ಸಿದ್ದರಾಮಯ್ಯ ಸುತ್ತ ಗಿರಕಿ ಹೊಡೆಯುತ್ತಿರುವ ಕುಮಾರಸ್ವಾಮಿ ಭವಿಷ್ಯ
Recommended Video
ಎಚ್ ಡಿ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರಕಾರ ಅಧಿಕಾರಕ್ಕೆ ಬಂದ ದಿನದಿಂದ ಇಂದಿನವರೆಗೆ, ಸರಕಾರಕ್ಕೆ ಏನು ಅಭದ್ರತೆ ಕಾಡುತ್ತಿದೆಯೋ ಅದಕ್ಕೆ ಸಿದ್ದರಾಮಯ್ಯನವರ 'ಕೈ'ವಾಡವೇ ಕಾರಣ ಎನ್ನುವ ಗುಸುಗುಸು ಸುದ್ದಿ ಹರಿದಾಡುತ್ತಲೇ ಇದೆ. ಈಗ ಅದನ್ನು ಜೆಡಿಎಸ್ ಮುಖಂಡರು ಬಹಿರಂಗವಾಗಿ ಒಪ್ಪಿಕೊಳ್ಳುತ್ತಿದ್ದಾರೆ.
ಲೋಕಸಭಾ ಚುನಾವಣಾ ದಿನಾಂಕ ಘೋಷಣೆಯಾದ ನಂತರ, ಪ್ರಮುಖವಾಗಿ ನಾಲ್ಕು ಕ್ಷೇತ್ರಗಳಲ್ಲಿನ ಜೆಡಿಎಸ್-ಕಾಂಗ್ರೆಸ್ ಮುಖಂಡರ ಹೊಂದಾಣಿಕೆಯ ಕೊರತೆ, ಫಲಿತಾಂಶ ಹೊರಬೀಳಲು ಇನ್ನೇನು ಎರಡು ವಾರ ಇದೆ ಎಂದಾಗ, ದಿನದಿಂದ ದಿನಕ್ಕೆ ಉಲ್ಭಣಗೊಳ್ಳುತ್ತಿದೆ.
ಮಂಡ್ಯದಲ್ಲಿ ಕಾಂಗ್ರೆಸ್ ಮುಖಂಡರ ಮತ್ತು ಕಾರ್ಯಕರ್ತರ ಅಸಹಕಾರದಿಂದಾಗಿ, ಕಾಂಗ್ರೆಸ್ ಮತ್ತು ಜೆಡಿಎಸ್ ನಡುವಿನ ಅಪಸ್ವರ ಜಾಸ್ತಿಯಾಗುತ್ತಲೇ ಇದೆ. ಮೇ 23ರ ವರೆಗೆ ಯಾವುದೇ ಹೇಳಿಕೆಯನ್ನು ನೀಡಬಾರದು ಎಂದು ಯಡಿಯೂರಪ್ಪ ಬೇರೆ ಹೇಳಿರುವುದು, ಲೋಕಸಭಾ ಫಲಿತಾಂಶದ ನಂತರ ಸಮ್ಮಿಶ್ರ ಸರಕಾರದ ಭವಿಷ್ಯವೇನು ಎನ್ನುವ ಕುತೂಹಲ ಸಾರ್ವಜನಿಕ ವಲಯದಲ್ಲಿದೆ.
ಸಿದ್ದರಾಮಯ್ಯ ಬಯಸಿದಷ್ಟು ದಿನ ಮಾತ್ರ ಕುಮಾರಸ್ವಾಮಿ ಸರಕಾರದ ಆಯಸ್ಸು ಎನ್ನುವ ಕೆಲವು ಮುಖಂಡರ ಹೇಳಿಕೆಯನ್ನು ಅವಲೋಕಿಸುವುದಾದರೆ, ಸಮ್ಮಿಶ್ರ ಸರಕಾರದ ಭವಿಷ್ಯ ತೂಗೊಯ್ಯಾಲೆಯಲ್ಲಿದೆ. ಜೆಡಿಎಸ್ ಸಚಿವ ಸಿ ಎಸ್ ಪುಟ್ಟರಾಜು, ಸರಕಾರದ ಪತನಗೊಂಡರೆ ಅದಕ್ಕೆ ಸಿದ್ದರಾಮಯ್ಯನವರೇ ಹೊಣೆ ಎನ್ನುವ ಹೇಳಿಕೆಯನ್ನು ನೀಡಿದ್ದಾರೆ.

