ಚಿತ್ರಗಳು : ಪಂಚಭೂತಗಳಲ್ಲಿ ಲೀನರಾದ ಡಿವೈಎಸ್ಪಿ ಗಣಪತಿ
ಮಡಿಕೇರಿ, ಜುಲೈ 09 : ಸೋಮವಾರಪೇಟೆ ತಾಲೂಕಿನ ರಂಗಸಮುದ್ರ ಕಾಫಿತೋಟದಲ್ಲಿ ಡಿವೈಎಸ್ಪಿ ಎಂ.ಕೆ.ಗಣಪತಿ ಅವರ ಅಂತ್ಯಕ್ರಿಯೆ ಕೊಡವ ಸಂಪ್ರದಾಯದಂತೆ ಶುಕ್ರವಾರ ಸಂಜೆ ನೆರವೇರಿತು. ಇದೇ ಸಂದರ್ಭ ಜಿಲ್ಲಾ ಸಶಸ್ತ್ರ ದಳದ ಇನ್ಸ್ಪೆಕ್ಟರ್ ಕೆ.ಬಿ.ದೇವಯ್ಯ ಅವರ ನೇತೃತ್ವದಲ್ಲಿ ಕುಶಲತೋಪುಗಳನ್ನು ಸಿಡಿಸುವ ಮೂಲಕ ಸರ್ಕಾರಿ ಗೌರವ ಸಲ್ಲಿಸಲಾಯಿತು.
ಮಡಿಕೇರಿಯಿಂದ ರಂಗಸಮುದ್ರದ ಮನೆಗೆ ಮಧ್ಯಾಹ್ನ 1 ಗಂಟೆಗೆ ಆಂಬ್ಯುಲೆನ್ಸ್ನಲ್ಲಿ ಪಾರ್ಥಿವ ಶರೀರವನ್ನು ತರಲಾಯಿತು. ಬಳಿಕ ಕುಟುಂಬ ಸದಸ್ಯರು ಕೊಡವ ಸಂಪ್ರದಾಯದಂತೆ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿದರು. ಈ ಸಂದರ್ಭ ನೆರದಿದ್ದ ಕುಟುಂಬಸ್ಥರು, ಊರಿನ ನಾಗರಿಕರು, ಬಂಧುಬಾಂಧವರು ಅಂತಿಮದರ್ಶನ ಪಡೆದರು. [ಗಣಪತಿ ಆತ್ಮಹತ್ಯೆ, ಶುಕ್ರವಾರದ 10 ಬೆಳವಣಿಗೆಗಳು]

ಮನೆಗೆ ಪಾರ್ಥೀವ ಶರೀರ ಆಗಮಿಸುತ್ತಿದ್ದಂತೆ ತಂದೆ ಎಂ.ಕೆ.ಕುಶಾಲಪ್ಪ ಮತ್ತು ತಾಯಿ ಪೊನ್ನಮ್ಮ ಅವರ ದುಃಖದ ಕಟ್ಟೆ ಒಡೆದಿದ್ದು, ನೆರದವರ ರೋಧನ ಮುಗಿಲು ಮುಟ್ಟಿತ್ತು. ಸಹೋದರ ಹಾಗೂ ರಾಮನಗರದ ಡಿವೈಎಸ್ಪಿ ಆಗಿರುವ ತಮ್ಮಯ್ಯ ಹಾಗೂ ಇನ್ನೋರ್ವ ಸಹೋದರ ಮಾಚಯ್ಯ ಅವರುಗಳು ಮತ್ತು ಕುಟುಂಬ ಸದಸ್ಯರು ಸೇರಿದಂತೆ ನೂರಾರು ಜನ ಅಂತಿಮ ನಮನ ಸಲ್ಲಿಸಿದರು. [ಗಣಪತಿ ಆತ್ಮಹತ್ಯೆ : ಯಾರು, ಏನು ಹೇಳಿದರು?]

ಬಳಿಕ ಅಂತ್ಯಕ್ರಿಯೆಗೆ ಸಿದ್ಧತೆ ಮಾಡಲಾಗಿದ್ದ ತಂದೆಯವರಿಗೆ ಸೇರಿದ ತೋಟಕ್ಕೆ ಪಾರ್ಥಿವ ಶರೀರವನ್ನು ಕೊಂಡೊಯ್ದು ಅಲ್ಲಿ ಕೆಲವು ಅಂತಿಮ ವಿಧಿವಿಧಾನಗಳನ್ನು ನೆರವೇರಿಸಲಾಯಿತು. ಚಿತೆಗೆ ಗಣಪತಿಯವರ ಹಿರಿಯ ಪುತ್ರ ನೆಹಲ್ ಅಗ್ನಿಸ್ಪರ್ಶ ಮಾಡಿದರು. ಗಣಪತಿ ಅಮರ್ ರಹೇ ಎನ್ನುವ ಮೂಲಕ ಪಂಚಭೂತಗಳಲ್ಲಿ ಲೀನರಾದರು. [ವಿಡಿಯೋ - ಡಿವೈಎಸ್ ಪಿ ಗಣಪತಿ ಕಡೇ ಸಂದರ್ಶನ]

ಕೊಡಗು ಮೈಸೂರು ಸಂಸದ ಪ್ರತಾಪ್ ಸಿಂಹ, ಜಿಲ್ಲೆಯ ಶಾಸಕರುಗಳಾದ ಎಂ.ಪಿ.ಅಪ್ಪಚ್ಚು ರಂಜನ್, ಕೆ.ಜಿ.ಬೋಪಯ್ಯ, ಬಿಜೆಪಿ ವಕ್ತಾರ ಹಾಗೂ ವಿಧಾನ ಪರಿಷತ್ ಮಾಜಿ ಸದಸ್ಯ ಗೊ. ಮಧುಸೂದನ್, ಬಿಜೆಪಿ ಜಿಲ್ಲಾಧ್ಯಕ್ಷ ಮನುಮುತ್ತಪ್ಪ ಮುಂತಾದವರು ಅಂತಿಮ ದರ್ಶನ ಪಡೆದರು.

ದಕ್ಷಿಣ ವಲಯ ಪೊಲೀಸ್ ಮಹಾನಿರ್ದೇಶಕ ಬಿ.ಕೆ.ಸಿಂಗ್, ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಪೊಲೀಸ್ ಮಹಾ ನಿರ್ದೇಶಕ ಅರುಣ್ ಚಕ್ರವರ್ತಿ, ಜಿಲ್ಲಾಧಿಕಾರಿ ಡಾ.ವಿ.ಆರ್.ಡಿಸೋಜ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಜೇಂದ್ರ ಪ್ರಸಾದ್ ಅವರು ಗಣಪತಿ ಅವರಿಗೆ ಅಂತಿಮ ನಮನ ಸಲ್ಲಿಸಿದರು.













Click it and Unblock the Notifications