿ ಸಂದೀಪ್ಪಾಟೀಲ್ ಸೇರಿದಂತೆ 12 ಸದಸ್ಯರಿದ್ದಾರೆ.
ಡಿಸಿಪಿ ಲಾಬೂರಾಮ್ ಅವರು ಈಗಾಗಲೇ ಲೋಕಾಯುಕ್ತ ಕಚೇರಿಗೆ ಭೇಟಿ ನೀಡಿ, ಅಧಿಕಾರಿಗಳ ಜೊತೆ ಒಂದು ಸುತ್ತಿನ ಮಾತುಕತೆ ನಡೆಸಿ ಪ್ರಾಥಮಿಕ ಮಾಹಿತಿಯನ್ನು ಸಂಗ್ರಹಿಸಿದ್ದಾರೆ. ತನಿಖೆಗೆ ಹಾಜರಾಗುವಂತೆ ಎಸ್ಐಟಿ ಭಾಸ್ಕರರಾವ್ ಪುತ್ರ ಅಶ್ವಿನ್ ರಾವ್ ಅವರಿಗೆ ಶೀಘ್ರದಲ್ಲೇ ನೋಟಿಸ್ ನೀಡುವ ಸಾಧ್ಯತೆ ಇದೆ.












Click it and Unblock the Notifications