Bigg Boss: ಈ ಕಾರಣಕ್ಕೆ ಬಿಗ್ಬಾಸ್ ಮನೆ ರಾತ್ರೋರಾತ್ರಿ ಓಪನ್ ಮಾಡಿಸಿದೆ: ಡಿ.ಕೆ.ಶಿವಕುಮಾರ್
ಬಿಗ್ಬಾಸ್ ಕನ್ನಡ ರಿಯಾಲಿಟಿ ಶೋ ನಡೆಯುತ್ತಿದ್ದ ಜಾಲಿವುಡ್ ಸ್ಟುಡಿಯೋ ಅನ್ನು ಇತ್ತೀಚೆಗೆ ಬಂದ್ ಮಾಡಲಾಗಿತ್ತು. ಮಾಲಿನ್ಯ ನಿಯಂತ್ರಣ ಮಂಡಳಿಯು ನೋಟಿಸ್ ನೀಡಿ ಸ್ಟುಡಿಯೋ ಬಂದ್ ಮಾಡಿಸಿತ್ತು. ಹೀಗಾಗಿ ಬಿಗ್ಬಾಸ್ ಕಾರ್ಯಕ್ರಮ ಕೂಡ ಅರ್ಧಕ್ಕೆ ನಿಂತಿತ್ತು. ಸ್ಪರ್ಧಿಗಳನ್ನ ರಾತ್ರೋರಾತ್ರಿ ರೆಸಾರ್ಟ್ಗೆ ಶಿಫ್ಟ್ ಮಾಡಲಾಗಿತ್ತು. ಆಗ ರಾಜಕೀಯ ದ್ವೇಷದಿಂದ ಡಿಸಿಎಂ ಡಿ.ಕೆ.ಶಿವಕುಮಾರ್ ಈ ರೀತಿ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಬಳಿಕ ಡಿ.ಕೆ.ಶಿವಕುಮಾರ್ ಅವರೇ ಬಿಗ್ಬಾಸ್ಗೆ ಅವಕಾಶ ಕೊಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ನಂತರ ಶೋ ಮತ್ತೆ ಆರಂಭವಾಗಿದೆ. ಆ ಒಂದು ಕಾರಣಕ್ಕೆ ರಾತ್ರೋರಾತ್ರಿ ಬಿಗ್ಬಾಸ್ ಮನೆ ಓಪನ್ ಮಾಡಿಸಿದೆ ಎಂದು ಡಿಕೆ ಶಿವಕುಮಾರ್ ಅಚ್ಚರಿಯ ವಿಚಾರ ತಿಳಿಸಿದ್ದಾರೆ.
ಬಿಗ್ಬಾಸ್ ಕಾರ್ಯಕ್ರಮ ನಿಂತಾಗ ಕೆಲವರು ನಟ್ಟು-ಬೋಲ್ಟ್ ಟೈಟ್ ಮಾಡುವ ವಿಚಾರವನ್ನು ಎಳೆದು ತಂದಿದ್ದರು. ಇದೇ ಕಾರಣಕ್ಕೆ ಸುದೀಪ್ ನಡೆಸಿಕೊಡುವ ಕಾರ್ಯಕ್ರಮಕ್ಕೆ ಅಡ್ಡಿಪಡಿಸಲಾಗಿದೆ ಎಂದು ಜೆಡಿಎಸ್ ಕೂಡ ಆರೋಪ ಮಾಡಿತ್ತು. ಆದರೆ ಡಿ.ಕೆ.ಶಿವಕುಮಾರ್ ಅವರೇ ಮಧ್ಯಸ್ಥಿಕೆ ವಹಿಸಿ ವಿವಾದ ಇತ್ಯರ್ಥ ಮಾಡಿದ್ದರು. ಬಳಿಕ ಕಿಚ್ಚ ಸುದೀಪ್ ಬಿಗ್ಬಾಸ್ ವೇದಿಕೆಯಲ್ಲೇ ಡಿಕೆ ಸಾಹೇಬ್ರಿಗೆ ಧನ್ಯವಾದ ಎಂದು ಕ್ಲಾರಿಟಿ ಕೊಟ್ಟಿದ್ದರು.

