BKS Verma; ಪ್ರಸಿದ್ಧ ಕಲಾವಿದ ಬಿಕೆಎಸ್ ವರ್ಮಾ ನಿಧನ
ಚಿತ್ರಕಲಾ ಲೋಕದ ಪ್ರಸಿದ್ಧ ಕಲಾವಿದ ಬಿಕೆಎಸ್ ವರ್ಮಾ ನಿಧನ ಹೊಂದಿದ್ದಾರೆ. ಹಲವಾರು ಗಣ್ಯರು ಕಲಾವಿದನ ಅಗಲಿಕೆಗೆ ಸಂತಾಪ ಸೂಚಿಸಿದ್ದಾರೆ.
ಬೆಂಗಳೂರು, ಫೆಬ್ರವರಿ 06; ಖ್ಯಾತ ಕಲಾವಿದ ಬಿಕೆಎಸ್ ವರ್ಮಾ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಅವರು ರಚನೆ ಮಾಡಿರುವ ಚಿತ್ರಗಳು ವಿಶ್ವಮಟ್ಟದಲ್ಲಿ ಪ್ರಸಿದ್ಧಿ ಪಡೆದಿವೆ.
ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದಿದ್ದ ಬಿಕೆಎಸ್ ವರ್ಮಾ (74) ಸೋಮವಾರ ಬೆಳಗ್ಗೆ ನಿಧನ ಹೊಂದಿದರು. ಅತ್ತಿಬೆಲೆ ಬಳಿಯ ಕರ್ನೂರಿನಲ್ಲಿ 1949ರಲ್ಲಿ ಬಿಕೆಎಸ್ ವರ್ಮಾ ಜನಿಸಿದ್ದರು.
1986ರಲ್ಲಿ ಮೊದಲ ಬಾರಿಗೆ ಬಿಕೆಎಸ್ ವರ್ಮಾ ರಚನೆ ಮಾಡಿದ ಏಕವ್ಯಕ್ತಿ ಕಲಾಕೃತಿಗಳ ಪ್ರದರ್ಶನ ನಡೆದಿತ್ತು. ರವಿವರ್ಮನ ಕಲಾಕೃತಿಗಳಿಂದ ಪ್ರೇರಣೆ ಪಡೆದು ಬಿಕೆಎಸ್ ವರ್ಮಾ ತೈಲವರ್ಣದ ಚಿತ್ರವನ್ನು ಬಿಡಿಸುತ್ತಿದ್ದರು.

ಬಿಕೆಎಸ್ ವರ್ಮಾ ಅವರು ಬಿಡಿಸಿದ ಭಾರತ ಮಾತೆ, ತಾಯಿ ಭುವನೇಶ್ವರಿ, ರಾಘವೇಂದ್ರ ಸ್ವಾಮಿ, ಈಶ್ವರನ ಕುಟುಂಬದ ಕಲಾಕೃತಿಗಳು ವಿಶ್ವಮಟ್ಟದಲ್ಲಿ ಜನಪ್ರಿಯವಾಗಿವೆ.
ನಟ ರಜನಿಕಾಂತ್, ದಿ. ಡಾ. ರಾಜ್ಕುಮಾರ್, ಅನೇಕ ಅಂತರಾಷ್ಟ್ರೀಯ ಕಲಾವಿದರು ಬಿಕೆಎಸ್ ವರ್ಮಾ ಅವರ ಕಲಾಕೃತಿಗಳನ್ನು ನೋಡಿ ಮೆಚ್ಚುಗೆ ಸೂಚಿಸಿದ್ದರು.
ಬಿಕೆಎಸ್ ವರ್ಮಾ ಅವರ ತಂದೆ ಕೃಷ್ಣಮಾಚಾರ್ಯರು ಸಂಗೀತಗಾರರು. ತಾಯಿ ಜಯಲಕ್ಷ್ಮೀ ಚಿತ್ರ ಕಲಾವಿದರಾಗಿದ್ದರು. ವರ್ಮಾ ಅವರ ಸಾಧನೆಗೆ ಕರ್ನಾಟಕ ಸರ್ಕಾರ ರಾಜ್ಯ ಲಲಿತಾಕಲಾ ಅಕಾಡೆಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ.
2011ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯ ಬಿಕೆಎಸ್ ವರ್ಮಾ ಅವರಿಗೆ ಗೌರವ ಡಾಕ್ಟರೇಟ್ ನೀಡಿತ್ತು. ಆರ್ಯಭಟ ಮತ್ತು ರಾಜೀವ್ ಗಾಂಧಿ ಪ್ರಶಸ್ತಿಗಳನ್ನು ಅವರು ಪಡೆದಿದ್ದರು.
ಸಚಿವರ ಸಂತಾಪ; ಉನ್ನತ ಶಿಕ್ಷಣ ಸಚಿವ ಡಾ. ಅಶ್ವಥ ನಾರಾಯಣ ಬಿಕೆಎಸ್ ವರ್ಮಾ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಸಚಿವರು ಟ್ವೀಟ್ನಲ್ಲಿ ಚಿತ್ರಕಲಾ ಲೋಕದ ಅವಿಸ್ಮರಣೀಯ ಕಲಾವಿದ ಶ್ರೀ ಬಿಕೆಎಸ್ ವರ್ಮಾ ಅವರ ನಿಧನದ ಸುದ್ದಿ ತಿಳಿದು ಮನಸ್ಸಿಗೆ ಅಪಾರ ದುಃಖವಾಯಿತು. ಚಿತ್ರಕಲೆಯನ್ನು ಜೀವನದ ಅವಿಭಾಜ್ಯ ಅಂಗವನ್ನಾಗಿ ಸ್ವೀಕರಿಸಿ, ಹೊಸಹೊಸ ಪ್ರಯೋಗಗಳ ಮೂಲಕ ಯುವ ಕಲಾವಿದರಿಗೆ ಪ್ರೇರಣೆಯಾಗಿರುವ ಬಿಕೆಎಸ್ ವರ್ಮಾ ಅವರ ಕಲ್ಪನಾಶಕ್ತಿಯನ್ನು ಕರುನಾಡು ಸದಾ ಸ್ಮರಿಸುತ್ತದೆ. ಓಂ ಶಾಂತಿ' ಎಂದು ಹೇಳಿದ್ದಾರೆ.












Click it and Unblock the Notifications