Karnataka Dam Water Level: ಕೆಆರ್ಎಸ್, ಕಬಿನಿ, ಹೇಮಾವತಿ, ತುಂಗಾ, ಭದ್ರಾ ಡ್ಯಾಂಗಳ ನೀರಿನ ಮಟ್ಟ ತಿಳಿಯಿರಿ
ಕರ್ನಾಟಕದಲ್ಲಿ ಭಾರಿ ಮಳೆಯ ಪರಿಣಾಮ, ಡ್ಯಾಂಗಳಿಗೆ ಭಾರಿ ಪ್ರಮಾಣದ ನೀರು ಹರಿದು ಬರುತ್ತಿದೆ. ಕೆಲ ತಿಂಗಳ ಹಿಂದೆ ಪೂರ್ತಿ ಒಣಗಿ ಹೋಗಿದ್ದ ಡ್ಯಾಂಗಳಲ್ಲಿ ಈಗ ಭಾರಿ ನೀರು ತುಂಬಿಕೊಳ್ಳುತ್ತಿದ್ದು, ಅನ್ನದಾತ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ಅಷ್ಟೇ ಅಲ್ಲ ಸಿಟಿ ಮಂದಿಗೆ ಕೂಡ ಇದೀಗ ಕುಡಿಯುವ ನೀರಿನ ಸಮಸ್ಯೆ ಬಗೆಹರಿದಿದೆ! ಹಾಗಾದ್ರೆ ಇದೀಗ ಕೆಆರ್ಎಸ್, ಕಬಿನಿ, ಹೇಮಾವತಿ, ತುಂಗಾ, ಭದ್ರಾ & ಹಾರಂಗಿ ಡ್ಯಾಂ ಸೇರಿದಂತೆ ಯಾವ ಯಾವ ಜಲಾಶಯದಲ್ಲಿ ಎಷ್ಟಿದೆ ನೀರು? ಮಾಹಿತಿಗಾಗಿ ಮುಂದೆ ಓದಿ.
ಮುಂಗಾರು ಮಳೆ ಅಂದ್ರೆ ಕರ್ನಾಟಕ & ಕನ್ನಡಿಗರ ಪಾಲಿಗೆ ಜೀವಕಳೆ ಇದ್ದಂತೆ. ಯಾಕಂದ್ರೆ ಮುಂಗಾರು ಮಳೆ ಇಲ್ಲದೆ ಬದುಕೇ ಇಲ್ಲ. ಮುಂಗಾರು ಮಳೆ ಬರದೇ ಇದ್ದರೆ ನೀರು ಖಾಲಿ ಖಾಲಿ. ಹೀಗಿದ್ದಾಗ 2024ರ ಮುಂಗಾರು ಮಳೆ ಅಬ್ಬರಿಸುತ್ತಿದ್ದು, ಕರ್ನಾಟಕದ ಡ್ಯಾಂಗಳಲ್ಲಿ ಭಾರಿ ಪ್ರಮಾಣದ ನೀರು ಸಂಗ್ರಹ ಆಗುತ್ತಿದೆ. ಅದರಲ್ಲೂ ಕರ್ನಾಟಕದ ಕೆಆರ್ಎಸ್ ಸೇರಿ, ಕಬಿನಿ, ಹೇಮಾವತಿ, ತುಂಗಾ, ಭದ್ರಾ & ಹಾರಂಗಿ ಡ್ಯಾಂಗಳಿಗೆ ಭಾರಿ ಪ್ರಮಾಣದಲ್ಲಿ ನೀರು ಬರುತ್ತಿದೆ. ಈ ಕುರಿತು ಸಂಪೂರ್ಣ ಮಾಹಿತಿಗೆ ಮುಂದೆ ಓದಿ.

ಕೆಆರ್ಎಸ್ ಜಲಾಶಯ ಫುಲ್?
