113 ಸ್ಥಾನ ಗೆಲ್ಲುವ ತಂತ್ರಗಾರಿಕೆ ಮಾಡಲಾಗಿದೆ :ಎಚ್ಡಿಕೆ
ಬೆಂಗಳೂರು, ಮೇ 02 : ನಾನು 'ಕಿಂಗ್ ಮೇಕರ್' ಆಗುವುದಿಲ್ಲ. ರಾಜ್ಯದ ಜನರು ನನ್ನನ್ನೇ ಕಿಂಗ್' ಮಾಡಲಿದ್ದಾರೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಅವರು ಆತ್ಮವಿಶ್ವಾಸದಿಂದ ಹೇಳಿದ್ದಾರೆ.
ಜೆಡಿ (ಎಸ್) ಸ್ವಂತ ಬಲದ ಮೇಲೆ ರಾಜ್ಯದಲ್ಲಿ ಅಧಿಕಾರಕ್ಕೆ ಬರಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿರುವ ಅವರು, ಬಿಜೆಪಿಹಾಗೂ ಕಾಂಗ್ರೆಸ್ ಕಾರ್ಯ ನಿರ್ವಹಣೆ ನೋಡಿರುವ ಜನರು ಈ ಬಾರಿ ಜೆಡಿ (ಎಸ್)ಗೆ ಬೆಂಬಲಿಸಲಿದ್ದಾರೆ ಎಂದಿದ್ದಾರೆ.
ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬರುವ ಸಂಪೂರ್ಣ ವಿಶ್ವಾಸ ಇದೆ. ಇದರಲ್ಲಿ ಎಳ್ಳಷ್ಟೂ ಅನುಮಾನವಿಲ್ಲ ಎಂದು ಸುದ್ದಿ ಸಂಸ್ಥೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಕುಮಾರಸ್ವಾಮಿ ಹೇಳಿದ್ದಾರೆ.
ಜೆಡಿಎಸ್ ಕಿಂಗ್ ಮೇಕರ್ ಆಗಲಿದೆ ಎಂದು ಚುನಾವಣಾ ಪೂರ್ಣ ಸಮೀಕ್ಷೆಗಳು ಹೇಳಿರುವುದನ್ನು ಅವರು ತಳ್ಳಿ ಹಾಕಿದ್ದಾರೆ. ಚುನಾವಣೆಯ ನಂತರವೇ ಈ ಸಮೀಕ್ಷೆಗಳ ಬಗ್ಗೆ ಸ್ಪಷ್ಟವಾಗಲಿದೆಯೇ ಹೊರತು ಈಗಲ್ಲ ಎಂದಿದ್ದಾರೆ.
ನೀವು ಕಾಂಗ್ರೆಸ್ ಹಾಗೂ ಬಿಜೆಪಿ ಗಳೆರಡಕ್ಕೂ ಅವಕಾಶ ನೀಡಿದ್ದೀರಿ, ಅವರ ಕಾರ್ಯ ನಿರ್ವಹಣೆ ನೋಡಿ ಅನುಭವಿಸಿದ್ದೀರಿ. ನನಗೂ ಒಂದು ಅವಕಾಶ ಕೊಡಿ ಎಂಬ ಸಂದೇಶ ನನ್ನದಾಗಿದೆ ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.

113 ಸ್ಥಾನ ಗೆಲ್ಲುವ ತಂತ್ರಗಾರಿಕೆ
ಚುನಾವಣಾ ಪೂರ್ವ ಸಮೀಕ್ಷೆಗಳ ಪ್ರಕಾರ, ರಾಜ್ಯದಲ್ಲಿ ಅತಂತ್ರ ವಿಧಾನಸಭೆ ಸೃಷ್ಟಿಯಾಗಲಿದ್ದು ಜೆಡಿ (ಎಸ್) ನಿರ್ಣಾಯಕ ಪಾತ್ರ ವಹಿಸಲಿದೆ. ನಾವು 113 ಸ್ಥಾನಗಳಲ್ಲಿ ಗೆಲ್ಲುವ ತಂತ್ರಗಾರಿಕೆ ಹೊಂದಿದ್ದೇವೆ. ಇಷ್ಟು ಸ್ಥಾನಗಳು ದೊರೆತರೆ ಮಾತ್ರ ನಾವು ಗುರಿ ತಲುಪಿದಂತೆ. ಜೆಡಿಎಸ್ ಗೆ 97-105 ಸೀಟುಗಳು ಸುಲಭವಾಗಿ ದೊರೆಯಲಿವೆ. ಇನ್ನೂ ಏಳೆಂಟು ಸೀಟುಗಳ ಕೊರತೆಯಾಗಲಿದ್ದು, ಅದರ ಬಗ್ಗೆ ತಮ್ಮ ಗಮನ ಇದೆ ಎಂದವರು ಹೇಳಿದರು.

