ಹಲವು ವಿಶೇಷತೆಗಳಿಗೆ ಸಾಕ್ಷಿಯಾದ ಹಿಂದೂ ಆಧ್ಯಾತ್ಮಿಕ ಸಮಾವೇಶ
ಬೆಂಗಳೂರಿನ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಹಿಂದೂ ಆಧ್ಯಾತ್ಮಿಕ ಶಕ್ತಿ ಮತ್ತು ಸೇವಾ ಮೇಳದ ವಿರಾಟ್ ಪ್ರದರ್ಶನಕ್ಕೆ ಭಾನುವಾರ (ಡಿ 13) ತೆರೆಬಿದ್ದಿದೆ. ಐದು ದಿನಗಳ ಕಾಲ ನಡೆದ ಈ ಸಮಾವೇಶ ಹಿಂದೂ ಸಂಪ್ರದಾಯ ಮತ್ತು ಸಂಸ್ಕೃತಿಯ ಹತ್ತು ಹಲವು ವಿಶೇಷತೆಗಳಿಗೆ ಸಾಕ್ಷಿಯಾಯಿತು.
ಹಿಂದೂ ಸಮುದಾಯದ ಮಠಾಧೀಶರು, ಧಾರ್ಮಿಕ ಮುಖಂಡರು, ಗಣ್ಯರ ಜೊತೆಗೆ ಲಕ್ಷಾಂತರ ಜನರು ಕಾರ್ಯಕ್ರಮದಲ್ಲಿ ಭಾಗಿಯಾಗಿ, ಸಮಾವೇಶಕ್ಕೆ ಸಾರ್ಥಕತೆಯ ತೆರೆ ಎಳೆದಿದ್ದಾರೆ.
ಜೊತೆಗೆ, ನೂರಾರು ಪುಸ್ತಕ ಮಳಿಗೆಗಳು ಗೊತ್ತಿಲ್ಲದ ಹಲವು ವಿಚಾರಗಳನ್ನು ಸಮಾವೇಶದಲ್ಲಿ ಭಾಗವಹಿಸಿದ್ದ ಜನರಿಗೆ ಉಪಯುಕ್ತ ಮಾಹಿತಿ ನೀಡುವಲ್ಲಿ ಯಶಸ್ವಿಯಾಯಿತು. (ಬದುಕಿದ್ದಾಗ ಹಿಂದೂ ಧರ್ಮ ಬೇಡ, ಸತ್ತಾಗ ಮಾತ್ರ ಬೇಕೆ)
ಗುರುಪೂಜೆ, ಮಾತೃಪೂಜೆ, ಗೋಪೂಜೆ ಹೀಗೆ ಹಲವಾರು ಹಿಂದೂ ಪೂಜಾ ಪದ್ದತಿ, ಅದರ ಪ್ರಾಮುಖ್ಯತೆ, ನಶಿಸಿ ಹೋಗುತ್ತಿರುವ ಸಂಪ್ರದಾಯದ ಬಗ್ಗೆ ತಿಳುವಳಿಕೆ ನೀಡುವ ಕಾರ್ಯಕ್ರಮಗಳಿಗೆ ಜನರು ಅತ್ಯುತ್ತಮವಾಗಿ ಸ್ಪಂದಿಸಿದ್ದು ಈ ಸಮಾವೇಶದ ವಿಶೇಷ. ಇಂತಹ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ನಡೆಯುತ್ತಿರಲಿ..
