ಮುಜರಾಯಿ ಕೊಡಿ, ಸುತ್ತಾಡಿಕೊಂಡಿರುತ್ತೇನೆ ಗುಡಿ : ಡಿಕೆಶಿ ಪ್ರಲಾಪ
Recommended Video

ಬೆಂಗಳೂರು, ಜೂನ್ 4: ಸಮ್ಮಿಶ್ರ ಸರ್ಕಾರದ ಉಳಿವಿಗಾಗಿ ಕಾಂಗ್ರೆಸ್ ಶಾಸಕರನ್ನು ಕಾಯುವ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸಿದ್ದ ಹಿರಿಯ ಮುಖಂಡ ಡಿ.ಕೆ. ಶಿವಕುಮಾರ್, ಪ್ರಮುಖವಾಗಿದ್ದ ಇಂಧನ ಖಾತೆ ತಮ್ಮ ಕೈತಪ್ಪಿದ್ದಕ್ಕೆ ತೀವ್ರ ಅಸಮಾಧಾನಗೊಂಡಿದ್ದಾರೆ.
ಇಂಧನ ಖಾತೆ ಮೇಲೆ ಕಣ್ಣಿಟ್ಟಿದ್ದ ಡಿ.ಕೆ. ಶಿವಕುಮಾರ್, 'ಮುಜರಾಯಿ ಖಾತೆ ಕೊಡಿ. ದೇವಸ್ಥಾನ ಸುತ್ತುಕೊಂಡು ಕಾಲ ಕಳೆಯುತ್ತೇನೆ' ಎಂದು ಇತ್ತೀಚೆಗೆ ನಡೆದ ಕಾಂಗ್ರೆಸ್ ಸಭೆಯಲ್ಲಿ ಖಾರವಾಗಿ ಹೇಳಿದ್ದಾರೆ. ಇದು ಪಕ್ಷದ ಹಿರಿಯ ನಾಯಕರನ್ನು ಇಕ್ಕಟ್ಟಿಗೆ ಸಿಲುಕಿಸಿದೆ ಎನ್ನಲಾಗಿದೆ.
ಹಿಂದಿನ ಕಾಂಗ್ರೆಸ್ ಸರ್ಕಾರದಲ್ಲಿ ಪ್ರಮುಖವಾದ ಇಂಧನ ಖಾತೆಯನ್ನು ನಿಭಾಯಿಸಿದ್ದ ಡಿ.ಕೆ. ಶಿವಕುಮಾರ್, ಈ ಬಾರಿಯೂ ಅದೇ ಖಾತೆಯನ್ನು ಪಡೆಯಲು ಬಯಸಿದ್ದರು.

ಕಾಂಗ್ರೆಸ್ ಮತ್ತು ಜೆಡಿಎಸ್ ನಡುವಣ ಖಾತೆ ಹಂಚಿಕೆ ಒಪ್ಪಂದದಲ್ಲಿ ಇಂಧನ ಖಾತೆ ಜೆಡಿಎಸ್ ಪಾಲಾಗಿದೆ. ಉಪಮುಖ್ಯಮಂತ್ರಿ ಹುದ್ದೆಯನ್ನು ನಿರೀಕ್ಷಿಸಿದ್ದ ಡಿ.ಕೆ. ಶಿವಕುಮಾರ್ ಅವರು ಅದು ಕೈತಪ್ಪಿದ್ದರಿಂದ ಇಂಧನ ಖಾತೆ ಸಿಗಲಿದೆ ಎಂಬ ಭರವಸೆ ಹೊಂದಿದ್ದರು.
ಆದರೆ, ಇಂಧನ ಖಾತೆಯೂ ಜೆಡಿಎಸ್ ಪಾಲಾಗಿರುವುದರಿಂದ ಅವರು ಮುಖಂಡರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಪ್ರಮುಖ ಖಾತೆಗಳನ್ನು ಜೆಡಿಎಸ್ಗೆ ಬಿಟ್ಟುಕೊಡಲಾಗಿದೆ. ಜೆಡಿಎಸ್ನಲ್ಲಿ ಇರುವ ಕಿರಿಯರ ಎದುರು ಸಣ್ಣಪುಟ್ಟ ಖಾತೆಗಳಲ್ಲಿ ಸಚಿವರಾಗಿ ಕಾರ್ಯನಿರ್ವಹಿಸಬೇಕಾಗುತ್ತದೆ. ಇದಕ್ಕಿಂತ ಮುಜುಗರದ ಸಂಗತಿ ಬೇರೆ ಇಲ್ಲ.
ಕುಮಾರಸ್ವಾಮಿ ಅವರನ್ನೇ ಐದು ವರ್ಷ ಮುಖ್ಯಮಂತ್ರಿಯಾಗಿ ಮುಂದುವರಿಸುವಂತೆ ಹಾಗೂ ನಿಮಗೆ ಬೇಕಾದ ಖಾತೆಗಳನ್ನು ನೀವು ತೆಗೆದುಕೊಳ್ಳಿ ಎಂದು ಜೆಡಿಎಸ್ನವರಿಗೆ ಕಾಂಗ್ರೆಸ್ ವರಿಷ್ಠರು ಹೇಳಿರುವ ವಿಚಾರಗಳೇ ನಮಗೆ ಗೊತ್ತಿರಲಿಲ್ಲ ಎಂದು ಡಿ.ಕೆ. ಶಿವಕುಮಾರ್ ಅವರು ಸಭೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದರು.
ಕಾಂಗ್ರೆಸ್ ಶಾಸಕರು ಬಿಜೆಪಿಗೆ ಬೆಂಬಲ ನೀಡದಂತೆ ಅವರಿಗೆ ಕಾವಲು ಹಾಕಿದ್ದ ಡಿ.ಕೆ. ಶಿವಕುಮಾರ್, ಈ ಕಾರಣದಿಂದ ಕೇಂದ್ರ ಸರ್ಕಾರ ತಮ್ಮ ಮೇಲೆ ಕೆಂಗಣ್ಣು ಬೀರಿದೆ.
ಹೀಗಾಗಿ ನನ್ನ ಹಾಗೂ ಸಹೋದರ ಡಿ.ಕೆ. ಸುರೇಶ್ ಇಬ್ಬರನ್ನೂ ಗುರಿಯಾಗಿರಿಸಿಕೊಂಡು ಸಿಬಿಐ ದಾಳಿಗಳನ್ನು ನಡೆಸಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ರಾಜ್ಯದಲ್ಲಿ ಸರ್ಕಾರದ ಮಟ್ಟದಲ್ಲಿಯೂ ಪ್ರಭಾವಿ ಖಾತೆ ದೊರಕದೆ ಇದ್ದರೆ ಸಾರ್ವಜನಿಕ ವಲಯದಲ್ಲಿ ತಮ್ಮ ಶಕ್ತಿ ಕುಂದುತ್ತದೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಈ ಎಲ್ಲ ವಿದ್ಯಮಾನಗಳಿಂದ ಸಿಟ್ಟುಕೊಂಡಿರುವ ಅವರು, ನನಗೆ ಬೇರೆ ಯಾವ ಖಾತೆಯೂ ಬೇಡ. ಮುಜರಾಯಿ ಖಾತೆಯನ್ನು ಕೊಡಿ. ದೇವಸ್ಥಾನಗಳನ್ನು ಸುತ್ತಾಡಿಕೊಂಡು ಕಾಲ ಕಳೆಯುತ್ತೇನೆ ಎಂದು ಹೇಳಿದ್ದಾಗಿ ಮೂಲಗಳು ತಿಳಿಸಿವೆ.












Click it and Unblock the Notifications