ರಾಜಕೀಯ ಪತನ: ಅಂಬರೀಶ್ ಗೆ ಮುಳುವಾದ 5 ಅಂಶಗಳು

ಬೆಂಗಳೂರು, ಜೂನ್ 22: ಬಿಜೆಪಿಗೆ ಬಂದ್ರೆ, ಅಂಬರೀಶ್ ಅವರಿಗೆ ಮಂಡ್ಯದಿಂದ ಸ್ಪರ್ಧಿಸಲು ಟಿಕೆಟ್, ಜೆಡಿಎಸ್ ಗೆ ಮರಳುವಂತೆ ಆಹ್ವಾನ ಎಂಬ ಸುದ್ದಿಗಳ ನಡುವೆ ರೆಬೆಲ್ ಸ್ಟಾರ್ ಅಂಬರೀಶ್ ಅವರ ಡೈಲಾಗ್ ಗಳ ನೆನಪು ಮಾಡಿಕೊಳ್ಳುತ್ತಾ ಮಂಡ್ಯದ ಗಂಡು ಅಂಬಿಯ ರಾಜಕೀಯವಾಗಿ ಈ ಸ್ಥಿತಿ ತಲುಪಲು ಪ್ರಮುಖ ಕಾರಣಗಳೇನು ಎಂಬುದನ್ನು ಓದಿರಿ....

ಸಿದ್ದರಾಮಯ್ಯ ಅವರು ಸಂಪುಟ ವಿಸ್ತರಣೆ ಮೂಲಕ ಜನಪ್ರಿಯ ಹಾಗೂ ಅನುಭವಿ ರಾಜಕಾರಣಿಗಳ ಬಂಡಾಯವನ್ನು ಎದುರಿಸುತ್ತಿದ್ದಾರೆ. ಮೈಸೂರು ಭಾಗದಲ್ಲಿ ಶ್ರೀನಿವಾಸ ಪ್ರಸಾದ್ ಹಾಗೂ ಮಂಡ್ಯದ ಅಂಬರೀಶ್ ಅವರ ಮುಂದಿನ ನಡೆ ಬಗ್ಗೆ ಸಹಜ ಕುತೂಹಲ ಎಲ್ಲರಿಗೂ ಇದ್ದೇ ಇದೆ.[ಅಂಬರೀಶ್ ಗೆ ಮಂಡ್ಯದಿಂದ ಸ್ಪರ್ಧಿಸಲು ಟಿಕೆಟ್]

ಸದ್ಯಕ್ಕೆ ಇಬ್ಬರು ಕೂಡಾ ಕಾಂಗ್ರೆಸ್ ತೊರೆಯುವ ಮಾತನಾಡಿಲ್ಲ, ಅಂಬರೀಶ್ ಅವರು ಸದ್ಯಕ್ಕೆ ಕಾಂಗ್ರೆಸ್ ನ ಪ್ರಾಥಮಿಕ ಸದಸ್ಯತ್ವ ಮಾತ್ರ ಉಳಿಸಿಕೊಂಡಿದ್ದರೆ, ಶ್ರೀನಿವಾಸ ಪ್ರಸಾದ್ ಅವರು ನಂಜನಗೂಡಿನ ಶಾಸಕರಾಗಿ ಉಳಿದಿದ್ದಾರೆ.

ಅಂಬರೀಶ್ ಶಾಸಕ ಸ್ಥಾನಕ್ಕೆ ರಾಜೀನಾಮೆ ಸ್ವೀಕಾರವಾದರೆ, ಮರು ಚುನಾವಣೆ ನಡೆಸಬೇಕಾಗುತ್ತದೆ, ಇದಕ್ಕೆ ಆರು ತಿಂಗಳ ಅವಕಾಶವಿರುತ್ತದೆ. ಆದರೆ, ಯಾವುದೇ ಪಕ್ಷದ ಪರ ನಿಂತರೂ ಕಾಂಗ್ರೆಸ್ ಗೆ ಹಿನ್ನಡೆಯಾಗುವುದರಲ್ಲಿ ಅನುಮಾನವೇ ಇಲ್ಲ. ಆದರೆ, ರಾಜಕೀಯವಾಗಿ ಅಂಬರೀಶ್ ಅವರಿಗೆ ಹಿನ್ನಡೆ ಉಂಟಾಗಲು ಕಾರಣವೇನು? ಮುಂದೆ ಓದಿ...