ರಾಜಕೀಯ ಸಾರ್ವಜನಿಕ ಸಭೆಯನ್ನು ನಾಚಿಸುವಂತೆ ಐದು ದಿನದ ನಡೆದ ಈ 'ಹಿಂದೂ ಆಧ್ಯಾತ್ಮಿಕ ಮತ್ತು ಸೇವಾ ಮೇಳ'ದಲ್ಲಿನ ಪ್ರತೀ ಕಾರ್ಯಕ್ರಮದಲ್ಲಿ ಜನರು, ವಿದ್ಯಾರ್ಥಿಗಳು ಉತ್ಸುಕತೆಯಿಂದ ಭಾಗವಹಿಸಿದ್ದು ಈ ಸಮಾವೇಶ ಯಶಸ್ವಿಯಾಗಲು ಪ್ರಮುಖ ಕಾರಣವಾಗಿತ್ತು. (ಬಸವನಗುಡಿಯಲ್ಲಿ ಹಿಂದು ಆಧ್ಯಾತ್ಮಿಕ ಮತ್ತು ಸೇವಾ ಮೇಳ)
ಹಿಂದೂ ಧರ್ಮದ ಪರಂಪರೆ ಮತ್ತು ಸಾಧನೆಗಳನ್ನು ಪ್ರತಿಬಿಂಬಿಸುವ ಸಾಧನಾ ಮಂಟಪಗಳು ಮೇಳದ ಪ್ರಮುಖ ಆಕರ್ಷಣೆಯಾಗಿತ್ತು. ಧರ್ಮದ ಪ್ರಚಾರ ಮತ್ತು ಸೇವೆಯಲ್ಲಿ ತೊಡಗಿಸಿಕೊಂಡಿರುವ 175 ಸಂಸ್ಥೆಗಳ 200ಕ್ಕೂ ಹೆಚ್ಚು ಮಳಿಗೆಗಳು ಮೇಳದಲ್ಲಿ ಭಾಗವಹಿಸಿದ್ದವು. ಹಿಂದೂ ಆಧ್ಯಾತ್ಮಿಕ ಮೇಳದ ಕೆಲವೊಂದು ಹೈಲೆಟ್ಸ್ ಸ್ಲೈಡಿನಲ್ಲಿ..
ರಾಜ್ಯಪಾಲ ವಿ ಆರ್ ವಾಲಾ
ರಾಜ್ಯಪಾಲ ವಿ ಆರ್ ವಾಲಾ ಈ ಸಮಾವೇಶಕ್ಕೆ ಬುಧವಾರದಂದು (ಡಿ 9) ಚಾಲನೆ ನೀಡಿದ್ದರು. ತನ್ನನ್ನು ಮೊದಲು ಸನ್ಮಾನಿಸಲು ಬಂದ ಸಂಘಟಕರಿಗೆ, ಮೊದಲು ವೇದಿಕೆಯಲ್ಲಿರುವ ಸಾಧುಸಂತರನ್ನು ಸನ್ಮಾನಿಸಿ. ಅವರ ನಂತರವಷ್ಟೇ ನಾವು ಎಂದು ರಾಜ್ಯಪಾಲರು ಹೇಳಿದ್ದು ಸಭಿಕರ ಮೆಚ್ಚುಗೆಗೆ ಪಾತ್ರವಾಗಿತ್ತು.
ಮಾತೃವಂದನೆ ಕಾರ್ಯಕ್ರಮ
ಐದು ದಿನಗಳ ಸಮಾವೇಶದಲ್ಲಿ ಮೊದಲ ದಿನ ನಡೆದ ಮಾತೃವಂದನೆ ಕಾರ್ಯಕ್ರಮ ವಿಶೇಷವಾಗಿತ್ತು. ಯಾವುದೇ ಜಾತಿ, ಬೇದಭಾವವಿಲ್ಲದೆ ಸಹಸ್ರಾರು ಮಕ್ಕಳು ತಾಯಿಯಂದಿರ ಪಾದಪೂಜೆ ಮಾಡುವ ಮೂಲಕ ಮಾತೃವಂದನೆ ಸಲ್ಲಿಸಿ, ಆಶೀರ್ವಾದ ಪಡೆದರು.
ಗುರುಭ್ಯೋ ನಮ:
ಕಾರ್ಯಕ್ರಮದ ಎರಡನೇ ದಿನ ಸಾವಿರಾರು ವಿದ್ಯಾರ್ಥಿಗಳು ಶಿಕ್ಷಕರ / ಗುರುಗಳ ಪಾದವನ್ನು ತೊಳೆದು ಪೂಜಿಸಿದರು. ರಾಜ್ಯದೆಲ್ಲಡೆಯಿಂದ ಬಂದಿದ್ದ ವಿದ್ಯಾರ್ಥಿಗಳು ಸಂಭ್ರಮದಿಂದ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ದಿಶಾಭಾರತ್ ಸಂಸ್ಥೆ ಆಯೋಜಿಸಿದ್ದ ಕ್ವಿಜ್ ಕಾರ್ಯಕ್ರಮ ಸಾಕಷ್ಟು ಜನರನ್ನು ಆಕರ್ಷಿಸಿತ್ತು.
