Kpcc President: ಕೆಪಿಸಿಸಿ ಅಧ್ಯಕ್ಷರಾಗುವ ಬಗ್ಗೆ ಡಿಕೆ ಸುರೇಶ್ ಏನಂದ್ರು?
ರಾಜ್ಯ ಕಾಂಗ್ರೆಸ್ನಲ್ಲಿ ಸಿಎಂ ಬದಲಾವಣೆ ವಿಚಾರದ ಜೊತೆಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬದಲಾವಣೆ ವಿಚಾರ ಕೂಡ ಚರ್ಚೆಯಲ್ಲಿದೆ. ಈಗಾಗಲೇ ಹಲವು ನಾಯಕರು ಈ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದು, ಈ ಬಗ್ಗೆ ಹೈಕಮಾಂಡ್ ಬಾಗಿಲು ತಟ್ಟಿಯೂ ಬಂದಿದ್ದಾರೆ. ಈ ಸ್ಥಾನಕ್ಕೆ ಹಾಲಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಸಹೋದರ ಡಿ.ಕೆ.ಸುರೇಶ್ ಅವರು ಕೂಡ ಆಕಾಂಕ್ಷಿ ಎನ್ನುವ ಮಾತಿದೆ. ಈ ಬಗ್ಗೆ ಡಿ.ಕೆ.ಸುರೇಶ್ ಅವರು ಪ್ರತಿಕ್ರಿಯೆ ನೀಡಿದ್ದಾರೆ.
ಸದ್ಯ ಕೆಪಿಸಿಸಿ ಅಧ್ಯಕ್ಷ ಸ್ಥಾನದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿದ್ದಾರೆ. ಕಾಂಗ್ರೆಸ್ಗೆ ಬಂಡೆಯಂತಿರುವ ಡಿ.ಕೆ.ಶಿವಕುಮಾರ್ ಅವರು ಈ ಹಿಂದೆಯೇ ಈ ಸ್ಥಾನ ತೊರೆಯುವ ಮಾತನ್ನಾಡಿದ್ದರು. ಅವರು ಉಪಮುಖ್ಯಮಂತ್ರಿ, ಬೆಂಗಳೂರು ನಗರಾಭಿವೃದ್ಧಿ ಖಾತೆಗಳಲ್ಲಿ ಇರುವ ಜೊತೆಗೆ ಸಿಎಂ ಸ್ಥಾನದ ಪ್ರಬಲ ಆಕಾಂಕ್ಷಿಯೂ ಆಗಿರುವುದರಿಂದ ಕೆಪಿಸಿಸಿ ಅಧ್ಯಕ್ಷ ಸ್ಥಾನ ನಿಭಾಯಿಸುವುದು ಕಷ್ಟವಾಗಿ, ಕೆಳಗಿಳಿಯುವ ಸೂಚನೆ ನೀಡಿದ್ದರು. ಆಗ ಈ ಸ್ಥಾನಕ್ಕೆ ಅವರ ಸಹೋದರರೇ ಆದ ಡಿ.ಕೆ.ಸುರೇಶ್ ಅವರ ಹೆಸರು ಮುನ್ನೆಲೆಗೆ ಬಂದಿತ್ತು.

ಸದ್ಯ ನಾನು ಯಾವುದೇ ಸ್ಥಾನ ಆಕಾಂಕ್ಷಿಯಲ್ಲ. ಜನ ನನಗೆ ವಿಶ್ರಾಂತಿ ಕೊಟ್ಟಿದ್ದಾರೆ. ಹಾಗಾಗಿ ನಾನು ವಿಶ್ರಾಂತಿಯಲ್ಲಿದ್ದೇನೆ ಎಂದು ಡಿ.ಕೆ.ಸುರೇಶ್ ನಗುತ್ತಲೇ ಹೇಳಿದ್ದಾರೆ. ಕಾಂಗ್ರೆಸ್ನ ಮಾಜಿ ಸಂಸದರೂ ಆಗಿರುವ ಡಿ.ಕೆ.ಸುರೇಶ್ ಅವರು ಕಳೆದ ಲೋಕಸಭೆ ಚುನಾವಣೆಯಲ್ಲಿ ಸೋಲು ಕಂಡ ಬಳಿಕ ಅವರನ್ನು ಮತ್ತೆ ಪಕ್ಷದಲ್ಲಿ ಬಲಪಡಿಸಬೇಕು ಎಂಬ ಲೆಕ್ಕಾಚಾರದಲ್ಲಿ ಅವರಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ಬಿಟ್ಟುಕೊಡಲು ಅಣ್ಣ ಡಿ.ಕೆ.ಶಿವಕುಮಾರ್ ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ಈ ಬಗ್ಗೆ ಇಬ್ಬರೂ ನಾಯಕರು ಎಲ್ಲಿಯೂ ಬಹಿರಂಗ ಹೇಳಿಕೆ ನೀಡದಿದ್ದರೂ ಕಾಂಗ್ರೆಸ್ ವಲಯದಲ್ಲೇ ಈ ಮಾತು ಇಂದಿಗೂ ಚರ್ಚೆಯಲ್ಲಿದೆ. ಡಿ.ಕೆ.ಶಿವಕುಮಾರ್ ಅವರು ತಮ್ಮ ಮುಂದಿನ ನಡೆಯನ್ನಾಧರಿಸಿ ಕೆಪಿಸಿಸಿ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯಲಿದ್ದಾರೆ. ಆಗ ಆ ಸ್ಥಾನಕ್ಕೆ ಡಿ.ಕೆ.ಸುರೇಶ್ ಅವರು ಏರುವುದು ಖಚಿತ ಎಂದೇ ಹೇಳಲಾಗುತ್ತಿದೆ. ಹೀಗಾಗಿ ಡಿ.ಕೆ.ಸುರೇಶ್ ಅವರ ಹೆಸರು ಮೊದಲಿನಿಂದಲೂ ಕೆಪಿಸಿಸಿ ಅಧ್ಯಕ್ಷ ಸ್ಥಾನದ ರೇಸ್ನಲ್ಲಿದೆ.

