Zika Virus: ರಾಜ್ಯದಲ್ಲಿ ಮೊದಲ ಝೀಕಾ ವೈರಸ್ ಪತ್ತೆ: ಏನಿದು ಝೀಖಾ ವೈರಸ್?
ಬೆಂಗಳೂರು,ಡಿಸೆಂಬರ್ 13: ರಾಜ್ಯದಲ್ಲಿ ಮೊದಲ ಝೀಕಾ ವೈರಲ್ ಸೋಂಕು ವರದಿಯಾಗಿದೆ ಎಂದು ಆರೋಗ್ಯ ಸಚಿವ ಡಾ. ಕೆ ಸುಧಾಕರ್ ತಿಳಿಸಿದ್ದಾರೆ.
ರಾಯಚೂರು ಜಿಲ್ಲೆಯ ಐದು ವರ್ಷದ ಬಾಲಕಿಗೆ ಸೋಂಕು ದೃಢಪಟ್ಟಿದೆ. ಪುಣೆ ವೈರಾಲಜಿ ಲ್ಯಾಬ್ನಿಂದ ಪಾಸಿಟಿವ್ ರಿಪೋರ್ಟ್ ಬಂದಿದೆ ಎಂದು ಆರೋಗ್ಯ ಇಲಾಖೆ ಖಚಿತ ಪಡಿಸಿದೆ.
ಎರಡ್ಮೂರು ವರ್ಷಗಳ ಕಾಲ ಜನರಲ್ಲಿ ಬೆಂಬಿಡದೆ ಕಾಡಿದ್ದ ಕೊರೋನಾದ ನಂತರದ ದಿನಗಳಲ್ಲಿ ಜನರು ನಿಟ್ಟುಸಿರು ಬಿಟ್ಟದ್ರು, ಇದೀಗ ಝೀಕಾ ವೈರಸ್ ಇನ್ನಷ್ಟು ಆತಂಕಕ್ಕಕೆ ಕಾರಣವಾಗಿದೆ.

ರಾಜ್ಯದಲ್ಲಿ ಮೊದಲ ಝೀಕಾ ವೈರಸ್ ಸೋಂಕಿನ ಬಾಲಕಿ ಮೇಲೆ ತೀವ್ರ ನಿಗಾ ವಹಿಸುತ್ತಿದ್ದೇವೆ ಎಂದು ಆರೋಗ್ಯ ಇಲಾಖೆ ಹೇಳಿದೆ. ಇನ್ನು ಝೀಕಾ ಸೋಂಕು ಪತ್ತೆಯಾದ ಬಾಲಕಿ ಟ್ರಾವೆಲ್ ಹಿಸ್ಟರಿ ಈವರೆಗೂ ಲಭ್ಯವಾಗಿಲ್ಲ. ವೈರಸ್ ಕಂಡು ಬಂದ ಬಾಲಕಿ ಕಳೆದ 15 ದಿನಗಳಿಂದ ಜ್ವರ, ವಾಂತಿ, ಭೇದಿಯಿಂದ ಬಳಲುತ್ತಿದ್ದಳು. ಈ ಹಿನ್ನೆಲೆಯಲ್ಲಿ ನವೆಂಬರ್ 13ರಂದು ಜ್ವರ ಕಾಣಿಸಿಕೊಂಡಿತ್ತು. ಮೊದಲು ಸಿಂಧನೂರು ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಬಳಿಕ ಡೆಂಘೀ ಜ್ವರ ದೃಢಪಟ್ಟ ಹಿನ್ನೆಲೆ ವಿಜಯನಗರದ ವಿಮ್ಸ್ ಆಸ್ಪತ್ರೆಗೆ ರವಾನಿಸಲಾಯಿತು. ಅಲ್ಲಿ ವೈದ್ಯರು ಬಾಲಕಿಯ ಸ್ಯಾಂಪಲ್ ಸಂಗ್ರಹಿಸಿ ಲ್ಯಾಬ್ ಗೆ ಕಳುಹಿಸಿದ್ದು ಡಿಸೆಂಬರ್ 9ರಂದು ಪಾಸಿಟಿವ್ ಬಂದಿದೆ.
ಇನ್ನು ಸೋಂಕು ಕಾಣಿಸಿಕೊಂಡಿರುವುದರಿಂದ ರಾಯಚೂರು ಹಾಗೂ ನೆರೆಯ ಜಿಲ್ಲೆಗಳಲ್ಲಿ ಕಟ್ಟೆಚ್ಚರ ವಹಿಸುವಂತೆ ಸೂಚನೆ ನೀಡಲಾಗಿದೆ. ಝೀಕಾ ವೈರಸ್ ಸೋಂಕು ಕುರಿತಂತೆ ಯಾರೂ ಆತಂಕಪಡುವ ಅಗಕತ್ಯವಿಲ್ಲ. ಈ ಬಗ್ಗೆ ಆರೋಗ್ಯ ಇಲಾಖೆ ಸದ್ಯದಲ್ಲೇ ಪ್ರತ್ಯೇಕ ಮಾರ್ಗಸೂಚಿ ಬಿಡುಗಡೆ ಮಾಡಲಿದೆ ಎಂದು ಆರೋಗ್ಯ ಸಚಿವ ಡಾ.ಕೆ ಸುಧಾಕರ್ ತಿಳಿಸಿದ್ದಾರೆ.

