ವಜ್ರ ಖಚಿತ ಉಬ್ಲೋ ವಾಚ್ ಬಗ್ಗೆ ಎಸಿಬಿಗೆ ಮೊದಲ ದೂರು!
ಬೆಂಗಳೂರು, ಏಪ್ರಿಲ್ 04 : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಜ್ರ ಖಚಿತ ಉಬ್ಲೋ ವಾಚ್ ಮತ್ತೆ ಸದ್ದು ಮಾಡುತ್ತಿದೆ. ಸರ್ಕಾರ ಹೊಸದಾಗಿ ಸ್ಥಾಪನೆ ಮಾಡಿರುವ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ)ದಲ್ಲಿ ವಾಚ್ ಬಗ್ಗೆ ತನಿಖೆಯಾಗಬೇಕು ಎಂದು ಮೊದಲ ದೂರು ಸಲ್ಲಿಕೆಯಾಗಿದೆ.
ಭಾನುವಾರ ಈ ಕುರಿತು ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, 'ವಾಚ್ ಪ್ರಕರಣದ ಬಗ್ಗೆ ಎಸಿಬಿಯಲ್ಲಿ ದಾಖಲಾದ ದೂರಿನ ಬಗ್ಗೆ ತನಿಖೆಯಾಗಲಿ. ಕೆಲವರು ಎಸಿಬಿಯಲ್ಲಿ ದೂರು ತಗೆದುಕೊಳ್ಳುವುದಿಲ್ಲ ಎನ್ನುತ್ತಿದ್ದರು. ಈಗ ಆ ಆರೋಪ ಸುಳ್ಳು ಎಂಬುದು ಗೊತ್ತಾಗಿದೆ' ಎಂದು ಹೇಳಿದ್ದಾರೆ.[ಸಖತ್ ಮಿಂಚುತ್ತಿರುವ ದುಬಾರಿ ಉಬ್ಲೋ ವಾಚುಗಳ ಕಥೆ]
ವಕೀಲ ನಟರಾಜ್ ಶರ್ಮಾ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಎಸಿಬಿಗೆ ಶನಿವಾರ ದೂರು ಕೊಟ್ಟಿದ್ದಾರೆ. ವಜ್ರ ಖಚಿತ ಉಬ್ಲೋ ವಾಚ್ನ ಮೂಲ ಯಾವುದು ಎಂದು ತನಿಖೆಯಾಗಬೇಕು? ಎಂದು ಮನವಿ ಮಾಡಿದ್ದಾರೆ. ರಾಜ್ಯದಲ್ಲಿ ಭ್ರಷ್ಟಾಚಾರ ನಿಗ್ರಹ ದಳ ಸ್ಥಾಪನೆಯಾದ ಬಳಿಕ ದಾಖಲಾದ ಮೊದಲ ದೂರು ಇದಾಗಿದೆ. [ವಾಚ್ ವಾರ್ : ಎಚ್ಡಿಕೆಯಿಂದ ಕಾಗೋಡು ತಿಮ್ಮಪ್ಪ ತನಕ!]
ಅಂದಹಾಗೆ ಸಿದ್ದರಾಮಯ್ಯ ಅವರು ಊಬ್ಲೋ ವಾಚ್ ಅನ್ನು 2016ರ ಮಾರ್ಚ್ 2ರಂದು ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರಿಗೆ ಹಸ್ತಾಂತರ ಮಾಡಿದ್ದಾರೆ. ನಂತರ ಸ್ಪೀಕರ್ ಅದನ್ನು ಸರ್ಕಾರದ ಮುಖ್ಯಕಾರ್ಯದರ್ಶಿಗಳಿಗೆ ನೀಡಿದ್ದು, ವಜ್ರ ಖಚಿತ ವಾಚ್ ಈಗ ಸರ್ಕಾರದ ಆಸ್ತಿಯಾಗಿದೆ. ದೂರಿನ ವಿವರ ಚಿತ್ರಗಳಲ್ಲಿ....
ಎಸಿಬಿಗೆ ಸಿದ್ದರಾಮಯ್ಯ ವಿರುದ್ಧ ಮೊದಲ ದೂರು
ಕರ್ನಾಟಕ ಸರ್ಕಾರ ಭ್ರಷ್ಟಾಚಾರ ನಿಗ್ರಹ ದಳ ಸ್ಥಾಪನೆ ಮಾಡಿದ ಬಳಿಕ ಮೊದಲ ದೂರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ದಾಖಲಾಗಿದೆ. ಸಿದ್ದರಾಮಯ್ಯ ಅವರ ಬಳಿ ಇದ್ದ ವಜ್ರ ಖಚಿತ ಉಬ್ಲೋ ವಾಚ್ನ ಮೂಲ ಯಾವುದು? ಎಂದು ತನಿಖೆಯಾಗಬೇಕು ಎಂದು ದೂರಿನಲ್ಲಿ ಮನವಿ ಮಾಡಲಾಗಿದೆ.