ಸಿದ್ದರಾಮಯ್ಯ ನಮ್ಮ ನಾಯಕ ಅವರು ಮತ್ತೆ ಸಿಎಂ ಆಗಬೇಕೆನ್ನುವುದು ನಮ್ಮ ಆಸೆ
ಸಿದ್ದರಾಮಯ್ಯ ನಮ್ಮ ನಾಯಕ ಅವರು ಮತ್ತೆ ಮುಖ್ಯಮಂತ್ರಿಯಾಗಬೇಕೆನ್ನುವುದು ನಮ್ಮ ಆಸೆ ಎನ್ನುವ ಅವರ ಆಪ್ತ ಕಾಂಗ್ರೆಸ್ ಮುಖಂಡರ ಹೇಳಿಕೆ, ಸಮ್ಮಿಶ್ರ ಸರಕಾರಕ್ಕೆ ಮುಜುಗರವನ್ನು ತಂದೊಡ್ಡುತ್ತಲೇ ಇದೆ. ಬಹಿರಂಗ ಹೇಳಿಕೆ ನೀಡಬಾರದು ಎನ್ನುವ ಕೆಪಿಸಿಸಿ ಅಧ್ಯಕ್ಷರ ಎಚ್ಚರಿಕೆಯ ನಂತರವೂ ಇದು ಮುಂದುವರಿಯುತ್ತಿರುವುದರಿಂದ ಕುಮಾರಸ್ವಾಮಿ ಸಿಟ್ಟಾಗಿದ್ದಾರೆ.

ಸಮ್ಮಿಶ್ರ ಸರಕಾರ ಪತನಗೊಂಡರೆ, ಅದಕ್ಕೆ ಸಿದ್ದರಾಮಯ್ಯನವರೇ ಕಾರಣ
ಇವೆಲ್ಲದರ ನಡುವೆ ಜೆಡಿಎಸ್ ಸಚಿವ ಮತ್ತು ಮಂಡ್ಯದ ಪ್ರಭಾವಿ ಮುಖಂಡ ಸಿ ಎಸ್ ಪುಟ್ಟರಾಜು ನೀಡಿರುವ ಹೇಳಿಕೆ ಕಾಂಗ್ರೆಸ್ಸಿಗರನ್ನು ಮತ್ತೆ ಕೆರಳಿಸಿದೆ. ಒಂದು ವೇಳೆ ಸಮ್ಮಿಶ್ರ ಸರಕಾರ ಪತನಗೊಂಡರೆ, ಅದಕ್ಕೆ ಸಿದ್ದರಾಮಯ್ಯನವರೇ ಕಾರಣ, ದೇವೇಗೌಡರ ಮೇಲಿನ ದ್ವೇಷದಿಂದ, ಸಿದ್ದರಾಮಯ್ಯ ಸರಕಾರ ಉರುಳಿಸುವ ಸ್ಕೆಚ್ ಅನ್ನು ಹಾಕುತ್ತಿದ್ದಾರೆಂದು ಪುಟ್ಟರಾಜು ಹೇಳಿದ್ದಾರೆ.

