ಚುನಾವಣೆಯಲ್ಲಿ ಬಿಜೆಪಿ ಹೀನಾಯ ಸೋಲಿಗೆ ಕಾರಣ ಬಿಚ್ಚಿಟ್ಟ ಅಭ್ಯರ್ಥಿಗಳು!
ಬೆಂಗಳೂರು: 2023ರ ಚುನಾವಣೆ ಹೀನಾಯ ಸೋಲಿನ ಆತ್ಮಾವಲೋಕನ ಮಾಡಿಕೊಳ್ಳಲು ಬಿಜೆಪಿ ಮಹತ್ವದ ಸಭೆ ನಡೆಸಿದೆ. ಸೋತಿರುವ ಬಿಜೆಪಿ ಅಭ್ಯರ್ಥಿಗಳು ತಮ್ಮ ಸೋಲಿಗೆ ಕಾರಣ ಬಿಚ್ಚಿಟ್ಟಿದ್ದಾರೆ. ಅದರಲ್ಲೂ ಹೊಸಕೋಟೆ ಕ್ಷೇತ್ರದ ಮಾಜಿ ಶಾಸಕ ಹಾಗೂ ಈ ಬಾರಿ ಚುನಾವಣೆಯ ಬಿಜೆಪಿ ಪರಾಜಿತ ಅಭ್ಯರ್ಥಿ ಎಂಟಿಬಿ ನಾಗರಾಜ್ ರೊಚ್ಚಿಗೆದ್ದರು.
ಮಾಜಿ ಸಚಿವ ಡಾ.ಕೆ.ಸುಧಾಕರ್ ಮತ್ತು ಎಂಟಿಬಿ ನಾಗರಾಜ್ ಮಧ್ಯೆ ಮುಸುಕಿನ ಗುದ್ದಾಟ ಇದೀಗ ಬಹಿರಂಗವಾಗಿದೆ. ಸೋಲಿನ ಬಗ್ಗೆ ಚರ್ಚೆಸಲು ಮಲ್ಲೇಶ್ವರಂನ ಬಿಜೆಪಿ ಕಚೇರಿಯಲ್ಲಿ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಸಮ್ಮುಖದಲ್ಲಿ ಸಭೆ ನಡೆಯಿತು. ಈ ಸಭೆಯ ವೇಳೆ ಪರಾಜಿತ ಅಭ್ಯರ್ಥಿಗಳು ಬಿಜೆಪಿ ಸೋಲಿಗೆ ಕಾರಣ ಬಿಚ್ಚಿಟ್ಟಿದ್ದಾರೆ. ಅದೇ ರೀತಿ ಮಾಜಿ ಸಚಿವ ಎಂಟಿಬಿ ನಾಗರಾಜ್ ಕೂಡ ತಮ್ಮ ಸೋಲಿಗೆ ಮತ್ತು ಪಕ್ಷದ ಸೋಲಿಗೆ ಕಾರಣ ತಿಳಿಸಿದ್ದಾರೆ. ಆಗ ಮಾಜಿ ಸಚಿವ ಸುಧಾಕರ್ ವಿರುದ್ಧ ತೀವ್ರ ಆಕ್ರೋಶವನ್ನು ಹೊರಹಾಕಿದ್ದಾರೆ. ಅದರ ಸಂಪೂರ್ಣ ಮಾಹಿತಿ ಇಲ್ಲಿದೆ ತಿಳಿಯಿರಿ.
'ಸುಧಾಕರ್ ಸೋತ, ನಮ್ಮನ್ನೂ ಸೋಲಿಸಿದ!'
