'ದಾವಣಗೆರೆ ದಕ್ಷಿಣ ಕ್ಷೇತ್ರಕ್ಕೆ ನಾನು ಟಿಕೆಟ್ ಆಕಾಂಕ್ಷಿ'
ದಾವಣಗೆರೆ, ಜನವರಿ 14: ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಹೇಗಾದರೂ ಬಿಜೆಪಿ ಬಾವುಟ ಹಾರಿಸಲು ಪಕ್ಷ ಸಾಕಷ್ಟು ಶ್ರಮಿಸುತ್ತಿದೆ. ಈ ನಡುವೆ ಟಿಕೆಟ್ ಗಾಗಿ ಭಾರಿ ಲಾಬಿ ನಡೆಯುತ್ತಿದೆ. ಬಿಜೆಪಿ ಮುಖಂಡ ಎಚ್.ಎಸ್ ನಾಗರಾಜ್ ಅವರು, ತಾವು ಕೂಡಾ ಟಿಕೆಟ್ ಅಕಾಂಕ್ಷಿ ಎಂದು ಘೋಷಿಸಿದ್ದಾರೆ.
'ಬಿ ಫಾರಂ ಬಿಡುಗಡೆಯಾಗುವವರೆಗೂ ಪಕ್ಷದ ಅಭ್ಯರ್ಥಿ ಯಾರೆಂಬುದು ಅಂತಿಮವಾಗದು,ನಾನು ಕೂಡಾ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಟಿಕೆಟ್ ಪ್ರಬಲ ಆಕಾಂಕ್ಷಿಯಾಗಿದ್ದೇನೆ ಎಂದು ಬಿಜೆಪಿ ಮುಖಂಡ ಎಚ್.ಎಸ್. ನಾಗರಾಜ್ ಹೇಳಿದ್ದಾರೆ.
ಅಮಿತ್ ಶಾ ಸೂಚನೆ ಮೀರಿ, ಅಭ್ಯರ್ಥಿ ಘೋಷಿಸಿದ ಯಡಿಯೂರಪ್ಪ!
ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದ ಅವರು, ಪಕ್ಷವೊಂದರಲ್ಲಿ ಕಾರ್ಯಕರ್ತನಾಗುವುದೇ ಅತಿ ದೊಡ್ಡ ಸ್ಥಾನ ಎಂದು ಭಾವಿಸಿದ್ದೇನೆ. ಟಿಕೆಟ್ ನೀಡಿದಲ್ಲಿ ಸ್ಪರ್ಧಿಸುತ್ತೇನೆ, ಇಲ್ಲವಾದರೆ ಕಾರ್ಯಕರ್ತನಾಗಿ ಪ್ರಾಮಾಣಿಕವಾಗಿ ದುಡಿಯುತ್ತೇನೆ ಎಂದರು.
ಹೈಕಮಾಂಡ್ ಪಕ್ಷದ ಅಭ್ಯರ್ಥಿಗಳನ್ನು ನಿರ್ಧರಿಸಲಿದೆ. ಈ ಬಗ್ಗೆ ಪಕ್ಷದ ಅಧ್ಯಕ್ಷ ಅಮಿತ್ ಷಾ ಅವರು ಸ್ಪಷ್ಟವಾಗಿ ತಿಳಿಸಿದ್ದಾರೆ. ಬಿ ಫಾರಂ ಬಿಡುಗಡೆಯಾಗುವವರೆಗೂ ಪಕ್ಷದ ಅಭ್ಯರ್ಥಿ ಯಾರೆಂಬುದು ಖಚಿತವಲ್ಲ ಎಂದವರು ತಿಳಿಸಿದರು.
ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ದಕ್ಷಿಣ ಕ್ಷೇತ್ರಕ್ಕೆ ಜಿಲ್ಲಾಧ್ಯಕ್ಷ ಯಶವಂತರಾವ್ ಅವರೇ ಅಭ್ಯರ್ಥಿ ಎಂದು ಘೋಷಿಸಿರುವುದರಿಂದ ಪಕ್ಷದಲ್ಲಿ ಗೊಂದಲವಾಗುವುದೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಪಕ್ಷದಲ್ಲಿ ಯಾವುದೇ ಗೊಂದಲವಿಲ್ಲ. ಯಾರಿಗೇ ಟಿಕೆಟ್ ಕೊಟ್ಟರೂ ಕಾರ್ಯಕರ್ತರು ವಿಚಲಿತರಾಗುವುದಿಲ್ಲ ಎಂದರು.
2013ರಲ್ಲಿ ಈ ಕ್ಷೇತ್ರದಲ್ಲಿ 66320 ಮತಗಳನ್ನು ಗಳಿಸಿ ಕಾಂಗ್ರೆಸ್ಸಿನ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ಅವರು ಭರ್ಜರಿ ಜಯ ದಾಖಲಿಸಿದ್ದರು. ಜೆಡಿಎಸ್ ನ ಕೆರೆಕಟ್ಟೆ ಸೈಯದ್ ಸೈಫುಲ್ಲಾ ಅವರಿಗೆ 26162 ಮತಗಳು ಸಿಕ್ಕಿತ್ತು. 2008ರಲ್ಲಿ ಎರಡನೇ ಸ್ಥಾನ ಗಳಿಸಿ ಉತ್ತಮ ಸ್ಪರ್ಧೆ ನೀಡಿದ್ದ ಬಿಜೆಪಿಯ ಯಶವಂತರಾವ್ ಜಾಧವ್ ಅವರ ಪರ ಬಿಎಸ್ ಯಡಿಯೂರಪ್ಪ ಅವರು ನಿಂತಿರುವುದು ಜಿಲ್ಲಾ ಬಿಜೆಪಿ ಘಟಕದಲ್ಲಿ ಗೊಂದಲ ಮೂಡಿಸಿದೆ.