ಅಂಬಿಯಣ್ಣನ ಆರೋಗ್ಯಕ್ಕಾಗಿ ಪೂಜೆ, ಹೋಮ-ಹವನ
ಮಂಡ್ಯ, ಫೆ.23: ಕಲಿಯುಗ ಕರ್ಣ, ಸಕ್ಕರೆ ನಾಡಿನ ಅಕ್ಕರೆಯ ಅಣ್ಣ, ನಟ, ರಾಜಕಾರಣಿ, ಹಲವರ ಆಪ್ತಮಿತ್ರ ಅಮರನಾಥ್ ಅಲಿಯಾಸ್ ಅಂಬರೀಷ್ ಅವರ ಆರೋಗ್ಯ ಬಹುಬೇಗ ಸುಧಾರಣೆಗೊಳ್ಳಲಿ ಅವರು ಶೀಘ್ರ ಗುಣಮುಖವಾಗಲಿ ಎಂದು ಅಂಬರೀಷ್ ಅಭಿಮಾನಿಗಳು, ಕನ್ನಡ ಚಿತ್ರರಂಗದ ಗಣ್ಯರು ಹಾಗೂ ಸಾರ್ವಜನಿಕರು ರಾಜ್ಯದ ವಿವಿಧೆಡೆ ವಿಶೇಷ ಪೂಜೆ, ಹೋಮ-ಹವನ ಹಾಗೂ ಉರುಳು ಸೇವೆಗಳನ್ನು ನಡೆಸಿದ್ದಾರೆ.
ಬೆಂಗಳೂರಿನ ವಿಕ್ರಮ್ ಆಸ್ಪತ್ರೆಯಲ್ಲಿ ಶ್ವಾಸಕೋಶ ಸೋಂಕಿನಿಂದ ಬಳಲುತ್ತಿರುವ ವಸತಿ ಸಚಿವ ಹಾಗೂ ಕನ್ನಡ ಚಿತ್ರರಂಗದ ಹಿರಿಯಣ್ಣ ಅಂಬರೀಷ್ ಅವರು ಕಳೆದ 2 ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಳೆದ ರಾತ್ರಿ ಅವರ ಆರೋಗ್ಯ ಸ್ಥಿತಿಯ ಬಗ್ಗೆ ಊಹಾಪೋಹಗಳು ಹೆಚ್ಚಿದ ಹಿನ್ನೆಲೆಯಲ್ಲಿ ಮಂಡ್ಯ ಸೇರಿದಂತೆ ರಾಜ್ಯದ ಉದ್ದಗಲಕ್ಕೂ ಅಭಿಮಾನಿಗಳು ವಿಶೇಷ ಪೂಜೆ, ಪುನಸ್ಕಾರಗಳ ಮೂಲಕ ಆರೋಗ್ಯ ಚೇತರಿಸಲೆಂದು ಪ್ರಾರ್ಥನೆ ಹೆಚ್ಚು ಮಾಡಿದ್ದಾರೆ. ಜತೆಗೆ ವಿಕ್ರಮ ಆಸ್ಪತ್ರೆ ಹಾಗೂ ಅಂಬರೀಷ್ ಪತ್ನಿ ಸುಮಲತಾ ಅವರು ಸುದ್ದಿಗೋಷ್ಠಿ ನಡೆಸಿ ಅಭಿಮಾನಿಗಳಿಗೆ ಬಲ ತುಂಬಿದ್ದಾರೆ [ಸುದ್ದಿಗೋಷ್ಠಿ ಮುಖ್ಯಾಂಶ ಇಲ್ಲಿ ಓದಿ]
ಮಂಡ್ಯದಲ್ಲಿ ಪೂಜೆ ಜೋರು: ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದ ಗಂಜಾಂನಲ್ಲಿರುವ ನಿಮಿಷಾಂಬ ದೇಗುಲದಲ್ಲಿ ಭಾನುವಾರ ಬೆಳಗಿನಿಂದಲೇ ವಿಶೇಷ ಪೂಜೆ ನಡೆಸಲಾಗಿದೆ. ಗಣಹೋಮ, ಮೃತ್ಯುಂಜಯ ಹೋಮ ಸೇರಿದಂತೆ ವಿವಿಧ ಪೂಜಾಕಾರ್ಯಗಳು ನೆರವೇರುತ್ತಿದ್ದು, ಅಂಬರೀಷ್ ಅವರ ಸೋದರಿ ಶೀಲಾ ಬೋರಯ್ಯ ಅವರೂ ವಿಶೇಷ ಪ್ರಾರ್ಥನೆಯಲ್ಲಿ ಪಾಲ್ಗೊಂಡಿದ್ದಾರೆ.

