ಗೋಹತ್ಯೆ ನಿಷೇಧ ಕಾಯ್ದೆ; ಕೇಶವ ಕೃಪದಿಂದ ಬೆನ್ನು ತಟ್ಟಿಸಿಕೊಳ್ಳುವುದಷ್ಟೇ ಮುಖ್ಯ: ಪ್ರಿಯಾಂಕ್ ಖರ್ಗೆ

ಬೆಂಗಳೂರು, ನವೆಂಬರ್ 30: ಗೋಹತ್ಯೆ ನಿಷೇಧ ಕಾಯ್ದೆಯಿಂದ ಎಷ್ಟು ಲಾಭವಾಯಿತು ಎಂದು ಯಾರಾದರೂ ಪರಿಶೀಲನೆ ಮಾಡಿದ್ದಾರಾ? ಗೋಹತ್ಯೆ ನಿಷೇಧ ಕಾಯ್ದೆಯಿಂದ 5,280 ಕೋಟಿ ಆರ್ಥಿಕ ಹೊರೆಯಾಗಿದೆ ಎಂದು ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು

ಬುಧವಾರ ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ಈ ಕಾಯ್ದೆಯಿಂದ ರಾಜ್ಯಕ್ಕೆ, ರೈತರಿಗೆ, ಕಾರ್ಮಿಕರಿಗೆ, ಕೈಗಾರಿಕೆಗಳಿಗೆ ಎಷ್ಟು ಲಾಭವಾಯಿತು ಎಂದು ಯಾರಾದರೂ ಪರಿಶೀಲನೆ ಮಾಡಿದ್ದಾರಾ? ಸಿಎಂ ಹಾಗೂ ಪಶು ಸಂಗೋಪನಾ ಸಚಿವರು ಇದನ್ನು ಕ್ರಾಂತಿಕಾರಿ ಕಾಯ್ದೆ, ಗುಜರಾತ್ ಮಾಡೆಲ್ ಎಂದರು. ಆದರೆ ಈ ಕಾನೂನು ಯಾವ ದುಸ್ಥಿತಿಯಲ್ಲಿ ಇದೆ ಎಂಬ ಕನಿಷ್ಠ ಪ್ರಜ್ಞೆ ಇವರಿಗೆ ಇದೆಯೇ? ಈ ಕಾನೂನು ರೈತರು, ಚರ್ಮ ಉದ್ಯಮ ಕಾರ್ಮಿಕರು, ರಾಜ್ಯದ ಆರ್ಥಿಕ ಪರಿಸ್ಥಿತಿಗೆ ದೊಡ್ಡ ಪೆಟ್ಟು ಬಿದ್ದಿದೆ ಎಂದರು.

ಬಿಜೆಪಿ ನಾಯಕರು ರಾಜ್ಯದ ಆರ್ಥಿಕ ಪರಿಸ್ಥಿತಿ, ಕಾರ್ಮಿಕರು, ರೈತರು ಹಾಗೂ ಕೈಗಾರಿಕೆಗಳ ಬಗ್ಗೆ ಕಾಳಜಿ ತೋರಿಸುತ್ತಿಲ್ಲ. ಅವರಿಗೆ ಈ ಕಾಯ್ದೆ ಜಾರಿಗೆ ತರಬೇಕು, ಕೇಶವ ಕೃಪದಿಂದ ಬೆನ್ನು ತಟ್ಟಿಸಿಕೊಳ್ಳುವುದಷ್ಟೇ ಮುಖ್ಯವಾಗಿದೆ. ಸರ್ಕಾರದಲ್ಲಿ ಇರೋರಿಗೆ ಈ ಕಾಯ್ದೆಯ ಉದ್ದೇಶ ಏನಿದೆ ಎಂದು ಗೊತ್ತಿಲ್ಲ. ಈ ಕಾಯ್ದೆ ಬಂದ ನಂತರ ರೈತರಿಗೆ ಮಾರಕವಾಗಿದೆ. ಇಡೀ ವಿಶ್ವದಲ್ಲಿ ಶೇಕಡ 13ರಷ್ಟು ಚರ್ಮ ಉತ್ಪನ್ನಗಳು ಭಾರತದಿಂದ ಉತ್ಪಾದನೆ ಆಗುತ್ತಿದ್ದವು. ಕೋವಿಡ್ ಗೂ ಮುನ್ನ ದೇಶದ ಚರ್ಮ ವ್ಯಾಪಾರ ಉದ್ಯಮ 5.5 ಬಿಲಿಯನ್ ಡಾಲರ್ ಗಳಷ್ಟಿತ್ತು. ಚರ್ಮ ಹಾಗೂ ಪಾದರಕ್ಷೆ ಉತ್ಪಾದನೆ ಕ್ಷೇತ್ರದಲ್ಲಿ ಭಾರತ ಎರಡನೇ ಸ್ಥಾನದಲ್ಲಿತ್ತು. ಶೇಕಡಾ 9 ರಷ್ಟು ಪಾದರಕ್ಷೆಗಳು ಭಾರತದಲ್ಲಿ ತಯಾರಾಗುತ್ತಿದ್ದವು.

