ಕಳ್ಳ ಮಳ್ಳ ಸರ್ಕಾರ ಮಾಡಲು ಬಿಡಬಾರದು: ಕಳ್ಳ-ಮಳ್ಳ ಯಾರು ಗೊತ್ತಾ!: ಆರ್ ಅಶೋಕ್ ಹೇಳಿದ್ದೇನು?
ಕೇವಲ 10-15ಸೀಟು ಗೆದ್ದು ಲಾಟರಿ ಎತ್ತುವವರಿಗೆ ಮತ ಹಾಕಬೇಡಿ ಎಂದು ಆರ್ ಅಶೋಕ್ ಹೇಳಿದರು.
ರಾಮನಗರ,ಮಾರ್ಚ್4: ಚುನಾವಣಾ ಪ್ರಚಾರದಲ್ಲಿ ರಾಜಕೀಯ ಪಕ್ಷಗಳು ಅಬ್ಬರ ಪ್ರಚಾರವನ್ನ ನಡೆಸುತ್ತಿವೆ. ಈಗಾಗಲೇ ಬಿಜೆಪಿ ಜನಸಂಕಲ್ಪ ಯಾತ್ರೆಯ ಮೂಲಕ ಸರ್ಕಾರದ ಕಾರ್ಯಕ್ರಮವನ್ನ ಜನರ ಮುಂದೆ ತೆಗೆದುಕೊಂಡು ಹೋಗುತ್ತಿದ್ದಾರೆ.
ಶನಿವಾರ ರಾಮನಗರ ಜಿಲ್ಲೆ ಚನ್ನಪಟ್ಟಣದಲ್ಲಿ ನಡೆದ ಜನಸಂಕಲ್ಪ ಯಾತ್ರೆಯಲ್ಲಿ ಕಂದಾಯ ಸಚಿವ ಆರ್ ಅಶೋಕ್ ಕಳ್ಳ ಮಳ್ಳ ಎಂದು ಡಿ ಕೆ ಶಿವಕುಮಾರ್ ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರಿಗೆ ಟೀಕಿಸಿದರು.

ಈ ಬಾರಿ ಕಿಚಡಿ ಸರ್ಕಾರ ಬರಬಾರದು. ಸುಭದ್ರ ಸರ್ಕಾರ ರಚನೆ ಆಗಬೇಕು. ಕೇವಲ 10-15ಸೀಟು ಗೆದ್ದು ಲಾಟರಿ ಎತ್ತುವವರಿಗೆ ಮತ ಹಾಕಬೇಡಿ. ಡಿ.ಕೆ. ಶಿವಕುಮಾರ್ ಆಗಲಿ ಕುಮಾರಸ್ವಾಮಿ ಜೋಡೆತ್ತು ಅಂತ ಬರ್ತಾರೆ.ಆದರೆ, ಅವರೆಡು ಕುಂಟೆತ್ತುಗಳು. ಕಾಂಗ್ರೆಸ್ ಗೆ ಮತ ಹಾಕಿದ್ರೆ ಅದು ಜೆಡಿಎಸ್ ಗೆ ಮತ ಹಾಕಿದ ಹಾಗೇ. ಡಿ ಕೆ ಶಿವಕುಮಾರ್ ಹಾಗೂ ಕುಮಾರಸ್ವಾಮಿ ಕಳ್ಳ-ಮಳ್ಳ ಅವರಿಗೆ ಮತ ಹಾಕಬೇಡಿ ಎಂದು ಹೇಳಿದರು.
ನಮಗೆ ವರ್ಷಕ್ಕೊಮ್ಮೆ, ತಿಂಗಳಿಗೊಮ್ಮೆ ಬರುವ ನಾಯಕರು ಬೇಡ. ದಿನವೂ ಸಿಗುವ ಅಭ್ಯರ್ಥಿ ಗೆಲ್ಲಿಸಿ, ಯೋಗೇಶ್ವರ್ ಎಲ್ಲಾ ಕೆರೆಗಳನ್ನ ತುಂಬಿಸಿದ್ದಾರೆ. ಇಲ್ಲಿ ಎಲ್ಲರೂ ಬರೀ ಮಾತನಾಡ್ತಾರೆ, ಕೆಂಪೇಗೌಡರ ಹೆಸರು ಹೇಳ್ತಾರೆ ಆದರೆ, ಒಂದು ಪ್ರತಿಮೆ ನಿರ್ಮಾಣ ಮಾಡಲಿಲ್ಲ ಎಂದು ಪರೋಕ್ಷವಾಗಿ ಕುಮಾರಸ್ವಾಮಿ ವಿರುದ್ದ ಕಿಡಿಕಾರಿದರು.