ಡಿ.ಕೆ ಶಿವಕುಮಾರ್ ಅವರಿಗೆ ಸಹೋದರ ಸುರೇಶ್ ಅವರು ಬಲಗೈ ಬಂಟನಿದ್ದಂತೆ. ಹಾಗಾಗಿ ಮುಂದೆ ಡಿಕೆಶಿ ಸಿಎಂ ಸ್ಥಾನಕ್ಕೇರಬೇಕಾದರೆ ಸುರೇಶ್ ಅವರಿಗೆ ಪಕ್ಷದಲ್ಲಿ ಉತ್ತಮ ಸ್ಥಾನ ಇರಲೇಬೇಕು. ಅಲ್ಲದೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ಬೇರೆಯವರ ಕೈಸೇರಿದರೆ, ಡಿ.ಕೆ.ಶಿವಕುಮಾರ್ ಅವರ ಭವಿಷ್ಯಕ್ಕೂ ಪೆಟ್ಟು ಬೀಳುತ್ತದೆ ಎಂದು ಹೇಳಲಾಗುತ್ತಿದ್ದು, ಈ ಕಾರಣದಿಂದ ಆ ಸ್ಥಾನದಲ್ಲಿ ಸುರೇಶ್ ಅವರನ್ನೇ ಕೂರಿಸಿದರೆ ಪಕ್ಷದ ಮೇಲಿನ ಹಿಡಿತ ಸಾಧಿಸಲು ಅನುಕೂಲವಾಗಲಿದೆ ಎನ್ನುವ ಲೆಕ್ಕಾಚಾರದಲ್ಲೇ ಇದ್ದಾರಂತೆ.
ದಲಿತ ನಾಯಕರ ಸೆಡ್ಡು: ಕಾಂಗ್ರೆಸ್ನಲ್ಲಿ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಅವರ ಬಣದ ಜೊತೆಗೆ ಇತ್ತೀಚೆಗೆ ದಲಿತರ ನಾಯಕರು ಕೂಡ ಒಗ್ಗಟ್ಟು ಪ್ರದರ್ಶನಕ್ಕೆ ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಅಲ್ಲದೆ ಕಾಂಗ್ರೆಸ್ ದಲಿತ ನಾಯಕರಿಗೇ ಸಿಎಂ ಹಾಗೂ ಕೆಪಿಸಿಸಿ ಅಧ್ಯಕ್ಷ ಸ್ಥಾನ ಕೊಡಬೇಕು ಎಂದು ಹೈಕಮಾಂಡ್ ಬಾಗಿಲು ತಟ್ಟಿ ಬಂದಿದ್ದಾರೆ. ದಲಿತ ಸಮುದಾಯ ಪ್ರಬಲ ಕಾಂಗ್ರೆಸ್ ನಾಯಕರಲ್ಲಿ ಒಬ್ಬರಾದ ಸತೀಶ್ ಜಾರಕಿಹೊಳಿ ಅವರು ಮುಂದಿನ ಅವಧಿಗೆ ನಾನೂ ಸಿಎಂ ಆಕಾಂಕ್ಷಿ ಎಂದಿದ್ದು, ಈಗ ಕೆಪಿಸಿಸಿ ಅಧ್ಯಕ್ಷರಾಗುವ ಇಂಗಿತದಲ್ಲಿದ್ದಾರೆ ಎನ್ನಲಾಗಿದೆ. ಈ ವಿಚಾರವಾಗಿ ಹೈಕಮಾಂಡ್ ನಾಯಕರೊಂದಿಗೆ ಚರ್ಚೆಯೂ ಮುಗಿಸಿ ಬಂದಿದ್ದಾರೆ.












Click it and Unblock the Notifications