ಹೌದು ಮಾಜಿ ಸಚಿವ ಸುಧಾಕರ್ ವಿರುದ್ಧ ಎಂಟಿಬಿ ನಾಗರಾಜ್ ಆಡಿದ ಮಾತುಗಳು ಹೇಗೆ ಇದ್ದವು ಎಂದರೆ, ಕೆಂಡ ಕೆಂಡವಾಗಿದ್ದರು. ಸುಧಾಕರ್ಗೆ ಉಸ್ತುವಾರಿ ನೀಡಿದರು. ಆತನೂ ಚುನಾವಣೆಯಲ್ಲಿ ಸೋತ ಮತ್ತು ನಮ್ಮನ್ನೂ ಸೋಲಿಸಿದ. ಉಸ್ತುವಾರಿ ಜವಾಬ್ದಾರಿಯನ್ನು ಸುಧಾಕರ್ ಸಮರ್ಥವಾಗಿ ನಿಭಾಯಿಸಲಿಲ್ಲ. ನಾನು ಹಣ, ಅಧಿಕಾರದ ಆಮಿಷಕ್ಕೆ ಬಿಜೆಪಿಗೆ ಬಂದವನಲ್ಲ. ನನ್ನ ಹಾಗೂ ಚಿಂತಾಮಣಿಯ ಅಭ್ಯರ್ಥಿ ಸೋಲಿಗೆ ಸುಧಾಕರ್ ಕಾರಣ ಎಂದು ಎಂಟಿಬಿ ನಾಗರಾಜ್ ನೇರ ವಾಗ್ದಾಳಿ ನಡೆಸಿದ್ದಾರೆ ಎನ್ನಲಾಗಿದೆ. ಹಾಗೇ ತಮ್ಮ ನೋವನ್ನೂ ಎಂಟಿಬಿ ನಾಗರಾಜ್ ಬಿಚ್ಚಿಟ್ಟಿದ್ದಾರೆ.
ಕಾಂಗ್ರೆಸ್ನಲ್ಲಿ ಗೆದ್ದೆ, ಇಲ್ಲಿ ಸೋತೆ!
ಇನ್ನು ಪರಾಜಿತ ಅಭ್ಯರ್ಥಿಗಳು ತಮ್ಮ ಸೋಲಿಗೆ ಕಾರಣ ಹಾಗೂ ಪಕ್ಷದ ಹಿನ್ನಡೆಗೆ ಕಾರಣ ಏನು ಅನ್ನೋದನ್ನ ತಿಳಿಸಿದ್ದಾರೆ. ಹಾಗೇ ಪಕ್ಷದ ನಾಯಕರು ಚುನಾವಣೆ ಸಂದರ್ಭದಲ್ಲಿ ಮಾಡಿದ್ದ ತಪ್ಪುಗಳ ಬಗ್ಗೆ ಮನವರಿಕೆ ಮಾಡಿಕೊಳ್ಳಲಾಯಿತು. ಹಾಗೇ ಮಾಜಿ ಸಚಿವ ಎಂಟಿಬಿ ನಾಗರಾಜ್ ಮಾತನಾಡಿ, ಆಕ್ರೋಶ ಹೊರಹಾಕಿದ್ದಾರೆ ಎನ್ನಲಾಗಿದೆ. ಕಾಂಗ್ರೆಸ್ ಪಕ್ಷದಲ್ಲಿ ಇದ್ದಾಗ 3 ಬಾರಿ ಗೆದ್ದಿದ್ದೆ, ಬಿಜೆಪಿಗೆ ಬಂದು 2 ಬಾರಿ ಸೋತೆ. ಯಡಿಯೂರಪ್ಪ ಅವರ ಮಾತಿಗೆ ಗೌರವ ನೀಡಿ ನಾನು ಬಿಜೆಪಿ ಸೇರಿದ್ದೆ. ಬಿಜೆಪಿ ಸೇರಿದ ನಂತರ 2 ಬಾರಿ ಸ್ಪರ್ಧಿಸಿ 2 ಬಾರಿಯೂ ಸೋತಿದ್ದೇನೆ ಎಂದು ಬೇಸರ ಹೊರಹಾಕಿದ್ದಾರೆ ಎನ್ನಲಾಗಿದೆ.
ಇದಿಷ್ಟೇ ಅಲ್ಲ ಇನ್ನೂ ಹಲವು ಕಾರಣಗಳನ್ನ ಬಿಜೆಪಿಯ ಸೋತ ಅಭ್ಯರ್ಥಿಗಳು ನಾಯಕರ ಎದುರು ಬಿಚ್ಚಿಟ್ಟಿದ್ದಾರೆ. ಹಾಗಾದ್ರೆ ಸ್ವತಃ ಬಿಜೆಪಿ ಪಕ್ಷದ ಸೋತ ಅಭ್ಯರ್ಥಿಗಳು ಹೇಳಿದಂತೆ ಹೀನಾಯ ಸೋಲಿಗೆ ಕಾರಣ ಏನು? ಬಿಜೆಪಿ ಇಷ್ಟು ಭೀಕರ ಸೋಲು ಎದುರಿಸಲು ಕಾರಣ ಏನಿರಬಹುದು? ಸೋತ ಅಭ್ಯರ್ಥಿಗಳು ನೀಡಿದ ಕಾರಣವೇನು? ಬನ್ನಿ ಆ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿ ತಿಳಿಯೋಣ (Karnataka Assembly Election Results 2023).