ಝೀಕಾ ವೈರಸ್ ಎಂದರೇನು?
ಝೀಕಾ ವೈರಸ್ ಸೊಳ್ಳೆಗಳ ಮೂಲಕ ವಾಹಕಗಳಾಗಿ ಹರಡುತ್ತದೆ. ಈಡಿಸ್ ಸೊಳ್ಳೆಗಳ ಮೂಲಕ ಈ ವೈರಸ್ ಹರಡುತ್ತದೆ. ಈ ವೈರಸ್ ಸಾಗಿಸುವ ಸೊಳ್ಳೆಗಳು ಮನುಷ್ಯರನ್ನು ಕಚ್ಚಿದಾಗ, ವೈರಸ್ ಮನುಷ್ಯರಿಗೆ ಹರಡುತ್ತದೆ. ಈ ಈಡಿಸ್ ಸೊಳ್ಳೆಗಳು ಹಗಲಿನ ವೇಳೆಯಲ್ಲಿ ಕಚ್ಚುತ್ತವೆ ಹಾಗೂ ಹೆಚ್ಚಾಗಿ ಉಷ್ಣವಲಯದ ಮತ್ತು ಉಪೋಷ್ಣವಲಯದ ಪ್ರದೇಶಗಳಲ್ಲಿ ಕಂಡುಬರುತ್ತದೆ. ಝೀಕಾ ವೈರಸ್ ಕೇವಲ ಸೊಳ್ಳೆ ಕಡಿತದಿಂದ ಮಾತ್ರವಲ್ಲ, ರಕ್ತದ ವರ್ಗಾವಣೆ ಮೂಲಕವೂ ಹರಡಬಹುದು ಎಂದು ತಜ್ಞರು ಹೇಳುತ್ತಾರೆ.
ಝೀಕಾ ವೈರಸ್ ಮೊದಲು ಎಲ್ಲಿ ಪತ್ತೆಹಚ್ಚಲಾಯಿತು..?
ಝೀಕಾ ವೈರಸ್ನ್ನು ಮೊದಲು ಉಗಾಂಡಾದಲ್ಲಿ 1947 ರಲ್ಲಿ ಕೋತಿಗಳಲ್ಲಿ ಪತ್ತೆ ಹಚ್ಚಲಾಯಿತು ಎಂದು WHO ತಿಳಿಸಿತ್ತು. ನಂತರ ಇದು, 1952 ರಲ್ಲಿ ಮೊದಲ ಬಾರಿಗೆ ಮಾನವರಲ್ಲಿ ಪತ್ತೆಯಾಗಿತ್ತು. 2015 ರಲ್ಲಿ 70 ಕ್ಕೂ ಹೆಚ್ಚು ದೇಶಗಳಲ್ಲಿ 1.5 ದಶಲಕ್ಷಕ್ಕೂ ಹೆಚ್ಚು ಜನರು ಸೋಂಕಿಗೆ ಒಳಗಾದ ವಿಶ್ವದಾದ್ಯಂತ ಗಂಭೀರ ಝೀಕಾ ವೈರಸ್ ಹರಡಿತ್ತು. ಆ ವೇಳೆ ಭಾರತದಲ್ಲಿ ಪ್ರಕರಣಗಳು ಪತ್ತೆಯಾಗಿರಲಿಲ್ಲ.
ಝೀಕಾ ರೋಗದ ಲಕ್ಷಣಗಳೇನು?
ಸೌಮ್ಯ ಜ್ವರ, ದದ್ದುಗಳು, ಕಾಂಜಂಕ್ಟಿವಿಟಿಸ್, ಸ್ನಾಯು- ಕೀಲು ನೋವು, ಅಸ್ವಸ್ಥತೆ ಅಥವಾ ತಲೆನೋವು.
ಮುನ್ನೆಚ್ಚರಿಕಾ ಕ್ರಮಗಳು ಏನು.?
ಮನೆ ಸುತ್ತಮುತ್ತ ನೀರು ನಿಲ್ಲದಂತೆ ನೋಡಿಕೊಳ್ಳಿ. ಸದ್ಯ ಮಳೆ ಇರುವುದರಿಂದ ರಸ್ತೆಯ ಹೊಂಡಗಳಲ್ಲಿ ನೀರು ನಿಲ್ಲುವುದು ಸಾಮಾನ್ಯ. ಇಂತಹ ಕಡೆ ಸೊಳ್ಳೆಗಳು ಸಂತನೋತ್ಪತ್ತಿ ಹೆಚ್ಚಿಸಿಕೊಂಡು ಮನುಷ್ಯರ ಮೇಲೆ ಹಗಲಿನ ವೇಳೆ ದಾಳಿ ಮಾಡುತ್ತವೆ. ಇವುಗಳಿಂದ ರಕ್ಷಣೆ ಪಡೆದುಕೊಳ್ಳಲು ಬೇಕಾದ ಮುನ್ನೆಚ್ಚರಿಕಾ ಕ್ರಮ ತೆಗೆದುಕೊಳ್ಳಬೇಕು.












Click it and Unblock the Notifications