ರೈತರ ಪ್ರತಿಭಟನೆ: ಕರ್ನಾಟಕದ ಜಿಲ್ಲೆಗಳ ಅಪ್ಡೇಟ್ಸ್
ಕರ್ನಾಟಕ, ಫೆಬ್ರವರಿ 6: ಕೇಂದ್ರ ಸರ್ಕಾರದ ಮೂರು ಹೊಸ ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೇಶದಾದ್ಯಂತ ಹಮ್ಮಿಕೊಂಡಿರುವ ರೈತ ಹೋರಾಟಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ರೈತರು ಇಂದು ಮೂರು ಗಂಟೆಗಳ ಕಾಲ ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳನ್ನು ಬಂದ್ ಮಾಡಿ ಪ್ರತಿಭಟಿಸಿದರು.
ದೇಶವ್ಯಾಪಿ ಹಮ್ಮಿಕೊಂಡಿರುವ ರೈತ ಹೋರಾಟಕ್ಕೆ ಕರ್ನಾಟಕದಲ್ಲಿಯೂ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿದೆ. ರಾಜಧಾನಿ ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ರೈತರ ಹೆದ್ದಾರಿ ಬಂದ್ ಮಾಡಿ ಕೃಷಿ ಕಾಯ್ದೆ ಹಾಗೂ ಕೇಂದ್ರ ಸರ್ಕಾರದ ಘೋಷಣೆ ಕೂಗಿದರು.
ಹಲವೆಡೆ ಹೆದ್ದಾರಿ ತಡೆದು ಪ್ರತಿಭಟನೆ: ಯಲಹಂಕದಲ್ಲಿ ಪ್ರತಿಭಟನಾಕಾರರ ಬಂಧನ
ಚಿತ್ರದುರ್ಗ ವರದಿ
ಚಿತ್ರದುರ್ಗದಲ್ಲಿ ಆರು ಕಡೆ ರಾಷ್ಟ್ರೀಯ ಹೆದ್ದಾರಿ ತಡೆದು ರೈತರು ಪ್ರತಿಭಟನೆ ನಡೆಸಿದರು. ಜಿಲ್ಲೆಯ ಚಳ್ಳಕೆರೆ ಪಟ್ಟಣದ ನಾಯಕನಹಟ್ಟಿ ಕ್ರಾಸ್ ಬಳಿ ರೈತರಿಂದ ರಸ್ತೆ ತಡೆ ನಡೆಸಲಾಯಿತು. ರೈತ ಸಂಘದ ತಾಲೂಕು ಅದ್ಯಕ್ಷ ರೆಡ್ಡಿಹಳ್ಳಿ ವೀರಣ್ಣ ನೇತೃತ್ವದಲ್ಲಿ ಧರಣಿ ನಡೆಸಿದರು.
ರೈತರಿಂದ ರಸ್ತೆ ತಡೆ ಹಿನ್ನೆಲೆ ಸಂಚಾರ ಅಸ್ತವ್ಯಸ್ತಗೊಂಡಿದ್ದು, ರಾಷ್ಟ್ರೀಯ ಹೆದ್ದಾರಿ 150ಎ ತಡೆದು ರೈತರ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಅದೇ ರೀತಿ ಹಿರಿಯೂರಿನಲ್ಲಿ ರಾಷ್ಟ್ರೀಯ ಹೆದ್ದಾರಿ 4 ತಡೆದು ಕೃಷಿ ಕಾಯ್ದೆಗಳನ್ನು 150ಕ್ಕೂ ಹೆಚ್ಚು ರೈತರು ವಿರೋಧಿಸಿದರು.
