ಸಿಬಿಐ ಅಧಿಕಾರಿಗಳಿಗೆ ಧನ್ಯವಾದ ಸಲ್ಲಿಸಿದ ಡಿ. ಕೆ. ಸುರೇಶ್!
ಬೆಂಗಳೂರು, ಅಕ್ಟೋಬರ್ 06: ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್, ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಸಂಸದ ಡಿ. ಕೆ. ಸುರೇಶ್ ನಿವಾಸದ ಮೇಲೆ ಸಿಬಿಐ ದಾಳಿ ನಡೆದಿತ್ತು. ಸಿಬಿಐ ಅಧಿಕಾರಿಗಳಿಗೆ ಡಿ. ಕೆ. ಸುರೇಶ್ ಧನ್ಯವಾದಗಳನ್ನು ಅರ್ಪಿಸಿದ್ದಾರೆ.
ಅಕ್ರಮ ಆಸ್ತಿ ಸಂಪಾದನೆ ಆರೋಪದಡಿ ಡಿ. ಕೆ. ಶಿವಕುಮಾರ್, ಸಹೋದರ ಡಿ. ಕೆ. ಸುರೇಶ್ ನಿವಾಸಗಳ ಮೇಲೆ ದಾಳಿ ನಡೆದಿತ್ತು. ಬೆಂಗಳೂರು, ಕನಕಪುರ, ದೆಹಲಿ ಸೇರಿದಂತೆ 14 ಪ್ರದೇಶಗಳಲ್ಲಿ ಸೋಮವಾರ ಸಿಬಿಐ ಅಧಿಕಾರಿಗಳು ದಾಳಿ ಮಾಡಿದ್ದರು.
74.93 ಕೋಟಿ ರೂ. ಮೌಲ್ಯದ ಅಕ್ರಮ ಆಸ್ತಿ ಸಂಪಾದನೆ ಮಾಡಿರುವ ಆರೋಪದಡಿ ಸಿಬಿಐನ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಎಫ್ಐಆರ್ ದಾಖಲು ಮಾಡಿಕೊಂಡಿದ್ದಾರೆ. ಶಿವಕುಮಾರ್ ಆಪ್ತರಾದ ಸಚಿನ್ ನಾರಾಯಣ್, ದೆಹಲಿಯಲ್ಲಿರುವ ಡಿ. ಕೆ. ಶಿವಕುಮಾರ್ ನಿವಾಸದ ಮೇಲೆ ಸಹ ದಾಳಿಯಾಗಿತ್ತು.
ಮಂಗಳವಾರ ಫೇಸ್ ಬುಕ್ ಪೋಸ್ಟ್ ಮೂಲಕ ಡಿ. ಕೆ. ಸುರೇಶ್ ದಾಳಿ ಬಗ್ಗೆ ವಿವರಣೆ ನೀಡಿದ್ದಾರೆ. ಮನೆಯಲ್ಲಿ ಸಿಕ್ಕ ಹಣ ಎಷ್ಟು? ಎಂಬುದರ ಬಗ್ಗೆಯೂ ವಿವರ ಕೊಟ್ಟಿದ್ದಾರೆ. ವಿವರಣೆಗಳು ಚಿತ್ರದಲ್ಲಿವೆ...

ಸಿಬಿಐ ಅಧಿಕಾರಿಗಳಿಗೆ ಧನ್ಯವಾದಗಳು
ಮಂಗಳವಾರ ಫೇಸ್ ಬುಕ್ ಪೋಸ್ಟ್ ಹಾಕಿರುವ ಡಿ. ಕೆ. ಸುರೇಶ್, "ಪ್ರಮುಖವಾಗಿ ಕನಕಪುರ, ಬೆಂಗಳೂರು ಮತ್ತು ದೆಹಲಿಯ ನಮ್ಮ ಮನೆ ಮತ್ತು ಕಛೇರಿಗಳಿಗೆ ಬಂದು ಯಾವುದೇ ಕಿರುಕುಳ ನೀಡದೇ ವೃತ್ತಿಪರವಾಗಿ ನಡೆದುಕೊಂಡ CBI ಅಧಿಕಾರಿಗಳಿಗೆ ಧನ್ಯವಾದ ಹೇಳಲು ಇಚ್ಛಿಸುತ್ತೇನೆ" ಎಂದು ಹೇಳಿದ್ದಾರೆ.

