ಬಿಜೆಪಿಯಿಂದ ಲಿಂಗಾಯತ ನಾಯಕರ ನಿರ್ಗಮನ: ಕಿತ್ತೂರು ಕರ್ನಾಟಕದಲ್ಲಿ ಕೇಸರಿ ಪಕ್ಷದ ಭವಿಷ್ಯಕ್ಕೆ ಹೊಡೆತ- ವಿವರ, ವಿಶ್ಲೇಷಣೆ
ಬೆಳಗಾವಿ, ಏಪ್ರಿಲ್ 17: ಮೇ 10 ರಂದು ನಡೆಯಲಿರುವ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ( Karnataka Assembly Elections ) ಸ್ಪರ್ಧಿಸಲು ಟಿಕೆಟ್ ಸಿಗದಿದ್ದಕ್ಕೆ ಪ್ರಮುಖ ಲಿಂಗಾಯತ ನಾಯಕರು ಪಕ್ಷದಿಂದ ನಿರ್ಗಮಿಸಿದ್ದಾರೆ. ಇನ್ನೂ ಹಲವು ಲಿಂಗಾಯತ ಮುಖಂಡರು ಪಕ್ಷ ತೊರೆಯಲು ಸಿದ್ದರಾಗಿದ್ದಾರೆ. ಈ ಬೆಳವಣಿಗೆಯಿಂದ ಕಿತ್ತೂರು ಕರ್ನಾಟಕದಲ್ಲಿ ( ಮುಂಬೈ ಕರ್ನಾಟಕ ) ಕೇಸರಿ ಪಕ್ಷದ ಭವಿಷ್ಯಕ್ಕೆ ಹೊಡೆತ ಬೀಳುವ ಸಾಧ್ಯತೆಗಳು ದಟ್ಟವಾಗಿದೆ.
ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರು ಚುನಾವಣಾ ರಾಜಕೀಯವನ್ನು ತೊರೆಯಲು ನಿರ್ಧರಿಸುವುದರೊಂದಿಗೆ ಈ ಬೆಳವಣಿಗೆ ಆರಂಭವಾಯಿತು. ಇದರ ಬೆನ್ನಲ್ಲೇ ಎಂಎಲ್ಸಿ ಲಕ್ಷ್ಮಣ ಸವದಿ ಅವರು ಅಥಣಿಯಿಂದ ಟಿಕೆಟ್ ನಿರಾಕರಿಸಿದ ಹಿನ್ನೆಲೆಯಲ್ಲಿ ಬಿಜೆಪಿ ತೊರೆದಿದ್ದಾರೆ.

ಈ ಪಟ್ಟಿಯಲ್ಲಿ ರಾಮದುರ್ಗ ಶಾಸಕ ಮಹದೇವಪ್ಪ ಯಾದವಾಡ, ಬಾದಾಮಿ ಕ್ಷೇತ್ರದ ಮಾಜಿ ಶಾಸಕ ಎಂ ಕೆ ಪಟ್ಟಣಶೆಟ್ಟಿ, ಮಹಾಂತೇಶ ಮಮದಾಪುರ, ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ಕೂಡ ಇದ್ದಾರೆ ಎಂದು ಹೇಳಲಾಗುತ್ತಿದೆ.
ಈಗ ಬಿಜೆಪಿ ತೊರೆದವರ ಪಟ್ಟಿಯಲ್ಲಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಮತ್ತು ಕೊಪ್ಪಳ ಸಂಸದ ಸಂಗಣ್ಣ ಕರಡಿ ಸೇರಿದ್ದಾರೆ. ಈ ಲಿಂಗಾಯತ ನಾಯಕರಲ್ಲಿ ಹೆಚ್ಚಿನವರು ಚುನಾವಣೆಯಲ್ಲಿ ಗೆಲ್ಲುವ ಸಾಮರ್ಥ್ಯ ಹೊಂದಿರುವವರು. ಪಕ್ಷ ಮತ್ತು ಸರ್ಕಾರದ ಉನ್ನತ ಹುದ್ದೆಗಳನ್ನು ನಿಭಾಯಿಸುವ ಸಾಮರ್ಥ್ಯ ಇರುವವರು.