ಚಿಕ್ಕಮಗಳೂರು ವರದಿ
ಕಾಫಿನಾಡು ಚಿಕ್ಕಮಗಳೂರಿನಲ್ಲೂ ಹೆದ್ದಾರಿ ತಡೆದು ರೈತರಿಂದ ಪ್ರತಿಭಟನೆ ನಡೆಸಲಾಯಿತು. ಚಿಕ್ಕಮಗಳೂರು ಹೊರವಲಯದ ಹಿರೇಮಗಳೂರು ಸಮೀಪ ರೈತರಿಂದ ಧರಣಿ ಹಮ್ಮಿಕೊಳ್ಳಲಾಗಿದೆ. ರಸ್ತೆ ಮೇಲೆ ಕುಳಿತು ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆಯಲ್ಲಿ ನೂರಕ್ಕೂ ಹೆಚ್ಚು ರೈತರು ಭಾಗಿಯಾಗಿದ್ದು, ನೂತನ ಕೃಷಿ ಕಾಯ್ದೆಯನ್ನು ರದ್ದು ಮಾಡುವಂತೆ ಆಗ್ರಹಿಸಿದರು. ಪ್ರತಿಭಟನೆ ಹಿನ್ನೆಲೆ ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ರಾಮನಗರ ವರದಿ
ರೈತ ವಿರೋಧಿ ನೀತಿ ಖಂಡಿಸಿ ಕೇಂದ್ರ ಸರ್ಕಾರದ ವಿರುದ್ಧ ರೈತರಿಂದ ಪ್ರತಿಭಟನೆ ಮಾಡಲಾಗಿದೆ. ರಾಮನಗರ ಎಪಿಎಂಸಿ ಬಳಿಯಿಂದ ಹೋರಾಟ ಆರಂಭವಾಗಿ, ರಾಷ್ಟ್ರೀಯ ಹೆದ್ದಾರಿ 275 ತಡೆಯಲಾಯಿತು. ರೈತರ ಹೋರಾಟಕ್ಕೆ ಟೊಯೋಟಾ ಕಾರ್ಮಿಕರು ಬೆಂಬಲ ನೀಡಿದ್ದು, ಪ್ರತಿಭಟನೆಯಲ್ಲಿ ನೂರಾರು ರೈತರು ಭಾಗಿಯಾಗಿದ್ದರು. ಇದೇ ವೇಳೆ ಬೆಂಗಳೂರು-ಮೈಸೂರು ಹೆದ್ದಾರಿ ತಡೆದು ರೈತರು ಪ್ರತಿಭಟನೆ ಮಾಡಿದ್ದು, ರಸ್ತೆ ತಡೆ ಹಿನ್ನೆಲೆಯಲ್ಲಿ ವಾಹನಗಳಿಗೆ ಪೊಲೀಸ್ ಇಲಾಖೆ ಬದಲಿ ವ್ಯವಸ್ಥೆ ಮಾಡಿದೆ.
ದಾವಣಗೆರೆ ವರದಿ
ರೈತ ವಿರೋಧಿ 3 ಕಾಯ್ದೆಗಳ ವಿರುದ್ಧ ದೆಹಲಿಯಲ್ಲಿ ನಡೆಯುತ್ತಿರುವ ರೈತ ಹೋರಾಟಕ್ಕೆ ದಾವಣಗೆರೆ ಜಿಲ್ಲಾ ಕಿಸಾನ್ ಕಾಂಗ್ರೆಸ್ ಬೆಂಬಲ ವ್ಯಕ್ತಪಡಿಸಿ ಇಂದು ಪ್ರತಿಭಟನೆ ನಡೆಸಿತು. ಕಿಸಾನ್ ಕಾಂಗ್ರೆಸ್ ಅಧ್ಯಕ್ಷರಾದ ಬಸವರಾಜು ವಿ ಶಿವಗಂಗಾ ನೇತೃತ್ವದಲ್ಲಿ ರಕ್ತ ಪತ್ರ ಚಳುವಳಿ ಮೂಲಕ ರೈತರಿಗೆ ಬೆಂಬಲ ಸೂಚಿಸಲಾಯಿತು. ಕಿಸಾನ್ ಕಾಂಗ್ರೆಸ್ ಕಾರ್ಯಕರ್ತರು ರಕ್ತದಲ್ಲಿ ಪತ್ರ ಬರೆದು ಪ್ರಧಾನಮಂತ್ರಿಗಳಿಗೆ ಕಳುಹಿಸಲಾಯಿತು. ಭೂ ಸುಧಾರಣೆ, ಎಪಿಎಂಸಿ ಹಾಗೂ ವಿದ್ಯುತ್ ಕಾಯ್ದೆಗಳನ್ನು ಹಿಂಪಡೆಯಬೇಕೆಂದು ರಕ್ತದಲ್ಲಿ ಪತ್ರ ಬರೆಯುವ ಮೂಲಕ ಒತ್ತಾಯ ಮಾಡಲಾಯಿತು.