Financial Burden On State Due To Cow Slaughter Ban Act says Priyank Kharge

ರಾಜ್ಯದಲ್ಲಿ 2020-21ನೇ ಸಾಲಿನಲ್ಲಿ ರಾಜ್ಯ ಹಣಕಾಸು ಸಮೀಕ್ಷೆ ಪ್ರಕಾರ, ರಾಜ್ಯದ ಚರ್ಮ ಉತ್ಪನ್ನ ರಫ್ತು 2017-18 ರಲ್ಲಿ 521.81 ಕೋಟಿಯಷ್ಟು ಇತ್ತು. 2018-19 562 ಕೋಟಿ, 2019-20ಯಲ್ಲಿ 502 ಕೋಟಿ, 2020-21 ಸಾಲಿನಲ್ಲಿ 160.84 ಕ್ಕೆ ಕುಸಿದಿದೆ. ಇದ್ಯಾವುದು ಕಾಂಗ್ರೆಸ್ ಮಾಹಿತಿ ಅಲ್ಲ.

ರಾಜ್ಯ ಸರ್ಕಾರದ ಪ್ರಕಾರ, ಚರ್ಮಧ್ಯಮದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರಲ್ಲಿ ಹೆಚ್ಚಿನ ಜನ ಪರಿಶಿಷ್ಟ ಜಾತಿ ಹಾಗೂ ಪಂಗಡದವರಾಗಿದ್ದಾರೆ. ಈ ಉದ್ಯಮದಲ್ಲಿ 3.5 ಲಕ್ಷ ನೊಂದಾಯಿತ ಕಾರ್ಮಿಕರಿದ್ದಾರೆ. 91 ಕೈಗಾರಿಕೆಗಳು ರಾಜ್ಯದಲ್ಲಿದ್ದು ಇವುಗಳಲ್ಲಿ ಬಹುತೇಕ ಬಂದಾಗುವ ಹಂತಕ್ಕೆ ಬಂದಿವೆ. ಎಲ್ಲಾ ಕಾರ್ಮಿಕರು ಬೀದಿಗೆ ಬಂದಿದ್ದು ಈ ಬಗ್ಗೆ ಸರ್ಕಾರ ಯಾವುದಾದರೂ ಕ್ರಮ ಕೈಗೊಂಡಿದೆಯೇ? ಒಂದಾದರೂ ಯೋಜನೆ ರೂಪಿಸಿದೆಯೇ? ಇವರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿದೆಯೇ? ಆದರೂ ಈ ಕಾಯ್ದೆ ಜಾರಿಯನ್ನು ಯಾವ ಉದ್ದೇಶಕ್ಕಾಗಿ ಮಾಡಿದ್ದಾರೆ?

