Lok Sabha Elections 2024: ಡಿ.ಕೆ.ಸುರೇಶ್ ಸೋಲಿಸಲು ಬಿಜೆಪಿ-ಜೆಡಿಎಸ್ ಹೊಂದಾಣಿಕೆ; ಈ ಬಗ್ಗೆ ಡಿ.ಕೆ ಸುರೇಶ್ ಹೇಳಿದ್ದೇನು?
ರಾಮನಗರ, ಜೂನ್ 17: ಲೋಸಭಾ ಚುನಾವಣೆಯಲ್ಲಿ ಬಿಜೆಪಿ, ಜೆಡಿಎಸ್ ಹೊಂದಾಣಿಕೆ ಮಾಡಿಕೊಳ್ಳಲಿ. ಯಾರು ಬೇಕಾದರೂ ಸ್ಪರ್ಧೆ ಮಾಡಲಿ,ನನಗಿರೂದು ಒಂದೇ ಮತ, ಪ್ರಧಾನಿಗಿರೋದು ಒಂದೇ ಮತ. ಆ ಮತವನ್ನ ಯಾರಿಗೆ ಹಾಕಬೇಕು ಅಂತ ಜನ ತೀರ್ಮಾನ ಮಾಡ್ತಾರೆ ಎಂದು ಸಂಸದ ಡಿ.ಕೆ ಸುರೇಶ್ ಬಿಜೆಪಿ-ಜೆಡಿಎಸ್ ಹೊಂದಾಣಿಕೆ ವಿಚಾರವಾಗಿ ಮಾತನಾಡಿದರು.
ಈ ಕುರಿತು ಶನಿವಾರ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, 2024ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಕುರಿತು ರಾಜಕೀಯ ವೈರಾಗ್ಯದ ಮಾತುಗಳನ್ನ ಹೇಳಿದ್ದಾರೆ. ಲೋಕಸಭಾ ಚುನಾವಣೆಗೆ ನಿಲ್ಲುವ ಬಗ್ಗೆ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ. ಈ ಬಗ್ಗೆ ಕಾರ್ಯಕರ್ತರು, ಮುಖಂಡರ ಸಲಹೆ ಪಡೆಯಬೇಕು. ಯಾರೂ ಸೂಕ್ತ ಅಂತ ಅವರು ತೀರ್ಮಾನ ಮಾಡಿದ್ರೆ ಅವರಿಗೆ ಬೆಂಬಲ ಕೊಡುತ್ತೇನೆ. ರಾಜಕಾರಣ ಅಷ್ಟೊಂದು ಚೆನ್ನಾಗಿಲ್ಲ, ರಾಜಕೀಯ ಸಾಕಾಗಿದೆ. ಹಾಗಾಗಿ ಬೇರೆಯವರಿಗೆ ಅವಕಾಶ ಮಾಡಿಕೊಡಬೇಕು ಅನ್ನೊದು ನನ್ನ ಉದ್ದೇಶ ಎಂದು ಹೇಳಿದ್ದಾರೆ.

ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ವ್ಯಂಗ್ಯವಾಡಿರುವ ವಿಚಾರವಾಗಿ ಮಾತನಾಡಿ, ಅವರಿಗೆ ವ್ಯಂಗ್ಯ ಬಿಟ್ಟು ಬೇರೆ ಏನೂ ಬರಲ್ಲ, ವ್ಯಂಗ್ಯ ಮಾಡಲಿ. ಅಧಿಕಾರದ ದಾಹ ಇದ್ದವರಿಗೆ ರಾಜಕಾರಣ ಬೇಕು, ನನಗಿರುವುದು ಅಭಿವೃದ್ಧಿಯ ದಾಹ. ಇನ್ನೂ ಒಂದು ವರ್ಷ ಸಮಯ ಇದೆ, ನಾನು ಅಭಿವೃದ್ಧಿ ಕಡೆ ಗಮನಕೊಟ್ಟದ್ದೇನೆ ಎಂದು ಹೇಳಿದರು.
ಅನ್ನಭಾಗ್ಯತಕ್ಕೆ ಕೇಂದ್ರ ಸರ್ಕಾರ ಅಕ್ಕಿ ನೀಡದ ವಿರುದ್ಧ ಪ್ರತಿಭಟನೆ ವಿಚಾರವಾಗಿ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಕೇಂದ್ರ ಸರ್ಕಾರದಲ್ಲಿ ಸಾಕಷ್ಟು ಅಕ್ಕಿ ದಾಸ್ತಾನು ಇದೆ. ಅಕ್ಕಿ ಇರೋದು ಸಾರ್ವಜನಿಕರ ವಿತರಣೆಗೆ. ಆದರೆ, ಕೇಂದ್ರ ಸರ್ಕಾರ ತನ್ನ ಜವಾಬ್ದಾರಿಯಿಂದ ನುಣುಚುಕೊಳುತ್ತಿದೆ. ಎಷ್ಟೋ ಸರಿ ಅಕ್ಕಿ ಕೆಟ್ಟುಹೋಗಿ ನಷ್ಟ ಆಗಿದೆ. ರಾಜ್ಯ ಸರ್ಕಾರ ಉಚಿತವಾಗಿ ಅಕ್ಕಿ ಕೇಳುತ್ತಿಲ್ಲ.
ಕೇಂದ್ರ ಸರ್ಕಾರದ ಮಾರ್ಗಸೂಚಿಯಲ್ಲೇ ಕೊಡಿ ಅಂತ ಕೇಳ್ತಿದ್ದೇವೆ.
