ಸಂಪುಟ ಸಭೆಯಲ್ಲಿ ಎಚ್ದಿಕೆಗೆ ರಮೇಶ್ ಜಾರಕಿಹೊಳಿ ಕೊಟ್ಟ ಪತ್ರದಲ್ಲಿ ಇದ್ದದ್ದಾದರೂ ಏನು?
Recommended Video

ಸಮ್ಮಿಶ್ರ ಸರಕಾರ ಅಧಿಕಾರಕ್ಕೆ ಬಂದ ನಂತರ ಬಹುತೇಕ ಎಲ್ಲಾ ಸಚಿವ ಸಂಪುಟ ಸಭೆಗೆ ಗೈರಾಗಿದ್ದ ಪೌರಾಡಳಿತ ಸಚಿವ ರಮೇಶ್ ಜಾರಕಿಹೊಳಿ, ಸೋಮವಾರ (ನ 19) ನಡೆದ ಸಭೆಯಲ್ಲಿ ಭಾಗವಹಿಸಿದ್ದರು. ಇದು ಹಲವು ಅನುಮಾನಗಳಿಗೂ ಕಾರಣವಾಯಿತು.
ಸಚಿವ ಸಂಪುಟ ಸಭೆ ಪೂರ್ಣವಾಗುವ ತನಕವೂ ಕಾಯದೇ ರಮೇಶ್ ಜಾರಕಿಹೊಳಿ ಹೊರಬಂದಿದ್ದು, ಯಡಿಯೂರಪ್ಪ ಆಪ್ತನ ಮದುವೆಯಲ್ಲಿ ರಮೇಶ್ ಭಾಗವಹಿಸಿದ್ದು ಒಂದಕ್ಕೊಂದು ಸಿಂಕ್ ಆಗಿದ್ದರಿಂದ, ರಮೇಶ್ ಜಾರಕಿಹೊಳಿ ರಾಜೀನಾಮೆ ನೀಡಿದ್ದಾರೆ ಎನ್ನುವ ಸುದ್ದಿ ಹರಿಯಲು ಕಾರಣವಾಯಿತು.
ಸಚಿವ ಸಂಪುಟ ಸಭೆಯಲ್ಲಿ, ಜಾರಕಿಹೊಳಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿಗೆ ಸೀಲ್ಡ್ ಮಾಡಿದ ಕವರ್ ನಲ್ಲಿ ಪತ್ರವೊಂದನ್ನು ನೀಡಿದ್ದಾರೆ ಎನ್ನುವ ಸುದ್ದಿ, ಸದ್ಯ ಭಾರೀ ಕುತೂಹಲಕ್ಕೆ ಕಾರಣವಾಗಿದೆ. ಅದರಲ್ಲಿ, ಏನಿರಬಹುದು ಎನ್ನುವ ಚರ್ಚೆಯೂ ಆರಂಭವಾಗಿದೆ.
ಸಮ್ಮಿಶ್ರ ಸರಕಾರ ಅಧಿಕಾರಕ್ಕೆ ಬಂದಾಗಿನಿಂದ, ಸರಕಾರದ ವಿರುದ್ದ ಮತ್ತು ತಮ್ಮದೇ ಪಕ್ಷದ ನಾಯಕರ ವಿರುದ್ದ ಅಪಸ್ವರ ಎತ್ತುತ್ತಲೇ ಬರುತ್ತಿರುವ ರಮೇಶ್ ಜಾರಕಿಹೊಳಿ, ಸತತ ನಾಲ್ಕು ಸಂಪುಟ ಸಭೆಗೆ ಗೈರಾಗಿ, ಸೋಮವಾರದ ಸಭೆಗೆ ಮಾತ್ರ ಆಗಮಿಸಿದ್ದರು.
ರೈತರ ಕಬ್ಬಿನ ಚಳುವಳಿ ತಾರಕಕ್ಕೇರಿರುವ ಈ ಹೊತ್ತಿನಲ್ಲಿ, ಖುದ್ದು ಸಕ್ಕರೆ ಕಾರ್ಖಾನೆಯ ಮಾಲೀಕರೂ ಆಗಿರುವ ರಮೇಶ್ ನೀಡಿರುವ ಪತ್ರ, ರೈತರಿಗೆ ಸಂಬಂಧ ಪಟ್ಟಿದ್ದೋ ಅಥವಾ ತಮ್ಮ ಮುಂದಿನ ರಾಜಕೀಯ ನಡೆಯ ಬಗ್ಗೆಯೋ ಎನ್ನುವುದು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.

ಖಾಸಗಿಯಾಗಿ ಬಿಎಸ್ವೈ ಮತ್ತು ರಮೇಶ್ ಮಾತುಕತೆ
ಜಲಸಂಪನ್ಮೂಲ ಖಾತೆಯ ಸಚಿವ ಡಿ ಕೆ ಶಿವಕುಮಾರ್ ಮತ್ತು ಮಾಜಿ ಕೆಪಿಸಿಸಿ ಮಹಿಳಾ ಘಟಕದ ಮಾಜಿ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳ್ಕರ್ ಜೊತೆಗೆ ವಿರಸವನ್ನು ಮುಂದುವರಿಸಿಕೊಂಡು ಬಂದಿರುವ ರಮೇಶ್ ಜಾರಕಿಹೊಳಿ, ಯಡಿಯೂರಪ್ಪನವರ ಆಪ್ತ ಸಂತೋಷ್ ಅವರ ಮದುವೆ ಆರತಕ್ಷತೆಯಲ್ಲಿ ಭಾಗವಹಿಸಿದ್ದರು. ಆ ವೇಳೆ, ಖಾಸಗಿಯಾಗಿ ಬಿಎಸ್ವೈ ಮತ್ತು ರಮೇಶ್ ಮಾತುಕತೆ ನಡೆಸಿದ್ದರು ಎನ್ನಲಾಗುತ್ತಿದೆ.