ಈ ಕಾಯ್ದೆಯಿಂದ ರಾಜ್ಯದ ಆರ್ಥಿಕತೆ ಮೇಲೆ ದೊಡ್ಡ ಪರಿಣಾಮ ಬೀರಲಿದ್ದು, ಮೊದಲ ವರ್ಷ ರಾಜ್ಯದಲ್ಲಿ 1,71,672 ಜಾನುವಾರು ನಿರ್ವಹಣೆಗೆ 464.17 ಕೋಟಿ, ಎರಡನೇ ವರ್ಷಕ್ಕೆ 3,05,337 ಜಾನುವಾರುಗಳ ನಿರ್ವಹಣೆಗೆ 170.13 ಕೋಟಿ, ಮೂರನೇ ವರ್ಷಕ್ಕೆ 4,04,269 ಜಾನುವಾರು ನಿರ್ವಹಣೆಗೆ 1032.90 ಕೋಟಿ, ನಾಲ್ಕನೇ ವರ್ಷಕ್ಕೆ 4,73,415 ಜಾನುವಾರು ನಿರ್ವಹಣೆಗೆ 1200.12 ಕೋಟಿ ಹಣ ಬೇಕಾಗುತ್ತದೆ. ಇದು ಕೇವಲ ಮೇವಿನ ಖರ್ಚು. ಇವರು ಪ್ರತಿ ಜಾನುವಾರಿನ ಮೇವಿಗೆ 70 ರೂ. ನಿಗದಿ ಮಾಡಿದ್ದಾರೆ. ಆದರೆ 150 ರೂ.ಗಿಂತ ಕಡಿಮೆ ಮೊತ್ತಕ್ಕೆ ಮೇವು ಸಿಗುತ್ತಿಲ್ಲ. ಒಟ್ಟು ಇವರು ಗೋಶಾಲೆಗಳಲ್ಲಿ ಜಾನುವಾರು ಸಾಕಲು 3512.32 ಕೋಟಿ ಬೇಕು. ಗೋಶಾಲೆ ಮೂಲಭೂತ ಸೌಕರ್ಯಕ್ಕಾಗಿ 1208.50 ಕೋಟಿ ಬೇಕು.

Financial Burden On State Due To Cow Slaughter Ban Act says Priyank Kharge

ಗೋ ಹತ್ಯೆ ನಿಷೇಧ ಕಾಯ್ದೆಯಿಂದ ರಾಜ್ಯದಲ್ಲಿ 27,250 ಮೆ. ಟನ್ ಗೋಮಾಂಸ ಉತ್ಪತ್ತಿ ಕಡಿಮೆ ಆಗಲಿದೆ. ಇದನ್ನು ಕುರಿ, ಮೇಕೆ ಮಾಂಸದಿಂದ ಸರದಿಗೊಳಿಸಲು 20+1ರಂತೆ ಘಟಕಗಳನ್ನು 50%ರಷ್ಟು ಸಹಾಯ ಧನ ನೀಡಿ 76,650 ಕುರಿ ಘಟಕಗಳನ್ನು ರೈತರಿಗೆ ನೀಡಬೇಕಿದೆ. ಇದಕ್ಕೆ 519.36 ಕೋಟಿ ವೆಚ್ಚ ತಗಲುತ್ತದೆ ಎಂದು ವಿವರಿಸಿದೆ. ಇಲ್ಲಿಯವರೆಗೂ ಒಂದಾದರೂ ಘಟಕ ತೆಗೆದಿದ್ದೀರಾ?

ಈ ಕಾಯ್ದೆಯಿಂದ 5280 ಕೋಟಿ ನಷ್ಟ ಆಗುತ್ತಿದೆ. ಈ ಇಲಾಖೆ ಬದುಕಿದೆಯಾ ಸತ್ತಿದೆಯಾ ಗೊತ್ತಿಲ್ಲ. ಮಂತ್ರಿಗಳು ಮಾಧ್ಯಮಗಳ ಮುಂದೆ ಗೋವು ಕರುಗಳಿಗೆ ಮುತ್ತು ನೀಡುವುದು ಬಿಟ್ಟು ಬೇರೇನೂ ಮಾಡಿಲ್ಲ. ಈ ಇಲಾಖೆಯಲ್ಲಿ 7363 ಹುದ್ದೆಗಳಿದ್ದು, 5366 ಹುದ್ದೆಗಳು ಖಾಲಿ ಇವೆ. ಈ ಬಗ್ಗೆ ಪರಿಷತ್ ನಲ್ಲಿ ಪ್ರಶ್ನೆ ಕೇಳಿದಾಗ, ಅವರು ಇದಕ್ಕೆ ಹಣಕಾಸು ಇಲಾಖೆ ಅನುಮತಿ ಬೇಕಿದೆ ಎಂದು ಹೇಳುತ್ತಾರೆ. ಆದರೆ ಈ ಕಾಯ್ದೆ ಜಾರಿಗೆ ಈ ಇಲಾಖೆ ಒಪ್ಪಿಗೆ ನೀಡಿರಲಿಲ್ಲ. ಉದ್ಯೋಗ ನೀಡಲು ಮಾತ್ರ ಹಣಕಾಸು ಇಲಾಖೆ ಅನುಮತಿ ಬೇಕಾ? ಎಂದರು.

