ಟಿಕೆಟ್ ರಾಜಕೀಯ : ಏಪ್ರಿಲ್ ಮೊದಲ ವಾರ ಕಾಂಗ್ರೆಸ್ ಪಟ್ಟಿ ಪ್ರಕಟ
ಬೆಂಗಳೂರು, ಮಾರ್ಚ್ 21: ದೇಶದ ಅತ್ಯಂತ ಪುರಾತನ ಪಕ್ಷಕ್ಕೆ ಕರ್ನಾಟಕದಲ್ಲಿ ಟಿಕೆಟ್ ರಾಜಕೀಯದ ಬಿಸಿ ತಣ್ಣಗಾಗುತ್ತಿದೆ.224 ಕ್ಷೇತ್ರಕ್ಕಾಗಿ ಆಸಕ್ತ ಅಭ್ಯರ್ಥಿಗಳಿಂದ ಬಂದಿರುವ ಸಾವಿರಾರು ಅರ್ಜಿಗಳನ್ನು ಪರಿಶೀಲಿಸಿ, ಪಟ್ಟಿ ತಯಾರಿಸಲಾಗಿದ್ದು, ಏಪ್ರಿಲ್ ಮೊದಲ ವಾರದಲ್ಲಿ ಪ್ರಕಟಿಸುವ ಸಾಧ್ಯತೆಯಿದೆ.
ರಾಜ್ಯದ 224 ಕ್ಷೇತ್ರಕ್ಕಾಗಿ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿ ನಾಲ್ಕು ತಿಂಗಳ ಬಳಿಕ, ಕೆಪಿಸಿಸಿ ಬಳಿ ಈಗ 1,004 ಅರ್ಜಿಗಳು ಬಂದಿತ್ತು. 2018ರ ವಿಧಾನಸಭಾ ಚುನಾವಣೆಗಾಗಿ ಅಭ್ಯರ್ಥಿಗಳ ಅಂತಿಮ ಪಟ್ಟಿ ತಯಾರಿಸುವುದು ಹಾಗಿರಲಿ, ಈಗ ಬಂದಿರುವ ಅರ್ಜಿಗಳನ್ನು ಒಟ್ಟು ಮಾಡಿ, ವಿಂಗಡಣೆ ಮಾಡುವುದೇ ದೊಡ್ಡ ಕೆಲಸವಾಗಿಬಿಟ್ಟಿತ್ತು.
ಚುನಾವಣೆ 2018: ಕಾಂಗ್ರೆಸ್ 123 ಅಭ್ಯರ್ಥಿಗಳ ಪಟ್ಟಿ
ಸದ್ಯ ಜಾತ್ಯಾತೀತ ಜನತಾ ದಳ(ಜೆಡಿಎಸ್) 126 ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ಯುಗಾದಿ ಕಳೆದ ಬಳಿಕದ ಮಿಕ್ಕ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಲು ಮುಂದಾಗಿದೆ. ಭಾರತೀಯ ಜನತಾ ಪಕ್ಷವಂತೂ ಸಮಾವೇಶ, ಪಾದಯಾತ್ರೆಗಳು ಮುಗಿಯುತ್ತಾ ಬಂದಿದ್ದು, ಟಿಕೆಟ್ ರಾಜಕೀಯದ ಬಗ್ಗೆ ಶ್ರೀರಾಮನವಮಿ ಪಾನಕ, ಮಜ್ಜಿಗೆ ಹೀರಿ, ಕೊಸಂಬರಿ ತಿಂದ ನಂತರವಷ್ಟೇ ಪ್ರಕಟಿಸುವ ಸಾಧ್ಯತೆಯಿದೆ.
ಕಾಂಗ್ರೆಸ್ಸಿನ ಸಂಭವನೀಯ 80 ಅಭ್ಯರ್ಥಿಗಳ ಪಟ್ಟಿ!
ಜಾತ್ಯಾತೀತ ಜನತಾ ದಳ(ಜೆಡಿಎಸ್) 126 ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ಯುಗಾದಿ ನಂತರ ಮತ್ತೊಂದು ಪಟ್ಟಿ ಪ್ರಕಟಿಸುತ್ತೇವೆ ಎಂದಿದ್ದರು. ಆದರೆ, ಎರಡು ಕ್ಷೇತ್ರಗಳ ಟಿಕೆಟ್ ಬಗ್ಗೆ ಭಾರಿ ಗೊಂದಲ ಮೂಡಿರುವುದರಿಂದ ಪಟ್ಟಿ ಪ್ರಕಟ ವಿಳಂಬವಾಗಿದೆ.