ಕಿತ್ತೂರು ಕರ್ನಾಟಕದ ಹಲವು ಕ್ಷೇತ್ರಗಳಲ್ಲಿ ಸವದಿ ಪ್ರಭಾವ
ವಯೋಸಹಜ ಕಾರಣ ನೀಡಿ ಯಡಿಯೂರಪ್ಪ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅಥಣಿಯಿಂದ ಸೋತರೂ ಯಡಿಯೂರಪ್ಪ ಕ್ಯಾಬಿನೆಟ್ನಲ್ಲಿ ಸವದಿ ಅವರನ್ನು ಡಿಸಿಎಂ ಆಗಿ ನೇಮಿಸಿದ್ದರು. ಬಿಜೆಪಿ ಹೈಕಮಾಂಡ್ನ ನಿರ್ಧಾರವು ಅನೇಕರನ್ನು ದಿಗ್ಭ್ರಮೆಗೊಳಿಸಿತ್ತು. ಯಡಿಯೂರಪ್ಪ ಅವರ ಸಿಎಂ ಸ್ಥಾನದಿಂದ ತೊರೆಯಲು ಹೇಳಿದಾಗ, ಸವದಿ ಅವರ ಹೆಸರು ಮುಖ್ಯಮಂತ್ರಿ ಸ್ಥಾನಕ್ಕೂ ಕೇಳಿಬಂದಿತ್ತು. ಅವರು ಸಂಭಾವ್ಯ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಹೊರಹೊಮ್ಮಿದ್ದರು.
ಆದರೆ, ಅಥಣಿಯಿಂದ ತಮ್ಮ ರಾಜಕೀಯ ಪ್ರತಿಸ್ಪರ್ಧಿ ಮಹೇಶ ಕುಮಠಳ್ಳಿಗೆ ಪಕ್ಷದ ಟಿಕೆಟ್ ದೊರೆಯಿತು. ಸವದಿ ಅವರನ್ನು ಕಣಕ್ಕಿಳಿಸದಿರುವ ಪಕ್ಷದ ನಿರ್ಧಾರವು ಅವರಿಗೆ ಆಘಾತವನ್ನುಂಟು ಮಾಡಿತು. ಅವರು ಈಗ ಬಿಜೆಪಿಯೊಂದಿಗಿನ ಸಂಬಂಧವನ್ನು ಕಡಿತಗೊಳಿಸಿ ಕಾಂಗ್ರೆಸ್ ಸೇರ್ಪಡೆಗೊಂಡಿದ್ದಾರೆ. ಅಥಣಿಯಲ್ಲಿ ಕಾಂಗ್ರೆಸ್ನ ಟಿಕೆಟ್ ಪಡೆಯುವಲ್ಲಿಯೂ ಯಶಸ್ವಿ ಆಗಿದ್ದಾರೆ.

ಸವದಿ ಅವರು ಕಾಂಗ್ರೆಸ್ ಸೇರುವ ಮೂಲಕ ತಮ್ಮ ರಾಜಕೀಯ ಜೀವನವನ್ನು ಮುಂದುವರಿಸಲು ನಿರ್ಧರಿಸಿದ್ದಾರೆ. ರಾಜಕೀಯ ತಜ್ಞರ ಪ್ರಕಾರ, ಅವರು ಬಿಜೆಪಿಯಿಂದ ಕಾಂಗ್ರೆಸ್ಗೆ ಸೇರಿದ ಪರಿಣಾಮವು ಹಲವಾರು ಕ್ಷೇತ್ರಗಳಲ್ಲಿ, ವಿಶೇಷವಾಗಿ ಅಥಣಿ, ಕಾಗವಾಡ, ಸಿಂದಗಿ, ಬಸವನ ಬಾಗೇವಾಡಿ ಮತ್ತು ಇತರ ಹಲವು ಲಿಂಗಾಯತ ಪ್ರಾಬಲ್ಯದ ಕ್ಷೇತ್ರಗಳ ಮೇಲೆ ಬೀರಲಿದೆ.