ನಾವು ಅಕ್ಕಿ ಕೇಳ್ತಿರೋದು ಬಡವರು, ಹಸಿದವರ ದೃಷ್ಟಿಯಿಂದ ಅನ್ನ ಕೊಡಿ ಅಂತಿದ್ದೇವೆ. ಇದು ಕೇಂದ್ರದ ಕಾರ್ಯಕ್ರಮವೂ ಇರಬಹುದು, ರಾಜ್ಯದ ಕಾರ್ಯಕ್ರಮವೂ ಇರಬಹುದು. ಆಹಾರ ಭದ್ರತಾ ಕಾಯ್ದೆ ತಂದಿದ್ದೆ ಯುಪಿಎ ಸರ್ಕಾರ, ಆ ಕಾಯ್ದೆ ತರದಿದ್ದರೆ ದೇಶದ ಜನರಿಗೆ ಇವರು 5 ಕೆಜಿ ಅಕ್ಕಿ ಕೊಡೊಕೆ ಆಗ್ತಿತ್ತಾ.? ಹಿಂದೆ ಸಿದ್ದರಾಮಯ್ಯನವರು ಉಚಿತ ಅಕ್ಕಿ ಕೊಟ್ಟಿದ್ರು.
ಆಗಲೂ ಬಡವರ ಹಸಿವನ್ನ ನೀಗಿಸಿದ್ದೆವು. ಈಗಲೂ 10ಕೆ.ಜಿ ಉಚಿತ ಅಕ್ಕಿ ಘೋಷಣೆ ಮಾಡಿದ್ದೇವೆ. ಇದರಿಂದ ಎಲ್ಲರಿಗೂ ಅನುಕೂಲ ಆಗುತ್ತೆ, ಬಿಜೆಪಿ ಗೆ ಮತಹಾಕಿದ್ರೂ ಅಕ್ಕಿ, ಜೆಡಿಎಸ್ ಗೆ ಮತ ಹಾಕಿದವರಿಗೂ ಅಕ್ಕಿ ಸಿಗುತ್ತೆ. ಆದರೆ ಹಸಿದ ವರ್ಗಕ್ಕೆ ಕೇಂದ್ರ ಅನ್ಯಾಯ ಮಾಡ್ತಿದೆ.ಇದರಲ್ಲಿ ರಾಜಕೀಯ ಮಾಡೋದು ಬೇಡ ಎಂದು ಕಿಡಿಕಾರಿದರು.
ಕಾಂಗ್ರೆಸ್ ಪ್ರತಿಭಟನೆಗೆ ಶಾಮಿಯಾನ ಹಾಕಿಕೊಡ್ತೀವಿ ಎಂಬ ಆರ್ ಅಶೋಕ್ ಹೇಳಿಕೆ ವಿಚಾರವಾಗಿ ಮಾತನಾಡಿ, ಆರ್.ಅಶೋಕ್ ಅವರಷ್ಟು ತಿಳುವಳಿಕೆ ನನಗಿಲ್ಲ. ಅವರು ಶಾಮಿಯಾನ ಹಾಕಿಸಿಕೊಟ್ರೆ ಸಂತೋಷ. ಅಲ್ಲೇ ಕೂತು ನಾವು ಪ್ರತಿಭಟನೆ ಮಾಡ್ತೀವಿ, ಎಲ್ಲಾ ಕಡೆಗಳಲ್ಲೂ ಶಾಮಿಯಾನ ಹಾಕಿಸಿಕೊಡಲಿ ಎಂದು ಟಾಂಗ್ ನೀಡಿದರು.
ಬಿಜೆಪಿ ಸಂಸದರ ವಿರುದ್ಧವೂ ಸಂಸದ ಡಿ.ಕೆ.ಸುರೇಶ್ ಕಿಡಿಕಾರಿದ್ದು, ರಾಜ್ಯದ ಯಾವುದೇ ಸಮಸ್ಯೆ ಬಗ್ಗೆ ಅವರು ಧ್ವನಿಎತ್ತಿಲ್ಲ. ನಮ್ಮ ರಾಜ್ಯದ ಜಿ.ಎಸ್.ಟಿ, ಕೃಷ್ಣಾ ಯೋಜನೆ, ಪ್ರವಾಹ ಪರಿಹಾರದ ಬಗ್ಗೆ ಮಾತನಾಡಲ್ಲ, ಕೇಂದ್ರದಿಂದ ರಾಜ್ಯಕ್ಕೆ ಅನ್ಯಾಯ ಅಗುತ್ತಿದೆ. ರಾಜ್ಯದ ಬಿಜೆಪಿ ಸಂಸದರು ಈ ಬಗ್ಗೆ ಮೌನವಾಗಿದ್ದಾರೆ ಎಂದು ಬಿಜೆಪಿ ಸಂಸದರ ವಿರುದ್ದ ವಾಗ್ದಾಳಿ ನಡೆಸಿದರು. ಇನ್ನೂ ಬಿಜೆಪಿ ಸರ್ಕಾರದ ಅವಧಿ ಯೋಜನೆಗಳ ತನಿಖೆ ವಿಚಾರವಾಗಿ ಪ್ರತಿಕ್ರಿಯಿಸಿ, ಅದು ಸರ್ಕಾರದ ಕೆಲಸ ನನಗೆ ಗೊತ್ತಿಲ್ಲ. ನನ್ನ ಗಮನಕ್ಕೆ ಬಂದಿರೋದನ್ನ ನಾನು ಹೇಳುತ್ತೇನೆ ಎಂದರು.












Click it and Unblock the Notifications