ಶಿಕ್ಷಣ ಇಲಾಖೆ ದ್ವಂದ್ವ ನೀತಿ: ಎರಡು ದಿನದಲ್ಲಿ ಮೌಲ್ಯಾಂಕನ ಅಪ್ಡೇಟ್ಗೆ ಡೆಡ್ ಲೈನ್
ಬೆಂಗಳೂರು, ಮೇ. 15: ಕೊರೊನಾ 2 ನೇ ಅಲೆ ಅಬ್ಬರದ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ಶಾಲೆಗಳನ್ನು ಬಂದ್ ಮಾಡುವಂತೆ ಶಿಕ್ಷಣ ಇಲಾಖೆ ಆದೇಶ ನೀಡಿತ್ತು. ಇದೀಗ ಏಕಾಏಕಿ ಎರಡು ದಿನದಲ್ಲಿ ವಿದ್ಯಾರ್ಥಿಗಳ ಮೌಲ್ಯಾಂಕನ ಅಪ್ಡೇಟ್ ಮಾಡುವಂತೆ ಸೂಚನೆ ನೀಡಿ ಗೊಂದಲ ವಾತಾವರಣ ನಿರ್ಮಾಣ ಮಾಡಿದೆ. ಶಾಲೆ ಬಂದ್ ಇರುವ ಕಾರಣ ಶಿಕ್ಷಕರು ಶಾಲೆಗಳಿಗೆ ಭೇಟಿ ನೀಡಲಾಗುತ್ತಿಲ್ಲ. ಪರಿಸ್ಥಿತಿ ಹೀಗಿದ್ದರೂ ವಿದ್ಯಾರ್ಥಿಗಳ ಮೌಲ್ಯಾಂಕನ ಅಪ್ಡೇಟ್ ಮಾಡಲು ಎರಡು ದಿನ ಕಾಲಾವಕಾಶ ಕೊಟ್ಟು ಶಿಕ್ಷಣ ಇಲಾಖೆ ಆದೇಶ ಹೊರಡಿಸಿರುವುದು ಗೊಂದಲಗಳಿಗೆ ಎಡೆ ಮಾಡಿಕೊಟ್ಟಿದೆ.
ರಾಜ್ಯದಲ್ಲಿ ಪರೀಕ್ಷೆ ಇಲ್ಲದೇ 1 ರಿಂದ 9 ನೇ ತರಗತಿ ವರೆಗಿನ ವಿದ್ಯಾರ್ಥಿಗಳನ್ನು ಪಾಸು ಮಾಡುವಂತೆ ಸರ್ಕಾರ ಆದೇಶಿಸಿದೆ. ಆನ್ಲೈನ್ ಮತ್ತು ವಿದ್ಯಾಗಮ ಅಡಿ ಕಲಿತ ಮಕ್ಕಳಿಗೆ ಈಗಾಗಲೇ ನಡೆಸಿರುವ ಪರೀಕ್ಷೆಗಳನ್ನು ಆಧರಿಸಿ ಅಂಕ ನೀಡಿ ಫಲಿತಾಂಶ ಪ್ರಕಟಿಸಲು ಶಿಕ್ಷಣ ಇಲಾಖೆ ಸೂಚಿಸಿತ್ತು. ಕೊರೊನಾ ಎರಡನೇ ಅಲೆ ಹೆಚ್ಚಾದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಮೇ. 24 ರ ವರೆಗೆ ಲಾಕ್ ಡೌನ್ ನಿಯಮ ಜಾರಿಗೊಳಿಸಲಾಗಿದೆ.
ಶಾಲೆಗಳನ್ನು ಸಂಪೂರ್ಣ ಬಂದ್ ಮಾಡಿ ಸರ್ಕಾರ ಆದೇಶ ಹೊರಿಡಿಸಿದೆ. ಇಂತಹ ಕಷ್ಟ ಕಾಲದಲ್ಲಿ ಮೇ. 17 ರೊಳಗಾಗಿ 1 ರಿಂದ 9 ನೇ ತರಗತಿ ವರೆಗಿನ ವಿದ್ಯಾರ್ಥಿಗಳ ಮೌಲ್ಯಾಂಕನ ಅಪಡೇಟ್ ಮಾಡಲು ಸೂಚಿಸಿ ಹೊರಡಸಿರುವ ಆದೇಶದ ವಿರುದ್ಧ ಖಾಸಗಿ ಶಿಕ್ಷಣ ಸಂಸ್ಥೆಗಳು ತಿರುಗಿ ಬಿದ್ದಿವೆ.
Recommended Video
ಒಂದಡೆ ಲಾಕ್ ಡೌನ್ ಅಂತೀರಿ. ಇನ್ನೊಂದಡೆ ಮೌಲ್ಯಾಂಕನಕ್ಕೆ ಎರಡು ದಿನ ನಿಗದಿ ಮಾಡುತ್ತೀರಿ . ಯಾವ ರೀತಿ ಖಾಸಗಿ ಶಾಲೆಗಳು ಕಾರ್ಯ ನಿರ್ವಹಿಸಬೇಕು. ಇಂತಹ ಕಷ್ಟ ಕಾಲದಲ್ಲಿ ಶಾಲೆ ತೆರೆದು ಮೌಲ್ಯಾಂಕನ ನೀಡಲು ಸಾಧ್ಯವಿಲ್ಲ. ರುಪ್ಸಾ ಸಂಘಟಿತ ಖಾಸಗಿ ಶಾಲೆಗಳು ಮೇ. 24 ರ ವರೆಗೂ ಮೌಲ್ಯಾಂಕನ ನೀಡುವುದಿಲ್ಲ ಎಂಧು ಪ್ರಕಟಿಸಿದೆ. ಈ ಕುರಿತು ಶಿಕ್ಷಣ ಸಚಿವರಿಗೆ ಪತ್ರ ಬರೆಯುವುದಾಗಿ ರುಪ್ಸಾ ಅಧ್ಯಕ್ಷ ಹಲನೂರು ಲೇಪಾಕ್ಷಿ ತಿಳಿಸಿದ್ದಾರೆ.