2013ರಿಂದಲೇ ಕಳೆಗುಂದಿದ ಅಂಬರೀಶ್ ನಡೆ

2013ರಿಂದಲೇ ಕಳೆಗುಂದಿದ ಅಂಬರೀಶ್ ನಡೆ

ಮಾಜಿ ಮುಖ್ಯಮಂತ್ರಿ ಎಸ್ಸೆಂ ಕೃಷ್ಣ ಅವರು ಪಕ್ಷದಲ್ಲಿ ಹಿಡಿತ ಹೊಂದಿದ್ದ ಕಾಲದಲ್ಲಿ ಮಂಡ್ಯ ಕೂಡಾ ಕಾಂಗ್ರೆಸ್ ಪರವಾಗಿ ಇತ್ತು. ಆದರೆ, 2013ರ ನಂತರ ಭಿನ್ನಮತ ಚಟುವಟಿಕೆಗಳು ಹೆಚ್ಚಾಯಿತು. ಏಳು ಅಸೆಂಬ್ಲಿ ಕ್ಷೇತ್ರಗಳಲ್ಲಿ ಐದರಲ್ಲಿ ಕಾಂಗ್ರೆಸ್ ಸೋಲು ಕಂಡಿತು. ಸಾಲದ್ದಕ್ಕೆ ನಗರ ಪಾಲಿಕೆ ಚುನಾವಣೆ ಕೂಡಾ ಕೈ ತಪ್ಪಿತು. 2014ರ ಲೋಕಸಭೆ ಚುನಾವಣೆ, 2015ರ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲೂ ಕಾಂಗ್ರೆಸ್ ಮ್ಯಾಜಿಕ್ ನಡೆಯಲಿಲ್ಲ.

ರಮ್ಯಾ ಸೋಲು, ಅಂಬರೀಶ್ ಗೆ ಮುಳುವಾಯಿತು

ರಮ್ಯಾ ಸೋಲು, ಅಂಬರೀಶ್ ಗೆ ಮುಳುವಾಯಿತು

ಅಂಬರೀಶ್ ಅವರು ರಮ್ಯಾ ಪರ ಪ್ರಚಾರ ನಡೆಸಿದರೂ, ಬೆಂಬಲಿಸಿದರೂ 2014ರಲ್ಲಿ ರಮ್ಯಾ ಅವರು ಜೆಡಿಎಸ್ ನ ಸಿಎಸ್ ಪುಟ್ಟರಾಜು ವಿರುದ್ಧ 5,518ಕ್ಕೂ ಅಧಿಕ ಮತಗಳ ಅಂತರದಿಂದ ಸೋಲು ಕಂಡರು. ಮಂಡ್ಯ ಸಿಎಂಸಿ ಸದಸ್ಯ ಅನಿಲ್ ಕುಮಾರ್ ಅವರು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿಗೆ ಅಂಬರೀಶ್ ವಿರುದ್ಧ ದೂರು ನೀಡಿ ಕ್ಯಾಬಿನೆಟ್ ನಿಂದ ಕಿತ್ತು ಹಾಕುವಂತೆ ಆಗ್ರಹಿಸಿದ್ದು , ಅನೇಕ ಕಡೆ ಅಂಬರೀಶ್ vs ರಮ್ಯಾ ಜಟಾಪಟಿ ಮುಂದುವರೆಯಿತು. ವಿಷಯ ಹೈಕಮಾಂಡ್ ಗೆ ಅರಗಿಸಿಕೊಳ್ಳಲು ಸಾಧ್ಯವಾಗಲಿಲ್ಲ.

ಜೆಡಿಎಸ್ ಗೆ ಪರೋಕ್ಷ ಬೆಂಬಲ

ಜೆಡಿಎಸ್ ಗೆ ಪರೋಕ್ಷ ಬೆಂಬಲ

ಜಾತಿಯಿಂದ ಒಕ್ಕಲಿಗರಾದರೂ, ಜೆಡಿಎಸ್ ನಿಂದ ಕಾಂಗ್ರೆಸ್ ಗೆ ಬಂದರೂ ಅಂಬರೀಶ್ ಎಂದೂ ರಾಜಕೀಯಕ್ಕೆ ಈ ಅಂಶಗಳನ್ನು ಬಳಸಿಕೊಂಡವರಲ್ಲ. ಆದರೆ, ಕಳೆದ ವರ್ಷ ಕಾಂಗ್ರೆಸ್ ಬೆಂಬಲಿತ ಬಿ ಸಿದ್ದರಾಜುರನ್ನು ಸಿಎಂಸಿ ಅಧ್ಯಕ್ಷ ಹುದ್ದೆಯಿಂದ ಕೆಳಗಿಳಿಸಲು ಜೆಡಿಎಸ್ ಗೆ ಅಂಬರೀಶ್ ಬೆಂಬಲ ನೀಡಿದ್ದರು ಎಂಬ ಮಾತಿದೆ.

