ನಿರೀಕ್ಷಿಸಿ! ಬಿಜೆಪಿಯ ಮೊದಲ ಪಟ್ಟಿಯಲ್ಲಿ ಅಚ್ಚರಿಯ ಹೆಸರು
Recommended Video

ಬೆಂಗಳೂರು, ಏಪ್ರಿಲ್ 04: ಚುನಾವಣಾ ಪ್ರಚಾರದ ನಡುವೆ ಸಾಲು ಸಾಲು ಸಭೆಗಳನ್ನು ನಡೆಸುತ್ತಿರುವ ಬಿಜೆಪಿಯ ಚುನಾವಣಾ ಸಮಿತಿ ಸದಸ್ಯರು, ಅಭ್ಯರ್ಥಿಗಳ ಮೊದಲ ಪಟ್ಟಿ ಸಿದ್ಧಪಡಿಸುತ್ತಿದ್ದಾರೆ. ಬಹುತೇಕ ಏಪ್ರಿಲ್ 15ರೊಳಗೆ ಅಧಿಕೃತ ಪಟ್ಟಿ ಘೋಷಿಸಲಾಗುತ್ತದೆ.
ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ಆಲೋಚನೆಗೆ ತಕ್ಕಂತೆ ಸ್ಥಳೀಯ ಘಟಕದ ಮುಖಂಡರನ್ನು ಕೂರಿಸಿ, ಅವರ ಸಮ್ಮುಖದಲ್ಲೇ ಗೆಲುವಿನ ಮಾನದಂಡದ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಬಿಜೆಪಿ ನಡೆಸಿರುವ ಆಂತರಿಕ ಸಮೀಕ್ಷೆಯ ವರದಿಯನ್ನು ಆಧಾರವಾಗಿಟ್ಟುಕೊಳ್ಳಲಾಗಿದೆ.
ನಾಲ್ಕು ಅಚ್ಚರಿಯ ಹೆಸರು, ಹಾಲಿ ಶಾಸಕರಾದ ಸುರೇಶ್ ಕುಮಾರ್, ಆರ್ ಅಶೋಕ್, ಮುನಿರಾಜು ಸೇರಿದಂತೆ ಹಲವರ ಕ್ಷೇತ್ರ ಬದಲಾಗುವ ಸಾಧ್ಯತೆಯಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ಏಪ್ರಿಲ್ 8 ರಿಂದ 10ರ ವರೆಗೂ ಮುಂಬೈ ಕರ್ನಾಟಕದಲ್ಲಿ ಅಮಿತ್ ಶಾ ಅವರು ಚುನಾವಣಾ ಪ್ರವಾಸ ಕೈಗೊಳ್ಳಲಿದ್ದಾರೆ. ಇದರ ಪ್ರಚಾರ ಕಾರ್ಯದ ನಡುವೆ ಹೊರವಲಯದ ರೆಸಾರ್ಟ್ನಲ್ಲಿ ಸಂಸದೀಯ ಮಂಡಳಿ ಸಭೆ ನಡೆಸಲಿದ್ದಾರೆ. ಏಪ್ರಿಲ್ 10 ರಂದು ಸಭೆ ನಡೆಯುವ ಸಾಧ್ಯತೆ ಇದೆ.
ಯಾವುದೇ ವಿವಾದಕ್ಕೆ ಒಳಗಾಗಿರದ ಅಭ್ಯರ್ಥಿಗ ಹೆಸರನ್ನು ಅಂತಿಮಗೊಳಿಸಲಾಗಿದ್ದು, ಅಮಿತ್ ಶಾ ಅವರು ನೋಡಿದ ಬಳಿಕ, ಪಟ್ಟಿ ಸಿದ್ಧಪಡಿಸಲಾಗುತ್ತದೆ. ಏಪ್ರಿಲ್ 10 ರಿಂದ ಏಪ್ರಿಲ್ 15ರೊಳಗೆ 150 ಕ್ಷೇತ್ರಗಳ ಅಭ್ಯರ್ಥಿಗಳ ಮೊದಲ ಅಧಿಕೃತ ಪಟ್ಟಿ ಪ್ರಕಟಗೊಳ್ಳಲಿದೆ.

ಮುಂದುವರೆದ ಗೊಂದಲ
ಟಿಕೆಟ್ ಖಚಿತವಾಗಲಿ, ಬಿಡಲಿ, ಸಂಭವನೀಯ ಅಭ್ಯರ್ಥಿಗಳು ಈಗಾಗಲೇ ಚುನಾವಣಾ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರ ಸಲಹೆಯಂತೆ ಅಭ್ಯರ್ಥಿಗಳು ತಮ್ಮ ಕ್ಷೇತ್ರದಲ್ಲಿ ಓಡಾಡುತ್ತಿದ್ದಾರೆ. ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಯಾವ ಸಂದರ್ಭದಲ್ಲಿ ಯಾರನ್ನು ಸ್ಪರ್ಧಿಸಲು ಸೂಚಿಸುತ್ತಾರೋ ಗೊತ್ತಿಲ್ಲ, ಯಡಿಯೂರಪ್ಪ ಬಿಟ್ಟರೆ ಯಾರಿಗೂ ಟಿಕೆಟ್ ಖಾತ್ರಿಯಿಲ್ಲ ಎಂಬ ಮಾತು ಚಾಲನೆಯಲ್ಲಿದೆ