ವಜ್ರ ಖಚಿತ ವಾಚ್ ಬಗ್ಗೆ ಎಸಿಬಿಗೆ ದೂರು
ಹಿರಿಯ ವಕೀಲ ಎಸ್.ನಟರಾಜ್ ಶರ್ಮಾ ಅವರು ಎಸಿಬಿಗೆ ಸಿದ್ದರಾಮಯ್ಯ ಅವರ ವಿರುದ್ಧ ದೂರು ಕೊಟ್ಟಿದ್ದಾರೆ. ನಟರಾಜ್ ಶರ್ಮಾ ಅವರು ಮೊದಲು, ಕರ್ನಾಟಕ ಹೈಕೋರ್ಟ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಸಿದ್ದರು. ಊಬ್ಲೋ ವಾಚ್ ಅನ್ನು ವಶಕ್ಕೆ ಪಡೆದು, ಕ್ಯಾಬಿನೆಟ್ ಬೋರ್ಡ್ ರೂಂನಲ್ಲಿ ಇಡಲು ಸರ್ಕಾರದ ಮುಖ್ಯಕಾರ್ಯದರ್ಶಿಗಳಿಗೆ ನಿರ್ದೇಶನ ನೀಡಬೇಕು, ಜಾರಿ ನಿರ್ದೇಶನಾಲಯಕ್ಕೆ ಈ ಬಗ್ಗೆ ತನಿಖೆ ನಡೆಸಲು ಸೂಚಿಸಬೇಕು ಎಂದು ಕೋರಿದ್ದರು. ಈ ಅರ್ಜಿ ವಜಾಗೊಂಡಿತ್ತು.
ದೂರಿನ ಪ್ರಮುಖ ಅಂಶಗಳು
ನಟರಾಜ್ ಶರ್ಮಾ ಅವರು ತಮ್ಮ ದೂರಿನಲ್ಲಿ, ಸಿದ್ದರಾಮಯ್ಯ ಅವರು ಧರಿಸಿದ್ದ ವಾಚ್ ಮೌಲ್ಯ 70 ಲಕ್ಷ ಎನ್ನಲಾಗಿದೆ. ಈ ವಾಚನ್ನು ತಮ್ಮ ಸ್ನೇಹಿತ, ಅನಿವಾಸಿ ಭಾರತೀಯ ಗಿರೀಶ್ ಚಂದ್ರ ವರ್ಮ ಎಂಬುವವರು ಉಡುಗೊರೆಯಾಗಿ ನೀಡಿದ್ದಾರೆ ಎಂದು ಸಿದ್ದರಾಮಯ್ಯ ಅವರು ಹೇಳಿಕೊಂಡಿದ್ದಾರೆ. ಆದರೆ, ಇದರ ಮೂಲದ ಬಗ್ಗೆ ತನಿಖೆಯಾಗಬೇಕು ಎಂದು ದೂರಿನಲ್ಲಿ ಮನವಿ ಮಾಡಿದ್ದಾರೆ.
ವಾಚ್ ಈಗ ಸರ್ಕಾರದ ಆಸ್ತಿ
ಸಿದ್ದರಾಮಯ್ಯ ಅವರ ಕೈಯಲ್ಲಿ ವಜ್ರ ಖಚಿತ ಊಬ್ಲೋ ವಾಚ್ ಇದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರು ಮೊದಲು ಆರೋಪ ಮಾಡಿದ್ದರು. ನಂತರ ರಾಜ್ಯದಲ್ಲಿ ವಾಚ್ ವಿವಾದದ ಬಗ್ಗೆ ಭಾರೀ ಚರ್ಚೆ ನಡೆದಿತ್ತು. ಮಾರ್ಚ್ 2ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಊಬ್ಲೋ ವಾಚ್ ಅನ್ನು ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರಿಗೆ ಹಸ್ತಾಂತರ ಮಾಡಿದ್ದರು. ಈಗ ವಾಚ್ ಸರ್ಕಾರದ ಆಸ್ತಿಯಾಗಿದೆ.
ಮುಖ್ಯಮಂತ್ರಿಗಳ ಸ್ಪಷ್ಟನೆ
ವಾಚ್ ಬಗ್ಗೆ ಸಿದ್ದರಾಮಯ್ಯ ಅವರು ಈಗಾಗಲೇ ಸ್ಪಷ್ಟನೆ ಕೊಟ್ಟಿದ್ದಾರೆ. ಸ್ಪೀಕರ್ಗೆ ವಾಚ್ ಹಸ್ತಾಂತರ ಮಾಡುವಾಗ ನೀಡಿರುವ ಒಂದು ಪುಟದ ಪತ್ರದಲ್ಲಿ ಸಿದ್ದರಾಮಯ್ಯ ಅವರು, '2015ರ ಜುಲೈನಲ್ಲಿ ಎನ್ಆರ್ಐ ಹಾಗೂ ದುಬೈ ನಿವಾಸಿಯಾಗಿರುವ ಸ್ನೇಹಿತ ಡಾ.ಗಿರೀಶ್ ಚಂದ್ರ ವರ್ಮಾ ಬೆಂಗಳೂರಿಗೆ ಬಂದಿದ್ದರು. ಆಗ ಊಬ್ಲೋ ಬಿಗ್ ಬ್ಯಾಂಗ್ 301 - ಎಂ ಕೈ ಗಡಿಯಾರವನ್ನು ನನಗೆ ಉಡುಗೊರೆಯಾಗಿ ನೀಡಿದ್ದಾರೆ. ಡಾ.ವರ್ಮಾ ಅವರಿಗೆ ಕರ್ನಾಟಕ ಸರ್ಕಾರ ಅಥವ ಸರ್ಕಾರದ ಅಧೀನ ಸಂಸ್ಥೆಗಳಲ್ಲಿ ಸಂಬಂಧ, ವ್ಯವಹಾರಗಳಿಲ್ಲ. ಈ ಉಡುಗೊರೆ ಸಂಬಂಧ ಮಾರ್ಚ್ 2ರಂದು ನಾನು ತೆರಿಗೆ ಕಟ್ಟಿದ್ದೇನೆ' ಎಂದು ಸ್ಪಷ್ಟನೆ ನೀಡಿದ್ದಾರೆ.