ಹಣ ಸಿಕ್ಕಿರುವುದು ಎಷ್ಟು?
"ಅಧಿಕಾರಿಗಳ ದಾಖಲೆ ಪರಿಶೀಲನೆಯಲ್ಲಿ ನನ್ನ ಮತ್ತು ನನ್ನ ಅಣ್ಣನ ಮನೆಯಿಂದ ಸೇರಿ ಒಟ್ಟು 6.78 ಲಕ್ಷ ರೂಪಾಯಿಗಳು ಸಿಕ್ಕಿರುತ್ತದೆ. ಅದರಲ್ಲಿ ನನ್ನ ದೆಹಲಿ ನಿವಾಸದಲ್ಲಿ 1.57 ಲಕ್ಷ, ಬೆಂಗಳೂರಿನ ನನ್ನ ಅಣ್ಣನ ನಿವಾಸದಲ್ಲಿ 1.71 ಲಕ್ಷ, ಅವರ ಬೆಂಗಳೂರಿನ ಕಛೇರಿಯಲ್ಲಿ 3.5 ಲಕ್ಷ ರೂಪಾಯಿಗಳು ಅಧಿಕಾರಿಗಳಿಗೆ ಸಿಕ್ಕಿರುವುದು ಖಾತ್ರಿ ಪಡಿಸಿದ್ದಾರೆ" ಎಂದು ಡಿ. ಕೆ. ಸುರೇಶ್ ಹೇಳಿದ್ದಾರೆ.

ಯಾವುದೇ ಹಣ ಸಿಕ್ಕಿಲ್ಲ
"ಇನ್ನು ನನ್ನ ಅಣ್ಣನ ದೆಹಲಿ ಮನೆ ಮತ್ತು ನನ್ನ ಬೆಂಗಳೂರಿನ ಮನೆಯಲ್ಲಿ ಯಾವುದೇ ಹಣ ಸಿಕ್ಕಿರುವುದಿಲ್ಲ. ಹಾಗೆಯೇ ನಮ್ಮ ಎರಡೂ ಮನೆಗಳಲ್ಲಿ ಅಧಿಕಾರಿಗಳು ಇಲ್ಲಿಯವರೆಗೂ ಯಾವುದೇ ಆಭರಣಗಳನ್ನೂ ವಶಪಡಿಸಿಕೊಂಡಿಲ್ಲ. ಆಭರಣಕ್ಕೆ ಸಂಬಂಧಿಸಿದಂತೆ ಈ ಹಿಂದೆ IT ಮತ್ತು ED ಗೆ ಕೊಟ್ಟ ದಾಖಲೆಗಳನ್ನೇ ಮತ್ತೊಮ್ಮೆ CBI ಸ್ಪಷ್ಟನೆ ತಗೆದುಕೊಂಡಿದೆ" ಎಂದು ಹೇಳಿದ್ದದಾರೆ.

ಅಧಿಕಾರಿಗಳು ಸ್ಪಷ್ಟಪಡಿಸಬೇಕು
"ಇನ್ನು CBI ಅಧಿಕಾರಿಗಳು ಮಾಧ್ಯಮಗಳಿಗೆ ಬಿಡುಗಡೆ ಮಾಡಿರುವ ದಾಖಲೆಗಳಲ್ಲಿ ಒಟ್ಟು 57 ಲಕ್ಷ ಸಿಕ್ಕಿದ ಮಾಹಿತಿ ಕೊಟ್ಟಿದ್ದಾರೆ. ಇದರಲ್ಲಿ ಬಾಕಿ 50.22 ಲಕ್ಷ ಹಣ ಎಲ್ಲಿ ಸಿಕ್ಕಿದೆ, ಅದರ ಹಿನ್ನೆಲೆ ಏನು ಎಂಬುದನ್ನು ಅಧಿಕಾರಿಗಳೇ ಸ್ಪಷ್ಟಪಡಿಸಬೇಕು" ಎಂದು ಡಿ. ಕೆ. ಸುರೇಶ್ ಫೇಸ್ ಬುಕ್ನಲ್ಲಿ ಬರೆದಿದ್ದಾರೆ.
Recommended Video

ವಿಶ್ವಾಸ ನಮಗಿದೆ
"ಈ ಹಿಂದೆ IT ಮತ್ತು ED ಅಧಿಕಾರಿಗಳು ಪರಿಶೀಲಿಸಿದ ದಾಖಲೆಗಳ ನಕಲು ಪ್ರತಿಗಳನ್ನು CBI ಕಡೆ ಕೊಟ್ಟಿರುತ್ತೇವೆ. ಇನ್ನು ಮುಂದೆಯೂ ಬೇಕಾದ ಎಲ್ಲಾ ದಾಖಲೆಗಳನ್ನು ಒಪ್ಪಿಸಲು ತಯಾರಿದ್ದೇವೆ. ಈ ಎಲ್ಲಾ ಪರೀಕ್ಷೆಗಳನ್ನು ಎದುರಿಸಿ ಹೊರಬರುವ ವಿಶ್ವಾಸ ನಮಗಿದೆ. ಅಭಿಮಾನಿಗಳು ಮತ್ತು ಹಿತೈಷಿಗಳಾದ ನಿಮ್ಮೆಲ್ಲರ ಆಶೀರ್ವಾದ ಹಾರೈಕೆ ಸದಾ ಹೀಗೇ ಇರಲಿ" ಎಂದು ಡಿ. ಕೆ. ಸುರೇಶ್ ಮನವಿ ಮಾಡಿದ್ದಾರೆ.











Click it and Unblock the Notifications