ಈ ಬಗ್ಗೆ ಕೆಪಿಸಿಸಿ ವಕ್ತಾರ ಟಿಎಸ್ ಸತ್ಯಾನಂದ ಅವರು ಎಐಸಿಸಿ ಹಾಗೂ ಕೆಪಿಸಿಸಿಗೆ ಪುಟಗಟ್ಟಲೆ ದೂರು ಪತ್ರಗಳನ್ನು ಕಳಿಸಿದರು. ಉದ್ಯಮಿ ಅಮರಾವತಿ ಚಂದ್ರಶೇಖರ್ ಜತೆಗಿನ ಅಂಬರೀಶ್ ಗೆಳೆತನ ಕೂಡಾ ಹಲವರ ಕಣ್ಣು ಕುಕ್ಕಿದ್ದು ಸುಳ್ಳಲ್ಲ

ಅಂಬರೀಶ್ ಗೆ ಅನುಭವವಿದೆ, ಲಾಬಿ ಮಾಡಿ ಗೊತ್ತಿಲ್ಲ

ಅಂಬರೀಶ್ ಗೆ ಅನುಭವವಿದೆ, ಲಾಬಿ ಮಾಡಿ ಗೊತ್ತಿಲ್ಲ

ಕಾವೇರಿ ವಿವಾದದ ಹಿನ್ನಲೆಯಲ್ಲಿ 2007ರಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಆಡಳಿತದಲ್ಲಿ ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಸ್ಥಾನಕ್ಕೆ ಅಂಬರೀಶ್ ರಾಜೀನಾಮೆ ನೀಡಿದ್ದರು. ಮೂರು ಬಾರಿ ಸಂಸದ ಸ್ಥಾನ ಹಾಗೂ ಎರಡು ಬಾರಿ ಅಸೆಂಬ್ಲಿ ಕದನದಲ್ಲಿ ಸೋಲು ಕಂಡರೂ ಅಭಿಮಾನಿಗಳ ಪಾಲಿಗೆ 'ಸೋಲಿಲ್ಲದ ಸರದಾರ'. ಅಧಿಕಾರ ದಾಹ ಇಲ್ಲದಿದ್ದರೂ ಜನರಿಗಾಗಿ ಖಾತೆ ಉಳಿಸಿಕೊಳ್ಳಲು ಒಮ್ಮೆಯಾದರೂ ಆತ್ಮಾಭಿಮಾನ ತೊರೆದು ಸಿಎಂ ಸಿದ್ದರಾಮಯ್ಯ ಜತೆ ಮಾತನಾಡಬಹುದಿತ್ತು.

ರೈತರ ಸಮಸ್ಯೆ, ಖಾತೆ ನಿರ್ವಹಣೆಯಲ್ಲಿ ವಿಫಲ

ರೈತರ ಸಮಸ್ಯೆ, ಖಾತೆ ನಿರ್ವಹಣೆಯಲ್ಲಿ ವಿಫಲ

ಪದೇ ಪದೇ ಆರೋಗ್ಯದಲ್ಲಿ ಏರುಪೇರು ಉಂಟಾಗಿದ್ದರಿಂದ ಸೋರಗಿದರೂ ಮಂಡ್ಯದ ಗಂಡು ಎಂದೆಂದಿಗೂ ಮಂಡ್ಯದ ಪಾಲಿಗೆ ಮುತ್ತಿನ ಚೆಂಡು. ಆದರೆ, ರಾಜ್ಯದ ಇತರೆ ಜಿಲ್ಲೆಗಳಲ್ಲಿ ಅಂಬರೀಶ್ ನಟರಾಗಿ ಮಾತ್ರ ಪರಿಚಯವಿದೆ ಸಚಿವರು ಎಂದರೂ ತಿಳಿದಿದ್ದರೂ ಅವರ ಖಾತೆ ಬಗ್ಗೆ ಅರಿವಿಲ್ಲ. ಅಂಬರೀಶ್ ಅವರ ಜಿಲ್ಲಾ ಪ್ರವಾಸ ಪಟ್ಟಿ ಐದಾರು ಜಿಲ್ಲೆಗಳಿಗೆ ಮಾತ್ರ ಸೀಮತವಾಗಿದ್ದು, ವಸತಿ ಭಾಗ್ಯ ಎಲ್ಲರಿಗೂ ಕಲ್ಪಿಸಲು ಸೋತಿದ್ದು ಅಂಬರೀಶ್ ಗೆ ಮುಳುವಾಯಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+