'ಮತ್ತೆ ಪ್ರಧಾನ ಮಂತ್ರಿಯಾಗುವ ವ್ಯಾಮೋಹ ಇಲ್ಲ'
ಬೆಂಗಳೂರು, ಡಿ.3- ನನಗೆ ಮತ್ತೆ ಪ್ರಧಾನಮಂತ್ರಿಯಾಗುವ ವ್ಯಾಮೋಹ ಇಲ್ಲ- ಹೀಗಂತ ಯಾರು, ಯಾರಿಗೆ, ಎಷ್ಟನೆಯ ಬಾರಿಗೆ ಹೇಳಿದರು ಎಂಬುದು ಖಂಡಿತ ನಮಗೂ ಜ್ಞಾಪಕವಿಲ್ಲ. ಆದರೂ ಜಾತ್ಯಾತೀತ ಜನತಾದಳದ ಧುರೀಣ, ಮಾಜಿ ಪ್ರಧಾನಿ ಎಚ್ಡಿ ದೇವೇಗೌಡರು ಮತ್ತೊಮ್ಮೆ/ಮಗದೊಮ್ಮೆ ತಮಗಿನ್ನು ಪ್ರಧಾನಿಯಾಗುವ ವ್ಯಾಮೋಹವಿಲ್ಲವೆಂದು ಇಂದು ಹೇಳಿದ್ದಾರೆ.
ಮತ್ತೆ ಪ್ರಧಾನಿಯಾಗೋಲ್ಲ; ಆದರೆ ರಾಜ್ಯದಲ್ಲಿ ಜೆಡಿಎಸ್ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಬೇಕು ಎಂಬ ಇಚ್ಛೆ ಇದೆ. ಹಾಗಾಗಿ ಪ್ರತಿಯೊಬ್ಬ ಕಾರ್ಯಕರ್ತರೂ ದೇವೇಗೌಡರಾಗಬೇಕು' ಎಂದು ಮಾಜಿ ಪ್ರಧಾನಿ ಗೌಡರು ತಮ್ಮ ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.

ನಮ್ಮ JDS ಪಕ್ಷ ಲೆಕ್ಕಕ್ಕೇ ಇಲ್ವಾ?
ಪಕ್ಷದ ಬೆಂಗಳೂರು ಘಟಕದ ಅಧ್ಯಕ್ಷರಾಗಿ ರತನ್ ಸಿಂಗ್ ಅವರು ಆಯ್ಕೆಯಾದ ಸಂದರ್ಭದಲ್ಲಿ ಪಕ್ಷದ ಕಚೇರಿಯಲ್ಲಿಂದು ಅವರನ್ನು ಅಭಿನಂದಿಸಿ ಮಾತನಾಡಿದ ದೊಡ್ಡಗೌಡರು, ಕಳೆದ 10 ವರ್ಷಗಳಲ್ಲಿ ರಾಜಕಾರಣ ಕೆಟ್ಟು ಹೋಗಿದೆ. ಎಲ್ಲಿ ನೋಡಿದ್ರೂ ಬರೀ ಕಾಂಗ್ರೆಸ್ ಹಾಗೂ ಬಿಜೆಪಿಗಳನ್ನೇ ವೈಭವೀಕರಿಸುತ್ತಿದ್ದಾರೆ. ನಮ್ಮ ಪಕ್ಷ ಲೆಕ್ಕಕ್ಕೇ ಇಲ್ವಾ?' ಎಂದು ನೊಂದು ನುಡಿದರು.

ದ್ವೇಷ ರಾಜಕಾರಣ ಬಿಟ್ಟು ಪಕ್ಷ ಅಧಿಕಾರಕ್ಕೆ ತನ್ನಿ
'ಇಂತಹ ಸಂದರ್ಭದಲ್ಲಿ ನಾವು ಮನೆಯಲ್ಲಿ ಕೂರಬಾರದು. ಪಕ್ಷ ಸಂಘಟನೆ ಮಾಡಬೇಕು. ಈ ಪಕ್ಷದ ಅಳಿವು-ಉಳಿವು ನಿಮ್ಮ ಕೈಯಲ್ಲೇ ಇದೆ. ದ್ವೇಷದ ರಾಜಕಾರಣ ಬಿಟ್ಟು ಜೆಡಿಎಸ್ ಅನ್ನು ಮತ್ತೆ ಅಧಿಕಾರಕ್ಕೆ ತರಲು ಪ್ರತಿಯೊಬ್ಬರೂ ಶ್ರಮಿಸಬೇಕು' ಎಂದು ಗೌಡರು ಕೈ ಮುಗಿದು ಬೇಡಿಕೊಂಡರು.
ಕಾರ್ಯಕ್ರಮದಲ್ಲಿ ರಾಜ್ಯಾಧ್ಯಕ್ಷ ಎ ಕೃಷ್ಣಪ್ಪ, ಮುಖಂಡರಾದ ನಾರಾಯಣರಾವ್, ಎಚ್ ಸಿ ನೀರಾವರಿ, ಅಬ್ದುಲ್ ಅಜೀಂ, ಪಾಲಿಕೆ ಸದಸ್ಯರಾದ ಆರ್ ಪ್ರಕಾಶ್, ತಿಮ್ಮೇಗೌಡ, ಮುಖಂಡ ಡೇವಿಡ್ ಸಿಮಿಯೊನ್ ಮತ್ತಿತರರು ಹಾಜರಿದ್ದರು.