ಕೆಆರ್ಎಸ್ ಜಲಾಶಯದಲ್ಲಿ ಒಟ್ಟು 49.45 ಟಿಎಂಸಿ ಅಡಿ ನೀರು ಸಂಗ್ರಹ ಸಾಮರ್ಥ್ಯ ಇದ್ದು, ಈಗ 24.42 ಅಡಿ ನೀರು ಇದೆ. ಆದ್ರೆ ಕಳೆದ ವರ್ಷ ಇದೇ ಸಮಯಕ್ಕೆ ಕೇವಲ 10.57 ಟಿಎಂಸಿ ಅಡಿ ನೀರು ಇತ್ತು. ಸದ್ಯ 11,027 ಕ್ಯುಸೆಕ್ ನೀರು ಕೆಆರ್ಎಸ್ ಡ್ಯಾಂಗೆ ಹರಿದು ಬರ್ತಿದೆ. ಹಾಗೇ ಮುಂದಿನ ವಾರ ಕೂಡ ಭರ್ಜರಿ ಮಳೆಯ ನಿರೀಕ್ಷೆ ಇದ್ದು, ಈ ಡ್ಯಾಂಗೆ ಮತ್ತಷ್ಟು ನೀರು ಹರಿದು ಬರುವ ಸಾಧ್ಯತೆ ಇದೆ.
ಕಬಿನಿ ಡ್ಯಾಂನಲ್ಲಿ ಎಷ್ಟಿದೆ ನೀರು?
ಕಾವೇರಿ ನದಿಗೆ ಕಟ್ಟಿರುವ ಪ್ರಮುಖ ಡ್ಯಾಂಗಳ ಪೈಕಿ ಕಬಿನಿ ಕೂಡ ಒಂದಾಗಿದೆ. ಈ ಜಲಾಶಯ ಚಿಕ್ಕದಾಗಿದ್ದರೂ ಕಾವೇರಿ ಕೊಳ್ಳದಲ್ಲಿ ದೊಡ್ಡ ಪರಿಣಾಮ ಬೀರುತ್ತದೆ. 19.52 ಟಿಎಂಸಿ ಅಡಿ ನೀರನ್ನು ಕಬಿನಿ ಜಲಾಶಯದಲ್ಲಿ ಸಂಗ್ರಹ ಮಾಡಬಹುದು. ಇದೀಗ ಕಬಿನಿ ಡ್ಯಾಂನಲ್ಲಿ 17.98 ಟಿಎಂಸಿ ಅಡಿ ನೀರು ಸಂಗ್ರಹ ಇದೆ. 5,039 ಕ್ಯುಸೆಕ್ ನೀರು ಹರಿದು ಬರುತ್ತಿದ್ದು, ಕಬಿನಿ ಡ್ಯಾಂ ಭಾಗಶಃ ಭರ್ತಿ ಆಗಿದೆ.
ಹೇಮಾವತಿ ಡ್ಯಾಂ ನೀರಿನ ಮಟ್ಟ
ಹಾಸನ ಜಿಲ್ಲೆಯ ಹೇಮಾವತಿ ಡ್ಯಾಂ ತುಂಬಿಕೊಳ್ಳುತ್ತಿದೆ ಒಟ್ಟು 37 ಟಿಎಂಸಿ ಸಾಮರ್ಥ್ಯ ಇರುವ ಹೇಮಾವತಿ ಡ್ಯಾಂಗೆ ಬರೋಬ್ಬರಿ 8,448 ಕ್ಯುಸೆಕ್ ನೀರು ಹರಿದು ಬರುತ್ತಿದೆ. ಹೀಗೆ ಹೇಮಾವತಿ ಜಲಾಶಯದಲ್ಲಿ 18.303 ಟಿಎಂಸಿ ನೀರು ಸಂಗ್ರಹ ಆಗಿದೆ 2922 ಅಡಿ ಎತ್ತರ ಇರುವ ಈ ಡ್ಯಾಂಗೆ ಇದೀಗ 2897 ಅಡಿ ನೀರು ಬಂದಿದ್ದು ಹೀಗೆ ಮಳೆ ಮುಂದುವರಿದರೆ ಜುಲೈ ಅಂತ್ಯಕ್ಕೆ ಹೇಮಾವತಿ ಜಲಾಶಯ ತುಂಬಿ ತುಳುಕುವ ಸಾಧ್ಯತೆ ದಟ್ಟವಾಗಿದೆ.