ಹುಬ್ಬಳ್ಳಿ ಸುತ್ತಮುತ್ತ ಶೆಟ್ಟರ್ ಪ್ರಭಾವ
ಹುಬ್ಬಳ್ಳಿ ಸೆಂಟ್ರಲ್ ಕ್ಷೇತ್ರದಲ್ಲಿ ಶೆಟ್ಟರ್ ಅವರು ತಮ್ಮ ಪ್ರಭಾವವನ್ನು ಹೊಂದಿದ್ದಾರೆ. ಬಿಜೆಪಿಯಿಂದ ಅವರ ನಿರ್ಗಮನವು ಧಾರವಾಡ ಜಿಲ್ಲೆಯ ಕೆಲವು ಲಿಂಗಾಯತ ಪ್ರಾಬಲ್ಯವಿರುವ ಭಾಗಗಳಲ್ಲಿ ಪಕ್ಷದ ಭವಿಷ್ಯದ ಮೇಲೆ ಪರಿಣಾಮ ಬೀರಬಹುದು. ಬಿಜೆಪಿ ಅಧಿಕಾರಕ್ಕೆ ಬಂದರೆ ಸವದಿ ಹೊರತುಪಡಿಸಿ ಸಿಎಂ ಸ್ಥಾನಕ್ಕೆ ಶೆಟ್ಟರ್ ಕೂಡ ಒಬ್ಬ ಪ್ರಬಲ ಆಕಾಂಕ್ಷಿ ಎಂಬುದು ಶೆಟ್ಟರ್ ಬೆಂಬಲಿಗರ ಅಭಿಪ್ರಾಯವಾಗಿದೆ.
ಇಬ್ಬರು ಪಟ್ಟಣಶೆಟ್ಟಿಗಳ ಪ್ರಭಾವ
ವಿಜಯಪುರದಿಂದ ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ಮತ್ತು ಬಾದಾಮಿಯಿಂದ ಮೂರು ಬಾರಿ ಶಾಸಕರಾಗಿದ್ದ ಎಂ ಕೆ ಪಟ್ಟಣಶೆಟ್ಟಿ ಅವರಿಗೆ ಬಿಜೆಪಿ ಟಿಕೆಟ್ ನೀಡಬೇಕಿತ್ತು. ಅವರು ತಮ್ಮ ಕ್ಷೇತ್ರಗಳಲ್ಲಿ ಪ್ರಭಾವ ಹೊಂದಿರುವ ಪ್ರಮುಖ ನಾಯಕರು. ಜನಪ್ರಿಯತೆಯ ಆಧಾರದ ಮೇಲೆ ಗೆಲ್ಲುವ ಸಾಮರ್ಥ್ಯವನ್ನು ಪರಿಗಣಿಸಿ ಅವರಿಗೆ ಟಿಕೆಟ್ ನೀಡಬೇಕಿತ್ತು. ರಾಮದುರ್ಗದಲ್ಲಿ ಯಾದವಾಡ ಅವರು ಸುಲಭವಾಗಿ ಗೆಲ್ಲುತ್ತಿದ್ದರು. ಆದರೆ ಪಕ್ಷವು ಚಿಕ್ಕ ರೇವಣ್ಣ ಅವರಿಗೆ ಟಿಕೆಟ್ ನೀಡಿದೆ. ಇದರಿಂದಾಗಿ ಬಿಜೆಪಿ ಕಿತ್ತೂರು ಕರ್ನಾಟಕದಲ್ಲಿ ಆಘಾತ ಅನುಭವಿಸಲಿದೆ ಎಂದು ರಾಜಕೀಯ ವಿಶ್ಲೇಷಕರು ಹೇಳಿದ್ದಾರೆ












Click it and Unblock the Notifications