ಸಮವಸ್ತ್ರದಲ್ಲೇ ನೇಣಿಗೆ ಶರಣಾದ ಡಿವೈಎಸ್ಪಿ ಗಣಪತಿ
ಮಡಿಕೇರಿ, ಜುಲೈ, 07: ರಾಜ್ಯದಲ್ಲಿ ಮತ್ತೊಬ್ಬ ಡಿವೈಎಸ್ ಪಿ ಗುರುವಾರ ಸಂಜೆ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮಂಗಳೂರಿನ ಐಜಿ ಕಚೇರಿಯಲ್ಲಿ ಡಿವೈ ಎಸ್ ಪಿಯಾಗಿ ಕೆಲಸ ಮಾಡುತ್ತಿದ್ದ ಕೊಡಗು ಕುಶಾಲನಗರದ ಎಂ ಕೆ ಗಣಪತಿ ಮಡಿಕೇರಿಯ ವಿನಾಯಕ ಲಾಡ್ಜ್ ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಪೊಲೀಸ್ ಅಧಿಕಾರಿ ಆತ್ಮಹತ್ಯೆ ಮಾಡಿಕೊಳ್ಳಲು ಹಿರಿಯ ಅಧಿಕಾರಿಗಳ ಕಿರುಕುಳವೇ ಕಾರಣ ಎಂದು ಹೇಳಲಾಗಿದೆ. ಗಣಪತಿ ಅವರನ್ನು ಇತ್ತೀಚೆಗೆ ಬೆಂಗಳೂರಿನಿಂದ ಮಂಗಳೂರಿಗೆ ವರ್ಗಾವಣೆ ಮಾಡಲಾಗಿತ್ತು.[ಡಿವೈಎಸ್ಪಿ ಕಲ್ಲಪ್ಪ ಸಾವಿಗೆ ಕಾರಣವೇನು? ಎಸ್ಪಿ ಸಂತೋಷ್ ಪ್ರತಿಕ್ರಿಯೆ]

ಬೆಂಗಳೂರಿನಿಂದ ಮಂಗಳೂರಿನ ಐಜಿ ಕಚೇರಿಗೆ ಇತ್ತೀಚೆಗೆ ವರ್ಗಾವಣೆ ಮಾಡಲಾಗಿತ್ತು. ಮಾಧ್ಯಮಗಳಿಗೆ ಸಿಕ್ಕಿರುವ ವಿಡಿಯೋ ಒಂದರಲ್ಲಿ ಗಣಪತಿ ಹಿರಿಯ ಅಧಿಕಾರಿಗಳ ಮೇಲೆ ನೇರವಾಗಿ ಆರೋಪ ಮಾಡಿದ್ದು ದಾಖಲಾಗಿದೆ. ಸಬ್ ಇನ್ಸ್ ಪೆಕ್ಟರ್ ಆಗಿ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ಗಣಪತಿ ಅವರನ್ನು ಬಡ್ತಿ ನೀಡಿ ಮಂಗಳೂರಿಗೆ ವರ್ಗಾವಣೆ ಮಾಡಲಾಗಿತ್ತು.[ಚಿಕ್ಕಮಗಳೂರು ಡಿವೈಎಸ್ಪಿ ಕಲ್ಲಪ್ಪ ಹಂಡಿಭಾಗ್ ಆತ್ಮಹತ್ಯೆ]
ಗಣಪತಿ ಡೆತ್ ನೋಟ್ ವೊಂದನ್ನು ಬರೆದಿಟ್ಟಿದ್ದು ಕೆಲವು ರಾಜಕಾರಣಿಗಳು ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳ ಹೆಸರನ್ನು ಬರೆದಿಟ್ಟಿದ್ದಾರೆ ಎನ್ನಲಾಗಿದ್ದು ತನಿಖೆ ನಂತರ ಇನ್ನಷ್ಟು ಮಾಹಿತಿ ಹೊರಬೀಳಲಿದೆ. ಆತ್ಮಹತ್ಯೆ ಮಾಡಿಕೊಂಡಿರುವ ವಸತಿ ಗೃಹಕ್ಕೆ ಕೊಡಗು ಜಿಲ್ಲೆಯ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಮಾಹಿತಿ ಕಲೆ ಹಾಕಿದ್ದಾರೆ.[ಕಲ್ಲಪ್ಪ ಪ್ರಕರಣದಲ್ಲಿ ಕಿಡ್ನಾಪ್ ಆಗಿದ್ದ ತೇಜಸ್ ಹೇಳಿದ್ದೇನು?]
ಉದ್ಯಮಿಯನ್ನು ಅಪಹರಣ ಮಾಡಿದ ಆರೋಪ ಎದುರಿಸುತ್ತಿದ್ದ ಚಿಕ್ಕಮಗಳೂರು ಡಿವೈಎಸ್ಪಿ ಕಲ್ಲಪ್ಪ ಹಂಡಿಭಾಗ್ ಜುಲೈ 5 ಮಂಗಳವಾರ ಮುಂಜಾನೆ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಮುರಗೋಡ ಠಾಣಾ ವ್ಯಾಪ್ತಿಯಲ್ಲಿರುವ ತಮ್ಮ ಮಾವನ ಮನೆಯಲ್ಲಿ ನೇಣಿಗೆ ಶರಣಾಗಿದ್ದರು.
ಪೊಲೀಸ್ ಇಲಾಖೆಯಲ್ಲಿ ಎಲ್ಲವೂ ಸರಿಯಿಲ್ಲ
ಡಿವೈಎಸ್ಪಿ ಅನುಪಮಾ ಶೆಣೈ ರಾಜೀನಾಮೆಯಿಂದ ಆರಂಭವಾದ ಸರಣಿ ಮುಂದುವರಿಯುತ್ತಲೇ ಇದೆ. ಶೆಣೈ ರಾಜೀನಾಮೆ ನೀಡಿ ಇಲಾಖೆಯಿಂದ ಹೊರಬಂದರೆ ಕಲ್ಲಪ್ಪ ಮತ್ತು ಗಣಪತಿ ಆತ್ಮಹತ್ಯೆಗೆ ಶರಣಾಗಿರುವುದು ಪೊಲೀಸ್ ಇಲಾಖೆಯಲ್ಲಿನ ಹೊಂದಾಣಿಕೆ ಕೊರತೆ ಕತೆಯನ್ನು ಎತ್ತಿ ಹೇಳುತ್ತಿವೆ.












Click it and Unblock the Notifications