ಅಂದು 350 ಕೆಜಿ ಸೇಬಿನ ಹಾರ ಹಾಕಿಸಿಕೊಂಡಿದ್ದ ಡಿಕೆಶಿ ಇಂದು ಬೇಡಪ್ಪೋ ಬೇಡ ಅಂತಾವ್ರೆ!
ತಿಹಾರ್ ಜೈಲುವಾಸ ಕಳೆದು ವಾಪಸ್ ಆದ ಡಿ.ಕೆ.ಶಿವಕುಮಾರ್ ಗೆ ಬೆಂಗಳೂರಿನಲ್ಲಿ ಭರ್ಜರಿಯಾಗಿ ಸ್ವಾಗತ ಕೋರಿದ್ದು ನಿಮಗೆ ನೆನಪಿದ್ಯಾ.? ಕೆಜಿಗಟ್ಟಲೆ ಸೇಬುಗಳಿಂದ ತಯಾರಾಗಿದ್ದ ಬೃಹತ್ ಹಾರವನ್ನು ಅಂದು ಕೆಪಿಸಿಸಿ ಕಛೇರಿ ಮುಂದೆ ಡಿ.ಕೆ.ಶಿವಕುಮಾರ್ ಗೆ ಕ್ರೇನ್ ಮೂಲಕ ಹಾಕಲಾಗಿತ್ತು.
Recommended Video
ಬಳಿಕ ಶ್ರೀರಂಗಪಟ್ಟಣಕ್ಕೆ ತೆರಳಿದ್ದ ಡಿ.ಕೆ.ಶಿವಕುಮಾರ್ ಗೆ 350 ಕೆ.ಜಿ ತೂಕದ ಸೇಬಿನ ಹಣ್ಣಿನ ಹಾರವನ್ನು ಹಾಕಲಾಗಿತ್ತು. ಅದೇ ಹಾರದಿಂದ ಡಿ.ಕೆ.ಶಿವಕುಮಾರ್ ಸೇಬಿನ ಹಣ್ಣನ್ನು ಕಿತ್ತು ತಿಂದಿದ್ದು ಅಂದು ಗಮನ ಸೆಳೆದಿತ್ತು.
ಪದೇ ಪದೇ ಸೇಬಿನ ಹಾರ ಹಾಕಿಸಿಕೊಂಡ ಡಿ.ಕೆ.ಶಿವಕುಮಾರ್ ಬಗ್ಗೆ ವ್ಯಂಗ್ಯ, ಟೀಕೆ ಕೂಡ ವ್ಯಕ್ತವಾಗಿತ್ತು. ಇದೀಗ ಕೆ.ಪಿ.ಸಿ.ಸಿ ಅಧ್ಯಕ್ಷ ಗಾದಿಗೆ ಏರಿರುವ ಡಿ.ಕೆ.ಶಿವಕುಮಾರ್ ಸೇಬಿನ ಹಾರವೂ ಬೇಡ, ಯಾವುದೂ ಬೇಡ ಎಂದು ತಮ್ಮ ಅಭಿಮಾನಿಗಳಲ್ಲಿ ಮತ್ತು ಕಾರ್ಯಕರ್ತರಲ್ಲಿ ಮನವಿ ಮಾಡಿದ್ದಾರೆ.

ಉಡುಗೊರೆಗಳನ್ನು ತರಬೇಡಿ
''ನಾನು ಬೆಂಗಳೂರಿನಲ್ಲಿರಲಿ, ಪಕ್ಷದ ಕಛೇರಿಯಲ್ಲಿರಲಿ, ಯಾವುದೇ ಕಾರ್ಯಕ್ರಮದಲ್ಲಿ ಭಾಗವಹಿಸಿದಲ್ಲಾಗಲಿ, ಪ್ರವಾಸ ಕೈಗೊಂಡ ಸಮಯದಲ್ಲಾಗಲಿ, ನಿಮ್ಮ ಪ್ರೀತಿಯನ್ನು ವ್ಯಕ್ತಪಡಿಸಲು, ಅಭಿನಂದನೆ ಸಲ್ಲಿಸಲು ದಯವಿಟ್ಟು ಯಾರೂ ಹಾರ, ತುರಾಯಿ, ಪೇಟ, ಗದೆ, ವಿಗ್ರಹ, ಭಾವಚಿತ್ರ ಮತ್ತಿತ್ತರ ಉಡುಗೊರೆಗಳನ್ನು ತರುವುದು, ಹಾಕುವುದು, ಕೊಡುವುದು ಬೇಡ'' ಎಂದು ಪತ್ರದ ಮೂಲಕ ಡಿ.ಕೆ.ಶಿವಕುಮಾರ್ ಮನವಿ ಮಾಡಿದ್ದಾರೆ.

ಸೇಬಿನ ಹಾರ ಬೇಡ
''ಕ್ರೇನ್ ನಲ್ಲಿ ದೊಡ್ಡ ದೊಡ್ಡ ಸೇಬಿನ ಹಾರ, ಹೂವಿನ ಹಾರ ಹಾಕುವುದಾಗಲಿ, ಜೆಸಿಬಿಯಲ್ಲಿ ಹೂವಿನ ಪಕಳೆಗಳನ್ನು ಮೇಲೆ ಸುರಿಯುವುದಾಗಲಿ ಬೇಡ'' - ಡಿ.ಕೆ.ಶಿವಕುಮಾರ್

ದುಂದುವೆಚ್ಚ ಬೇಡವೇ ಬೇಡ
''ಕೇಕ್ ಕತ್ತರಿಸುವುದು, ಸಿಹಿ ತಿನ್ನಿಸುವುದು ಇದ್ಯಾವುದು ಬೇಡ. ಪಟಾಕಿ (ಸಿಡಿಮದ್ದು) ಸಿಡಿಸಿ ಪರಿಸರ ಹಾಳು ಮಾಡಬೇಡಿ. ಹಾಗೂ ದುಂದುವೆಚ್ಚ ಬೇಡವೇ ಬೇಡ'' - ಡಿ.ಕೆ.ಶಿವಕುಮಾರ್

ಮನವಿಯನ್ನು ತಪ್ಪಾಗಿ ಅರ್ಥೈಸಬೇಡಿ
''ದಯವಿಟ್ಟು ಈ ನನ್ನ ಮನವಿಯನ್ನು ಯಾರೂ ತಪ್ಪಾಗಿ ಅರ್ಥೈಸಬಾರದು ಎಂದು ಕಳಕಳಿಯಿಂದ ಮನವಿ ಮಾಡಿಕೊಳ್ಳುತ್ತೇನೆ. ನಿಮ್ಮ ಪ್ರೀತಿ ವಿಶ್ವಾಸಕ್ಕೆ ನಾನು ಎಂದೆಂದಿಗೂ ಚಿರಋಣಿ'' ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ ಡಿ.ಕೆ.ಶಿವಕುಮಾರ್.












Click it and Unblock the Notifications