ಜನತೆ ನನ್ನನ್ನು 'ಕಿಂಗ್' ಮಾಡ್ತಾರೆ : ಎಚ್ಡಿಕೆ
ಜನರು ನಾನೇ' ಕಿಂಗ್' (ಮುಖ್ಯಮಂತ್ರಿ) ಆಗಲಿ ಎಂದು ಹರಸಲಿದ್ದಾರೆ. ಜೆಡಿ (ಎಸ್) ಪರ ರಾಜ್ಯಾದ್ಯಂತ ಗುಪ್ತಗಾಮಿನಿಯಾಗಿ ಅಲೆ ಇದೆ. ಜನರು ಬಿಜೆಪಿ ಹಾಗೂ ಕಾಂಗ್ರೆಸ್ ಬಗ್ಗೆಯೂ ವಿಶ್ವಾಸ ಕಳೆದುಕೊಂಡಿದ್ದಾರೆ ಎಂದಿರುವ ಕುಮಾರಸ್ವಾಮಿ, ಉತ್ತಮ ಆಡಳಿತ ಹಾಗೂ ಸಮಸ್ಯೆ ನಿವಾರಣೆಗಾಗಿ ಜನರು ತಮಗೊಂದು ಅವಕಾಶ ನೀಡಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.

ಜೆಡಿಎಸ್ ಪಾಲಿಗೆ ಅಸ್ತಿತ್ವದ ಹೋರಾಟವಾಗಿದೆ
ಮುಂಬರುವ ವಿಧಾನಸಭಾ ಚುನಾವಣೆ ಜೆಡಿಎಸ್ ಪಾಲಿಗೆ ಅಸ್ತಿತ್ವದ ಹೋರಾಟವಾಗಿದೆ ಎಂದು ಒಪ್ಪಿಕೊಂಡಿರುವ ಕುಮಾರಸ್ವಾಮಿ, ಕಳೆದ 10 ವರ್ಷಗಳಿಂದ ನಾವು ಅಧಿಕಾರದಲ್ಲಿ ಇರದೇ ಇರುವುದರಿಂದ ಈ ಪರಿಸ್ಥಿತಿ ಉಂಟಾಗಿದೆ ಎಂದಿದ್ದಾರೆ. ಅಧಿಕಾರ ಇಲ್ಲದೇ ಇದ್ದರೂ ನಮ್ಮೆಲ್ಲ ಕಾರ್ಯಕರ್ತರು ಶ್ರಮಿಸಿದ್ದಾರೆ. ಈ ಬಾರಿ ನಾವು ಗುರಿ ತಲುಪಲಿದ್ದೇವೆ, ಆ ದಿಸೆಯಲ್ಲಿ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸುತ್ತಿದ್ದೇವೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ಹೆಚ್ಡಿಕೆ ವಿಜಯಪುರ ಪ್ರವಾಸದ ವೇಳಾಪಟ್ಟಿ
ಮೇ 2 ರಿಂದ 4ರವರೆಗೆ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ವಿಜಯಪುರ ಜಿಲ್ಲಾ ಪ್ರವಾಸ
ನಾಗಠಾಣ(ಪ. ಜಾ.) ಜೆಡಿಎಸ್ ಅಭ್ಯರ್ಥಿ ದೇವಾನಂದ ಚವ್ಹಾಣ ಪರ ಮತಯಾಚನೆ,ಇಂಡಿಯಲ್ಲಿ ಬಿ. ಡಿ. ಪಾಟೀಲ ಪರ, ಸಿಂದಗಿಯಲ್ಲಿ ಎಂ. ಸಿ. ಮನಗೂಳಿ ಪರ, ದೇವರ ಹಿಪ್ಪರಗಿಯಲ್ಲಿ ರಾಜುಗೌಡ ಪಾಟೀಲ ಕುಗರಿ ಸಾಲವಾಡಗಿ, ಬಸವನ ಬಾಗೇವಾಡಿಯಲ್ಲಿ ಸೋಮನಗೌಡ(ಅಪ್ಪುಗೌಡ) ಪಾಟೀಲ ಮನಗೂಳಿ ಪರ, ಮುದ್ದೇಬಿಹಾಳದಲ್ಲಿ ಜೆಡಿಎಸ್ ಅಭ್ಯರ್ಥಿ ಮಂಗಳಾದೇವಿ ಬಿರಾದಾರ ಪರ ಮತಯಾಚನೆ.
ಮೇ 4 ರಂದು ಬೆ. 9.30ಕ್ಕೆ ಹೆಲಿಕಾಪ್ಟರ್ ಮೂಲಕ ದೇವದುರ್ಗಕ್ಕೆ ಪ್ರಯಾಣ ಬೆಳಸಲಿರುವ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್. ಡಿ. ಕುಮಾರಸ್ವಾಮಿ.












Click it and Unblock the Notifications