ಸರ್ ಎಂ.ವಿಶ್ವೇಶ್ವರಯ್ಯ ಪುತ್ಥಳಿಗೆ ಕಲ್ಲು ಹೊಡೆದ ಕುಡುಕ
ಮಂಡ್ಯ, ಡಿಸೆಂಬರ್, 04: ಕುಡಿದ ಮತ್ತಿನಲ್ಲಿ ಯಾರು ಏನು ಮಾಡುತ್ತಾರೋ ಅವರಿಗೇ ತಿಳಿದಿರುವುದಿಲ್ಲ. ಇಲ್ಲಿ ಕಂಠ ಮಟ್ಟ ಕುಡಿದ ಕುಡುಕನೊಬ್ಬ ಬಾರ್ ನಿಂದ ನೇರವಾಗಿ ಮನೆಗೆ ಹೋಗದೆ ಗ್ರಾಮದಲ್ಲಿದ್ದ ಸರ್ ಎಂ. ವಿಶ್ವೇಶ್ವರಯ್ಯ ಅವರ ಪುತ್ಥಳಿಗೆ ಕಲ್ಲು ಹೊಡೆದು ಭಗ್ನಗೊಳಿಸಿದ್ದಾನೆ.
ಮದ್ದೂರು ತಾಲೂಕಿನ ದೊಡ್ಡಂಕನಹಳ್ಳಿ ಗ್ರಾಮದ ನಿವಾಸಿ ಬೋರ ಅಲಿಯಾಸ್ ನವೀನ್ ಕುಡಿದ ಮತ್ತಿನಲ್ಲಿ ಪ್ರತಿಮೆಗೆ ಕಲ್ಲು ಹೊಡೆದ ಮಹಾಭೂಪ. ಈ ವಿಚಾರ ತಿಳಿದ ಪೊಲೀಸರು ಗ್ರಾಮಸ್ಥರ ದೂರಿನ ಮೇರೆಗೆ ಈತನನ್ನು ಬಂಧಿಸಿದ್ದಾರೆ.[ದೆಹಲಿ ಮೆಟ್ರೋ ಸ್ಟೇಷನ್ ಗೆ ಸರ್ ಎಂವಿ ಹೆಸರು]

ನವೀನ್ ಗೆ ಮೊದಲಿನಿಂದಲೂ ಕುಡಿತದ ಅಭ್ಯಾಸ ಇತ್ತು. ಈತ ಬುಧವಾರ ರಾತ್ರಿ ಎಂದಿನಂತೆ ಮದ್ಯ ಸೇವಿಸಿದ್ದಾನೆ. ಕುಡಿದ ನವೀನ್ ನೇರವಾಗಿ ಮನೆಗೆ ತೆರಳದೆ ರಾತ್ರಿ ಹೊತ್ತು ಯಾರು ಇಲ್ಲದನ್ನು ಗಮನಿಸಿ ರಸ್ತೆಯಲ್ಲಿದ್ದ ಕಲ್ಲುಗಳನ್ನು ತೆಗೆದು ವಿಶ್ವೇಶ್ವರಯ್ಯ ಅವರ ಪುತ್ಥಳಿಗೆ ಎಸೆದಿದ್ದಾನೆ. ಬಿದ್ದ ಕಲ್ಲುಗಳಿಂದ ಪ್ರತಿಮೆಯ ಮೂಗು, ಹಣೆ, ಹಿಂಭಾಗ ವಿರೂಪಗೊಂಡಿದೆ.[ವಿಶ್ವೇಶ್ವರಯ್ಯ ವಸ್ತು ಸಂಗ್ರಹಾಲಯ ಪ್ರವೇಶ ಶುಲ್ಕ ಏರಿಕೆ]
ಈ ಕೃತ್ಯ ಗ್ರಾಮಸ್ಥರ ಅರಿವಿಗೆ ಬಂದಿದ್ದು, ಆರೋಪಿ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ. ದೂರು ಸ್ವೀಕರಿಸಿದ ಸಿಪಿಐ ಪ್ರಸಾದ್, ಕೆಸ್ತೂರು ಪಿಎಸ್ಐ ವನರಾಜು ಆರೋಪಿ ನವೀನ್ ನನ್ನು ಬಂಧಿಸಿದ್ದಾರೆ. ಘಟನೆ ಖಂಡಿಸಿ ದೊಡ್ಡಂಕನಹಳ್ಳಿಯಲ್ಲಿ ಅಖಿಲ ಕರ್ನಾಟಕ ಜನಪರ ವೇದಿಕೆ ಕಾರ್ಯಕರ್ತರು ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿದ್ದು, ಪೊಲೀಸರು ಪರಿಸ್ಥಿತಿ ಉಗ್ರರೂಪ ತಾಳದಂತೆ ನೋಡಿಕೊಂಡಿದ್ದಾರೆ.












Click it and Unblock the Notifications