Eedina pre-poll Survey: ಸ್ಪಷ್ಟ ಬಹುಮತದ ಅಂಕಿ ಅಂಶ ಕೊಟ್ಟ ಈದಿನ.ಕಾಮ್ ಸಮೀಕ್ಷೆ; ಯಾವ ಪಕ್ಷಕ್ಕೆ ಬಹುಮತ?
ಬೆಂಗಳೂರು, ಏಪ್ರಿಲ್. 27: ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು, ಇದೇ ವೇಳೆ ಅನೇಕ ಚುನಾವಣಾ ಪೂರ್ವ ಸಮೀಕ್ಷೆಗಳು ಬಹಿರಂಗವಾಗಿದೆ. ಯಾವ ಸಮೀಕ್ಷೆಯಲ್ಲಿಯೂ ಒಂದು ಪಕ್ಷಕ್ಕೆ ಸ್ಪಷ್ಟ ಬಹುಮತವಿಲ್ಲ. ಬಹುತೇಕ ಎಲ್ಲಾ ಸಮೀಕ್ಷೆಗಳಲ್ಲಿಯೂ ಮುಂಬರುವ ಚುನಾವಣೆಯಲ್ಲಿ ಅತಂತ್ರ ಫಲಿತಾಂಶ ಬರುವ ಮುನ್ಸೂಚನೆ ನೀಡಿವೆ. ಇದೇ ವೇಳೆ ಕನ್ನಡದ ವೆಬ್ತಾಣ ಈದಿನ.ಕಾಮ್ ಕರುನಾಡಿನ ಜನರ ಮನದಾಳ ತಿಳಿಯುವ ಪ್ರಯತ್ನ ನಡೆಸಿದೆ.
ಈದಿನ.ಕಾಮ್ ರಾಜ್ಯದ ವಿವಿಧ ಭಾಗಗಳ ನಾನಾ ಸಮುದಾಯಗಳನ್ನು ಒಳಗೊಂಡು ಚುನಾವಣಾ ಪೂರ್ವ ಸಮೀಕ್ಷೆ ನಡೆಸಿದೆ. ರಾಜ್ಯದಲ್ಲಿ ಮತ್ತೆ ಅತಂತ್ರ ಸ್ಥಿತಿ ಎದುರಾಗಬಹುದು ಎಂದು ಬಹುತೇಕ ಚುನಾವಣಾ ಪೂರ್ವ ಸಮೀಕ್ಷೆಗಳು ಅಭಿಪ್ರಾಯಪಟ್ಟಿವೆ. ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಹಾಗೂ ಕಾಂಗ್ರೆಸ್ಗೆ ಸಂಪೂರ್ಣ ಬಹುಮತ ಸಿಗುವುದಿಲ್ಲ, ಜೆಡಿಎಸ್ ಕಿಂಗ್ ಮೇಕರ್ ಆಗಲಿವೆ ಎಂದಿದೆ. ಆದರೆ, ಈದಿನ. ಕಾಮ್ ಮಾತ್ರ ಕಾಂಗ್ರೆಸ್ಗೆ ಸ್ಪಷ್ಟ ಬಹುಮತ ದೊರೆಯಲಿದೆ ಎಂದು ತಿಳಿಸಿದೆ.

2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಸ್ಪಷ್ಟವಾದ ಬಹುಮತ ಸಿಗಲಿದೆ ಎಂಬ ಅಂಶವನ್ನು ಈದಿನ.ಕಾಮ್ನ ಸಮೀಕ್ಷೆಯ ಅಂಕಿ-ಅಂಶಗಳು ಹೊರಹಾಕಿವೆ. ರಾಜ್ಯದಲ್ಲಿ ಕಾಂಗ್ರೆಸ್ 132 ರಿಂದ 140 ಸ್ಥಾನಗಳನ್ನು ಸಲೀಸಾಗಿ ದಾಟಲಿದೆ ಎಂದು ಸಮೀಕ್ಷೆ ಬಹಿರಂಗಪಡಿಸಿದೆ.
ಈದಿನ.ಕಾಮ್ ರಾಜ್ಯದ 183 ಕ್ಷೇತ್ರಗಳಲ್ಲಿ ಚುನಾವಣಾ ಪೂರ್ವ ಸಮೀಕ್ಷೆ ನಡೆಸಿದ್ದು, ಇನ್ನೂ 28 ಕ್ಷೇತ್ರಗಳ ಸಮೀಕ್ಷೆ ನಡೆಯಬೇಕಿದೆ. ರಾಜ್ಯದ ಜನಸಂಖ್ಯೆಯನ್ನು ಪ್ರತಿನಿಧಿಸಲು ವಿವಿಧ ಸಮುದಾಯಗಳಿಂದ ಆಯ್ಕೆಯಾದ ಸುಮಾರು 40,000 ಜನರನ್ನು ಸಮೀಕ್ಷೆಗೆ ಆಯ್ಕೆ ಮಾಡಲಾಗಿದೆ. ಪ್ರತಿ ಕ್ಷೇತ್ರದಲ್ಲಿ 16 ಬೂತ್ಗಳ ಜನರನ್ನು ಸಮೀಕ್ಷೆಗೆ ಒಳಪಡಿಸಲಾಗಿದೆ. ಮಾರ್ಚ್ 3ರಿಂದ ಇಂದಿನ ದಿನದವರೆಗೆ ಸಮೀಕ್ಷೆ ನಡೆಸಲಾಗುತ್ತಿದೆ. ಸಮೀಕ್ಷೆಯಲ್ಲಿ 55% ಪುರುಷರು ಮತ್ತು 45% ಮಹಿಳೆಯರು ಭಾಗಿಯಾಗಿದ್ದಾರೆ. 1,483 ಮತಗಟ್ಟೆಗಳ ಸಮೀಕ್ಷೆ ನಡೆಸಲಾಗಿದೆ.

