15 ಕ್ಷೇತ್ರದ ಉಪ ಚುನಾವಣೆ; ಮತ ಎಣಿಕೆ ದಿನಾಂಕ ನಿಗದಿ
ಬೆಂಗಳೂರು, ಸೆಪ್ಟೆಂಬರ್ 29 : ಕರ್ನಾಟಕದ 15 ವಿಧಾನಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ ಘೋಷಣೆ ಮಾಡಿದ್ದ ಚುನಾವಣಾ ಆಯೋಗ ಮತ ಎಣಿಕೆ ದಿನಾಂಕ ಪ್ರಕಟಿಸಿರಲಿಲ್ಲ. ಈಗ ದಿನಾಂಕ ನಿಗದಿ ಮಾಡಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಕಳಿಸಿದೆ.
ಚುನಾವಣಾ ಆಯೋಗ ಡಿಸೆಂಬರ್ 9ರಂದು ಮತ ಎಣಿಕೆ ನಡೆಸಲಾಗುತ್ತದೆ ಎಂದು ಪತ್ರದಲ್ಲಿ ತಿಳಿಸಿದೆ. ಡಿಸೆಂಬರ್ 5ರಂದು ಚುನಾವಣೆ ನಡೆಯಲಿದೆ. ಶುಕ್ರವಾರ ದಿನಾಂಕ ನಿಗದಿ ಮಾಡಿದ್ದ ಆಯೋಗ ಮತ ಎಣಿಕೆ ದಿನಾಂಕವನ್ನು ಮಾತ್ರ ತಿಳಿಸಿರಲಿಲ್ಲ.
ನವೆಂಬರ್ 11ರಂದು ಉಪ ಚುನಾವಣೆಗೆ ಅಧಿಸೂಚನೆ ಪ್ರಕಟವಾಗಲಿದೆ. ಅಂದಿನಿಂದಲೇ ಚುನಾವಣಾ ನೀತಿ ಸಂಹಿತೆ ಜಾರಿಗೆ ಬರಲಿದೆ ಎಂದು ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ. ನೀತಿ ಸಂಹಿತೆ ಜಾರಿ ಮತ್ತು ಮತ ಎಣಿಕೆ ದಿನಾಂಕ ಘೋಷಿಸದಿರುವ ಕುರಿತು ಟೀಕೆ ವ್ಯಕ್ತವಾಗಿತ್ತು.
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ 14 ಕಾಂಗ್ರೆಸ್ ಮತ್ತು 3 ಜೆಡಿಎಸ್ ಶಾಸಕರನ್ನು ಸ್ಪೀಕರ್ ಅನರ್ಹಗೊಳಿಸಿದ್ದರು. ಈ ಪೈಕಿ 15 ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಸಲು ಆಯೋಗ ವೇಳಾಪಟ್ಟಿಯನ್ನು ಪ್ರಕಟಿಸಿದೆ.

ಎಚ್. ಡಿ. ಕುಮಾರಸ್ವಾಮಿ ಟೀಕೆ
ಚುನಾವಣಾ ಆಯೋಗ ವೇಳಾಪಟ್ಟಿ ಘೋಷಣೆ ಮಾಡಿದ ಮೇಲೆ ಪ್ರತಿಕ್ರಿಯೆ ನೀಡಿದ್ದ ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ, "ಫಲಿತಾಂಶದ ಉಲ್ಲೇಖವೇ ಇಲ್ಲದ ಮೇಲೆ ಚುನಾವಣೆ ಏಕೆ?" ಎಂದು ಪ್ರಶ್ನೆ ಮಾಡಿದ್ದರು.

ಸಂಜೀವ್ ಕುಮಾರ್ ಹೇಳಿದ್ದೇನು?
ಫಲಿತಾಂಶದ ದಿನಾಂಕದ ಬಗ್ಗೆ ಪ್ರತಿಕ್ರಿಯೆ ನೀಡಿರುವ ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್, "ಇದು ಕೇಂದ್ರ ಚುನಾವಣಾ ಆಯೋಗದಿಂದಲೇ ಬಂದ ಅಧಿಸೂಚನೆ. ಪೂರಕ ಪತ್ರವನ್ನು ಸಹ ಆಯೋಗವೇ ಮುಖ್ಯ ಕಾರ್ಯದರ್ಶಿಗಳಿಗೆ ಬರೆದಿದೆ. ಇದರ ಬಗ್ಗೆ ನನಗೆ ಯಾವ ಮಾಹಿತಿಯೂ ಇಲ್ಲ" ಎಂದು ಹೇಳಿದ್ದಾರೆ.

ಚುನಾವಣಾ ವೇಳಾಪಟ್ಟಿ
ನವೆಂಬರ್ 11 : ನಾಮಪತ್ರ ಸಲ್ಲಿಕೆ ಆರಂಭ, ನವೆಂಬರ್ 18 ನಾಮಪತ್ರ ಸಲ್ಲಿಕೆಗೆ ಕೊನೆ ದಿನ, ನವೆಂಬರ್ 19 ನಾಮಪತ್ರಗಳ ಪರಿಶೀಲನೆ, ನವೆಂಬರ್ 21 ನಾಮಪತ್ರ ವಾಪಸ್ ಪಡೆಯಲು ಕೊನೆ ದಿನ, ಡಿಸೆಂಬರ್ 5 ಮತದಾನ (7 ಗಂಟೆಯಿಂದ 6), ಡಿಸೆಂಬರ್ 9 ಮತ ಎಣಿಕೆ.

ಸುಪ್ರೀಂನಲ್ಲಿ ವಿಚಾರಣೆ ಬಾಕಿ
15 ಅನರ್ಹ ಶಾಸಕರು ಸ್ಪೀಕರ್ ಆದೇಶ ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಯ ವಿಚಾರಣೆ ಸುಪ್ರೀಂಕೋರ್ಟ್ನಲ್ಲಿ ಇನ್ನೂ ಬಾಕಿ ಇದೆ. ಅಕ್ಟೋಬರ್ 22ರ ಬಳಿಕ ಅರ್ಜಿಯ ವಿಚಾರಣೆ ಮತ್ತೆ ಆರಂಭವಾಗಲಿದೆ. ಮುಸ್ಕಿ ಮತ್ತು ರಾಜರಾಜೇಶ್ವರಿ ನಗರ ಕ್ಷೇತ್ರಕ್ಕೆ ಇನ್ನೂ ಚುನಾವಣೆ ದಿನಾಂಕವನ್ನು ಘೋಷಣೆ ಮಾಡಿಲ್ಲ.












Click it and Unblock the Notifications