ಬಳ್ಳಾರಿ ಉಸ್ತುವಾರಿಯ ಬಗ್ಗೆ ಉಲ್ಲೇಖಿಸಿದ್ದಾರೆ ಎನ್ನುವ ಸುದ್ದಿ
ರಮೇಶ್ ಜಾರಕಿಹೊಳಿ ನೀಡಿದ ಪತ್ರದಲ್ಲಿ ಬಳ್ಳಾರಿ ಉಸ್ತುವಾರಿಯ ಬಗ್ಗೆ ಉಲ್ಲೇಖಿಸಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಸದ್ಯ, ಅಲ್ಲಿಯ ಉಸ್ತುವಾರಿಯಾಗಿರುವ ಡಿ ಕೆ ಶಿವಕುಮಾರ್ ಬದಲಿಗೆ, ತನ್ನ ಆಪ್ತರೊಬ್ಬರನ್ನು ಅಲ್ಲಿಗೆ ನೇಮಿಸಬೇಕು ಎನ್ನುವ ಮನವಿಯನ್ನು ರಮೇಶ್ ಪತ್ರದಲ್ಲಿ ಸಲ್ಲಿಸಿದ್ದಾರೆ. ರಮೇಶ್, ತಮ್ಮ ಬೆಂಬಲಿಗ ಬಿ ನಾಗೇಂದ್ರ ಅವರ ಹೆಸರನ್ನು ಸೂಚಿಸಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ.

ಸಚಿವ ಸಂಪುಟ ವಿಸ್ತರಣೆಯ ಬಗ್ಗೆ, ರಮೇಶ್ ಜಾರಕಿಹೊಳಿ
ಸದಾ ಒಂದಲ್ಲಾ ಒಂದು ಕಾರಣದಿಂದ ಮುಂದಕ್ಕೆ ಹೋಗುತ್ತಿರುವ ಸಚಿವ ಸಂಪುಟ ವಿಸ್ತರಣೆಯ ಬಗ್ಗೆ, ರಮೇಶ್ ಜಾರಕಿಹೊಳಿ, ಮುಖ್ಯಮಂತ್ರಿಗಳಿಗೆ ಖಡಕ್ ಪತ್ರ ಬರೆದಿದ್ದಾರೆ ಎನ್ನುವ ಮಾತೂ ಚಾಲ್ತಿಯಲ್ಲಿದೆ. ಆದರೆ, ಇದ್ಯಾವುದರ ಬಗ್ಗೆಯೂ ಸುಳಿವು ನೀಡದ ರಮೇಶ್, ತಮ್ಮ ನಡುವೆ ಏನೂ ಭಿನ್ನಾಭಿಪ್ರಾಯವಿಲ್ಲ ಎಂದಿದ್ದಾರೆ.

ನನ್ನ ಬೇಡಿಕೆ ಈಡೇರದಿದ್ದರೆ, ನನ್ನ ದಾರಿ ನನಗೆ
ಸಂಪುಟ ವಿಸ್ತರಣೆ ಮತ್ತೆ ಮುಂದಕ್ಕೆ ಹೋಗುವ ಸಾಧ್ಯತೆಯನ್ನು ಅರಿತು, ರಮೇಶ್ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ ಎನ್ನುವ ಸುದ್ದಿಯೂ ಹರಿದಾಡುತ್ತಿದೆ. ನನ್ನ ಬೇಡಿಕೆ ಈಡೇರದಿದ್ದರೆ, ನನ್ನ ದಾರಿ ನನಗೆ ಎನ್ನುವ ಸಂದೇಶವನ್ನು ಪತ್ರದ ಮೂಲಕ, ರಮೇಶ್ ಸಿಎಂಗೆ ತಿಳಿಸಿರುವ ಪತ್ರವೇ ಅದು ಎನ್ನುವ ಚರ್ಚೆಯೂ ನಡೆಯುತ್ತಿದೆ.

ಕೆಪಿಸಿಸಿ ಅಧ್ಯಕ್ಷರು ಹೇಳುವುದೇನು
ಕಾರಣಾಂತರದಿಂದ ರಮೇಶ್ ಜಾರಕಿಹೊಳಿ ನಾಲ್ಕೈದು ಸಂಪುಟ ಸಭೆಗೆ ಹಾಜರಾಗಲಿಲ್ಲ, ಇದಕ್ಕೆ ಬೇರೆ ಯಾವ ಕಾರಣನೂ ಇಲ್ಲ. ಅವರು ರಾಜೀನಾಮೆ ನೀಡುತ್ತಾರೆ ಎನ್ನುವ ಸುದ್ದಿ ಮಾಧ್ಯಮಗಳ ಸೃಷ್ಟಿ. ಸಮ್ಮಿಶ್ರ ಸರಕಾರದಲ್ಲಿ ಯಾವುದೇ ಗೊಂದಲವಿಲ್ಲ ಎನ್ನುವ ಹೇಳಿಕೆಯನ್ನು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ನೀಡಿದ್ದಾರೆ.












Click it and Unblock the Notifications