ಸರ್ಕಾರ 275 ಪಶು ಸಂಜೀವಿನಿ ಆಂಬುಲೆನ್ಸ್ ಖರೀದಿ ಮಾಡಿದ್ದು, ನಮ್ಮ 40% ಸರ್ಕಾರ ಎಷ್ಟು ಯಶಸ್ವಿಯಾಗಿ ಕೆಲಸ ಮಾಡುತ್ತಿದೆ ಎಂದರೆ, ಆಂಬುಲೆನ್ಸ್ ಖರೀದಿ ಮಾಡಿ ಅದಕ್ಕೆ ಚಾಲಕರ ನೇಮಕ ಮಾಡಿಲ್ಲ. ಚಾಲಕರು ಇಲ್ಲದ ಮೇಲೆ ಆಂಬುಲೆನ್ಸ್ ಖರೀದಿ ಮಾಡಿದ್ದು ಯಾಕೆ? ಕಮಿಷನ್ ಪಡೆಯಲಾ? ಎಂದು ಪ್ರಶ್ನಿಸಿದ್ದಾರೆ.

ಈ ಸರ್ಕಾರ ಯಾರನ್ನೂ ಬಿಡುವುದಿಲ್ಲ. ಗೋಮಾತೆ ಹೆಸರಲ್ಲೂ ಲೂಟಿ ಮಾಡುತ್ತಿದ್ದಾರೆ. ಗೋಮಾತೆ ಹೆಸರಲ್ಲೂ ಮೋಸ ಮಾಡುತ್ತಿದ್ದಾರೆ. ಗೋಶಾಲೆ ಮೇವು ಪೂರೈಕೆಗೆ ಹಣ ಬಿಡುಗಡೆಗಾಗಿ 8.5% ಕಮಿಷನ್ ನೀಡಬೇಕು ಎಂದು ಹರ್ಷ ಅಸೋಸಿಯೇಟ್ಸ್ 14-04-2 022ರಲ್ಲಿ ಪ್ರಧಾನಿಗೆ ಪತ್ರ ಬರೆದಿದ್ದಾರೆ. ಇದರಲ್ಲಿ ನ್ಯಾಯಾಲಯದ ಆದೇಶ ಇದ್ದರೂ ಅಧಿಕಾರಿಗಳು ಹಣ ನೀಡದೆ 8.5% ಕಮಿಷನ್ ಕೇಳುತ್ತಿದ್ದಾರೆ ಎಂದು ತಿಳಿಸಿದ್ದಾರೆ.

5 ಸಾವಿರ ಕೋಟಿ ಭರಿಸಲು ಸರ್ಕಾರಕ್ಕೆ ಆಗುವುದಿಲ್ಲ ಎಂದು ಬಿಜೆಪಿಯವರಿಗೆ ಅರಿವಾದಾಗ ಗೋವುಗಳನ್ನು ದತ್ತು ನೀಡುವ ಪುಣ್ಯಕೋಟಿ ದತ್ತು ಯೋಜನೆ ಜಾರಿಗೆ ತಂದರು. ಇದರ ಪ್ರಕಾರ ರಾಜ್ಯದ ಜನ ಗೋಶಾಲೆ ಗಳ ಹಸುಗಳ ದತ್ತು ತೆಗೆದುಕೊಳ್ಳಲು ಅವಕಾಶ ನೀಡಲಾಗಿದೆ. ಸರ್ಕಾರ ಇದುವರೆಗೂ ಅವರ ಪ್ರಕಾರ 6 ಗೋಶಾಲೆ ಆರಂಭ ಮಾಡಿದ್ದು, ನನ್ನ ಪ್ರಕಾರ ಕೇವಲ ಮೂರು ಮಾತ್ರ. ಸಿಎಂ ಹಾಗೂ ಮಂತ್ರಿಗಳ ಕ್ಷೇತ್ರದಲ್ಲಿ ಒಂದೂ ಗೋಶಾಲೆ ಇಲ್ಲ.

