ಬಿಎಂಎಸ್ ಟ್ರಸ್ಟ್ ಅಕ್ರಮ ಬಗ್ಗೆ ಪ್ರಧಾನಿಗೆ ದಾಖಲೆ ಸಮೇತ ಪತ್ರ: ಎಚ್ಡಿಕೆ
ಬೆಂಗಳೂರು, ಸೆಪ್ಟೆಂಬರ್ 26: ಬಹುಕೋಟಿ ರೂಪಾಯಿಗಳ ಬಿಎಂಎಸ್ ಸಾರ್ವಜನಿಕ ಶಿಕ್ಷಣ ದತ್ತಿ ಟ್ರಸ್ಟ್ ಹಗರಣದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆಯುವುದು ಖಚಿತ. ಹಗರಣದ ಕುರಿತ ಎಲ್ಲ ದಾಖಲೆಗಳನ್ನು ಪ್ರಧಾನಿ ಅವರ ಕಚೇರಿಗೆ ತಲುಪಿಸಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ತಿಳಿಸಿದರು.
ಜೆಡಿಎಸ್ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಮಾಧ್ಯಮಗಳ ಜತೆ ಅವರು ಮಾತನಾಡಿದ ಅವರು, ಪ್ರಧಾನಿ ಆವರು ಸಮಯ ಬಂದಾಗಲೆಲ್ಲ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಲೇ ಇದ್ದಾರೆ. 20% ಕಮೀಷನ್ ಬಗ್ಗೆ ಮೊದಲು ಮಾತನಾಡಿದ್ದೆ ಅವರು. ಈಗ ಅವರದೇ ಪಕ್ಷ ಅಧಿಕಾರದಲ್ಲಿ ಇರುವ ಕರ್ನಾಟಕದಲ್ಲಿ 100% ತಾಂಡವವಾಡುತ್ತಿದೆ. ಈಗ ಅವರು ಏನು ಹೇಳುತ್ತಾರೆ ಎನ್ನುವುದನ್ನು ನಾನು ಕಾದು ನೋಡುತ್ತೇನೆ ಎಂದು ಹೇಳಿದರು.
ನನ್ನ ಬಳಿ ಬಿಎಂಎಸ್ ಟ್ರಸ್ಟ್ ಅಕ್ರಮದ ಕುರಿತ ಎಲ್ಲ ದಾಖಲೆಗಳನ್ನು ಪ್ರಧಾನಿ ಅವರಿಗೆ ತಲುಪಿಸುತ್ತೇನೆ. ದಾಖಲೆಗಳ ಸಮೇತ ವಿಧಾನಸಭೆಯಲ್ಲಿ ದಾಖಲೆಗಳನ್ನ ಇಟ್ಟು ಮಾತನಾಡಿದರೂ ಬಿಜೆಪಿ ಸರಕಾರಕ್ಕೆ ತನಿಖೆ ಮಾಡಿಸುವ ದೈರ್ಯ ಇಲ್ಲ. ತಾಕತ್ತು, ದಮ್ಮು ಎಂದೆಲ್ಲ ಮಾತನಾಡುವ ಮುಖ್ಯಮಂತ್ರಿಗಳಿಗೆ ತನಿಖೆಗೆ ಆದೇಶ ನೀಡುವ ದೈರ್ಯ ಇಲ್ಲ ಎಂದು ಕುಮಾರಸ್ವಾಮಿ ಅವರು ಚಾಟಿ ಬೀಸಿದರು.

ಬಿಜೆಪಿ ಭಂಡತನ ಪ್ರದರ್ಶನ ಮಾಡುತ್ತಿದೆ. ದಾಖಲೆಗಳನ್ನು ಇಟ್ಟು ಹಗರಣದ ಬಗ್ಗೆ ಹೇಳಿದರೂ ಸರಕಾರ ವಿತಂಡ ವಾದ ಮಾಡುತ್ತಿದೆ. ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಜನರ ಸಮಸ್ಯೆಗಳ ಕಡೆ ಗಮನ ಕೊಡದೆ ಕೇವಲ ಪರಸ್ಪರ ಕೆಸರು ಎರಚಾಟದಲ್ಲಿ ತೊಡಗಿವೆ ಎಂದು ಕುಮಾರಸ್ವಾಮಿ ಅವರು ದೂರಿದರು.
ಪೇ ಸಿಎಂ ಎನ್ನುವ ಪ್ರಚಾರವನ್ನು ಒಂದು ಪಕ್ಷ ಶುರು ಮಾಡಿದೆ, ಅದಕ್ಕೆ ಪ್ರತಿಯಾಗಿ ಇನ್ನೊಂದು ಪಕ್ಷ ಮತ್ತೊಂದು ಪ್ರಚಾರ ಆರಂಭ ಮಾಡಿದೆ. ಈ ಮೂಲಕ ಜನರಲ್ಲಿ ಜಾಗೃತಿ ಮೂಡಿಸ್ತೀವಿ ಅಂತ ಹೊರಟಿದ್ದಾರೆ. ಕಾಂಗ್ರೆಸ್, ಬಿಜೆಪಿ ಸರಕಾರದಲ್ಲಿ ಹಗರಣಗಳು ನಡೆಯುತ್ತಿವೆ. ಮತ್ತೆ ಅಧಿಕಾರ ಕೊಟ್ಟರೆ ಎಲ್ಲವನ್ನೂ ಸರಿ ಮಾಡುತ್ತೇವೆ ಎನ್ನುತ್ತಿದ್ದಾರೆ. ಸರಿ ಮಾಡುತ್ತೇವೆ ಎಂದರೆ ಹಗರಣಗಳ ದಾಖಲೆ ಕೊಟ್ಟರೂ ಕಳಂಕಿತ ಸಚಿವರನ್ನು ರಕ್ಷಣೆ ಮಾಡುವುದಾ? ಎಂದು ಅವರು ಪ್ರಶ್ನೆ ಮಾಡಿದರು.
ಇದೇ ವೇಳೆ ಮಾತನಾಡಿದ ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಅವರು, 20% ಆರೋಪ ಮಾಡಿದವರೇ ಈಗ 40% ಆರೋಪಕ್ಕೆ ಗುರಿಯಾಗಿದ್ದಾರೆ ಎಂದು ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳಿಗೆ ಚಾಟಿ ಬೀಸಿದರು. ವಿಧಾನ ಪರಿಷತ್ ಸದಸ್ಯ ಭೋಜೆಗೌಡರು ಉಪಸ್ಥಿತರಿದ್ದರು.












Click it and Unblock the Notifications