ಚರ್ಚ್ನಲ್ಲಿ ಪಾದ್ರಿ ಸಾವು : ಆತ್ಮಹತ್ಯೆಯೋ, ಕೊಲೆಯೋ?
ಚಾಮರಾಜನಗರ, ಏಪ್ರಿಲ್ 14 : ಪಾದ್ರಿಯೊಬ್ಬರು ಚರ್ಚ್ನ ಆವರಣದಲ್ಲಿರುವ ಅತಿಥಿ ಗೃಹದಲ್ಲಿ ನೇಣು ಬಿಗಿದು ಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಾಮರಾಜನಗರದ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಪಿ.ಜಿ.ಪಾಳ್ಯದಲ್ಲಿ ನಡೆದಿದೆ.
ಪಿ.ಜಿ.ಪಾಳ್ಯದ ಚರ್ಚ್ನಲ್ಲಿ ಪಾದ್ರಿ ಆಗಿದ್ದ ರಾಜಕಣ್ಣು ಆತ್ಮಹತ್ಯೆ ಮಾಡಿಕೊಂಡವರು. ಇವರು ಮೂಲತಃ ಪ್ರಕಾಶಪಾಳ್ಯದವರಾಗಿದ್ದು ಕಳೆದ 20 ವರ್ಷಗಳಿಂದ ಪಾದ್ರಿ ಆಗಿ ಸೇವೆ ಸಲ್ಲಿಸುತ್ತಿದ್ದರು. ಕಳೆದ ವರ್ಷವಷ್ಟೆ ಕೊಳ್ಳೇಗಾಲ ತಾಲೂಕಿನ ಪಿ.ಜಿ.ಪಾಳ್ಯದಲ್ಲಿರುವ ಚರ್ಚ್ಗೆ ಪಾದ್ರಿ ಆಗಿ ನಿಯೋಜನೆಗೊಂಡಿದ್ದರು.
ಎಂದಿನಂತೆ ಕಾರ್ಯನಿರ್ವಹಿಸಿದ್ದ ಅವರು ಮಂಗಳವಾರ ರಾತ್ರಿ ಚರ್ಚ್ನ ಆವರಣದಲ್ಲಿರುವ ಅತಿಥಿಗೃಹದಲ್ಲಿ ತಂಗಿದ್ದರು. ಬುಧವಾರ ಬೆಳಿಗ್ಗೆ ಅವರ ಸಹಾಯಕರು ಕಾಫಿ ನೀಡಲೆಂದು ಅತಿಥಿಗೃಹಕ್ಕೆ ತೆರಳಿ ಕರೆದಿದ್ದಾರೆ. ಯಾವುದೇ ಪ್ರತಿಕ್ರಿಯೆ ಬಾರದಿದ್ದಾಗ ಬಾಗಿಲು ತೆರೆದು ನೋಡಿದ್ದಾರೆ. ಸೀಲಿಂಗ್ ಫ್ಯಾನ್ಗೆ ನೇಣು ಬಿಗಿದುಕೊಂಡು ಪಾದ್ರಿ ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡುಬಂದಿದೆ. ಕೂಡಲೇ ಇತರರಿಗೆ ಮಾಹಿತಿ ನೀಡಿದ್ದಾರೆ. [ಅಪ್ರಾಪ್ತೆ ಮೇಲೆ ರೇಪ್, ಕೇರಳದ ಪಾದ್ರಿಗೆ 40 ವರ್ಷ ಜೈಲು]
ಘಟನೆ ಸುದ್ದಿ ತಿಳಿಯುತ್ತಿದ್ದಂತೆ ಮೈಸೂರು ಕ್ರೈಸ್ತ ಧರ್ಮಗುರು ಥಾಮಸ್ ಪಿಳೈ ಆಗಮಿಸಿ, ಮೃತದೇಹವನ್ನು ಪರಿಶೀಲಿಸಿ, ಕ್ರೈಸ್ತ ಧರ್ಮದ ಪ್ರಕಾರ ಪಂಚನಾಮೆ ಮಾಡಿದರು.
ಆತ್ಮಹತ್ಯೆಯಲ್ಲ ಕೊಲೆ : ಪಾದ್ರಿ ರಾಜಕಣ್ಣು ಕುಟುಂಬದವರು ಇದು ಆತ್ಮಹತ್ಯೆಯಲ್ಲ ಉದ್ದೇಶಿತ ಕೊಲೆಯಾಗಿದ್ದು, ಪ್ರಕರಣದ ಬಗ್ಗೆ ತನಿಖೆಯಾಗಬೇಕೆಂದು ಒತ್ತಾಯಿಸಿದ್ದಾರೆ. ಮೃತ ದೇಹವನ್ನು ಸಮೀಪದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಶವ ಪರೀಕ್ಷೆ ನಡೆಸಲಾಗಿದ್ದು ಕ್ರೈಸ್ತಧರ್ಮದ ವಿಧಿವಿಧಾನದಂತೆ ಅಂತ್ಯಕ್ರಿಯೆ ನೆರವೇರಿಸಲಾಗಿದೆ. ಹನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಬ್ ಇನ್ಸ್ಪೆಕ್ಟರ್ ಸಂತೋಷ್ ಮುಂದಿನ ಕ್ರಮ ಕೈಗೊಂಡಿದ್ದಾರೆ. [ಮಾದೇವಮ್ಮನ ಲಿವಿಂಗ್ ಟುಗೆದರ್ ಸಂಸಾರ!]