ಕೋಲಾರ ವರದಿ
ಕೋಲಾರದಲ್ಲಿಯೂ ರೈತ ಮುಖಂಡರಿಂದ ರಸ್ತೆ ತಡೆ ನಡೆಸಲಾಗಿದ್ದು, ಕೋಲಾರ-ಬಂಗಾರಪೇಟೆ ರಾಜ್ಯ ಹೆದ್ದಾರಿ ತಡೆದು ಆಕ್ರೋಶ ವ್ಯಕ್ತಪಡಿಸಿದರು. ಕೇಂದ್ರ ಸರ್ಕಾರದ ಭೂ ಸುಧಾರಣೆ ಕಾಯ್ದೆ ವಿರೋಧಿಸಿ ಧಿಕ್ಕಾರ ಕೂಗಿದರು. ಕೇಂದ್ರ ಸರ್ಕಾರ ನಮ್ಮನ್ನು 7 ವರ್ಷಗಳಿಂದ ಹತ್ತಿಕ್ಕುತ್ತಿದೆ. ಕೋಲಾರದಲ್ಲಿ ರಸ್ತೆ ತಡೆ ಆರಂಭವಾಗಿದ್ದು, ಕೇಂದ್ರ ಸರ್ಕಾರ ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯುವಂತೆ ರೈತರ ಪ್ರತಿಭಟಿಸಿದರು.
ಕೋಲಾರದ ರಾ.ಹೆದ್ದಾರಿ 75ರ ವಡೂರು ಗೇಟ್ ಬಳಿ ರಸ್ತೆ ತಡೆಯನ್ನು ರೈತ ಸಂಘಟನೆಗಳಿಂದ ಮಾಡಲಾಯಿತು. ರಾ.ಹೆದ್ದಾರಿ 75ರ ವಡೂರು ಗೇಟ್ ಬಳಿ ರೈತರು ರಸ್ತೆ ತಡೆ ನಡೆಸಿದರು. ಸ್ಥಳದಲ್ಲಿ ನೂರಾರು ಪೊಲೀಸರು ನಿಯೋಜನೆ ಮಾಡಿದ್ದು, ಟ್ರಾಫಿಕ್ ಜಾಮ್ ಉಂಟಾಗದಂತೆ ಪೊಲೀಸ್ ಭದ್ರತೆ ಒದಗಿಸಲಾಗಿದೆ. ಬಲವಂತವಾಗಿ ರಸ್ತೆ ತಡೆ ಮಾಡಿದರೆ ಬಂಧಿಸುವ ಸಾಧ್ಯತೆ ಇದ್ದು, ರೈತ ಸಂಘದೊಟ್ಟಿಗೆ ಪ್ರಗತಿಪರ ಸಂಘಟನೆಗಳು ಭಾಗಿಯಾಗಿವೆ.
ಕೋಲಾರ ರಾ.ಹೆ 75ರಲ್ಲಿ ಹೆಚ್ಚಿನ ಪೊಲೀಸ್ ಭದ್ರತೆ ಒದಗಿಸಿದ್ದು, 4 ಸಿಪಿಐ, 10 ಪಿಎಸ್ಐ ಸೇರಿದಂತೆ ಸುಮಾರು 200 ಜನ ಪೊಲೀಸರ ನಿಯೋಜನೆ ಮಾಡಲಾಗಿದೆ. ಸ್ಥಳದಲ್ಲಿ 4 KSRP ತುಕಡಿ, ಮೂರು KSRTC ಬಸ್ ಬಳಕೆ ಮಾಡಲಾಗಿದೆ. ನಂತರ ಕೋಲಾರದಲ್ಲಿ ಹೆದ್ದಾರಿ ತಡೆ ಮುಕ್ತಾಯ ಮಾಡಲಾಯಿತು. ಪೊಲೀಸರ ಒತ್ತಾಯಕ್ಕೆ ಪ್ರತಿಭಟನಾಕಾರರು ಮಣಿದರು. ರಸ್ತೆ ತಡೆಯನ್ನು ಹಿಂಪಡೆದರು.
