ಕಸಾಯಿಖಾನೆಗೆ ಮಾರಾಟವಾಗಿದ್ದ ಹೋರಿಗಳಿಗೆ ಜೀವದಾನ
ಬೆಂಗಳೂರು, ಆ 1: ಕಾಸರಗೋಡಿನಲ್ಲಿ ಕಸಾಯಿಖಾನೆಗೆ ಮಾರಾಟವಾಗಿದ್ದ ಓಂಗೋಲ್ ತಳಿಯ ಐದು ಹೋರಿಗಳನ್ನು ರಾಮಚಂದ್ರಾಪುರ ಮಠದ ಗೋಸಂಜೀವಿನಿ ಯೋಜನೆಯಡಿ ಕಟುಕರಿಂದ ಖರೀದಿಸಿ ಜೀವದಾನ ಮಾಡಲಾಗಿದೆ.
ಮಧ್ಯವರ್ತಿಯೊಬ್ಬರು ಆಂಧ್ರಪ್ರದೇಶದಿಂದ ಐದು ಎತ್ತುಗಳನ್ನು ಖರೀದಿಸಿ ತಂದು ರಸ್ತೆ ಬದಿಯಲ್ಲಿ ಕಟ್ಟಿದ್ದರು. ಓಂಗೋಲ್ ತಳಿಯ ಈ ಐದು ಎತ್ತುಗಳು ವಧಾಸ್ಥಾನಕ್ಕೆ ಮಾರಾಟವಾಗಿವೆ ಎಂಬ ಮಾಹಿತಿ ದೊರೆತ ತಕ್ಷಣ, ರಾಘವೇಶ್ವರಶ್ರೀಗಳ ಮಾರ್ಗದರ್ಶನದಲ್ಲಿ, ಮಠದ ಕಾಮದುಘಾ ಕಾರ್ಯಕರ್ತರು ಸ್ಥಳಕ್ಕೆ ಧಾವಿಸಿ ಕಟುಕರ ಜತೆ ಮಾತುಕತೆ ನಡೆಸಿದರು.
ಅದಕ್ಕೆ ತಗುಲುವ ವೆಚ್ಚ ಪಾವತಿಸಿ ಹೋರಿಗಳನ್ನು ವಧೆ ಮಾಡದಂತೆ ಕೋರಿದರು. ಅದರಂತೆ 3.2 ಲಕ್ಷ ರೂಪಾಯಿ ವೆಚ್ಚದಲ್ಲಿ ಐದು ಹೋರಿಗಳನ್ನು ಖರೀದಿಸಿ, ಪೂಚಕ್ಕಾಡು ಗೋಶಾಲೆಗೆ ಕಳುಹಿಸಲಾಗಿದೆ.

ಶ್ರೀಮಠದ ಮನವಿಗೆ ಸ್ಪಂದಿಸಿ ನೂರಾರು ಮಂದಿ ಹೋರಿಗಳನ್ನು ಖರೀದಿಸಲು ಹಣಕಾಸು ನೆರವು ನೀಡಿದರು. ಉಳಿದ ಮೊತ್ತವನ್ನು ಶ್ರೀಮಠದ ಗೋಸಂಜೀವಿನಿ ನಿಧಿಯಿಂದ ಭರಿಸಲಾಗಿದೆ.
ಕಟುಕರ ಪಾಲಾಗುವ ಭಾರತೀಯ ತಳಿಯ ಗೋವುಗಳು ಹಾಗೂ ಎತ್ತುಗಳನ್ನು ಖರೀದಿಸಿ, ಅವುಗಳನ್ನು ಶ್ರೀಮಠದ ಗೋಶಾಲೆಯಲ್ಲಿ ಪೋಷಿಸುವ ಸಲುವಾಗಿಯೇ ಶ್ರೀರಾಮಚಂದ್ರಾಪುರ ಮಠ ಗೋಸಂಜೀವಿನಿ ಯೋಜನೆಯನ್ನು ಆರಂಭಿಸಿದೆ.
ಮಲೆಮಹದೇಶ್ವರ ಬೆಟ್ಟ ಪ್ರದೇಶದಲ್ಲಿ ತಮಿಳುನಾಡಿನ ಆಡಿ ಜಾತ್ರೆಯಲ್ಲಿ ಮಾರಾಟವಾಗಲಿದ್ದ 1500ಕ್ಕೂ ಹೆಚ್ಚು ಗೋವುಗಳನ್ನು ಒಂದೂವರೆ ಕೋಟಿ ರೂಪಾಯಿ ವೆಚ್ಚದಲ್ಲಿ ಗೋಸಂಜೀವಿನಿ ಯೋಜನೆಯಡಿ ಈ ಹಿಂದೆ ಖರೀದಿಸಿ ಸಂರಕ್ಷಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
ಅಂತೆಯೇ ಕಾಸರಗೋಡು, ಭಟ್ಕಳ ಮತ್ತಿತರ ಕಡೆಗಳಲ್ಲಿ ವಧಾಸ್ಥಾನ ಸೇರಲಿದ್ದ ಹಲವು ಹೋರಿಗಳನ್ನು ಈ ಹಿಂದೆಯೂ ರಕ್ಷಿಸಲಾಗಿದೆ. ಶ್ರೀಮಠದ ಡಾ.ಜಯಪ್ರಕಾಶ್ ಲಾಡ, ತಿರುಮಲ ಪ್ರಸನ್ನ, ಶ್ರೀಕೃಷ್ಣ ಮೀನಗದ್ದೆ, ನಿಶಾಂತ್ ಮತ್ತಿತರರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.












Click it and Unblock the Notifications