ಉಪಚುನಾವಣೆ: ಅಂಗವಿಕಲ ಮತದಾರರಿಗೆ ಆಯೋಗದಿಂದ ಸೌಲಭ್ಯ
ಬೆಂಗಳೂರು, ಅಕ್ಟೋಬರ್ 30: ಭಾರತೀಯ ಚುನಾವಣಾ ಆಯೋಗವು ಉಪ ಚುನಾವಣೆ ಸಂದರ್ಭದಲ್ಲಿ ವಿಕಲಚೇತನರ ಮನೆಗಳಿಗೆ ತೆರಳಿ ಮತಗಟ್ಟೆಗೆ ಬರಲು ವಾಹನ ಸೌಲಭ್ಯವನ್ನು ಕಲ್ಪಿಸಲು ಮುಂದಾಗಿದೆ.
ದೇಶದಲ್ಲೇ ಮೊದಲ ಬಾರಿಗೆ ಇಂತಹ ಒಂದು ವ್ಯವಸ್ಥೆಯನ್ನು ಚುನಾವಣಾ ಆಯೋಗ ಮಾಡಿದ್ದು, ಮತದಾನದ ದಿನವಾದ ನವೆಂಬರ್ 3ರಂದು ವಿಕಲಚೇತನ ಮತದಾರರ ಮನೆ ಬಾಗಿಲಿನಿಂದ ಮತಗಟ್ಟೆಯವರೆಗೆ ಕರೆದೊಯ್ದು ಮತ್ತೆ ಅವರ ಮನೆಗೆ ಕರೆತರಲು ವಾಹನ ಸೌಲಭ್ಯ ಕಲ್ಪಿಸುತ್ತಿದೆ.
ವಿಕಲಚೇತನ ಮತದಾರರು ಕೂಡಾ ಪ್ರಜಾಪ್ರಭುತ್ವದಲ್ಲಿ ಮತದಾನ ಮಾಡುವ ಮೂಲಕ ತಮ್ಮ ಹಕ್ಕನ್ನು ಚಲಾಯಿಸಲು ಚುನಾವಣಾ ಆಯೋಗ ಈ ಹೊಸ ಸೌಲಭ್ಯವನ್ನು ರಾಜ್ಯದಲ್ಲಿ ಪ್ರಪ್ರಥಮ ಬಾರಿಗೆ ಜಾರಿಗೊಳಿಸುತ್ತಿದೆ. ಆಸಕ್ತರು ಚುನಾವಣಾ ಆಯೋಗದ (Chunavana)ಆ್ಯಪ್ನಲ್ಲಿ ಇಂದಿನಿಂದ ನವೆಂಬರ್ 1 ರ ರಾತ್ರಿ 11.59 ಗಂಟೆವರೆಗೆ ನೋಂದಾಯಿಸಿಕೊಳ್ಳಬಹುದಾಗಿದೆ.

ಚುನಾವಣಾ ಆಯೋಗದ ಆ್ಯಪ್ (Chunavana)ಗೂಗಲ್ ಸ್ಟೋರ್ ನಿಂದ ಸ್ಮಾರ್ಟ್ ಫೋನಿನಲ್ಲಿ ಡೌನ್ಲೋಡ್ ಮಾಡಿಕೊಂಡು ವಾಹನ ಸೇವೆಗಳ ವಿಭಾಗಕ್ಕೆ ಭೇಟಿ ನೀಡಿ ಅಲ್ಲಿ ವಿಕಲಚೇತನರು ತಮ್ಮ ಚುನಾವಣಾ ಗುರುತಿನ ಚೀಟಿಯ ಸಂಖ್ಯೆ ಹಾಗೂ ಮೊಬೈಲ್ ಸಂಖ್ಯೆಯನ್ನು ನಮೂದಿಸಿದಾಗ ಅವರ ನೋಂದಾಯಿಸಿಕೊಂಡ ಮೊಬೈಲ್ಗೆ ಒ.ಟಿ.ಪಿ. ಸಂಖ್ಯೆ ಬರುತ್ತದೆ. ಈ ಸಂಖ್ಯೆಯನ್ನು ಪುನರ್ ನಮೂದಿಸುವ ಮೂಲಕ ನೋಂದಾಯಿಸಿಕೊಂಡು ವಾಹನ ಸೌಲಭ್ಯವನ್ನು ಪಡೆಯಬಹುದಾಗಿದೆ.
ಚುನಾವಣಾ ಆಯೋಗ ಈಗಾಗಲೇ ರಾಜ್ಯದಲ್ಲಿರುವ ಮತದಾನದ ಹಕ್ಕನ್ನು ಹೊಂದಿರುವ ವಿಕಲಚೇತನರ ಮಾಹಿತಿಯನ್ನು ಸಮಾಜ ಕಲ್ಯಾಣ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗಳಿಂದ ಪಡೆದಿದೆ. ಪ್ರಸ್ತುತ ನಡೆಯಲಿರುವ ಉಪ ಚುನಾವಣೆಯ ಮತಕ್ಷೇತ್ರಗಳ ವ್ಯಾಪ್ತಿಯಲ್ಲಿ ಈ ನೂತನ ಸೌಲಭ್ಯ ವಿಸ್ತರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.












Click it and Unblock the Notifications