ತಕ್ಷಣ ಮಧ್ಯಸ್ಥಿಕೆ ವಹಿಸಿದೆ
ಈ ವಿಚಾರವನ್ನು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಕಾರ್ಯಕ್ರಮದಲ್ಲಿ ಡಿಕೆ.ಶಿವಕುಮಾರ್ ಪ್ರಸ್ತಾಪಿಸಿದ್ದಾರೆ. 'ನಮ್ಮ ಮಾಲಿನ್ಯ ನಿಯಂತ್ರಣ ಮಂಡಳಿಯವರು ನೋಟಿಸ್ ನೀಡಿ ಬಿಗ್ಬಾಸ್ ಕಾರ್ಯಕ್ರಮ ನಿಲ್ಲಿಸಿದ್ರು. ನಾನು ಅದನ್ನ ಟಿವಿಯಲ್ಲಿ ನೋಡಿದೆ. ಅವರು ಯಾಕೆ ಹಾಗೆ ಮಾಡಿದ್ರೋ ತಿಳಿಯಲಿಲ್ಲ. ಹಾಗಾಗಿ ನಾನು ತಕ್ಷಣಕ್ಕೆ ಮಧ್ಯಸ್ಥಿಕೆ ವಹಿಸುವ ಅನಿವಾರ್ಯತೆ ಇತ್ತು' ಎಂದಿದ್ದಾರೆ.
ಬಿಗ್ಬಾಸ್ ಕಾರ್ಯಕ್ರಮದ ಹಿಂದೆ ಎಷ್ಟೆಲ್ಲ ಶ್ರಮ, ಪ್ರತಿಕ್ರಿಯೆ ಇರುತ್ತದೆ? ಸಾರ್ವಜನಿಕರು ಹೇಗೆ ನೋಡ್ತಾರೆ ಅನ್ನೋ ಅರಿವು ನನಗಿದೆ. ಅಲ್ಲಿ ಅವರು ಶೂಟಿಂಗ್ ಮಾಡುವಾಗ ದೊಡ್ಡಮಟ್ಟದ ಮಾಲಿನ್ಯ ಏನು ಮಾಡಲು ಸಾಧ್ಯ? ಇದೆಲ್ಲ ಬೇಡ ಎಂದು ನಾನೇ ಅಧಿಕಾರಿಗಳಿಗೆ ಹೇಳಿ ರಾತ್ರೋರಾತ್ರಿ ಬಿಗ್ಬಾಸ್ ಮನೆ ಓಪನ್ ಮಾಡಿಸಿಕೊಟ್ಟೆ' ಎಂದು ಹೇಳಿದ್ದಾರೆ.
'ಈ ಸಮಸ್ಯೆಗೂ ಬಿಗ್ಬಾಸ್ ಶೋಗೂ, ಕಲರ್ಸ್ ವಾಹಿನಿಗೂ, ನಮಗೂ ಯಾವುದೇ ರೀತಿ ಸಂಬಂಧ ಇಲ್ಲ' ಎಂದು ಸುದೀಪ್ ಕ್ಲಾರಿಟಿ ಕೊಟ್ಟಿದ್ದರು. 'ನಮ್ಮಿಂದ ಯಾವುದೇ ನಿಯಮ ಉಲ್ಲಂಘನೆಯಾಗಿಲ್ಲ, ಅದು ಬಿಗ್ಬಾಸ್ ಜಾಗದವರ ಸಮಸ್ಯೆ. ಈ ಸಮಸ್ಯೆ ಎದುರಾದಾಗ ನಮಗೆ ಸಹಾಯ ನೀಡಿದ ನಮ್ಮ ಡಿಕೆ ಸಾಹೇಬರಿಗೆ, ಆತ್ಮೀಯ ಗೆಳೆಯ ನಲಪಾಡ್ ಅವರಿಗೆ ಧನ್ಯವಾದಗಳು. ಈ ವಿವಾದದಲ್ಲಿ ಬಿಗ್ಬಾಸ್ ಪಾತ್ರ ಏನಿಲ್ಲ. ಬಿಗ್ಬಾಸ್ ಕಡೆಯಿಂದ ತಪ್ಪು ಆಗಿಲ್ಲ' ಎಂದು ಹೇಳಿದ್ದರು. ಇದರಿಂದ ಎಲ್ಲ ವದಂತಿಗಳಿಗೆ ತೆರೆ ಬಿದ್ದಿತ್ತು.












Click it and Unblock the Notifications