ಸಂವಿಧಾನ ಚರ್ಚೆ: ಸಿಟಿ ರವಿ ಮತ್ತು ಪರಮೇಶ್ವರ್ ಏಟು ಎದುರೇಟು
ಬೆಂಗಳೂರು, ಮಾರ್ಚ್ 9: ವಿಧಾನಸಭೆಯಲ್ಲಿ ಸಂವಿಧಾನದ ಕುರಿತು ಚರ್ಚೆ ಮುಂದುವರಿದಿದ್ದು, ಕಾಂಗ್ರೆಸ್ ಶಾಸಕ ಜಿ ಪರಮೇಶ್ವರ ಮತ್ತು ಸಚಿವ ಸಿಟಿ ರವಿ ವಿರುದ್ಧ ಮಾತಿನ ಯುದ್ಧ ನಡೆದಿದೆ.
ಪ್ರವಾಸೋದ್ಯಮ ಸಚಿವ ಸಿಟಿ ರವಿ ಅವರು ಮಾತನಾಡುತ್ತಿದ್ದ ವೇಳೆ ಅಂಬೇಡ್ಕರ್ ಮತ್ತು ದಲಿತರ ಬಗ್ಗೆ ಪ್ರಸ್ತಾಪಿಸಿದರು. ಸಿಟಿ ರವಿ ಹೇಳಿಕೆಯನ್ನ ಖಂಡಿಸಿದ ಜಿ ಪರಮೇಶ್ವರ್ 'ಸಿ.ಟಿ.ರವಿ ತಮ್ಮದೇ ಇತಿಹಾಸ ಹೇಳಿದ್ರು ಹೊರತು ಭಾರತದ ವಾಸ್ತವ ಇತಿಹಾಸವನ್ನಲ್ಲ' ಎಂದು ಕಾಲೆಳೆದರು.
ಈ ವೇಳೆ ತಮ್ಮ ಬಾಲ್ಯ ನೆನಪಿಸಿಕೊಂಡ ಪರಮೇಶ್ವರ್, ದಲಿತ ಎಂಬ ಕಾರಣಕ್ಕೆ ತಾನು ಎದುರಿಸಿ ನೋವನ್ನು ಹೇಳಿಕೊಂಡರು. ಈ ಮೂಲಕ ಸಿಟಿ ರವಿ ಅವರ ಹೇಳಿಕೆಯನ್ನು ವಿರೋಧಿಸಿದರು. ಅಷ್ಟಕ್ಕೂ, ಸಿಟಿ ರವಿ ಹೇಳಿದ್ದೇನು? ಅದಕ್ಕೆ ಜಿ ಪರಮೇಶ್ವರ್ ಕೊಟ್ಟ ಉತ್ತರವೇನು? ಮುಂದೆ ಓದಿ....

ಇಂತಹವರಿಂದ ಸಂವಿಧಾನ ಉಳಿಯುತ್ತದೆಯೇ
'ಕಾಶ್ಮೀರದಲ್ಲಿ ಸಂವಿಧಾನವನ್ನು ಗೌರವಿಸುವವರು ಅಲ್ಪಸಂಖ್ಯಾತರು, ಸಂವಿಧಾನವನ್ನು ಧಿಕ್ಕಿರಿಸುವವರೇ ಬಹುಸಂಖ್ಯಾತರು. ಹಾಗಾಗಿಯೇ ಕಾಶ್ಮೀರದಲ್ಲಿ ಸಂವಿಧಾನದಿಂದ ಕಾಶ್ಮೀರಿ ಪಂಡಿತರ ರಕ್ಷಣೆ ಸಾಧ್ಯವಾಗಲಿಲ್ಲ. ಇಂತಹ ಸಂವಿಧಾನವನ್ನು ಧಿಕ್ಕರಿಸುವ ಮನಸ್ಥಿತಿ ಇಡೀ ಭಾರತವನ್ನು ವ್ಯಾಪಿಸಿದರೆ ಸಂವಿಧಾನ ಉಳಿಯುತ್ತದೆಯೇ. ಅಸ್ಸಾಂನಲ್ಲಿ ಯಾರೋ ಒಬ್ಬ ದೇಶ ತುಂಡು ಮಾಡುವ ಮಾತನಾಡುತ್ತಾನೆ. ಇನ್ನಾರೋ ಒಬ್ಬ ಇನ್ಷಾ ಅಲ್ಲಾ..ಪಾಕಿಸ್ತಾನ ಜಿಂದಾಬಾದ್ ಹೇಳುವವರ ಜತೆ ವೇದಿಕೆ ಹಂಚಿಕೊಳ್ಳುತ್ತಾರೆ. ಇಂತಹವರಿಂದ ಸಂವಿಧಾನ ಉಳಿಯುತ್ತದೆಯೇ..'' ಎಂದು ಸಿಟಿ ರವಿ ಸದನದಲ್ಲಿ ಪ್ರಶ್ನಿಸಿದರು.