ಬಿಜೆಪಿ ಸೋಲಿಗೆ ಕಾರಣಗಳು ಇವೇನಾ?
1) 40% ಕಮೀಷನ್ ಆರೋಪ & ಭ್ರಷ್ಟಾಚಾರ ಆರೋಪ
2) ಬಿಜೆಪಿ ಅಭ್ಯರ್ಥಿಗಳ ಟಿಕೆಟ್ ಹಂಚಿಕೆ ಲೇಟ್ ಆಗಿದ್ದು
3) ಗ್ಯಾರಂಟಿ ಯೋಜನೆಗೆ ತಿರುಗೇಟು ನೀಡದೇ ಇದ್ದಿದ್ದು
4) ಹೈಕಮಾಂಡ್ ಮೇಲಿನ ಅತಿಯಾದ ಅವಲಂಬನೆ
5) ಒಳ ಮೀಸಲಾತಿ ಹಂಚಿಕೆಯ ಪರಿಣಾಮ ಒಳ ಏಟು
6) ಸರ್ಕಾರ ಇದ್ದಾಗ ಸಚಿವರು ಸ್ಪಂದಿಸದಿರುವ ಆರೋಪ
7) ಮುಖಂಡರು ಅಭ್ಯರ್ಥಿಗಳ ಮಾತಿಗೆ ಬೆಲೆ ಕೊಡಲಿಲ್ಲ
8) ಅನ್ನಭಾಗ್ಯ ಅಕ್ಕಿಯನ್ನ ಕಡಿತ ಮಾಡಿದ್ದೂ ಕಾರಣ?
9) ಪ್ರಮುಖ ನಾಯಕರು ಪಕ್ಷ ಬಿಟ್ಟಿದ್ದು ದೊಡ್ಡ ಹಿನ್ನಡೆ
ಧೈರ್ಯ ತುಂಬಿದ ಮಾಜಿ ಸಿಎಂ!
ಇನ್ನು ಬಿಜೆಪಿ ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಹೀನಾಯ ಸೋಲು ಕಂಡಿದೆ. 135 ಸ್ಥಾನ ಕಾಂಗ್ರೆಸ್ ಪಾಲಾದರೆ, ಬಿಜೆಪಿ 66 ಸ್ಥಾನಕ್ಕೆ ತೃಪ್ತಿಪಟ್ಟಿದೆ. ಸೋಲಿನ ಅವಲೋಕನ ಮಾಡಿಕೊಳ್ಳಲು ಬೆಂಗಳೂರಿನ ಮಲ್ಲೇಶ್ವರಂ ಬಿಜೆಪಿ ಕಚೇರಿಯಲ್ಲಿ ವಿಶೇಷ ಸಭೆ ನಡೆಯಿತು. ಈ ವೇಳೆ ಯಡಿಯೂರಪ್ಪ ಬಿಜೆಪಿ ಕಟ್ಟಿದ ಅಂದಿನ ಕಷ್ಟದ ದಿನಗಳನ್ನ ನೆನೆದರು. ರಾಜ್ಯದಲ್ಲಿ 2 ಸ್ಥಾನದಿಂದ ಇಲ್ಲಿಯವರೆಗೂ ಪಕ್ಷ ಕಟ್ಟಿ ಬೆಳೆಸಿದ್ದೇನೆ. ಹೀಗಾಗಿ ಯಾರೂ ಚಿಂತಿಸುವುದು ಬೇಡ, ಲೋಕಸಭೆ ಚುನಾವಣೆ ಮೂಲಕ ಮತ್ತೆ ಕಂಬ್ಯಾಕ್ ಮಾಡೋಣ ಎಂಬ ಸಂದೇಶ ಕೊಟ್ಟಿದ್ದಾರೆ. ಇದು ಚಿಂತೆಯಲ್ಲಿದ್ದ ಬಿಜೆಪಿ ನಾಯಕರಿಗೆ ಹೊಸ ಹುಮ್ಮಸ್ಸು ನೀಡಿದಂತೆ ಕಾಣುತ್ತಿದೆ.