'ಮಹಿಳಾ ಸಬಲೀಕರಣಕ್ಕಾಗಿ 224 ಕ್ಷೇತ್ರಗಳಲ್ಲಿ ಸ್ಪರ್ಧೆ'
ದಾವಣಗೆರೆ, ಫೆಬ್ರವರಿ 02: ಮಹಿಳೆಯರನ್ನು ರಾಜಕೀಯವಾಗಿ ಸಬಲೀಕರಣಗೊಳಿಸುವ ಹಿನ್ನೆಲೆಯಲ್ಲಿ ಅಸ್ತಿತ್ವಕ್ಕೆ ತರಲಾಗಿರುವ ಅಖಿಲ ಭಾರತ ಮಹಿಳಾ ಎಂಪವರ್ ಮೆಂಟ್ ಪಾರ್ಟಿ(AIMEP) ಯಿಂದ ಬರುವ ಚುನಾವಣೆಯಲ್ಲಿ ರಾಜ್ಯದ 224 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಾಗಿ ರಾಜ್ಯ ಮುಖಂಡ ರಾದ ಆರ್.ಎ. ಜನಾಬ್, ಅಹ್ಮದ್ ಶಾಲಿ ಅವರು ತಿಳಿಸಿದರು.
ಕರ್ನಾಟಕದಲ್ಲಿ ಸಮಾನ ಲಿಂಗಾನುಪಾತವಿದೆ. ಆದರೆ, ಎಲ್ಲ ಪ್ರಮುಖ ಹುದ್ದೆಗಳನ್ನು ಇಲ್ಲಿ ಪುರುಷರೇ ಹೊಂದಿದ್ದಾರೆ. ಈ ರಾಜ್ಯ ತನ್ನ ಸಾಂವಿಧಾನಿಕ ಇತಿಹಾಸದಲ್ಲಿ ಮಹಿಳಾ ಮುಖ್ಯಮಂತ್ರಿಯನ್ನು ಕಂಡಿಲ್ಲ. ಮಹಿಳೆಯರು ಉದ್ಯಮ, ಗೃಹ, ಸೇವೆಗಳು ಅಥವಾ ಕ್ರೀಡೆ ಯಾವುದೇ ಇರಲಿ ಸಾಮಾಜಿಕ-ಆರ್ಥಿಕ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ ಎಂದರು.

ಪಕ್ಷವು ಯಾವುದೇ ಒಂದು ಜಾತಿಗೆ ಸೀಮಿತವಾಗಿಲ್ಲ. ಜಾತ್ಯಾತೀತ ಪಕ್ಷವಾಗಿದ್ದು, ಬರುವ ಚುನಾವಣೆಯಲ್ಲಿ ರಾಜ್ಯದ ಅರ್ಧದಷ್ಟು ಕ್ಷೇತ್ರಗಳಲ್ಲಿ ಮಹಿಳೆಯರಿಗೆ ಆದ್ಯತೆ ನೀಡಲಾಗುತ್ತದೆ. ನಮ್ಮ ಪಕ್ಷದ ಚಿನ್ಹೆ ವಜ್ರ ಆಗಿದೆ. ಮಾನವೀಯತೆಗಾಗಿ ನ್ಯಾಯ ಎಂಬ ಧ್ಯೇಯ ಹೊಂದಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ರಾಜ್ಯಾದ್ಯಂತ ಪಕ್ಷದ ಸಂಘಟನೆಗಾಗಿ ಪ್ರಚಾರ ಮತ್ತು ಪದಾಧಿಕಾರಿಗಳ ಆಯ್ಕೆ ಮಾಡಲಾಗುತ್ತಿದೆ. ಜಿಲ್ಲೆಯಲ್ಲೂ ಪಕ್ಷದ ಸಂಘಟನೆಗಾಗಿ ಅಬ್ದುಲ್ ಖುದ್ದೂಸ್ ಅವರನ್ನು ನೇಮಕ ಮಾಡಲಾಗಿದೆ ಎಂದು ಹೇಳಿದರು.
ಅಬ್ದುಲ್ ಖುದ್ದೂಸ್, ಸೈಫುಲ್ಲಾ, ಜೆ.ಎನ್. ವೆಂಕಟೇಶ್, ಶ್ಯಾಮ್, ಗಣೇಶ್, ಚಂದ್ರು, ಮಲ್ಲಿಕಾರ್ಜುನ, ಶಂಕರ್, ಸೈಯದ್ ಮುಸ್ತಾಫ್, ಚೇತನಕುಮಾರ್, ನಸೀರ್, ಬಾಬು, ರಾಜಣ್ಣ ಮತ್ತಿತರರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ಮಾನವ ಹಕ್ಕುಗಳ ಹೋರಾಟಗಾರ್ತಿ, ಉದ್ಯಮಿ ಹಾಗೂ ಹೀರಾ ಸಮೂಹದ ಸಂಸ್ಥಾಪಕಿ ಮತ್ತು ಸಿಇಒ ಡಾ.ನೌಹೆರಾ ಶೇಖ್ ಮಹಿಳೆಯರನ್ನು ಜಾತಿ, ವರ್ಗ, ಧಾರ್ಮಿಕತೆ ಮತ್ತು ಪ್ರದೇಶದ ಭಿನ್ನತೆ ಮೀರಿ ಸಬಲೀಕರಣಗೊಳಿಸುವ ಅಖಿಲ ಭಾರತೀಯ ಮಹಿಳಾ ಸಬಲೀಕರಣ ಪಕ್ಷ (ಎಐಎಂಇಪಿ) ಎಂಬ ರಾಷ್ಟ್ರೀಯ ಪಕ್ಷ ಪ್ರಾರಂಭಿಸಿದ್ದನ್ನು ಇಲ್ಲಿ ಸ್ಮರಿಸಬಹುದು.












Click it and Unblock the Notifications