ಬಡ ದಲಿತರಿಗೆ ಬಲಿತ ದಲಿತರು ಜಾಗ ಬಿಟ್ಟುಕೊಡಲಿ
'ಅಂಬೇಡ್ಕರ್ ರ ವಿಚಾರ ಉಳಿಯಬೇಕಾದರೆ ಬಡ ದಲಿತರಿಗೆ ಬಲಿತ ದಲಿತರು ಜಾಗ ಬಿಟ್ಟುಕೊಟ್ಟಾಗ ಮಾತ್ರ ಅಂಬೇಡ್ಕರರ ವಿಚಾರ ಉಳಿಯುತ್ತದೆ. ಅಂಬೇಡ್ಕರ್ ರನ್ನು ದೇವರನ್ನಾಗಿ ಮಾಡಿ ದೇವಸ್ಥಾನದಲ್ಲಿ ಕೂಡಿಸಿದ್ರೆ ಮತ್ತೆ ಪುರೋಹಿತ ಶಾಹಿ ವ್ಯವಸ್ಥೆಯೇ ಬರುತ್ತದೆ. ಬದಲಿಗೆ ಅವರ ವಿಚಾರವಾದವನ್ನು ಜಾರಿಗೊಳಿಸಿದಾಗ ಮಾತ್ರ ಅಂಬೇಡ್ಕರ್ ವಾದಕ್ಕೂ ಬೆಲೆ ಬರುತ್ತದೆ'' ಎಂದು ಸಿಟಿ ರವಿ ಚರ್ಚೆಯಲ್ಲಿ ಪ್ರಸ್ತಾಪಿಸಿದ್ದರು.

ಪರಮೇಶ್ವರ ತಿರುಗೇಟು
''ನನಗೆ ಮನಸ್ಸಿನಲ್ಲಿ ನೋವಿದೆ. ಏಕೆಂದರೆ ನಾನು ದಲಿತ ಸಮುದಾಯಕ್ಕೆ ಸೇರಿದವನು. ನಾನು ಹಾಗೂ ನನ್ನ ಸಹೋದರಿ ಐದು ಕಿ.ಮೀ ದೂರದ ಶಾಲೆಗೆ ಹೋಗುತ್ತಿದ್ದೆವು. ನಮ್ಮ ತಂದೆಯೂ ಶಾಸಕರಾಗಿದ್ದವರೇ..ಆದರೂ ನಮಗೆ ನೀವು ಯಾರ ಮನೆಗೂ ಹೋಗಬಾರದು ಎಂದು ಹೇಳಿದ್ದರು. ನಮಗೆ ನೀರುಕೊಡಲು ಒಬ್ಬ ಅಟೆಂಡರ್ ಗೆ ಹೇಳಿದ್ದರು. ಆದರೂ ಮೇಲ್ವರ್ಗದವರ ಮನೆಗಳಲ್ಲಿ ದೂರ ನಿಂತು ಎತ್ತರದಿಂದ ನೀರು ಹಾಕಿದ್ದನ್ನು ಬೊಗಸೆಯೊಡ್ಡಿ ಕುಡಿದಿದ್ದೇನೆ. ಆ ನೋವು ಈಗಲೂ ನನಗೆ ಕಾಡುತ್ತಿದೆ'' ಎಂದು ಪರಮೇಶ್ವರನ್ ತಿರುಗೇಟು ನೀಡಿದರು.

ಹೊರಗೆ ಕೂಡಿಸಿ ಹೇರ್ ಕಟ್ ಮಾಡುತ್ತಿದ್ದರು
''ಹೇರ್ ಕಟಿಂಗ್ ಗೆ ಹೋದರೆ ಸಲೂನ್ ಹೊರಗೆ ಕೂಡಿಸಿ ಹೇರ್ ಕಟ್ ಮಾಡುತ್ತಿದ್ದರು. ಆ ನೋವೂ ಈಗಲೂ ಹಾಗೆ ಇದೆ. ಸಿ.ಟಿ.ರವಿ ತಮ್ಮದೇ ಇತಿಹಾಸ ಹೇಳಿದ್ರು ಹೊರತು ಭಾರತದ ವಾಸ್ತವ ಇತಿಹಾಸವನ್ನಲ್ಲ'' ಎಂದು ಪ್ರವಾಸೋದ್ಯಮ ಸಚಿವರ ಹೇಳಿಕೆಯನ್ನು ವಿರೋಧಿಸಿದರು.

ಕೆಎಸ್ ಈಶ್ವರಪ್ಪ ಟಾಕ್
'ಬಿಜೆಪಿಯಿಂದ ಅಲ್ಪಸಂಖ್ಯಾತರು ಯಾರೂ ಆಯ್ಕೆ ಆಗಿಲ್ಲ' ಎಂದ ಕಾಂಗ್ರೆಸ್ ಶಾಸಕ ಡಾ. ಜಿ. ಪರಮೇಶ್ವರ ಹೇಳಿದರು. 'ಬಿಜೆಪಿಯಿಂದ ಮುಸಲ್ಮಾನರನ್ನು ದೂರ ಇಡುವ ಪ್ರಯತ್ನದಲ್ಲಿ ನೀವು ಯಶಸ್ವಿಯಾಗಿದ್ದೀರಿ, ಅವರು ಬಿಜೆಪಿ ಬಗ್ಗೆ ಹೊಂದಿರುವ ಭ್ರಮೆಯಿಂದ ಹೊರಬಂದಾಗ ಅವರಿಗೂ ಟಿಕೆಟ್ ಸಿಗುತ್ತದೆ' ಎಂದ ಸಚಿವ ಕೆ.ಎಸ್ ಈಶ್ವರಪ್ಪ ಉತ್ತರಿಸಿದರು.












Click it and Unblock the Notifications