ಸೋನಿಯಾ ಗಾಂಧಿ ವಿರುದ್ದ ಎಫ್ಐಆರ್: ಸಿಎಂ ಬಿಎಸ್ವೈ ವಿರುದ್ದ ಬಿಜೆಪಿಗರ ಅಸಮಾಧಾನ?
ಸಿಎಂ ಯಡಿಯೂರಪ್ಪನವರ ತವರು ಜಿಲ್ಲೆ ಶಿವಮೊಗ್ಗದಲ್ಲಿ ಬಿಜೆಪಿ ಕಾರ್ಯಕರ್ತ ಮತ್ತು ವಕೀಲರೂ ಆಗಿರುವ ಪ್ರವೀಣ್ ಕುಮಾರ್ ಎನ್ನುವವರು, ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ವಿರುದ್ದ ಪೊಲೀಸರಿಗೆ ದೂರು ನೀಡಿದ್ದು, ದೂರು ದಾಖಲಿಸಿ ಎಫ್ಐಆರ್ ದಾಖಲಿಸಿರುವುದು, ಬಿಜೆಪಿ ಮತ್ತು ಕಾಂಗ್ರೆಸ್ ಸಂಘರ್ಷಕ್ಕೆ ಕಾರಣವಾಗಿದೆ.
Recommended Video
ದೇಶದಲ್ಲಿ ಭಾರೀ ಸಂಚಲನ ಮೂಡಿಸಿರುವ ಈ ವಿದ್ಯಮಾನದ ವಿರುದ್ದ ಕಾಂಗ್ರೆಸ್ ಮುಖಂಡರು ತಿರುಗಿಬಿದ್ದಿದ್ದು, ಈಗಾಗಲೇ ಕೆಪಿಸಿಸಿ ನಿಯೋಜಿತ ಅಧ್ಯಕ್ಷ ಡಿ.ಕೆ.ಶಿವಕುಮಾರ್, ನಿಯೋಗದೊಂದಿಗೆ ಸಿಎಂ ಅವರನ್ನು ಭೇಟಿಯಾಗಿದ್ದಾಗಿದೆ.
24ಗಂಟೆಯೊಳಗೆ ಎಫ್ಐಆರ್ ಹಿಂದಕ್ಕೆ ಪಡೆದು, ಪೊಲೀಸ್ ಅಧಿಕಾರಿಯ ವಿರುದ್ದ ಕ್ರಮ ತೆಗೆದುಕೊಳ್ಳದಿದ್ದರೆ, ಉಗ್ರ ಹೋರಾಟದ ಎಚ್ಚರಿಕೆಯನ್ನು ಡಿಕೆಶಿ ನೀಡಿದ್ದು, ಬಿಜೆಪಿ ಮುಖಂಡರ ಸಿಟ್ಟಿಗೆ ಕಾರಣವಾಗಿದೆ.
ಈ ನಡುವೆ, ಕಾಂಗ್ರೆಸ್ ವಿರುದ್ದ ಮುಖ್ಯಮಂತ್ರಿ ಯಡಿಯೂರಪ್ಪ ಮೃದು ಧೋರಣೆ ತಾಳುತ್ತಿದ್ದಾರೆ ಎನ್ನುವ ಅಸಮಾಧಾನ ಬಿಜೆಪಿಯಲ್ಲಿ ಹೆಚ್ಚಾಗುತ್ತಿದೆ. ಹಾಗಾಗಿ, ಮುಖ್ಯಮಂತ್ರಿಗಳು ಈ ವಿಚಾರದಲ್ಲಿ ಅಡಕತ್ತರಿಯಲ್ಲಿ ಸಿಲುಕಿದ್ದಾರೆ ಎನ್ನುವ ಮಾಹಿತಿಯಿದೆ.

ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ
ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ "ಪಿಎಂ ಕೇರ್ಸ್ ನಿಧಿಗೆ ಬರುತ್ತಿರುವ ದೇಣಿಗೆ ಹಣ ಸರಿಯಾದ ರೀತಿಯಲ್ಲಿ ಬಳಕೆಯಾಗುತ್ತಿಲ್ಲ" ಎಂದು ಟ್ವೀಟ್ ಮಾಡಿದ್ದರು. ಇದು, ಜನರಿಗೆ ತಪ್ಪು ಸಂದೇಶ ರವಾನಿಸಿದಂತಾಗುತ್ತದೆ ಎಂದು ಪ್ರವೀಣ್ ಕುಮಾರ್ ಎನ್ನುವವರು ದೂರು ನೀಡಿದ್ದರು. ದೂರು ಆಧರಿಸಿ ಪೊಲೀಸರು ದೂರು ದಾಖಲಿಸಿಕೊಂಡಿದ್ದರು. ಇದು ರಾಷ್ಟ್ರವ್ಯಾಪಿ ಭಾರೀ ಸಂಚಲನ ಮೂಡಿಸಿ, ಇದು ಬಿಜೆಪಿಯ ದ್ವೇಷ ರಾಜಕಾರಣ ಎಂದು ಕಾಂಗ್ರೆಸ್ಸಿಗರು ಆಕ್ರೋಶ ವ್ಯಕ್ತಪಡಿಸಿದ್ದರು.

ನರೇಂದ್ರ ಮೋದಿ ಈ ಹಿಂದೆ ಗುಜರಾತ್ ಸಿಎಂ ಆಗಿದ್ದ ವೇಳೆ
ನರೇಂದ್ರ ಮೋದಿಯವರು ಈ ಹಿಂದೆ ಗುಜರಾತ್ ಸಿಎಂ ಆಗಿದ್ದ ವೇಳೆ, ಸೋನಿಯಾ ನೇತೃತ್ವದ ಯುಪಿಎ ಸರಕಾರ ದ್ವೇಷದ ರಾಜಕಾರಣ ಮಾಡಿರಲಿಲ್ಲವೇ? ಆಗ ಬಿಜೆಪಿಯವರು ಏನಾದರೂ, ಕಾಂಗ್ರೆಸ್ಸಿನ ಮನೆ ಬಾಗಿಲಿಗೆ ಹೋಗಿ, ದೂರು ಹಿಂದಕ್ಕೆ ಪಡೆಯುವಂತೆ ಹಿಂದಕ್ಕೆ ಪಡೆಯಲು ಒತ್ತಡ ಹಾಕಿತ್ತೇ ಎನ್ನುವುದು ರಾಜ್ಯದ ಹಲವು ಬಿಜೆಪಿ ಮುಖಂಡರ ಅಭಿಪ್ರಾಯ ಎನ್ನಲಾಗುತ್ತಿದೆ.

ರಿಪಬ್ಲಿಕ್ ಟಿವಿಯ ಮುಖ್ಯಸ್ಥ ಅರ್ನಬ್ ಗೋಸ್ವಾಮಿ
ಜೊತೆಗೆ, ಈ ಘಟನೆಗೂ ರಿಪಬ್ಲಿಕ್ ಟಿವಿಯ ಮುಖ್ಯಸ್ಥ ಅರ್ನಬ್ ಗೋಸ್ವಾಮಿ ವಿರುದ್ದ ಕಾಂಗ್ರೆಸ್ ಕಾರ್ಯಕರ್ತರು ನೂರಾರು ಪ್ರಕರಣ ದಾಖಲಿಸಿರುವುದನ್ನು ಇದಕ್ಕೆ ತುಲನೆ ಮಾಡಲಾಗುತ್ತಿದೆ. ಸೋನಿಯಾ ವಿರುದ್ದ ಎಫ್ಐಆರ್ ವಿದ್ಯಮಾನದಿಂದ ಕಾಂಗ್ರೆಸ್ ತೀವ್ರ ಕಸಿವಿಸಿಗೊಂಡಿದೆ.

ಸಿಎಂ ಬಳಿ ಕಾಂಗ್ರೆಸ್ ನಿಯೋಗ
ದೂರಿನನ್ವಯ ಎಫ್ಐಆರ್ ದಾಖಲಾಗಿರುವುದರಿಂದ, ಕಾಂಗ್ರೆಸ್ ಕೋರ್ಟಿಗೆ ಹೋಗಲಿ, ಸಿಎಂ ಬಳಿ ಯಾಕೆ ಬರುತ್ತಾರೆ? ಕಾಂಗ್ರೆಸ್ ನಿಯೋಗದ ದೂರಿನ ಪ್ರತಿಯಲ್ಲಿ ಅಗತ್ಯ ಕ್ರಮ ಜರುಗಿಸಲು ಸೂಚಿಸಿದೆ ಎನ್ನುವ ಸಿಎಂ ಟಿಪ್ಪಣಿ, ಬಿಜೆಪಿ ವಲಯದಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.












Click it and Unblock the Notifications