ಈ ವೇಳೆ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮಾತನಾಡಿ, ಚನ್ನಪಟ್ಟಣದಲ್ಲಿ ಬಿಜೆಪಿ ಗೆಲುವು ಖಂಡಿತ. ಮುಂದಿನ ಬಾರಿ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷ ಮನೆಗೆ ಹೋಗುತ್ತದೆ. ಕಾಂಗ್ರೆಸ್ ಗೆ ಅಂಬೇಡ್ಕರ್ ಶಾಪ ಇದೆ. ಅಂಬೇಡ್ಕರ್ ಭಾವಚಿತ್ರ ಹಿಡಿದುಕೊಂಡು ಪ್ರಚಾರ ಮಾಡಿದರು. ಆದರೆ, ಅಂಬೇಡ್ಕರ್ ಅವರಿಗೆ ಅವಮಾನ ಮಾಡಿದ್ದು ಕಾಂಗ್ರೆಸ್. ಲೋಕಸಭೆಯಲ್ಲಿ ಅವರನ್ನ ಕಾಂಗ್ರೆಸ್ ಸೋಲಿಸಿತ್ತು.ಆದರೆ, ಅಂಬೇಡ್ಕರ್ ಅವರಿಗೆ ಗೌರವ ಕೊಟ್ಟಿದ್ದು ಮೋದಿಯವರು ಎಂದು ಹೇಳಿದರು.
ಬೆಂಗಳೂರು ಕಟ್ಟಿದ ಕೆಂಪೇಗೌಡರ ಪ್ರತಿಮೆ ಮಾಡಿದ್ದು ಬಿಜೆಪಿ. ರಾಜ್ಯದಲ್ಲಿ ಬಡವರಿಗೆ ಮನೆ, ಶೌಚಾಲಯ, ನೀರು ಕೊಟ್ಟಿದ್ದು ಬಿಜೆಪಿ. ಚನ್ನಪಟ್ಟಣದಲ್ಲಿ ನೀರು ಕೊಟ್ಟಿದ್ದು ಯೋಗೇಶ್ವರ್. ಹಳ್ಳಿಹಳ್ಳಿಯ ರಸ್ತೆ ಅಭಿವೃದ್ಧಿ ಮಾಡಿದ್ರೆ ಅದು ಯೋಗೇಶ್ವರ್, ಹಾಗಾಗಿ ಈ ಬಾರಿ ಮತ್ತೊಮ್ಮೆ ಬಿಜೆಪಿ ಗೆಲ್ಲಿಸಿ ಎಂದು ಹೇಳಿದರು.
ಇನ್ನೂ ಈ ವೇಳೆ ಸಿ ಪಿ ಯೋಗೇಶ್ವರ್ ಮಾತನಾಡಿ, ಕುಮಾರಸ್ವಾಮಿ ಅವರಿಗೂ ಚನ್ನಪಟ್ಟಣಕ್ಕೂ ಯಾವುದೇ ಸಂಬಂಧ ಇರಲಿಲ್ಲ. ತಿಂಗಳಿಗೊಮ್ಮೆ ಬರ್ತಾರೆ, ಅವರು ಯಾವುದೇ ಅಭಿವೃದ್ಧಿ ಕೆಲಸ ಮಾಡಿಲ್ಲ.ಬಸ್ ನಿಲ್ದಾಣ ಕಟ್ಟಲಿಲ್ಲ. ಕುಮಾರಸ್ವಾಮಿ ಅವರ ಸಾಧನೆ ಕೇವಲ ಕಣ್ಣೀರು ಮಾತ್ರ. ಈ ಬಾರಿ ಬಿಜೆಪಿ ಗೆಲ್ಲಲಿದೆ. ಜಿಲ್ಲಾ ಉಸ್ತುವಾರಿ ಸಚಿವರಾದ ಅಶ್ವತ್ಥ ನಾರಾಯಣ ಅವರು ಬಿಜೆಪಿಯನ್ನ ಗೆಲ್ಲಿಸಿಕೊಂಡು ಬರುತ್ತಾರೆ ಎಂದು ಹೇಳಿದರು.












Click it and Unblock the Notifications