ನಿಮಿಷಾಂಬ ದೇಗುಲದಲ್ಲಿ ವೇದ ಬ್ರಹ್ಮ ಡಾ.ಭಾನುಪ್ರಕಾಶ್ ಶರ್ಮಾ ನೇತೃತ್ವದಲ್ಲಿ ವಿಶೇಷ ಪೂಜೆ ಮತ್ತು ಹೋಮ ನಡೆಯುತ್ತಿದ್ದರೆ, ಮಂಡ್ಯದ ಗಣಪತಿ ದೇಗುಲದಲ್ಲಿ ವೇದ ಬ್ರಹ್ಮ ವಿಶ್ವೇಶ್ವರಯ್ಯ ನೇತೃತ್ವದಲ್ಲಿ ವಿಶೇಷ ಪೂಜೆ ಮತ್ತು ಹವನಗಳು ಜರುಗಿಸಲಾಗಿದೆ.
ಮಂಡ್ಯದ ಕಾಳಿಕಾಂಬ ದೇಗುಲದಲ್ಲಿ ದೀಕ್ಷಿತ್ ನೇತೃತ್ವದ ಜ್ಯೋತಿಷಿಗಳ ತಂಡ ಹೋಮ ಮತ್ತು ವಿಶೇಷ ಪೂಜೆಗಳನ್ನು ನಡೆಸುತ್ತಿದ್ದಾರೆ. ಮಂಡ್ಯ ನಗರದ ಕೊಳಚೆ ನಿವಾಸಿಗಳು ತಮ್ಮ ಬಡಾವಣೆಯಲ್ಲಿ ಬರುವ ಮಾರಿಗುಡಿಗೆ ತಾವೇ ಅಭಿಷೇಕ ನೆರವೇರಿಸಿ ಅಂಬರೀಷ್ ಅವರು ಬೇಗ ಗುಣಮುಖರಾಗಲೆಂದು ಪ್ರಾರ್ಥಿಸಿದ್ದಾರೆ.
ಮಂಡ್ಯ ಜಿಲ್ಲೆಯ ಎಲ್ಲಾ ತಾಲೂಕು ಮತ್ತು ಹೋಬಳಿ ಕೇಂದ್ರಗಳಲ್ಲೂ ಪಕ್ಷಾತೀತವಾಗಿ ಅಭಿಮಾನಿಗಳು ಅಂಬಿ ಚೇತರಿಕೆಗಾಗಿ ನಡೆಯುತ್ತಿರುವ ವಿಶೇಷ ಪೂಜೆ, ಹೋಮ-ಹವನ ಮತ್ತು ಪ್ರಾರ್ಥನೆಗಳಲ್ಲಿ ಪಾಲ್ಗೊಂಡಿದ್ದಾರೆ.[ರೆಬೆಲ್ ಸ್ಟಾರ್ ಅಂಬರೀಷ್ ಅಪರೂಪದ ಚಿತ್ರಗಳ ಗ್ಯಾಲರಿ]
ಅಂಬರೀಷ್ ಅವರ ಅನಾರೋಗ್ಯ ಜಿಲ್ಲೆಯ ಜನರಲ್ಲಿ ಆತಂಕ ಮೂಡಿಸಿದ್ದು, ಇಂದು ಬೆಳಗ್ಗಿನಿಂದಲೇ ವಿವಿಧ ರೂಪದಲ್ಲಿ ಅವರ ಆರೋಗ್ಯ ಚೇತರಿಕೆಗೆ ಪ್ರಾರ್ಥನೆಗಳು ನಡೆಯುತ್ತಿವೆ. ಇನ್ನು ರಾಯಚೂರು, ಗದಗ ಸೇರಿದಂತೆ ರಾಜ್ಯದ ಉದ್ದಗಲಕ್ಕೂ ಅಂಬರೀಷ್ ಅಭಿಮಾನಿಗಳು ತಮ್ಮ ನೆಚ್ಚಿನ ನಟ ಹಾಗೂ ಸಚಿವರ ಆರೋಗ್ಯ ಚೇತರಿಸಿಕೊಳ್ಳಲಿ ಎಂದು ವಿಶೇಷ ಪೂಜೆ, ಉರುಳು ಸೇವೆಗಳನ್ನು ನಡೆಸುತ್ತಿದ್ದಾರೆ. ಯಾದಗಿರಿಯ ವಿವೇಕಾನಂದ ನಗರದಲ್ಲಿರುವ ಸಾಯಿ ಮಂದಿರದಲ್ಲಿ ಇಂದು ಬೆಳಗಿನಿಂದಲೇ ಅಭಿಮಾನಿಗಳು ವಿಶೇಷ ಪೂಜೆಯಲ್ಲಿ ಪಾಲ್ಗೊಂಡಿದ್ದಾರೆ. ಮೈಸೂರಿನ ಚಾಮುಂಡೇಶ್ವರಿ ದೇಗುಲದಲ್ಲಿ ನಿರ್ಮಾಪಕ ಸಂದೇಶ್ ನಾಗರಾಜ್ ಅಭಿಮಾನಿ ಬಳಗದವರು ವಿಶೇಷ ಪೂಜೆ ಸಲ್ಲಿಸಿದರು.

