ಬಿ.ಎಸ್.ಯಡಿಯೂರಪ್ಪನವರ ಕಣ್ಣೀರೇ ಬಿಜೆಪಿಗೆ ಶಾಪ; ಪರೋಕ್ಷವಾಗಿ ಎಂ ಪಿ ರೇಣುಕಾಚಾರ್ಯ ವಾಗ್ದಾಳಿ ನಡೆಸಿದ್ದು ಯಾರಿಗೆ?
ಶಿವಮೊಗ್ಗ, ಅಕ್ಟೋಬರ್ 10: ಬಿ.ಎಸ್.ಯಡಿಯೂರಪ್ಪನವರ ಕಣ್ಣೀರೇ ಬಿಜೆಪಿಗೆ ಶಾಪ. ಅವರು ಕಣ್ಣೀರು ಹಾಕಿದ್ದರಿಂದಲೇ ರಾಜ್ಯದಲ್ಲಿ ಬಿಜೆಪಿ ನೆಲಕಚ್ಚಿದೆ. ಬಿಜೆಪಿಗೆ ನಿಮ್ಮ ಕೊಡುಗೆ ಏನು? ಎಂದು ಪರೋಕ್ಷವಾಗಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್ ವಿರುದ್ಧ ಮಾಜಿ ಶಾಸಕ ಎಂ ಪಿ ರೇಣುಕಾಚಾರ್ಯ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಶಿವಮೊಗ್ಗದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಹೀನಾಯವಾಗಿ ಸೋಲು ಕಂಡ ಬಳಿಕ ಪಕ್ಷ ನಾಯಕ ವಿರುದ್ದ ಪದೇ ಪದೇ ಎಂ ಪಿ ರೇಣುಚಾರ್ಯ ಅವರು ವಾಗ್ದಾಳಿ ನಡೆಸಿದ್ದು, ಇದೀಗ ಮತ್ತೆ ಬಿ ಎಲ್ ಸಂತೋಷ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬಿ.ಎಸ್.ಯಡಿಯೂರಪ್ಪನವರು ಸೈಕಲ್, ಬೈಕ್, ಕಾರು ಮೂಲಕ ಪಕ್ಷ ಸಂಘಟಿಸಿದ್ದಾರೆ. 2005-06ರಲ್ಲಿ ಬಿಜೆಪಿ ಕಚೇರಿಗೆ ಬಂದು ಪಕ್ಷ ನಿಯಂತ್ರಿಸುತ್ತಿದ್ದೀರಿ? ಬಿಜೆಪಿಗೆ ನಿಮ್ಮ ಕೊಡುಗೆ ಏನು? ನೀವು ಪಕ್ಷ ಕಟ್ಟಿ ಬೆಳೆಸಿದ್ದೀರಾ? ಹೋರಾಟ, ಪಾದಯಾತ್ರೆ ಮಾಡಿದ್ರಾ? ಜೈಲಿಗೆ ಎಷ್ಟುಬಾರಿ ಹೋಗಿದ್ದಿರಿ ಎಂದು ಪರೋಕ್ಷವಾಗಿ ಬಿ ಎಲ್ ಸಂತೋಷ್ ವಿರುದ್ದ ಎಂ ಪಿ ರೇಣುಕಾಚಾರ್ಯ ಕುಟುಕಿದ್ದಾರೆ.
ರಾಜ್ಯದಲ್ಲಿ ರಾಜಕೀಯವಾಗಿ ಮಾಜಿ ಮುಖ್ಯಮಂತ್ರಿ ಹಾಗೂ ಲಿಂಗಾಯತ ನಾಯಕರಾದ ಬಿಎಸ್ ಯಡಿಯೂರಪ್ಪ ಅವರನ್ನು ಮುಗಿಸಿದರಲ್ಲ. ಈಗ ನಾಯಕತ್ವ ಎಲ್ಲಿದೆ. ಆತ್ಮಾವಲೋಕನ ಮಾಡಿಕೊಳ್ಳಿ. ರಾಜಕಾರಣದಲ್ಲಿ ಯಾವತ್ತೂ ಸರ್ವಾಧಿಕಾರಿ ಧೋರಣೆ ಮಾಡಬೇಡಿ ವಾಗ್ದಾಳಿ ಮಾಡಿದ್ದಾರೆ.
ರಾಜ್ಯದಲ್ಲಿ ಬಿಎಸ್ ಯಡಿಯೂರಪ್ಪ ನಿರ್ಲಕ್ಷಿಸಿದರೆ ಬಿಜೆಪಿ ಇನ್ನಷ್ಟು ನೆಲಕಚ್ಚುತ್ತ. ನೀವು ಒಂದು ಗ್ರಾಮ ಪಂಚಾಯಿತ ಚುನಾವಣೆಯಲ್ಲಿ ಗೆಲ್ಲಿಸಲು ಸಾಧ್ಯವಿಲ್ಲ. ಕರ್ನಾಟಕದ ಕೋರ್ ಕಮಿಟಿಯಲ್ಲಿ ತೀರ್ಮಾನ ಆಗೋದು ಒಂದು, ದೆಹಲಿಗೆ ಹೋದ ಕೂಡಲೇ ಅದು ಬದಲಾಗುತ್ತೆ ಎಂದು ಬಹಿರಂಗವಾಗಿ ಅಸಮಾಧಾನ ಹೊರ ಹಾಕಿದ್ದಾರೆ.