ಸಂಭವನೀಯ ಪಟ್ಟಿ ಸಿದ್ಧವಾಗಿದೆ
ಕಾಂಗ್ರೆಸ್ ಅಭ್ಯರ್ಥಿಗಳ ಸಂಭವನೀಯ ಪಟ್ಟಿಯನ್ನು ಸ್ಕ್ರೀನಿಂಗ್ ಕಮಿಟಿಗೆ ಕಳುಹಿಸಲಾಗುವುದು. ಪಟ್ಟಿಗೆ ಅನುಮೋದನೆ ದೊರೆತ ಬಳಿಕ, ಪೂರ್ಣ ಪಟ್ಟಿ ಪ್ರಕಟಿಸಲಾಗುತ್ತದೆ. ಏಪ್ರಿಲ್ ಅಂತ್ಯಕ್ಕೆ ಪಟ್ಟಿ ಪ್ರಕಟ ಮಾಡಲು ಈ ಮೊದಲು ನಿರ್ಧರಿಸಲಾಗಿತ್ತು. ಆದರೆ, ಪಟ್ಟಿ ಪರಿಶೀಲನೆ ಮುಗಿದಿದ್ದು, ಬಹುತೇಕ ಏಪ್ರಿಲ್ ಮೊದಲ ವಾರವೇ ಪಟ್ಟಿ ಪ್ರಕಟಿಸಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ಜಿ ಪರಮೇಶ್ವರ ಹೇಳಿದ್ದಾರೆ. ಮೇ ತಿಂಗಳ ಮೊದಲ ಅಥವಾ ಎರಡನೇ ವಾರದಲ್ಲಿ ಅಸೆಂಬ್ಲಿ ಚುನಾವಣೆ ನಡೆಯುವ ಸಾಧ್ಯತೆಯಿದೆ.
ಅಭ್ಯರ್ಥಿಗಳ ಆಯ್ಕೆ, ಯಾರು ಮಾಡುತ್ತಾರೆ?
ಆಸಕ್ತ ಅಭ್ಯರ್ಥಿಗಳ ಪರಮರ್ಶನಾ ಸಮಿತಿಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಮಧುಸೂದನ್ ಮಿಸ್ತ್ರಿ ಅವರು ಮುಖ್ಯಸ್ಥರಾಗಿದ್ದಾರೆ. ಕಾಂಗ್ರೆಸ್ ಸಂಸದರಾದ ತಾಮ್ರಧ್ವಜ್ ಸಾಹು ಹಾಗೂ ಗೌರವ್ ಗೊಗಾಯಿ ಇತರೆ ಸದಸ್ಯರಾಗಿದ್ದಾರೆ. ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಜಿ ಪರಮೇಶ್ವರ್ ಸೇರಿದಂತೆ 16 ಮಂದಿ ಇದ್ದಾರೆ.
ಈ ಸಮಿತಿ ನೀಡುವ ಶಿಫಾರಸ್ಸಿನ ಮೇರೆಗೆ ಕೆಪಿಸಿಸಿ, ಎಐಸಿಸಿ ಮುಖಂಡರು ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸುತ್ತಾರೆ
91 ಅಭ್ಯರ್ಥಿಗಳ ಪಟ್ಟಿ ಮಾತ್ರ ಕುತೂಹಲ
123 ಹಾಲಿ ಶಾಸಕರಿದ್ದಾರೆ ಅವರ ಕಾರ್ಯಕ್ಷಮತೆ, ಅವರ ಮೌಲ್ಯಮಾಪನ ಮಾಡಿ, ಟಿಕೆಟ್ ನೀಡಲಾಗುತ್ತದೆ. ಪ್ಲಸ್ 7 ಮಂದಿ ಜೆಡಿಎಸ್ ನಿಂದ ಬಂದಿರುವ ಬಂಡಾಯ ಶಾಸಕರು, ಪ್ಲಸ್ ಆನಂದ್ ಸಿಂಗ್ ಹಾಗೂ ಕೂಡ್ಲಿಗಿ ನಾಗೇಂದ್ರ, ಪ್ಲಸ್ ಅಶೋಕ್ ಖೇಣಿಗೆ ಟಿಕೆಟ್ ಖಚಿತ. ಮಿಕ್ಕ 91 ಸ್ಥಾನಗಳಿಗಾಗಿ ಸಾವಿರಾರು ಅರ್ಜಿಗಳು ಬಂದಿವೆ. ಹೀಗಾಗಿ , 91 ಅಭ್ಯರ್ಥಿಗಳ ಪಟ್ಟಿ ಮಾತ್ರ ಕುತೂಹಲ ಕೆರಳಿಸಿದೆ.
ವಿಳಂಬ ಮಾಡಿದ್ದು ತಂತ್ರವೇ?
ಕಾಂಗ್ರೆಸ್ ನಲ್ಲಿ ಪ್ರತಿಬಾರಿಯಂತೆ ಈ ಬಾರಿ ಕೂಡಾ ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ ಅಧಿಕವಾಗಿದೆ. ಚುನಾವಣೆಗೆ ಸ್ಪರ್ಧಿಸಲು ಟಿಕೆಟ್ ಸಿಗಲಿಲ್ಲ ಎಂದು ಹೇಳಿ ಬೇರೆ ಪಕ್ಷಕ್ಕೆ ಸೇರುವುದು, ಅಥವಾ ಬಂಡಾಯ, ಭಿನ್ನಮತೀಯ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದನ್ನು ತಡೆಗಟ್ಟಲು ಯೋಜನೆ ಹಾಕಿಕೊಳ್ಳಲಾಗಿದೆ. ಪಟ್ಟಿ ವಿಳಂಬವಾಗಿ ಪ್ರಕಟಿಸಲು ಇದು ಕಾರಣ ಎನ್ನಬಹುದು ಎಂದು ಜಿ ಪರಮೇಶ್ವರ ಅವರು ಹೇಳಿದ್ದಾರೆ. ಇದರ ಜೊತೆಗೆ ಜೆಡಿಎಸ್ ಹಾಗೂ ಬಿಜೆಪಿಯಿಂದ ಟಿಕೆಟ್ ವಂಚಿತರನ್ನು ಸೆಳೆಯಲು ಕೈ ಪಡೆ ಯೋಜನೆ ಹಾಕಿಕೊಂಡಿದೆ.