ಯಡಿಯೂರಪ್ಪರನ್ನು ಮತ್ತೆ ಬಿಜೆಪಿಗೆ ಕರೆ ತರುವುದು ಖಚಿತ
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಮತ್ತೆ ಬಿಜೆಪಿಗೆ ಕರೆ ತರುವುದು ಖಚಿತವಾಗಿದೆ. ಏಕೆಂದರೆ ಅವರಲ್ಲಿ ಒಂದು ಶಕ್ತಿ ಇದೆ ಎಂದು ಮೆಚ್ಚುಗೆ ಸೂಚಿಸಿದ ಗೌಡರು, ಅದು ಯಾವ ಶಕ್ತಿ ಎಂಬುದು ಇಲ್ಲಿ ಚರ್ಚೆ ಬೇಡ. ಅದೇ ರೀತಿ ನಾವೂ ಕೂಡ ಸಣ್ಣಪುಟ್ಟ ತಪ್ಪು ಮಾಡಿದವರು ಮತ್ತು ನಿಷ್ಕ್ರಿಯರಾಗಿರುವ ಕಾರ್ಯಕರ್ತರನ್ನು ಮತ್ತೆ ಪಕ್ಷಕ್ಕೆ ಕರೆತರಬೇಕು. ಅವರ ಮನೆಗೇ ಹೋಗಿ ಕರೆ ತರೋಣ. ಒಟ್ಟಿನಲ್ಲಿ ನಮ್ಮ ಪಕ್ಷವನ್ನು ಬಲಿಷ್ಠಗೊಳಿಸೋಣ ಎಂದು ದೇವೇಗೌಡರು ಹೇಳಿದರು.

ಸಿದ್ದರಾಮಯ್ಯ ನನ್ನ ಫೋಟೊ ತೆಗೆಸಿದ್ದಾರೆ:
ಹಿಂದಿನ ನಮ್ಮ ಸೋಲಿಗೆ ನಾವೇ ಕಾರಣ. ನಾವು ಯಾರನ್ನೂ ದೂಷಿಸುವುದು ಬೇಡ. ಯಾರನ್ನೂ ಲಘುವಾಗಿ ಪರಿಗಣಿಸುವುದು ಬೇಡ. ಮುಖ್ಯಮಂತ್ರಿ ಸಿದ್ದರಾಮಯ್ಯ ನನ್ನ ಬಗ್ಗೆ ಲಘುವಾಗಿ ಮಾತನಾಡಿದ್ದಾರೆ. ನನ್ನ ಫೋಟೊ ತೆಗೆಸಿದ್ದಾರೆ. ಆದರೂ ಇದನ್ನು ನಾವು ಲಘುವಾಗಿ ಪರಿಗಣಿಸಿಲ್ಲ. ಸಹನೆ, ತಾಳ್ಮೆ ನಮಗೆ ಮುಖ್ಯ. ರಾಜಕಾರಣದಲ್ಲಿ ಯಾರೂ ಶತ್ರುಗಳಲ್ಲ, ಮಿತ್ರರೂ ಅಲ್ಲ. ಆಯಾಯ ಕಾಲಕ್ಕೆ ತಕ್ಕಂತೆ ಅವರು ಬದಲಾಗುತ್ತಾರೆ. ಆದರೆ ಯಾರೂ ಕೂಡ ಸೇಡಿನ ರಾಜಕಾರಣ ಮಾಡಬಾರದು ಎಂದು ದೇವೇಗೌಡರು ಸಲಹೆ ನೀಡಿದರು.












Click it and Unblock the Notifications