ಗಣ್ಯರ ಭೇಟಿ : ಅಂಬರೀಷ್ ಅವರು ಚಿಕಿತ್ಸೆ ಪಡೆಯುತ್ತಿರುವ ಬೆಂಗಳೂರಿನ ವಿಕ್ರಮ್ ಆಸ್ಪತ್ರೆಗೆ ಕಳೆದ ರಾತ್ರಿಯಿಂದ ಚಲನಚಿತ್ರ ಹಾಗೂ ರಾಜಕೀಯ ಕ್ಷೇತ್ರದ ವಿವಿಧ ಗಣ್ಯರು ಭೇಟಿ ನೀಡಿ ಆರೋಗ್ಯದ ಬಗ್ಗೆ ಮಾಹಿತಿ ಪಡೆದುಕೊಂಡರು.
ವಿರೋಧ ಪಕ್ಷದ ನಾಯಕ ಜಗದೀಶ್ ಶೆಟ್ಟರ್, ಮಾಜಿ ಸಚಿವ ವಿ.ಸೋಮಣ್ಣ, ನಟ ಉಪೇಂದ್ರ, ಹಿರಿಯ ನಟ ದೊಡ್ಡಣ್ಣ ಸೇರಿದಂತೆ ಹಲವರು ಆಸ್ಪತ್ರೆಗೆ ಆಗಮಿಸಿದ್ದರು. ತೆಲುಗು ಚಿತ್ರ ನಟ ಮೋಹನ್ ಬಾಬು ಹಾಗೂ ಅವರ ಪುತ್ರ ಮಂಚು ಮನೋಜ್ ಅವರು ಆಗಮಿಸಿ ಅಭಿಮಾನಿಗಳಿಗೆ ಧೈರ್ಯವಾಗಿ ಇರುವಂತೆ ಕೇಳಿ ಕೊಂಡರು.
ಬೆಂಗಳೂರಿನತ್ತ ಅಭಿಷೇಕ್: ಈ ನಡುವೆ ತಮ್ಮ ತಂದೆಯವರ ಆರೋಗ್ಯದಲ್ಲಿ ಏರುಪೇರು ಉಂಟಾಗಿರುವ ಸುದ್ದಿ ತಿಳಿಯುತ್ತಿದ್ದಂತೆ ಲಂಡನ್ ನಲ್ಲಿ ಉನ್ನತ ವ್ಯಾಸಂಗ ಮಾಡುತ್ತಿರುವ ಅಂಬರೀಷ್ ಅವರ ಪುತ್ರ ಅಭಿಷೇಕ್ ಗೌಡ ಬೆಂಗಳೂರಿನತ್ತ ಪ್ರಯಾಣ ಬೆಳೆಸಿದ್ದಾರೆ. ಭಾನುವಾರ ರಾತ್ರಿ ಅಥವಾ ನಾಳೆ ಸಂಜೆ ವೇಳೆಗೆ ಅವರು ಬೆಂಗಳೂರು ತಲುಪಲಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.












Click it and Unblock the Notifications