ಕಳೆದ ಚುನಾವಣೆಯಲ್ಲಿ 104 ವಿಧಾನಸಭಾ ಕ್ಷೇತ್ರದಲ್ಲಿ ಜಯಭೇರಿ ಬಾರಿಸಿದ್ದ ಆಡಲಿತರೂಢ ಬಿಜೆಪಿ ಈ ಬಾರಿ 57 ರಿಂದ 65 ಸ್ಥಾನಗಳಿಗೆ ಕುಸಿಯಲಿದೆ. ಹಿಂದಿನ ಚುನಾವಣೆಯಲ್ಲಿ 80 ಸ್ಥಾನಗಳಿಗೆ ತೃಪ್ತಿ ಪಟ್ಟಿದ್ದ ಕಾಂಗ್ರೆಸ್ ಈ ಬಾರಿ ಅಮೋಘ 132 ರಿಂದ 140 ಸ್ಥಾನಗಳಲ್ಲಿ ಜಯ ಗಳಿಸಸಲಿದೆ. ಇನ್ನು, ಕಿಂಗ್ ಮೇಕರ್ ಆಗಿದ್ದ ಜೆಡಿಎಸ್ ಕಳೆದ ಬಾರಿ 37ಗಳಲ್ಲಿ ಗೆಲುವು ದಾಖಲಿಸಿತ್ತು. ಈ ಬಾರಿ 19 ರಿಂದ 25 ಸ್ಥಾನಗಳಿಗೆ ತೃಪ್ತಿ ಪಡಬೇಕಾಗುತ್ತದೆ. 3 ಸ್ಥಾನಗಳನ್ನು ಗಳಿಸಿದ್ದ ಇತರರು ಈ ಬಾರಿ 1 ರಿಂದ 5 ಸ್ಥಾನಗಳನ್ನು ಗಳಿಸಬಹುದು.
ಕಾಂಗ್ರೆಸ್ ಈ ಬಾರಿ ಭರ್ಜರಿ ಬಹುಮತ ಪಡೆಯಲಿದೆ ಎಂದು ಸಮೀಕ್ಷೆ ಹೇಳಿದೆ. ಈ ಹಿಂದೆ ಇಂತಹ ಬಹುಮತವನ್ನು ಪಡೆದುಕೊಂಡಿದ್ದದ್ದು 2013 ಮತ್ತು 1999 ರಲ್ಲಿ. ಈ ಸಾರಿ ಅವೆರಡನ್ನೂ ಕಾಂಗ್ರೆಸ್ ದಾಟಲಿದ್ದು, 1989ರ ನಂತರ ಮೂರು ದಶಕಗಳಲ್ಲಿ ಇದೇ ಅತಿ ದೊಡ್ಡ ಸಾಧನೆಯಾಗಬಹುದು ಎಂದು ಸಮೀಕ್ಷೆಯ ಅಂಕಿ ಅಂಶಗಳು ತಿಳಿಸುತ್ತಿವೆ.

ಇನ್ನು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರದ ವಿರುದ್ಧ ಕರ್ನಾಟಕದಲ್ಲಿ ಭಾರಿ ಆಡಳಿತ ವಿರೋಧಿ ಅಲೆ ಎದ್ದಿದೆ. ಇದು ಹಿಂದಿನ ಎಲ್ಲಾ ಸರ್ಕಾರಗಳಿಗಿಂತ ಅತ್ಯಂತ ಭ್ರಷ್ಟ ಸರ್ಕಾರ ಎಂಬ ಹಣೆಪಟ್ಟಿಯನ್ನು ಪಡೆದುಕೊಂಡಿದೆ ಎಂದು ಕನ್ನಡದ ಈದಿನ.ಕಾಮ್ ನಡೆಸಿದ ಚುನಾವಣಾ ಪೂರ್ವ ಸಮೀಕ್ಷೆ ಮಾಹಿತಿ ಹೊರಹಾಕಿದೆ.












Click it and Unblock the Notifications