ಇನ್ನೂ ದೆಹಲಿ ನಾಯಕ ವಿರುದ್ದ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ ರೇಣುಕಾಚಾರ್ಯ, ದೆಹಲಿಗೆ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಹೋದರೆ ಮುಕ್ತವಾಗಿ ಅವಕಾಶ ಸಿಗುತ್ತದೆ. ಅದೇ ನಮ್ಮ ನಾಯಕರಾದ ಬಿ ಎಸ್ ಯಡಿಯೂರಪ್ಪರನ್ನು ಯಾವ ರೀತಿ ನಡೆಸಿಕೊಂಡ್ರು ಗೊತ್ತಿದೆ. ದೆಹಲಿಯಲ್ಲಿ ಕೂತಿರುವ ಮಹಾನುಭಾವ ಅದನ್ನು ಬದಲು ಮಾಡುತ್ತಾರೆ ಎಂದು ಕಿಡಿಕಾರಿದ್ದಾರೆ.

ಬಿಜೆಪಿ ಪಕ್ಷಕ್ಕಾಗಿ ಯಡಿಯೂರಪ್ಪನವರು ಸಾಕಷ್ಟಯ ಹೋರಾಟ ಮಾಡಿದ್ದಾರೆ. ಹೋರಾಟದ ಹಿನ್ನೆಲೆಯಿಂದ ಬಂದವರು ಯಡಿಯೂರಪ್ಪ ನವರು. ಒಬ್ಬ ಶಿಲ್ಪಿಯಿದ್ದಂತೆ. ಕಾಡುಗೊಲ್ಲ ರೀತಿ ಇದ್ದ ನನ್ನನ್ನು ಪರಿವರ್ತನೆ ಮಾಡಿದ್ದು ಬಿಎಸ್ ಯಡಿಯೂರಪ್ಪ. ಇಲ್ಲದಿದ್ದರೆ ಇವತ್ತು ಬೀಡಿ ಸೇದುತ್ತ, ಎಣ್ಣೆ ಹೊಡ್ಕೊಂಡು ಇರುತ್ತಿದ್ದೆ ಎಂದು ಹೇಳಿದರು.
ಇನ್ನೂ ಲೋಕಸಭಾ ಚುನಾವಣೆಗೆ ಜೆಡಿಎಸ್ ಜೊತೆಗೆ ಮೈತ್ರಿ ವಿಚಾರವಾಗಿ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಜೆಡಿಎಸ್ ಬಿಜೆಪಿ ಜೊತೆ ಮೈತ್ರಿ ಆಗಿದೆ. ಇನ್ನು ಅಲ್ಪಸಂಖ್ಯಾತರು ಯಾರಿಗೆ ಮತ ಹಾಕ್ತಾರೆ? ಎಂದು ಪ್ರಶ್ನಿಸಿದ ಅವರು, ಆದರೂ, ಮತಗಳನ್ನು ಡಿವೈಡ್ ಮಾಡುವ ಕಾರ್ಯ ನಡೆದಿದೆ. ಬಹುಸಂಖ್ಯಾತ ಹಿಂದೂಗಳು ನಿಮಗೆ ಬೇಡವೇ? ವೋಟ್ ಹಾಕಿಲ್ವಾ? ತಪ್ಪಿತಸ್ಥರನ್ನು ಮುಲಾಜಿಲ್ಲದೇ ಎನ್ಕೌಂಟರ್ ಮಾಡಬೇಕು. ಕೇವಲ ಬಂಧಿಸಿದರೆ ಸಾಲದು ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ವಿಧಾನಸಭಾ ಚುನಾವಣೆಯ ಸೋಲಿನ ಬಳಿಕ ರಾಜ್ಯಾಧ್ಯಕ್ಷರ ಆಯ್ಕೆ ವಿಳಂಬವಾಗುತ್ತಿರುವ ಕುರಿತು ಮಾತನಾಡಿ, ರಾಜ್ಯಾಧ್ಯಕ್ಷ ಸ್ಥಾನಕ್ಕೆ ವರ್ಚಸ್ಸು ಇರುವ ನಾಯಕರು ಬೇಕು. ಮುಂದೆ ಲೋಕಸಭೆ ಚುನಾವಣೆ ಬರುತ್ತೇ. ಮತ್ತೊಮ್ಮೆ ನರೇಂದ್ರ ಮೋದಿ ಗೆಲ್ಲಬೇಕು. ಇನ್ನೂ 2-3 ತಿಂಗಳು ರಾಜ್ಯದ ಅಧ್ಯಕ್ಷರು ಇಲ್ಲ. ವಿಪಕ್ಷ ನಾಯಕರು ಇಲ್ಲ ಎಂದು ತಿಳಿಸಿದರು.












Click it and Unblock the Notifications