ಆರೆಸ್ಸೆಸ್ ಸಲಹೆ, ಸೂಚನೆ, ಶಿಫಾರಸು
ಪಕ್ಷದ ಸಂಸದೀಯ ಮಂಡಳಿ ಸಭೆಯಲ್ಲಿ ಆರ್ಎಸ್ಎಸ್, ರಾಜ್ಯ ಘಟಕ ಹಾಗೂ ಕೇಂದ್ರ ಘಟಕದ ಮಾಹಿತಿ ಆಧಾರದ ಮೇಲೆ ಒಂದು ಕ್ಷೇತ್ರಕ್ಕೆ ಒಬ್ಬರೇ ಅಭ್ಯರ್ಥಿ ಘೋಷಣೆಗೆ ಮೊದಲ ಆದ್ಯತೆ. ಸುಮಾರು 90 ಕ್ಷೇತ್ರಗಳಲ್ಲಿ ಒಬ್ಬ ಅಭ್ಯರ್ಥಿಯ ಹೆಸರು ಮಾತ್ರ ಇದೆ. ಒಂದೇ ಕ್ಷೇತ್ರಕ್ಕೆ ಇಬ್ಬರು ಅಥವಾ ಮೂವರು ಅಭ್ಯರ್ಥಿಗಳು ಶಿಫಾರಸ್ಸುಗೊಂಡಿರುವ ಕಡೆಗಳಲ್ಲಿ ಸ್ಥಳೀಯ ನಾಯಕರ ಅಭಿಪ್ರಾಯ ಹಾಗೂ ತಮ್ಮ ಮಾಹಿತಿ ಸೇರಿಸಿ ಆಯ್ಕೆ ಮಾಡಲು ಬಿಜೆಪಿ ಹೊರಟಿದೆ.

ವಲಸೆ ಹಕ್ಕಿಗಳಿಗೂ ಟಿಕೆಟ್
ಮೊದಲ ಪಟ್ಟಿ ಬಿಡುಗಡೆಗೂ ಮುನ್ನವೇ ಉತರ ಕರ್ನಾಟಕ ಭಾಗದಲ್ಲಿ ಕೆಲವು ಪ್ರಭಾವೀ ಮುಖಂಡರುಗಳು ತಮ್ಮ ಪಕ್ಷಗಳನ್ನು ತೊರೆದು ಬಿಜೆಪಿ ಜೊತೆ ಕೈಜೋಡಿಸಲಿದ್ದಾರೆ. ಅಂಥವರಿಗೂ ಮೊದಲ ಪಟ್ಟಿಯಲ್ಲೇ ಸ್ಥಾನ ದೊರೆಯಲಿದೆ ಎಂದು ಇದೇ ಮೂಲಗಳು ತಿಳಿಸಿವೆ.
ದೆಹಲಿಯ ಮಹಾನಗರ ಪಾಲಿಕೆ ಹಾಗೂ ಉತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಅಭ್ಯರ್ಥಿಗಳ ಆಯ್ಕೆಗೆ ಅನುಸರಿಸಿದ ಮಾನದಂಡವನ್ನೇ ಕರ್ನಾಟಕದಲ್ಲೂ ಅಮಿತ್ ಶಾ ಪಾಲಿಸುತ್ತಿದ್ದಾರೆ. ಇದು ಬಿಜೆಪಿಯ ಹಾಲಿ ಶಾಸಕರು ಹಾಗೂ ಕೆಲವು ಮುಖಂಡರಿಗೆ ಭಾರೀ ಇರಿಸು-ಮುರಿಸು ತಂದಿದೆ.

ಅಪರಾಧಿಗಳಿಗೆ ಟಿಕೆಟ್ ಬೇಡ
ಅತ್ಯಾಚಾರ ಆರೋಪ ಹೊತ್ತಿದ ಮಾಜಿ ಸಚಿವ ಹರತಾಳು ಹಾಲಪ್ಪ ಅವರಿಗೆ ಟಿಕೆಟ್ ಇಲ್ಲ ಎಂದು ಬಿಜೆಪಿ ವರಿಷ್ಠರು ಸ್ಪಷ್ಟ ಸಂದೇಶ ಕಳಿಸುವುದಕ್ಕೂ ಮುನ್ನವೇ, ಇತ್ತೀಚೆಗೆ ಮೈಸೂರಿನಲ್ಲಿ ಅಮಿತ್ ಶಾ, ಗಣಿ ಧಣಿ ಹಾಗೂ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿಗೂ ಪಕ್ಷಕ್ಕೂ ಸಂಬಂಧ ಇಲ್ಲ ಎಂದು ಹೇಳಿರುವುದು, ಕ್ರಿಮಿನಲ್ ಆರೋಪ ಎದುರಿಸುತ್ತಿರುವವರಿಗೆ ನಡುಕ ತಂದಿದೆ. ಬಿಜೆಪಿಯಲ್ಲಿ ಕ್ರಿಮಿನಲ್ ಮೊಕದ್ದಮೆ ಎದುರಿಸುತ್ತಿರುವ ನಾಯಕರ ದೊಡ್ಡ ಪಟ್ಟಿಯೇ ಇದೆ.












Click it and Unblock the Notifications