ಚೆಸ್ಕಾಂ ನಿರ್ಲಕ್ಷ್ಯದಿಂದ ಕಬ್ಬು ನಾಶ, ರೈತನಿಗೆ ತೀರದ ನೋವು
ಮಂಡ್ಯ, ಮಾರ್ಚ್,22: ಚೆಸ್ಕಾಂನ (Chamundeshwari Electricity Supply Corporation) ನಿರ್ಲಕ್ಷ್ಯದಿಂದಾಗಿ ವಿದ್ಯುತ್ ಶಾರ್ಟ್ ಸಕ್ರ್ಯೂಟ್ ಸಂಭವಿಸಿ ಕೆ.ಆರ್.ಪೇಟೆ ತಾಲೂಕಿನ ಲಕ್ಷ್ಮೀಪುರದಲ್ಲಿ ಕಟಾವಿಗೆ ಬಂದಿದ್ದ ಸುಮಾರು ಎರಡೂವರೆ ಎಕರೆ ಕಬ್ಬು ಬೆಳೆ ನಾಶವಾಗಿದೆ. ಇದರಿಂದ ಸುಮಾರು 3ಲಕ್ಷ ರೂ. ಮೌಲ್ಯದ ಬೆಳೆ ನಷ್ಟವಾಗಿದೆ.
ಗ್ರಾಮದ ನಿವಾಸಿ ಪ್ರಗತಿಪರ ರೈತರೂ ಆಗಿರುವ ಎಲ್.ವಿ.ವಸಂತಕುಮಾರ್ ಎಂಬುವರೇ ಚೆಸ್ಕಾಂ ನಿರ್ಲಕ್ಷ್ಯದಿಂದಾಗಿ ಲಕ್ಷಾಂತರ ಮೌಲ್ಯದ ಕಬ್ಬು ಬೆಳೆಯನ್ನು ಕಳೆದುಕೊಂಡವರು. ಇವರ ಜಮೀನಿಗಾಗಿ ಹಾದು ಹೋಗಿರುವ ವಿದ್ಯುತ್ ತಂತಿ ಜೋತು ಬಿದ್ದಿದ್ದು, ಗಾಳಿಗೆ ತಂತಿಗಳ ನಡುವಿನ ಸ್ಪರ್ಶಕ್ಕೆ ಬೆಂಕಿ ಕಿಡಿ ಹಾರಿ ಕಬ್ಬು ಗದ್ದೆ ಹೊತ್ತಿ ಉರಿದಿದೆ.[ಕರೆಂಟ್ ಕೊಡಿ ಎಂದು ಕರೆ ಮಾಡಿದ್ದಕ್ಕೆ ಕಂಬಿ ಹಿಂದೆ ಹೋದ್ರು]
ವಸಂತಕುಮಾರ್ ಅವರು ಎರಡೂವರೆ ಎಕರೆಯಲ್ಲಿ ಕಬ್ಬು ಬೆಳೆದಿದ್ದರು. ಬೆಳೆ ಕಟಾವಿಗೂ ಬಂದಿತ್ತು. ಆದರೆ ಈಗ ಬೆಂಕಿ ಅವಘಡ ಸಂಭವಿಸಿ ಬೆಳೆ ಸಂಪೂರ್ಣ ನಾಶವಾಗಿದ್ದು ಕೈಗೆ ಬಂದ ತುತ್ತು ಬಾಯಿಗೆ ಬಾರದ ಸ್ಥಿತಿಯಾಗಿದ್ದು, ರೈತನ ನೋವು ಹೇಳತೀರದಾಗಿದೆ.
ವಸಂತ ಕುಮಾರ್ ಜಮೀನಿನ ಮೇಲೆ 11ಕೆ.ವಿ. ವಿದ್ಯುತ್ ತಂತಿ ಹಾದು ಹೋಗಿದೆ. ವಿದ್ಯುತ್ ಕಂಬಗಳನ್ನು ಅಳವಡಿಸುವಾಗ 50 ಮೀ ಅಂತರ ಉದ್ದ, 9 ಮೀ ಎತ್ತರದಲ್ಲಿ ಕಂಬಗಳನ್ನು ಅಳವಡಿಸಬೇಕೆಂಬ ನಿಯಮವಿದೆ. ಆದರೆ ಚೆಸ್ಕಾಂ ಇಲಾಖೆಯ ಅಧಿಕಾರಿಗಳು ಮತ್ತು ಗುತ್ತಿಗೆದಾರರು ಅದನ್ನು ಗಾಳಿಗೆ ತೂರಿ 90 ಮೀಟರ್ ದೂರಕ್ಕೊಂದರಂತೆ ಕಂಬವನ್ನು ಅಳವಡಿಸಿದ್ದಾರೆ.[ಇಳಿವಯಸ್ಸೇ ತಲೆತಗ್ಗಿಸುತ್ತೆ ಕಬ್ಬಿನ ಜೂಸ್ ಮಾಮನ ಎದುರು]
ಅಲ್ಲದೆ ಕೇವಲ 8ಮೀಟರ್ ಎತ್ತರದಲ್ಲಿ ಕಂಬಗಳನ್ನು ನೆಟ್ಟು ತಂತಿಯನ್ನು ಹಾಕಿರುವ ಕಾರಣ ವಿದ್ಯುತ್ ತಂತಿಗಳು ಜೋತು ಬಿದ್ದು ಪರಸ್ಪರ ನೇತಾಡುತ್ತಿವೆ. ಇದರ ಪರಿಣಾಮ ಈ ವಿದ್ಯುತ್ ಅವಘಡ ಉಂಟಾಗಿದೆ ಎಂಬುದು ಸ್ಥಳೀಯರ ಆರೋಪವಾಗಿದೆ. ಘಟನೆ ಕುರಿತು ರೈತ ವಸಂತಕುಮಾರ್ ನೀಡಿದ ದೂರಿನ ಮೇರೆಗೆ ಗ್ರಾಮಾಂತರ ಪೊಲೀಸ್ ಠಾಣೆಯ ಸಬ್ಇನ್ಸ್ ಪೆಕ್ಟರ್ ಪುನೀತ್ ಸ್ಥಳ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.