ಶಿವಮೊಗ್ಗ ವರದಿ
ರೈತ
ವಿರೋಧಿ
ಕೃಷಿ
ಕಾಯ್ದೆಗಳನ್ನು
ಸರ್ಕಾರ
ರದ್ದುಗೊಳಿಸಬೇಕು
ಎಂದು
ಆಗ್ರಹಿಸಿ
ಶಿವಮೊಗ್ಗದಲ್ಲೂ
ರೈತರು
ಹೆದ್ದಾರಿ
ತಡೆದ
ಪ್ರತಿಭಟನೆ
ನಡೆಸಿದರು.
ಕೇಂದ್ರ
ಸರ್ಕಾರ
ಕಾಯ್ದೆಗಳನ್ನು
ಹಿಂಪಡೆಯಬೇಕು
ಎಂದು
ಆಗ್ರಹಿಸಿದರು.
ಗಾಡಿಕೊಪ್ಪದಲ್ಲಿ ಸಾಗರ ರಸ್ತೆಯಲ್ಲಿ ಹೆದ್ದಾರಿ ತಡೆ ಚಳವಳಿ ನಡೆಸಲಾಯಿತು. ಸುಮಾರು ಒಂದು ಗಂಟೆ ಚಳವಳಿ ನಡೆಯಿತು. ದೆಹಲಿಯಲ್ಲಿ ರೈತರು ನಡೆಸುತ್ತಿರುವ ಚಳವಳಿಗೆ ಬೆಂಬಲವಾಗಿ ಶಿವಮೊಗ್ಗ ಜಿಲ್ಲೆಯಲ್ಲೂ ಹೆದ್ದಾರಿ ತಡೆ ನಡೆಯುತ್ತಿದೆ. ಕೇಂದ್ರ ಸರ್ಕಾರ ಹಠಮಾರಿ ಧೋರಣೆ ಕೈಬಿಟ್ಟು, ಕಾಯ್ದೆಗಳನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು.
ಮೈಸೂರು ವರದಿ
ಕೇಂದ್ರ ಸರ್ಕಾರದ ಕೃಷಿ ಕಾಯ್ದೆ ವಿರೋಧಿಸಿ ರೈತರು ನಡೆಸುತ್ತಿರುವ ಹೆದ್ದಾರಿ ಬಂದ್ ಯಶಸ್ವಿಯಾಗಿದೆ. ಮೈಸೂರಿನ ಬೆಂಗಳೂರು ಮತ್ತು ಊಟಿ ರಾಷ್ಟ್ರೀಯ ಹೆದ್ದಾರಿ ತಡೆದ ರೈತರು, ಅಲ್ಲೇ ಅಡುಗೆ ಮಾಡಿ ಊಟ ಮಾಡಲು ಮುಂದಾದರು. ರಸ್ತೆಯಲ್ಲಿ ಅಡುಗೆ ಮಾಡಲು ರೈತರು ಮುಂದಾದರೂ, ಅಡುಗೆ ಮಾಡಲು ಪೊಲೀಸರು ಅನುಮತಿ ನಿರಾಕರಿಸಿದರು. ಮೈಸೂರಿನ ನಂಜನಗೂಡು ರಸ್ತೆಯ ಎಪಿಎಂಸಿ ರಿಂಗ್ ರೋಡ್ನಲ್ಲಿ ಈ ಘಟನೆ ನಡೆದಿದೆ.