ಗೋಪೂಜೆ ಕಾರ್ಯಕ್ರಮ
ದೇಶದ ಸಂಸ್ಕೃತಿಯ ಭಾಗವಾದ ಗೋಪೂಜೆ ಕಾರ್ಯಕ್ರಮವನ್ನು ಮೇಳದ ಮೂರನೇ ದಿನ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಜನಸಾಗರವೇ ಹರಿದುಬಂದಿದ್ದು ವಿಶೇಷ. ಗೋವಿನ ಮೂರ್ತಿಗೆ ಮತ್ತು ಗಂಗಾ ಮಾತೆಗೆ ಪೂಜೆ ಸಲ್ಲಿಸುವ ಕಾರ್ಯಕ್ರಮ ಅತ್ಯಂತ್ಯ ಶಿಸ್ತುಬದ್ದವಾಗಿ ನಡೆಯಿತು. ಇದಾದ ನಂತರ ಆರತಿ ನರೇಶ್ ತಂಡ ನಡೆಸಿಕೊಟ್ಟ ಪುಣ್ಯಕೋಟಿ ನೃತ್ಯರೂಪಕಕ್ಕೆ ಪ್ರೇಕ್ಷಕರು ಮನಸೋತರು.
ದೇಶೀ ಆಟದ ಪರಿಚಯ
ಮೇಳದ ನಾಲ್ಕನೇ ದಿನ ಪ್ರಕೃತಿ ವಂದನಾ ಕಾರ್ಯಕ್ರಮ, ಶಾಲಾ ಮಕ್ಕಳಿಗೆ ದೇಶೀ ಆಟದ ಪರಿಚಯ ಕಾರ್ಯಕ್ರಮ, ಓಜಸ್ ನೃತ್ಯರೂಪಕ, ಏಕಲ ವಿದ್ಯಾಲಯದ ಮಕ್ಕಳು ನಡೆಸಿಕೊಟ್ಟ ವನವಾಸಿ ಕಾರ್ಯಕ್ರಮ ಅತ್ಯಾಕರ್ಷವಾಗಿತ್ತು.
ಸಮಾರೋಪ ಸಮಾರಂಭ
ಮೇಳದ ಕೊನೆಯ ದಿನವಾದ ಭಾನುವಾರ (ಡಿ 13) ಸಮಾರೋಪ ಸಮಾರಂಭದಲ್ಲಿ ವಿವಿಧ ಮಠಾಧೀಶರು, ಪಂಡಿತರು, ಆರ್ಟ್ ಆಫ್ ಲೀವಿಂಗ್ ನ ರವಿಶಂಕರ್, ವಾಗ್ಮಿ ಚಕ್ರವರ್ತಿ ಸೂಲಿಬೆಲೆ, ಉದ್ಯಮಿ ಡಾ. ವಿಜಯ ಸಂಕೇಶ್ವರ ಮುಂತಾದ ಗಣ್ಯರು ಭಾಗವಹಿಸಿದ್ದರು.
ಹಲವು ವಿಶೇಷತೆಗಳಿಗೆ ಸಾಕ್ಷಿಯಾಗುವ ಮೂಲಕ ಸಮಾರೋಪ
ದೇಶಭಕ್ತಿ, ಪರಿಸರದ ಬಗೆಗಿನ ಕಾಳಜಿ, ಮಹಿಳೆಯರ ಮೇಲಿನ ಗೌರವ, ತಾಯಿ, ಗುರು, ಗೋಮಾತೆಯ ಮಹತ್ವ ಮುಂತಾದ ಹಿಂದೂ ಸಂಸ್ಕೃತಿ, ಸಂಪ್ರದಾಯವನ್ನು ಪಸರಿಸುವ ಉದ್ದೇಶದಿಂದ ಆಯೋಜಿಸಲಾಗಿದ್ದ 'ಹಿಂದೂ ಆಧ್ಯಾತ್ಮಿಕ ಮತ್ತು ಸೇವಾ ಮೇಳ' ಹಲವು ವಿಶೇಷತೆಗಳಿಗೆ ಸಾಕ್ಷಿಯಾಗುವ ಮೂಲಕ ಮುಕ್ತಾಯಗೊಂಡಿತು.