ಮಂತ್ರಿಗಳ ಕ್ಷೇತ್ರದಲ್ಲಿ 9 ಗೋಶಾಲೆಯಲ್ಲಿ 306 ಗೋವುಗಳಿವೆ. ಇದರಲ್ಲಿ ದತ್ತು ತೆಗೆದುಕೊಂಡಿರುವುದು 10. ಚಿಕ್ಕಬಳ್ಳಾಪುರದಲ್ಲಿ 2 ಗೋಶಾಲೆಯಲ್ಲಿ 4 ಜಾನುವಾರುಗಳಿವೆ. ಧಾರವಾಡ 5 ಗೋಶಾಲೆಯಲ್ಲಿ 22 ಜಾನುವಾರುಗಳಲ್ಲಿ 3 ಮಾತ್ರ ದತ್ತು ಪಡೆಯಲಾಗಿದೆ. ಹಾವೇರಿಯಲ್ಲಿ 2 ಗೋಶಾಲೆ ಇದ್ದು, 108 ಹಸುಗಳ ಪೈಕಿ ಕೇವಲ 4 ದತ್ತು ಪಡೆಯಲಾಗಿದೆ. ಉತ್ತರ ಕನ್ನಡದಲ್ಲಿ 8 ಗೋಶಾಲೆಯಲ್ಲಿ 594 ಜಾನುವಾರು ಪೈಕಿ 6 ಮಾತ್ರ ದತ್ತು ಪಡೆಯಲಾಗಿದೆ. ಮುಖ್ಯಮಂತ್ರಿಗಳಿಗೆ ಗಡವು ನೀಡುವ ಸಂಘಟನೆಗಳು ಎಲ್ಲಿ ಹೋಗಿವೆ? ಜವಾಬ್ದಾರಿ ನಿಭಾಯಿಸುವಾಗ ಓಡಿ ಹೋಗುವುದು ಏಕೆ? ನಮ್ಮ ರಾಜ್ಯದಲ್ಲಿ 177 ಗೋಶಾಲೆಯಲ್ಲಿ 21,207 ಜಾನುವಾರು ಪೈಕಿ ದತ್ತು ಪಡೆಯಲಾದ ಜಾನುವಾರುಗಳು ಕೇವಲ 151 ಜಾನುವಾರು ಮಾತ್ರ. ಇದು ಬಿಜೆಪಿ ನಾಯಕರ ಯೋಗ್ಯತೆ. ಬಿಜೆಪಿ ಶಾಸಕರು ಮಂತ್ರಿಗಳು ಎಲ್ಲಿ ಹೋದರು? ಆರ್ ಎಸ್ ಎಸ್ ನವರು ಗೋಮಾತೆ ಮೇಲೆ ಪ್ರೀತಿ ತೋರುವವರು ಎಲ್ಲಿ ಹೋದರು?

ಪುಣ್ಯಕೋಟಿ ಯೋಜನೆ ಹಾಗೂ ಗೋಶಾಲೆ ಬಗ್ಗೆ ಹೈಕೋರ್ಟ್ ಛೀಮಾರಿ ಹಾಕಿದೆ. ಸರ್ಕಾರ ಹೇಳಿದ 14 ಕಡೆ ಗೋಶಾಲೆ ಇಲ್ಲ ಎಂದು ಹೇಳಿದೆ. ಗೋಶಾಲೆ ಕಾಗದದ ಮೇಲೆ ಇದ್ದಂತೆ ಇದೆ ಎಂದು ಹೈಕೋರ್ಟ್ ಬೇಸರ ವ್ಯಕ್ತಪಡಿಸಿದೆ. ಸಿಎಂ ಅವರು ತಮ್ಮ ಜನ್ಮದಿನದಂದು 11 ಹಸುಗಳನ್ನು ದತ್ತು ತೆಗೆದುಕೊಳ್ಳುವುದಾಗಿ ಹೇಳಿದರು. ಆ 11 ಹಸುಗಳು ಎಲ್ಲಿದೆಯೋ ಗೊತ್ತಿಲ್ಲ. ಮುಖ್ಯಮಂತ್ರಿಗಳು ತಮ್ಮ ಶಾಸಕರಿಗೆ ಗೋವು ದತ್ತು ಪಡೆಯಲು ಒತ್ತಾಯ ಮಾಡುತ್ತಿದ್ದಾರೆ. ಆದರೆ ಸಿಎಂ ಮಾತಿಗೆ ಬೆಲೆ ಇಲ್ಲದೇ ಯಾರು ದತ್ತು ತೆಗೆದುಕೊಳ್ಳುತ್ತಿಲ್ಲ. ಹೀಗಾಗಿ ಸರ್ಕಾರಿ ನೌಕರರ ಮೇಲೆ ಒತ್ತಡ ಹೇರಿ ಕಡ್ಡಾಯವಾಗಿ ದತ್ತು ತೆಗೆದುಕೊಳ್ಳಬೇಕು ಎಂದು ಆದೇಶ ನೀಡುತ್ತಿದ್ದಾರೆ ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+