ಜಿ ಟಿ ದೇವೇಗೌಡ ಮತ್ತು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ವಿಶ್ವನಾಥ್
ಸಿದ್ದರಾಮಯ್ಯನವರ ವಿರುದ್ದ ಸಚಿವ ಜಿ ಟಿ ದೇವೇಗೌಡ ಮತ್ತು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ವಿಶ್ವನಾಥ್ ತಮ್ಮ ಆಕ್ರೋಶವನ್ನು ಸೂಕ್ಷ್ಮವಾಗಿ ಹೊರಹಾಕುತ್ತಲೇ ಇದ್ದಾರೆ. ಮೈಸೂರಿನಲ್ಲಿ ಕಾಂಗ್ರೆಸ್ ಸೋತರೆ ನಾವು ಹೊಣೆಯಲ್ಲ, ಕೆಲವು ಕಡೆ ಜೆಡಿಎಸ್ ಮತ ಬಿಜೆಪಿಗೆ ಹೋಗಿದೆ ಎಂದು ಜಿಟಿಡಿ ಬಹಿರಂಗವಾಗಿಯೇ ಹೇಳಿದ್ದರು. ಇದಕ್ಕೆ ಸಿದ್ದರಾಮಯ್ಯ ಕೂಡಾ ತಲೆದೂಗಿದ್ದರು. ಮೈತ್ರಿ ಸರಕಾರ ಪತನವಾದರೂ ಸಿದ್ದರಾಮಯ್ಯ ಸಿಎಂ ಆಗುವುದಿಲ್ಲ ಎಂದು ವಿಶ್ವನಾಥ್ ಹೇಳಿದ್ದಾರೆ.

ಚೆಲುವರಾಯಸ್ವಾಮಿ - ಸಿದ್ದರಾಮಯ್ಯ ಭೇಟಿ
ಇನ್ನು, ಚೆಲುವರಾಯಸ್ವಾಮಿ ಗುರುವಾರ (ಮೇ 9) ಸಿದ್ದರಾಮಯ್ಯನವರನ್ನು ಭೇಟಿಯಾಗಿದ್ದಾರೆ. ಕುಮಾರಸ್ವಾಮಿ ತನ್ನ ಚೇಷ್ಟೆಯನ್ನು ಬಿಡಬೇಕು, ಎಂಬತ್ತು ಶಾಸಕರನ್ನು ಹೊಂದಿರುವ ಕಾಂಗ್ರೆಸ್ ಪಕ್ಷಕ್ಕೆ ಅವರು ಬುದ್ದಿಹೇಳಲು ಬರಬಾರದು, ನಮ್ಮ ನಾಯಕ ಸಿದ್ದರಾಮಯ್ಯ, ಅದರಲ್ಲಿ ಮುಚ್ಚುಮರೆಯೇನೂ ಇಲ್ಲ ಎಂದು ಚೆಲುವರಾಯಸ್ವಾಮಿ ಹೇಳಿರುವುದು, ಸರಕಾರದ ಭವಿಷ್ಯದ ವಿಚಾರದಲ್ಲಿ ಮತ್ತಷ್ಟು ಗೊಂದಲಕ್ಕೀಡುಮಾಡಿದೆ.

ಸಿದ್ದರಾಮಯ್ಯ ಸುತ್ತ ಗಿರಕಿ ಹೊಡೆಯುತ್ತಿರುವ ಕುಮಾರಸ್ವಾಮಿ ಭವಿಷ್ಯ
ಪರದೆಯ ಹಿಂದೆ ಹಲವು ರಾಜಕೀಯ ಬೆಳವಣಿಗೆ ನಡೆಯುತ್ತಿರುವುದು ನಿಜ, ಅದು ಮೇ 23ರ ನಂತರ ಹೊರಬರುತ್ತೋ ಅಥವಾ ಅದಕ್ಕೆ ಮುನ್ನವೊ ಗೊತ್ತಾಗಬೇಕಷ್ಟೇ.. ಸಮ್ಮಿಶ್ರ ಸರಕಾರವನ್ನು ಮತ್ತೆ ಬಿಜೆಪಿ ಅಲುಗಾಡಿಸಲು ನೋಡುತ್ತೋ ಅಥವಾ ಜೆಡಿಎಸ್-ಕಾಂಗ್ರೆಸ್ ನಡುವಿನ ಶೀತಲ ಸಮರ ಸ್ಫೋಟಗೊಂಡು ತಾನಾಗಿಯೇ ಸರಕಾರ ಅಲುಗಾಡುತ್ತೋ ಅದು ಸದ್ಯದಲ್ಲೇ ಗೊತ್ತಾಗಲಿದೆ. ಒಂದಂತೂ ಸತ್ಯ, ಕುಮಾರಸ್ವಾಮಿ ಭವಿಷ್ಯ ಸಿದ್ದರಾಮಯ್ಯ ಸುತ್ತ ಗಿರಕಿ ಹೊಡೆಯುತ್ತಿದೆ.












Click it and Unblock the Notifications