ತುಂಗ & ಭದ್ರಾ ಡ್ಯಾಂನಲ್ಲಿ ಎಷ್ಟು ನೀರು?
ಇನ್ನುಳಿದಂತೆ ಶಿವಮೊಗ್ಗ ಜಿಲ್ಲೆಯಲ್ಲಿರುವ ತುಂಗಾ ಡ್ಯಾಂಗೆ ಈಗ 17,049 ಕ್ಯುಸೆಕ್ ಒಳ ಹರಿವು ಇದ್ದು, ಒಟ್ಟು 3.25 ಟಿಎಂಸಿ ಸಾಮರ್ಥ್ಯದ ಈ ಡ್ಯಾಂ ಈಗ ಪೂರ್ತಿ ತುಂಬಿದೆ. ಜೊತೆಗೆ, ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನ ಬಿಆರ್ಪಿಯ ಭದ್ರಾ ಜಲಾಶಯ ಕೂಡ ಇದೀಗ ತುಂಬಿ ತುಳುಕಲು ಶುರು ಮಾಡಿದ್ದು, ಡ್ಯಾಂಗೆ ಒಳ ಹರಿವು 8,777 ಕ್ಯುಸೆಕ್ ಇದೆ. ಹಾಗೇ 186 ಅಡಿ ಗರಿಷ್ಠ ಮಟ್ಟ ಹೊಂದಿರುವ ಈ ಡ್ಯಾಂನಲ್ಲಿ ಈಗ ಬರೋಬ್ಬರಿ 133 ಅಡಿ ನೀರು ಸಂಗ್ರಹ ಆಗಿದೆ. ಹಾಗೇ 22.436 ಟಿಎಂಸಿ ನೀರು ಇದೆ.
ಶಾಲಾ & ಕಾಲೇಜುಗಳಿಗೆ ರಜೆ!
ಕರ್ನಾಟಕದ ಕರಾವಳಿ ಜಿಲ್ಲೆಗಳು ಇದೀಗ ಅಕ್ಷರಶಃ ಮುಂಗಾರು ಮಳೆಗೆ ಬೆಚ್ಚಿಬಿದ್ದಿವೆ. ಹೀಗೆ ಭಾರಿ ಮಳೆ ನಿರಂತರವಾಗಿ ಸುರಿಯುತ್ತಿರುವ ಕಾರಣಕ್ಕೆ ಜನಜೀವನ ಕೂಡ ಅಸ್ತವ್ಯಸ್ತವಾಗಿದೆ. ಇನ್ನೂ ಹಲವು ದಿನಗಳ ಕಾಲ ಇದೇ ರೀತಿಯಾಗಿ ಮುಂಗಾರು ಮಳೆ ಕರಾವಳಿ ಜಿಲ್ಲೆ ಹಲವು ಪ್ರದೇಶಗಳಲ್ಲಿ ಅಬ್ಬರಿಸಲಿದೆ ಎಂದು ಮುನ್ಸೂಚನೆ ನೀಡಲಾಗಿದೆ. ಹೀಗಿದ್ದಾಗ ಉತ್ತರ ಕನ್ನಡ ಜಿಲ್ಲೆ, ದಕ್ಷಿಣ ಕನ್ನಡ ಜಿಲ್ಲೆ, ಉಡುಪಿ ಜಿಲ್ಲೆಯ ಹಲವು ಕಡೆ ಶಾಲೆ & ಕಾಲೇಜುಗಳಿಗೆ ಈಗ ರಜೆ ಘೋಷಣೆ ಮಾಡಲಾಗಿದೆ.












Click it and Unblock the Notifications